Wednesday, March 5, 2014

ನಿನ ಗುಣವ ನಮಗುಣಿಸು

ಬುದ್ದಿವಂತಿಕೆಯಾ ಮಾತು
ಬತ್ತಿ ಹೋದವು ನೋಡೆ
ಗಂಗವ್ವ ನಿನ್ನ ಸ್ವಚ್ಛಸೆಲೆಯ ಮುಂದೆ
ಗಂಗವ್ವ ನಿನ್ನ ಸ್ವಚ್ಛಸೆಲೆಯ ಮುಂದೆ
ಮಂದೆಗಳು ನಾವು ಕಲಬೆರಿಕೆಯಾ ಮಂದಿ

ಬಣ್ಣಬಣ್ಣದಾ ಮಾತು
ಬಾಡಿ ಹೋದವು ನೋಡೆ
ವನತಾಯಿ ನಿನ್ನ ಸಿರಿಯ ಮುಂದೆ
ವನತಾಯಿ ನಿನ್ನ ಸಿರಿಯ ಮುಂದೆ
ಭೂತಗಳು ನಾವು ಬದುಕಿದ್ದ ಮಂದಿ

ಸೋಜಿಗದಾ ಮಾತು
ಸೊರಗಿ ಹೋದವು ನೋಡೆ
ಎಟುಕದೆತ್ತರದಲ್ಲಿದ್ದೂ ಬಾಗಿರುವ ನಿನ ಮುಂದೆ
ಎಟುಕದೆತ್ತರದಲ್ಲಿದ್ದೂ ಬಾಗಿರುವ ನಿನ ಮುಂದೆ
ಗಗನಮ್ಮ, ಕುಬ್ಜರು ನಾವು ಕೊಬ್ಬಿದಾ ಮಂದಿ

ಹಸಿರುಟ್ಟು ನಿಂತವಳೆ
ಬಸಿರ್ಹೊತ್ತು ನಿಂತವಳೆ
ನೋವುಂಡು ನಲಿವ ಹೆತ್ತವಳೆ
ನೋವುಂಡು ನಲಿವ ಹೆತ್ತವಳೆ
ನಿನ ಗುಣವ ನಮಗುಣಿಸಿ ಹರಸೆಂಬೆ ತಾಯೆ.

                                             - ಜಯಲಕ್ಷ್ಮೀ ಪಾಟೀಲ್.


12 comments:

ಮನಸು said...

ತುಂಬಾ ತುಂಬಾ ಚೆನ್ನಾಗಿದೆ ಕವನ... ಹರಸಬೇಕಿದೆ ಆ ತಾಯಿ

Badarinath Palavalli said...

ಅವ್ವನೆಂಬ ಪ್ರತಿಮೆಯ ಮುಂದಿಟ್ಟುಕೊಂಡು ಮಂದಿಯ ಪೊಳ್ಳುತನ ಮತ್ತು ಘಾತುಕತನವನ್ನು ಮನಮುಟ್ಟುವಂತೆ ತೆರೆದಿಡುತ್ತವೆ ಈ ನಿಮ್ಮ ಕವಿತೆ.

sunaath said...

ಜಾನಪದ ಧಾಟಿಯಲ್ಲಿರುವ ಈ ಕವನವು ತನ್ನ ಭಾವದಿಂದ ನಮ್ಮ ಮನಸ್ಸನ್ನು ತಟ್ಟುತ್ತದೆ.

Jayalaxmi said...

ಧನ್ಯವಾದಗಳು ಸುಗುಣಾ, ಬದ್ರಿ ಮತ್ತು ಸುನಾಥ್ ಕಾಕಾ. :)ಪ್ರಕೃತಿಯ ಹಿರಿಮೆ ಎದುರು ನಾವು ಮನುಷ್ಯರು ನಮ್ಮ ಪೊಳ್ಳುಪ್ರತಿಷ್ಠೆಯಿಂದಾಗಿ ಅದೆಷ್ಟು ಕುಬ್ಜರೆನಿಸುತ್ತೇವೆ ಎನಿಸಿ ಮೂಡಿದ ಸಾಲುಗಳಿವು.

ಚಿನ್ಮಯ ಭಟ್ said...

ನಮಸ್ತೆ ಮೇಡಮ್ :)...
ಇಷ್ಟವಾಯಿತು ಕವನ....
ಅದೆಷ್ಟು ಛಂದದಿಂದ ಎರಡು ಹಂತಗಳನ್ನಿಟ್ಟಿದ್ದೀರಿ :).. ಮೊದಲ ಮೂರು ಪ್ಯಾರಾಗಳಲ್ಲಿನ ಗೊಣಗಾಟಗಳು ಕೊನೆಯಲ್ಲಿ ಅದಕ್ಕೊಂದು ಸಮಾಧಾನದ ಮಾದರಿಕೊಟ್ಟು ಅದೇ ಪ್ರಾರ್ಥನೆಯಲ್ಲೇ ಕವನವನ್ನು ಇನ್ನೊಂದು ದಿಕ್ಕಿನೆಡೆಗೆ ಸಾಗಿಸುವ ರೀತಿ ಇಷ್ಟವಾಯಿತು...
ಹಾಂ ೩-೪ನೇ ಸಾಲುಗಳಲ್ಲಿನ ಆವರ್ತನೆ ಹಾಡಿಕೊಳ್ಳಲಷ್ಟೇ ಅಲ್ಲ,ಅದರ ಕೊನೆಯ ಸಾಲನ್ನೂ ಅಡಿಟಿಪ್ಪಣಿಯಾಗಿರಿಸುವಂತೆ ಮಾಡಿದೆ...

ಗೊತ್ತಿಲ್ಲ ,ನನಗನ್ನಿಸಿದ್ದು...ಕೊನೆಯ ಸಾಲುಗಳಲ್ಲಿನ ತೂಕ ಮೇಲಿನೆರಡು ಸಾಲುಗಳಿಗೆ ಇದ್ದರೆ ಇನ್ನೂ ಚೆನ್ನವಿತ್ತೇನೋ...ನೋಡಿ...
ವಂದನೆಗಳು ನಮಸ್ತೆ :)

kavinagaraj said...

ಪ್ರಕೃತಿಯ ವಿಶಾಲತೆ, ಅಗಾಧತೆ ನಮ್ಮ ಕುಬ್ಜತೆಯನ್ನು ಎತ್ತಿ ತೋರಿಸುತ್ತವೆ. ಸುಂದರ ಭಾವ ಹೊಮ್ಮಿಸಿರುವಿರಿ.

maanasa saarovra said...

ಪೃಕೃತಿಯ ನೋಡಿ ನಾವು ಕಲಿಯಬೇಕಾದುದು ಬಹಳಷ್ಟಿದೆ. ಅಂತಹ ಮನಸ್ಸನ್ನು ಕೊಡು ಎಂಬ ಬೇಡಿಕೆಯ ಕವಿತೆ ಜಾನಪದ ಮನಸ್ಸನ್ನು ಹಾಡಿದೆ.ಇಷ್ಟವಾಯ್ತು.

Unknown said...

ನಿಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡು ತುಂಬಾ ಚೆನ್ನಾಗಿದೆ :)

Unknown said...
This comment has been removed by the author.
bilimugilu said...

JP madam,
ಇಷ್ಟವಾಯ್ತು ಪ್ರತಿ ಸಾಲು, ಆಶಯ....
ಪ್ರಕೃತಿ ಹೇಳಿಕೊಡುವ ಯಾವ ಪಾಠವನ್ನು ಕಲಿಯುವ ಹಾದಿಯಲ್ಲಿ ನಾವಿಲ್ಲವಲ್ಲ ಎನ್ನುವುದೇ ವಿಪರ್ಯಾಸ....
ರೂಪ ಸತೀಶ್

Jayalaxmi said...

ಚಿನ್ಮಯ್, ಮೊದಲಿನ ಸಾಲುಗಳು ಕೊನೆಯ ಸಾಲಿನ ತೂಕ ಹೆಚ್ಚಿಸಲೆಂದೇ ಇರುವ ಅದಕ್ಕೆ ಪೂರಕವಾಗಿರುವ ಸಾಲುಗಳು. ನಿನ್ನ ನೇರ ಅನಿಸಿಕೆ ಖುಷಿ ತಂದಿತು. ನನ್ನಿ ಕೂಸೆ ನಿನ್ನ ಕಾವ್ಯಪ್ರೀತಿಗೆ. :)

Jayalaxmi said...

ಕವಿ ನಾಗರಾಜ್ ಸರ್,ಮನದ ಅಂಗಣ(ಕ್ಷಮಿಸಿ ನಿಮ್ಮ ಹೆಸರು ಗೊತ್ತಾಗ್ತಿಲ್ಲ),ಲೋಕೇಶಗೌಡ ಜೋಳದರಾಶಿ,ರೂಪ ಸತೀಶ್, ನಿಮ್ಮೆಲ್ಲರಿಗೂ ನನ್ನ ಅನಂತ ಧನ್ಯವಾದಗಳು. :)