Saturday, November 3, 2012

ಎಲ್ಲಿ, ಥಟ್ ಅಂತ ಹೇಳಿ ನೋಡೋಣ?

ನನಗೆ ಗೊತ್ತು, ಶೀರ್ಷಿಕೆ ನೋಡಿದ ತಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ನಾ. ಸೋಮೇಶ್ವರ ಅವರು ಎದುರಿನವರ ಮತ್ತು ನೋಡುಗರ ಮನದಲ್ಲೂ ಆಸೆ ಹುಟ್ಟುವಂತೆ ಪುಸ್ತಕಗಳನ್ನು ಪೇರಿಸಿಕೊಂಡು, "ಈಗ ಮುಂದಿನ ಪ್ರಶ್ನೆ..." ಎಂದೆನ್ನುವ ದೃಶ್ಯ. ನಾನು ಆ ಕಾರ್ಯಕ್ರಮದ ಕುರಿತು ಹೇಳ ಹೊರಟಿರುವೆನೆ? ಅಥವಾ ಮತ್ತೇನಾದರೂ ಬೇರೆಯದರ ಕುರಿತು ಮಾತಾಡುತ್ತಿರುವೆನೇ? ಎಲ್ಲಿ ಥಟ್ ಅಂತ ಹೇಳಿ ನೋಡೋಣ?!

         ಈ ‘ಥಟ್ ಅಂತ ಹೇಳಿ’ ಅನ್ನುವ ಕಾರ್ಯಕ್ರಮ ಮನದಲ್ಲಿ ಯಾವ ಪರಿ ಅಚ್ಚೊತ್ತಿದೆ ಎಂದರೆ, ಯಾರಾದರೂ ಯಾವುದಕ್ಕೋ, ಎಲ್ಲಿ ಥಟ್ ಅಂತ ಹೇಳಿ ನೋಡೋಣ ಎಂದರೆ, ಮನದಲ್ಲಿ ಅವರು ಕೇಳಿದ ಪ್ರಶ್ನೆಗೆ ಉತ್ತರ ಹೊಳೆಯುವ ಬದಲು ಚಂದನದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದ ದೃಶ್ಯ ಮನದಲ್ಲಿ ಹಾಯ್ದು ಹೋಗುತ್ತದೆ! ನಂತರ ಕೇಳಿದವರ ಪ್ರಶ್ನೆಗೆ ಉತ್ತರ, ಅದೂ ಗೊತ್ತಿದ್ದರೆ!! ಎಲ್ಲರ ಮನೆ ಮಾತಾಗಿರುವ ಈ ಕಾರ್ಯಕ್ರಮ ದಶಮಾನೋತ್ಸವ ಆಚರಿಸಿಕೊಂಡೂ ಆಯ್ತು!

ಈ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರನೇಕರು ಭಾಗವಹಿಸಿದ್ದಾರೆ,

ಅದಕ್ಕೂ ಹೆಚ್ಚಾಗಿ ಶ್ರೀಸಾಮಾನ್ಯ ಎಂದೆನಿಸಿಕೊಳ್ಳುವ ಅನೇಕ ಅಸಾಮಾನ್ಯ ಬುದ್ದಿವಂತರು ಭಾಗವಹಿಸಿದ್ದಾರೆ, ಭಾಗವಹಿಸುತ್ತಿದ್ದಾರೆ.

ಬೆಳಕು ಕಾಣದ, ಮನದಲ್ಲಿ ಚಂದಿರನನ್ನಿರಿಸಿಕೊಂಡು ಬೆಳಗುವ ಅಂಧ ಮಕ್ಕಳು ಭಾಗವಹಿಸಿದ್ದಾರೆ.

   ಹೊರಪ್ರಪಂಚದ ಜೊತೆ, ಪ್ರೀತಿಸುವ ಜೀವಗಳ ಜೊತೆಗಿನ ಸಂಪರ್ಕವನ್ನೇ ಕಳಚಿಕೊಂಡು, ಮತ್ತೆ ಎಲ್ಲ ಮೊದಲಿನಂತೆ ಸಹಜವಾಗಲಿ ಎಂಬ ಹಂಬಲ ಹೊತ್ತ,  ನಾನಾ ಕಾರಣಗಳಿಂದ ತಪ್ಪು ಮಾಡಿ, ಇನ್ನು ಕೆಲವರು ತಪ್ಪು ಮಾಡದೆಯೂ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ, ಅನುಭವಿಸುತ್ತಿರುವ ಕೈದಿಗಳೆಂಬ ಅಳಿಸಲಾಗದ ಹಣೆಪಟ್ಟಿ ಅಂಟಿಸಿಕೊಂಡ ಜನರು ಈ ಕಾರ್ಯಕ್ರಮದಲ್ಲಿ ಭಾಗವಿಹಿಸಿದ್ದಾರೆ.

ಬುದ್ದಿಗೇಡಿ ಹೆಡ್ಡನಿಂದಲೂ ಬುದ್ದಿಮಾಂದ್ಯರು ಎಂದೆನ್ನಿಸಿಕೊಳ್ಳುವ ವಿಕಲ ಚೇತನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜಾಣ್ಮೆ ತೋರಿದ್ದಾರೆ!

ಹೀಗೆ ಎಲ್ಲ ವರ್ಗದಿಂದ, ಎಲ್ಲೆಲ್ಲಿಂದಲೂ ಬಂದವರನ್ನು ಮಾತಾಡಿಸುತ್ತಾ, ಪ್ರಶ್ನೆಗಳನ್ನು ಕೇಳಿ, ಪುಸ್ತಕ ಕೊಟ್ಟು, ತಪ್ಪು ಉತ್ತರಿಸಿದರೆ ಕೊಟ್ಟ ಪುಸ್ತಕವನ್ನು ಇಸಿದುಕೊಂಡು, ಈ ಸಲದ ಪ್ರಶ್ನೆಗೆ ಕಳೆದುಕೊಂಡ ಪುಸ್ತಕವನ್ನು ಮರಳಿ ಪಡೆಯಲೇಬೇಕೆಂಬ ಆಸೆ ಹುಟ್ಟಿಸುವವರು ನಾ. ಸೋಮೇಶ್ವರ ಅವರಾದರೆ,

 ಕಾರ್ಯಕ್ರಮವನ್ನು ರೂಪಿಸಿ, ಈ ಎಲ್ಲ, ಎಲ್ಲ ಥರದ ಜನರನ್ನು ಸಂಪರ್ಕಿಸಿ, ಅವರನ್ನು ದೂರದರ್ಶನದ ಸ್ಟುಡಿಯೋಗೆ ಕರೆಸಿಕೊಂಡು, ಅವರ ಅನುವುತನುವು ನೋಡಿಕೊಂಡು, ಉಪಚರಿಸುತ್ತಲೇ ಕ್ಯಾಮೆರಾಮೆನ್‍ಗಳಿಗೆ ನಿರ್ದೇಶನ ಕೊಡುತ್ತಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರೆವೇರಿ, ಬಂದವರು ನಗುನಗುತ್ತಾ ಪುಸ್ತಕಗಳೊಡನೆ ಮರಳುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುವವರು ಮೃದು ಮಾತಿನ, ನಮ್ಮ ಕನ್ನಡದ ಸೃಜನಶೀಲ ಕವಿ ಆರತಿ ಎಚ್.ಎನ್ ಅವರು. ಹೀಗೆ ಕರೆತಂದು ಬೀಳ್ಕೊಡುವ, ಅದರ ನಡುವೆ ಕಾರ್ಯಕ್ರಮದ ಉಳಿದೆಲ್ಲ ಕೆಲಸವನ್ನು ನೋಡಿಕೊಳ್ಳುವುದು ಈಗ ನಾನು ಹೇಳಿದಷ್ಟು ಸುಲಭದ ಕೆಲಸವಲ್ಲ. ಮತ್ತು  ನಗುನಗುತ್ತಲೇ ನಿಭಾಯಿಸುವುದು ಇನ್ನೂ ಸುಲಭವಲ್ಲ! ಇಂಥ ಜವಾಬ್ದಾರಿಯನ್ನು ನಗುನಗುತ್ತಲೇ ನಿಭಾಯಿಸಿಬಿಡುತ್ತಾರೆ ಆರತಿ!!

ದೂರದರ್ಶನದ ಚಂದನ’ದಲ್ಲಿ ವಾರಕ್ಕೊಮ್ಮೆ ಪ್ರಸಾರಗೊಳ್ಳುವ, ದಶಮಾನೋತ್ಸವ ಆಚರಿಸಿಕೊಂಡು ಹದಿವಯಸ್ಸಿಗೆ ಕಾಲಿಟ್ಟಿರುವ, ಈ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಈ ಸಲದ ಕರ್ನಾಟಕ ರಾಜ್ಯೋತ್ಸವವನ್ನು ಈ ತಿಂಗಳಲ್ಲಿ ಶನಿವಾರ, ಭಾನುವಾರಗಳ ಹೊರತಾಗಿ ಪ್ರತಿದಿನವೂ ಪ್ರಸಾರಗೊಳಿಸುವ ಮೂಲಕ ಆಚರಿಸುತ್ತಿದೆ. ಪ್ರತೀ ಕಂತಿನಲ್ಲಿ ಎಂದಿನಂತೆ ಇಬ್ಬರು ಸ್ಪರ್ಧಾಳುಗಳು ಭಾಗವಹಿಸುತ್ತಾರೆ. ಆದರೆ ಈ ರಾಜ್ಯೋತ್ಸವದ ವಿಶೇಷ ಕಂತುಗಳಲ್ಲಿ ಭಾಗವಹಿಸುತ್ತಿರುವವರು ನಾಡಿನ ಜನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪರಿಚಿತರಾದ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿರುವ (ಸಾಧನೆ ಮಾಡಿದ ಎಂದೆನ್ನಲು ನನಗೆ ಧೈರ್ಯ ಸಾಲದು. ಕಾರಣ ಸಾಧನೆ ಮಾಡಿದವರು ಎಂದರೆ ಅವರ ಕತೆ ಮುಗಿದಿದೆ ಅಥವಾ ಅವರ ಕ್ರಿಯಾಶೀಲತೆ ಮುಗಿದಿದೆ ಎಂದರ್ಥ ನನ್ನ ದೃಷ್ಟಿಯಲ್ಲಿ. ಸಾಧನೆ ಎನ್ನುವುದು ಕ್ರಿಯಾಶೀಲರನ್ನು ಒಂದಲ್ಲ ಒಂದು ಬಗೆಯಿಂದ ಸದಾ ಚಲನೆಯಲ್ಲಿಡುವಂಥ ಪ್ರಕ್ರಿಯೆ. ಅದಕ್ಕೇ ಸಾಧನೆಯ ಹಾದಿಯಲ್ಲಿರುವ ಎಂದೆ ನಾನು) ಪರಿಚಿತ ಜನರು.

ಅವರೆಲ್ಲ ಯಾರ್ಯಾರೆಂದು ಹೇಳಿಬಿಡಲೆ?

ಈಗಾಗಲೇ ನೀವುಗಳು ನಿನ್ನೆ ಮತ್ತು ಮೊನ್ನೆ ಡಾ.ಎಮ್. ಮೋಹನ್ ಆಳ್ವಾ, ವಸುಧೇಂದ್ರ ಮತ್ತು ಎಮ್.ಆರ್.ದತ್ತಾತ್ರಿ ಅವರನ್ನು ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ನೋಡಿದ್ದೀರಿ.
 ಚಿತ್ರ ಕೃಪೆ:ಗೂಗಲ್
ಇನ್ನು ಬರುವ ಸೋಮವಾರದಿಂದ ಅಂದರೆ,

ನವ್ಹೆಂಬರ್ ೫, ೨೦೧೨ ರಂದು: ಪಿ.ಶೇಷಾದ್ರಿ ಮತ್ತು ಚಿತ್ರಾ ಎಚ್.ಜಿ 

ನವ್ಹೆಂಬರ್ ೬, ೨೦೧೨ ರಂದು: ಸುರೇಶ್ ಆನಗಳ್ಳಿ ಮತ್ತು ಚಿಂತಾಮಣಿ ಕೊಡ್ಲಿಕೆರೆ

ನವ್ಹೆಂಬರ್ ೭, ೨೦೧೨ ರಂದು: ಪದ್ಮರಾಜ ದಂಡವತಿ ಮತ್ತು ಜರಗನಹಳ್ಳಿ ಶಿವಶಂಕರ

ನವ್ಹೆಂಬರ್ ೮, ೨೦೧೨ ರಂದು: ವಸುದೇವ ನಾಡಿಗ್ ಮತ್ತು ಸಬಿತಾ ಬನ್ನಾಡಿ

ನವ್ಹೆಂಬರ್ ೯, ೨೦೧೨ ರಂದು: ಅಂಜಲಿ ರಾಮಣ್ಣ ಮತ್ತು ಶ್ರೀದೇವಿ ಕಳಸದ

ನವ್ಹೆಂಬರ್ ೧೩, ೨೦೧೨ ರಂದು: ವೀರೇಶ್ ಬಳ್ಳಾರಿ ಮತ್ತು ನಾಗಲಕ್ಷ್ಮಿ ವೀರೇಶ್

ನವ್ಹೆಂಬರ್ ೧೪, ೨೦೧೨ ರಂದು: ಹರಿಯಪ್ಪ ಪೇಜಾವರ ಮತ್ತು ಜಯಲಕ್ಷ್ಮೀ ಪಾಟೀಲ್

ನವ್ಹೆಂಬರ್ ೧೫, ೨೦೧೨ ರಂದು: ಪ್ರೊ. ರಾಧಾಕೃಷ್ಣ ಮತ್ತು ಮೌನೇಶ್ ಬಡಿಗೇರ್

ನವ್ಹೆಂಬರ್ ೧೬, ೨೦೧೨ ರಂದು: ಚೇತನಾ ತೀರ್ಥಹಳ್ಳಿ ಮತ್ತು ಡಾ. ಸುಕನ್ಯ

ನವ್ಹೆಂಬರ್ ೨೦, ೨೦೧೨ ರಂದು: ವರ್ಷಾ ಸುರೇಶ್ ಮತ್ತು ಸರ್ಜಾಶಂಕರ್ ಹರಳಿಮಠ

ನವ್ಹೆಂಬರ್ ೨೧, ೨೦೧೨ ರಂದು: ನಂಜುಂಡ ಸ್ವಾಮಿ ತೊಟ್ಟವಾಡಿ ಮತ್ತು ಕಿರಣಪ್ರಸಾದ ರಾಜನಳ್ಳಿ

ನವ್ಹೆಂಬರ್ ೨೨, ೨೦೧೨ ರಂದು: ಎಲ್.ಸಿ. ಸುಮಿತ್ರಾ ಮತ್ತು ನಿಂಗಪ್ಪ ಮುದೇನೂರು

ನವ್ಹೆಂಬರ್ ೨೩, ೨೦೧೨ ರಂದು: ರಮೇಶ ಪಂಡಿತ ಮತ್ತು ಸುನೇತ್ರ ಪಂಡಿತ

ನವ್ಹೆಂಬರ್ ೨೬, ೨೦೧೨ ರಂದು: ವೀರಣ್ಣ ಮಡಿವಾಳರ್ ಮತ್ತು ಕೆ. ಗುರುರಾಜ

ನವ್ಹೆಂಬರ್ ೨೭, ೨೦೧೨ ರಂದು: ಡಾ.ವಿನಯಾ ವಕ್ಕುಂಡ ಮತ್ತು ಡಾ. ಎಮ್.ಡಿ.ವಕ್ಕುಂಡ

ನವ್ಹೆಂಬರ್ ೨೮, ೨೦೧೨ ರಂದು: ಮಂಡ್ಯ ರಮೇಶ್ ಮತ್ತು ಗುಡಿಹಳ್ಳಿ ನಾಗರಾಜ

ನವ್ಹೆಂಬರ್ ೨೯, ೨೦೧೨ ರಂದು: ಶ್ಯಾಮಸುಂದರ.ಎಸ್ ಮತ್ತು ರಮ್ಯಾ ವಶಿಷ್ಠ

ನವ್ಹೆಂಬರ್ ೩೦, ೨೦೧೨ ರಂದು: ಡಾ. ಎಮ್.ಎಸ್.ವಿದ್ಯಾ ಮತ್ತು ಎಸ್.ಕಿಟ್ಟಿ

ಡಿಸೆಂಬರ್ ೩, ೨೦೧೨ ರಂದು: ಕೃಷ್ಣಾ ಶೆಟ್ಟಿ ಮತ್ತು ಅಂಜಲಿ ಶೆಟ್ಟಿ

ಡಿಸೆಂಬರ್ ೪, ೨೦೧೨ ರಂದು: ಡಾ. ತಮಿಳ್ ಸೆಲ್ವಿ ಮತ್ತು ಡಾ. ಕೆ. ಶೆರೀಫಾ 


ಈ ಎಲ್ಲ ಕಂತುಗಳು ಅಂದಂದಿನ ರಾತ್ರಿ ೧೦.೩೦ಕ್ಕೆ ಪ್ರಸಾರಗೊಳ್ಳುತ್ತವೆ ಮತ್ತು ಮರು ಪ್ರಸಾರ ಮರುದಿನ ಬೆಳಗಿನ ೧೧ಕ್ಕೆ.