Friday, April 16, 2021

ಪುಟಗಳಾಚೆ ತೇಲಿದ ಪದ - ಕಥೆ - ೨೦೨೧ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ

 


ಕಥೆ

ಪುಟಗಳಾಚೆ ತೇಲಿದ ಪದ


- ಜಯಲಕ್ಷ್ಮಿ ಪಾಟೀಲ್


‘ಆಂಟಿ, ಕ್ಯಾ ಮೆ ಆಪ್ಕಾ ಛಜ್ಜಾ ಪೇ ಯೇ ಡಿಬ್ಬಾ ರಖ್ ಸಕ್ತಿಹೂಂ? ಬಿಲ್ಲಿ ಔರ್ ಉಸ್ಕಾ ಕಾ ಬಚ್ಚಾ ಬಾರಿಶ್ ಮೇ ಭೀಗ್ ರಹೆ ಹೈಂ ವಂಹಾ’ ನಮ್ಮ ಹಿಂದಿನ ಮನೆಯ ಹುಡುಗಿ ಆಭಾ, ಪಕ್ಕದ ಮನೆಯ ಮಹಗಾಂವ್ಕರ್ ಬಾಭಿ ಹತ್ತಿರ ರಿಕ್ವೆಸ್ಟ್ ಮಾಡ್ಕೊಳ್ತಿದ್ದುದು ಕೇಳಿಸ್ತಿದ್ದಂತೆಯೇ ಅದ್ಯಾಕೋ ಗತಕಾಲದ ದನಿಯೊಂದು ಪ್ರತಿಧ್ವನಿಸಿದಂತೆನಿಸಿ ಎದೆಯಲ್ಲಿ ಚುಳ್ ಎಂದ ಅನುಭವ. ಆಗಷ್ಟೇ ತಿಂಡಿ ತಿಂದ ತಟ್ಟೆಗಳನ್ನು ಸಿಂಕಿಗೆ ಹಾಕಿ, ಮಳೆಯ ಇರಸಲಿಗೆ ತೊಯ್ದ ಗ್ಯಾಸ್ ಕಟ್ಟೆಯನ್ನು ಒರೆಸುತ್ತಿದ್ದ ನಾನು ರಪ್ಪನೆ ಕಿಟಿಕಿಯ ಬಾಗಿಲನ್ನು ಮುಚ್ಚಿದವಳೇ ನೆಲದ ಮೇಲೆ ಗೋಡೆಗಾತುಕೊಂಡು ಕುಳಿತೆ. ಹೊರಗೆ ಗಾಳಿ ಮಳೆ ಎರಡೂ ಸೇರಿ ಎಬ್ಬಿಸಿದ ರಂಪ ನನ್ನೊಳಗೇ ಸೇರಿಕೊಂಡುಬಿಟ್ಟಿದೆಯೇನೋ ಎನ್ನುವಂತೆ ನೆನಪಿಗಂಟಿಕೊಂಡ ಪುಟಗಳು ಸರ್ ಪರ್ ಸರ್ ಪರ್ ಸದ್ದು ಮಾಡುತ್ತಾ ನನ್ನನ್ನು ನಡುಗಿಸತೊಡಗಿದವು. ಹೊರಗೆ ಮಹಾಗಾಂವ್ಕರ್ ಭಾಭಿ ಎದುರು, ‘ಬಾರಿಶ್ ಕಥಮ್ ಹೋತೆ ಹೀ ಮೆ ಉಸೆ ವಂಹಾ ಸೆ ಹಠಾದೂಂಗಿ. ಕಬ್ ಸೆ ಅಪ್ನಿ ಪಿಲ್ಲೂ ಕೊ ಲೇಕರ್ ಭಟಕ್ ರಹಿ ಹೈ ವೋ…’ಆಭಾ ವಿವರಿಸುವ ದನಿ ತೆಳುವಾಗುತ್ತಾ ಹೋಗಿ ನನ್ನೊಳಗಿನ ಅಂದಿನ ದಿನಗಳ ದನಿಯ ಸದ್ದು ಹೆಚ್ಚಾಗತೊಡಗಿತು. ಗಾಳಿಗೆ ಸಿಲುಕಿ ಅಂಕೆಗೆ ಸಿಗದ ಕೂದಲನ್ನು ಹಿಡಿದಿಡುವ ಯತ್ನದಂತೆ ಮನಸ್ಸನ್ನು ತಹಬದಿಗೆ ತರಲು ಯತ್ನಿಸಿ ಪ್ರಯತ್ನಿಸಿ ಸೋಲತೊಡಗಿದೆ. 

‘ಮಮ್ಮಾ... ಮಮ್ಮಾ, ಎದ್ದೇಳು. ಮಾ ಎದ್ದೇಳು’ 

ಮಗನ ದನಿಗೆ ಎಚ್ಚರಗೊಂಡು,‘ಇಷ್ಟು ಜಲ್ದಿ ಬೆಳಗಾತಾ ?!’ ಕೇಳಿದೆ.

‘ಚಕ್ಕರ್ ಬಂದಿತ್ತೇನು? ಬಾ ಕೈ ಹಿಡ್ಕೋತೀನಿ’ ಎನ್ನುತ್ತಾ ಕೈ ನೀಡಿದ ಎಂಟು ವರ್ಷದ ಮಗ. ಥಟ್ಟನೆ ನೆನಪಾಯಿತು, ಇದು ರಾತ್ರಿಯಲ್ಲ ಹಗಲು! ಮತ್ತು ನಾನು ಅಡುಗೆಮನೆ ಗೋಡೆಗೊರಗಿ ನಿದ್ದೆ ಹೋಗಿದ್ದೇನೆ. ನನ್ನವಸ್ಥೆಗೆ ಲಜ್ಜೆ ಎನಿಸಿ, 

‘ಇಲ್ಲೇಳಪ್ಪಿ ಎದ್ದೇಳ್ತೀನಿ., ಹಂಗ ಸ್ವಲ್ಪ ಹೊತ್ತು ಕುಂದ್ರೂನು ಅಂತ ಗ್ವಾಡಿಗೆ ಆನ್ಸಿ ಕುಂತ್ರ ನಿದ್ದಿ ಹತ್ತಿ ಬಿಟ್ಟತಿ ನೋಡು!’ ಪೆದ್ದುಪೆದ್ದಾಗಿ ನಕ್ಕೆ. 

ಮಗ ಗಲಗಲ ನಗುತ್ತಾ, ‘ಎಲ್ಲೆಂದ್ರ ಅಲ್ಲಿ ಮಕ್ಕೊಳ್ಳಾಕ ನೀ ಪಾಪು ಅದಿ ಪಾಪೂ?! ಮಮ್ಮಾ ಪಾsಪೂ ಮಮ್ಮಾ ಪಾsಪೂ’ 

ಅವನ ನಗುವಿನ ಸುಖದಲ್ಲಿ, ಅಷ್ಟೊತ್ತು ನರಳಿದ್ದು ಮರೆತೇ ಹೋದಂತೆನಿಸಿ ನಾನೂ ನಗುತ್ತಾ, 

‘ಹೂಂ ನಾನು ಪಾಪು ಅದೀನಿ ನೀ ನನ್ನ ಬಾಪು ಅದಿ. ಬಾಪೂ ಬಾಪೂ ನನ್ನನ್ನ ಎತ್ಗೋ ಪೀಜ್, ಪೀಜ್ ಎತ್ಗೊ.’

’ನಾ ವಲ್ಲೆವಾ ನೀ ಈssಟುದ್ದದಿದಿ! ನಿನ್ನ ಎತ್ಕಗೊಳ್ಳಾಕ ಹ್ವಾದ್ರ ನಾನ ದಬಕ್ ಅಂತ ಬಿದ್ದಬಿಡ್ತೀನಿ.’ ಮಗ ತನ್ನ ಬೆರಳ ತುದಿಗಳ ಮೇಲೆ ನಿಲ್ಲುತ್ತಾ, ಹಿಮ್ಮಡಿ ಎತ್ತರಿಸಿ ಕೈಯನ್ನು ಮೇಲೆ ಎತ್ತಿ ನಂತರ ಮುಂದೆ ಮುಗ್ಗರಿಸಿದಂತೆ ನಟಿಸಿದಾಗ ಮನಸಾರೆ ನಕ್ಕೆ. 

ಹಾಲ್ ನಲ್ಲಿದ್ದ ಮೊಬೈಲ್ ಕುಣುಕುಣು ಅನ್ನತೊಡಗಿತು. ಅಡುಗೆ ಮನೆಯಿಂದ ಹೊರಗೆ ಬಂದೆ. ಸ್ಕ್ರೀನ್ ಮೇಲೆ ಅಶ್ವಿನ್ ಕಾಲಿಂಗ್ ಎಂದು ಕಾಣಿಸಿತು. ಎತ್ತುವುದೋ ಬೇಡವೋ ಎಂದುಕೊಳ್ಳುತ್ತಿರುವಾಗಲೇ ಶಂತನು, ‘ಮಮ್ಮಾ, ಇನ್ಮುಂದ ಪಪ್ಪಾ ಒಟ್ಟೇ ನಮ್ಜೋಡಿ ಇರೂದ ಇಲ್ಲೇನು? ಇಲ್ಲಿಗಂವಾ ಬರೂದೇಯಿಲ್ಲೇನು?’ 

ಏನು ಹೇಳುವುದೆಂದು ತಿಳಿಯದೆ ಸುಮ್ಮನೆ ನಿಂತವಳು ಸಾವರಿಸಿಕೊಂಡು, ‘ಪಪ್ಪಾನ ನೆನಪು ಭಾಳ ಆಕ್ಕತಿ ನಿನಗ? ಮಿಸ್ಸಿಂಗ್ ಹಿಮ್?’ 

ಮಗನ ಮನದಿಂಗಿತವನ್ನು ತಿಳಿದುಕೊಳ್ಳದೇ ನಾನೇನಾದರೂ ಹೇಳುವುದು ಸೂಕ್ತವಲ್ಲ ಅನಿಸಿ ಕೇಳಿದೆ. ಹೀಗೆ ಕೇಳಿಯಾದ ಮೇಲೆ ಅಕಸ್ಮಾತ್ ಅವನು ಹೂಂ ಅಂದುಬಿಟ್ಟರೆ…? ಒಳಗುದಿ ಶುರುವಾಯಿತು. ಶಂತನುವನ್ನು ನೀನು ನಮ್ಮಪ್ಪ ಎನ್ನುವ ಮೂಲಕ ನಾನೇ ಅವನ ಅಪ್ಪನ ನೆನಪಿಗೆ ಕಾರಣಳಾದವಳು. ಈಗ ಹೊಯ್ದಾಡುತ್ತಿರುವೆ.. 

‘ಭಾಳಿಲ್ಲ ಖರೆ ಆದ್ರ ಹಾಂ ಪಪ್ಪಾ ನಮ್ಜತಿ ಇದ್ದಿದ್ದ್ರ ಚೊಲೊ ಇರ್ತಿತ್ತು ಅಂತನಸ್ತತಿ’ ತನ್ನ ಉದ್ದುದ್ದ ರೆಪ್ಪೆಗಳನ್ನು ಪಟಪಟನೆ ಬಡೆಯುತ್ತಾ ನನ್ನ ಮುಖವನ್ನೇ ದಿಟ್ಟಿಸಿತು ಕಂದ. ಅವನು ಹೂಂ ಅಂದಾಗಿತ್ತು. ‘ಯಾರಿಗಾಗಿ ನೀನು ಹಂಬಲಿಸುತ್ತಿರುವೆಯೋ ಅವನ ಅತ್ಯಾಚಾರಕ್ಕೆ ಹುಟ್ಟಿದ ಮಗು ನೀನು’ ಎಂದು ಯಾವ ಬಾಯಿಂದ ಮಗನಿಗೆ ಹೇಳಬಹುದಿತ್ತು ನಾನು…?  ಏನೂ ತೋಚದವಳಾಗಿ ಹ್ಮ್… ಎಂದು ನಿಡುಸೊಯ್ದು ಮಗನನ್ನು ಹತ್ತಿರಕ್ಕೆಳೆದುಕೊಂಡು ಅಪ್ಪಿ ನೆತ್ತಿಗೊಂದು ಹೂಮುತ್ತನಿತ್ತೆ. ನನ್ನ ಪ್ರತಿಕ್ರಿಯೆಯಿಂದ ಮಗುವಿಗೆ ಏನನಿಸಿತೋ.. ಮಾತು ಬೆಳೆಸದೆ ನನ್ನ ಕೈಯಿಂದ ನುಣುಚಿಕೊಂಡುಹೋಗಿ ಟಿವಿ ರಿಮೋಟ್ ಕೈಗೆತ್ತಿಕೊಂಡ.

ದಿಟ್ಟಿಸಿದೆ ಅವನನ್ನು. ಶಂತನುವಿನ ಕಣ್ಣು ಥೇಟ್ ನನ್ನ ಕಣ್ಣುಗಳೇ. ಅಗಲವಾಗಿ ಇಷ್ಟುದ್ದುದ್ದ ಚಾಮರದಂತೆ ದಟ್ಟವಾದ ರೆಪ್ಪೆಯ, ನಿರ್ಲಿಪ್ತತೆಯೂ ಸಹ ಬಿಳಿಪರದೆಯಾಚೆ ಏನನ್ನೋ ಅಡಗಿಸಿಟ್ಟ ಭಾವದೊಂದಿಗೇ ವ್ಯಕ್ತವಾಗುವಂಥ ಅಗಲ ಕಣ್ಣುಗಳು. ಏನನ್ನೂ ಬಚ್ಚಿಡಲಾಗದು ಅಲ್ಲಿ! ಮೆಚ್ಚುವವರ ಜೊತೆಗೆ ಶಾಲೆ ಕಾಲೇಜಿನಲ್ಲಿ ಅವು ನಕಲಿ ಇರಬಹುದಾ ಎಂದು ನನ್ನ ರೆಪ್ಪೆ ಎಳೆದುನೋಡಿ ಪರೀಕ್ಷಿಸಿದವರೂ ಇದ್ದರು! ಕಣ್ಣಿನ ಎಲ್ಲ ಭಾವಗಳಿಗೂ ನಿನಗೆ ಸಾಥ್ ಕೊಡುತ್ತೇನೆ ಎನ್ನುವಂಥ ನೆಟ್ಟಗಿನ ಮೂಗು. ಶಂತನುವಿನ ಕಣ್ಣು ಮೂಗು ಬಾಯಿ ನನ್ನವಾದರೆ, ನಾದಿದ ಕಣಕದಂಥ ಬಣ್ಣ, ಅಗಲ ಹಣೆ ಅವನಪ್ಪನದು. ಒಟ್ಟಿನಲ್ಲಿ ಇಬ್ಬರಿಂದಲೂ ಮಾಟವಾಗಿರುವುದನ್ನು ಆಯ್ದು ರೂಪುಗೊಂಡು ಹುಟ್ಟಿದ್ದ ಮಗ. ಅವನ ಅಪ್ಪನ ಚಿತ್ರ ಮನದಲ್ಲಿ ಮೂಡುತ್ತಿದ್ದಂತೆಯೇ ಮತ್ತೆ ಫೋನ್ ರಿಂಗಣಿಸಿತು. 

‘ಮಮ್ಮಾ, ಫೋನೂ’ ಟಿವಿ ನೋಡುತ್ತಲೇ ಕೂಗಿಕೊಂಡ ಶಂತನು.

ಹೂಂ ಎನ್ನುತ್ತಲೇ ನಿಧಾನವಾಗಿ ಫೋನ್ ಕೈಗೆತ್ತಿಕೊಂಡೆ. 

‘ಬೋಲೊ ಅಶ್ವಿನ್’

‘ಮುಝೆ ಲಗಾ ಕಿ ಆಪ್ ಬ್ಯೂಸಿ ಹೋಂಗಿ… ಯಾಡ್ ಮಿನಟ್ ಮಾತಾಡಾಕಿತ್ತು.’ ಇನ್ನೇನು ಕಾಲ್ ಕಟ್ಟಾಗುವ ಕ್ಷಣದಲ್ಲಿ ಫೋನ್ ಎತ್ತಿಕೊಂಡಿದ್ದಕ್ಕವನು ಅಂದ ಮಾತಿದು ಎಂದು ಬಲ್ಲೆ ನಾನು. 

‘ಹಾಂ ಹೇಳ್ರಿ’ ನನ್ನ ಚುಟುಕಾದ ಉತ್ತರದಿಂದ ಅಶ್ವಿನ್ ಪೆಚ್ಚಾದನೇನೋ. ಕ್ಷಣ ಕಾಲ ಆ ಕಡೆಯಿಂದ ಏನೂ ಸದ್ದಿಲ್ಲ. ಅಶ್ವಿನ್ ನನ್ನ ಕಲೀಗ್. ಅವನೂ ಕನ್ನಡದವನೇ. ಪುಣೆಯಲ್ಲೇ ಅವನು ಹುಟ್ಟಿ ಬೆಳೆದಿದ್ದಂತೆ. ಅವನ ತಂದೆ ತಾಯಿ ಬಿಜಾಪುರದವರಂತೆ. ಇವ ಹುಟ್ಟುವ ಮೊದಲೇ ಅವರು ಪುಣೆಯಲ್ಲಿ ನೆಲೆಸಿದ್ದರಿಂದ ಸಹಜವಾಗಿಯೇ ಬಿಜಾಪುರದ ಕನ್ನಡಕ್ಕೆ ಪುಣೇರಿ ಘಮಲಿರುತ್ತಿತ್ತು ಅವನ ಮಾತಲ್ಲಿ. ತುಂಬಾ ಮಾತುಗಾರನೇನಲ್ಲದಿದ್ದರೂ ಗುಮ್ಮನಗುಸುಗನೂ ಆಗಿರ್ಲಿಲ್ಲವಾದ್ದರಿಂದ ಅವನ ಭಾಷೆಯ ಹಿನ್ನೆಲೆ ತುಸು ಮಟ್ಟಿಗೆ ಆಫೀಸಲ್ಲಿ ಎಲ್ಲರಿಗೂ ಗೊತ್ತು. ಅವನ ಮನೆಮಾತು ಕನ್ನಡವಾದ್ದ್ರಿಂದ ನನ್ನ ಜೊತೆ ಕನ್ನಡದಲ್ಲಿ ಮಾತಾಡುವಾಗಲೆಲ್ಲ ಒಂಥರದ ಸಂಭ್ರಮ ಕಾಣಿಸುತ್ತಿತ್ತು ಅವನ ದನಿಯಲ್ಲಿ. ಕನ್ನಡದ ನಂಟೊಂದು ಸಿಕ್ಕ ಸಂಭ್ರಮ ಅದು. 

‘ಏನಿಲ್ಲಾ, ಇವತ್ತ ಸಂಜೀಕೆ ನಮ್ಮನಿ ಒಳಗ ಸಣ್ಣದೊಂದು ಗೆಟ್ಟುಗೆದರ್ ಇಟ್ಕೊಂಡೀದ. ನೀವೂ ಬರ್ರಿ ಹೇಳಾಕ್ ಫೋನ್ ಮಾಡಿದ್ದ. ಪ್ಲೀಸ್ ಕಮ್’

‘ಓಹ್. ತ್ಯಾಂಕ್ಸ್ ಫಾರ್ ಇನ್ವಿಟೇಶನ್. ಬಟ್ ಸಾರಿ, ಬರಾಕಾಗಂಗಿಲ್ಲ ಅಶ್ವಿನ್. ನೀವ್ ಎಂಜಾಯ್ ಮಾಡ್ರಿ, ಬೈ’ ಫೋನ್ ಕಟ್ ಮಾಡಲು ಹೋಗುತ್ತಿದ್ದಂತೆಯೇ ಆ ಕಡೆಯಿಂದ,

‘ರೀ ರೀ ರೀ ಪ್ಲೀಸ್. ನನ್ನ ಮಾತು ಪೂರಾ ಕೇಳಿ ಆಮ್ಯಾಲೆ ಬೇಕಾದ್ರ ಕಟ್ ಮಾಡ್ರಿ’ ಯಾಕೋ ಅಗತ್ಯವೇ ಇಲ್ಲದೆ ಅವನೊಂದಿಗೆ ಒರಟಾದೆ ಅನಿಸಿ, ‘ಸಾರಿ, ವೆರ್ರೀ ಸಾರಿ. ಹೇಳ್ರಿ’ ಅಂದೆ.

‘ಇಲ್ಲಾ ಆಫೀಸಿಂದ ಎಲ್ಲಾರೂ ಬರಾಕತ್ತಾರ್ರಿ. ನೀವೊಬ್ಬ್ರು ಬರ್ಲಿಲ್ಲಂದ್ರ ಚೊಲೊ ಅನ್ಸಂಗಿಲ್ಲ. ಸುಮ್ನೆ ಏನೆಲ್ಲಾ ಪುಕಾರ್ ಹುಟ್ಕೋತಾವ. ಬೇಕಾರ ನಿಮ್ಮ ಪೇರಂಟ್ಸ್ ಜೋಡಿ ಮಾತಾಡಂದ್ರ ನಾ ಮಾತಾಡ್ತೀನಿ. ರಾತ್ರಿ ಹತ್ತರೊಳಗ ಸುರಕ್ಷಿತ್ ನಿಮ್ಮನ್ನ ಮನಿಗೆ ಮುಟ್ಟ್ಸೂ ಜಿಮ್ಮಾ ನಂದು.’

‘ಪೇರೆಂಟ್ಸ್ ಜೋಡೀನಾ?’

‘ಬ್ಯಾಡಂತೀರಿ..? ಅಲ್ಲಾ.. ನಿಮ್ಮ ಪೇರೆಂಟ್ಸ್ ದು ಏನರೆ ಆಬ್ಜೆಕ್ಷನ್ ಇದ್ದ್ರ ಅಂತನಿಶಿ…’

‘ಹಂಗೇನಿಲ್ಲ. ಸರಿ ಬರ್ತೀನಿ ಬಿಡ್ರಿ. ಆದ್ರ ಅಲ್ಲಿ ಭಾಳಹೊತ್ತು ಇರಾಕಾಗಂಗಿಲ್ಲ ಅಶ್ವಿನ್. ನಾಳೀದು ತಯಾರಿ ಇರ್ತತಲ್ಲಾ, ಸೊ..’

‘ಆಯ್ತು ಬರ್ರಿ. ಇರ್ರಿ ಅಂತ ಫೋರ್ಸ್ ಮಾಡಂಗಿಲ್ಲ ಬರ್ರಿ ಬರ್ರಿ.’ ಖುಷಿಯಿತ್ತು ಅವನ ದನಿಯಲ್ಲಿ. ಫೋನಿಟ್ಟ.

‘ಶಂತನು, ಸಂಜಿಮುಂದ ನಾನು ನೀನು ಪಾರ್ಟಿಗೆ ಹೋಗೂದು’ ಎಂದೆ. ಮಗ ಖುಷಿ ಆದ. 

‘ಚಲೊ, Tv ಆಫ್ ಮಾಡಿ ಜಲ್ದಿ ಜಲ್ದಿ ನಿನ್ನ ಹೋಮ್ವರ್ಕ್ ಮುಗ್ಸು. ನಾನು ನಿನ್ನ ಯೂನಿಫಾರ್ಮ್ ಇಸ್ತ್ರಿ ಮಾಡಿಟ್ಟು ಮದ್ಯಾಹ್ನದೂಟಕ್ಕ ಪುಲಾವ್ ಮಾಡ್ತೀನಿ’. ಎನ್ನುತ್ತಾ ಒಳ ನಡೆದೆ. 


***


ಅಶ್ವಿನ್ ನ ಮನೆಯಿಂದ ಮರಳಿ ಬಂದವಳೇ ಅದಾಗಲೇ ದಾರಿಯಲ್ಲೇ ನಿದ್ದೆಯಿಂದ ತೂಕಡಿಸುತ್ತಿದ್ದ ಶಂತನುವಿನ ಬಟ್ಟೆ ಬದಲಿಸುವ ಗೋಜಿಗೆ ಹೋಗದೆ ಹಾಗೇ ಗಾದಿಯ ಮೇಲೆ ಮಲಗಿಸಿದೆ. ನಾನು ಬಟ್ಟೆ ಬದಲಿಸಿ ನಾಳೆಗಾಗಿ ತರಕಾರಿ ಹೆಚ್ಚಲು ನಿಂತೆ. ಈಗ ಹಿಟ್ಟು ನಾದಿ, ತರಕಾರಿ ಹೆಚ್ಚಿ ಫ್ರಿಜ್ಜಲ್ಲಿಟ್ಟುಕೊಂಡರೆ ಬೆಳಗ್ಗೆ ಬೇಗ ಅಡುಗೆ ಮುಗಿಸಿ, ಡಬ್ಬಿ ಕಟ್ಟಿಕೊಂಡು ಸರಿಯಾದ ಹೊತ್ತಲ್ಲಿ ಮನೆಯಿಂದ ಹೊರಟು, ಶಂತನುವನ್ನು ಸ್ಕೂಲಲ್ಲಿ ಬಿಟ್ಟು ಆಫೀಸ್ ತಲುಪಲು ಅನುಕೂಲವಾಗುತ್ತಿತ್ತು. 

 ಬೆಳಿಗಿನ ಧಾರೆಯಿಂದ ಮೋಡಗಳಿಗೆ ತೃಪ್ತಿಯಾಗಿರಲಿಲ್ಲವೇನೋ, ರಾತ್ರಿಯ ಕತ್ತಲೊಡನೆ ಮೋಡಗಳ ಘರ್ಷಣೆಗೆ ಆಗಾಗ ಮಿಂಚು ಫಳ್ ಫಳ್ ಫಳಾಯಿಸುತ್ತ ಹನಿಗಳನ್ನುದುರಿಸತೊಡಗಿದವು. ಬೆಳಿಗ್ಗೆ ಬಟ್ಟೆ ಒಣಗಿಲ್ಲವೆಂದು ಹಾಗೇ ಬಿಟ್ಟಿದ್ದು ಈಗ ನೆನಪಾಗಿ ಎಂಥಾ ಕೆಲಸ ಮಾಡಿಕೊಂಡೆ ಎಂದು ಪೇಚಾಡುತ್ತಿರುವಾಗಲೇ, ಅಶ್ವಿನ್ ಇವತ್ತು ಅವರ ಮನೆಯಲ್ಲಿ ಅವನ ಅಸೈನ್ಮೆಂಟೊಂದನ್ನು ನಾನು ಮುಗಿಸಿಕೊಟ್ಟ ಉಪಕಾರಕ್ಕೆ ಪ್ರತಿಯಾಗಿ ಉಡುಗೊರೆಯಾಗಿ ಕೊಟ್ಟ ಕವರನ್ನು ಅಲ್ಲೇ ಮರೆತು ಬಂದಿದ್ದು ನೆನಪಾಯಿತು. ನಾನದನ್ನು ಮುದ್ದಾಂ ಅಲ್ಲಿ ಬಿಟ್ಟುಬಂದೆ ಎಂದು ಅಶ್ವಿನ್ ಎಲ್ಲಿ ತಪ್ಪು ತಿಳಿಯುತ್ತಾನೋ ಅದನ್ನು ನೋಡಿ, ಎನ್ನುವ ಕಳವಳ ಹುಟ್ಟಿ ತರಕಾರಿ ಹೆಚ್ಚುವುದನ್ನು ನಿಲ್ಲಿಸಿ, ಅಶ್ವಿನ್ ಗೆ ಈ ಕುರಿತು ಮೆಸೇಜ್ ಹಾಕಿದೆ. ನಾಳೆ ತಪ್ಪದೆ ಅದನ್ನು ಆಫೀಸಿಗೆ ತರಬೇಕೆಂದೂ ವಿನಂತಿಸಿಕೊಂಡೆ.

ಅಷ್ಟೊಂದು ಒತ್ತಾಯ ಮಾಡಿ ಕರೆದಿದ್ದ ಅಶ್ವಿನ್ ಮನೆಗೆ ಹೋದಾಗ ಆದರದಿಂದ ಕೊಂಚ ಹೆಚ್ಚೇ ಮುತುವರ್ಜಿಯಿಂದ ಬರಮಾಡಿಕೊಂಡಿದ್ದ. ಅವನ ತಾಯಿಯೂ ಅಕ್ಕರೆಯಿಂದ ಮಾತಾಡಿಸಿದ್ದರು. ನನ್ನ ಜೊತೆಗಿರುವ ಶಂತನುವನ್ನು ಕಂಡು, 

‘ಯಾರ್ರೀ ಈ ಹೀರೊ? ಭಾರಿ ಐತಿ ಗಡಿ’ ಎನ್ನುತ್ತಾ ಅವನನ್ನು ತನ್ನತ್ತ ಎಳೆದುಕೊಂಡ ಅಶ್ವಿನ್. 

‘ನನ್ನ ಮಗ ಶಂತನು’ ಎಂದಾಗ ತಾಯಿ ಮಗ ಮುಖ ಮುಖ ನೋಡಿಕೊಂಡರು. ಅಶ್ವಿನ್ ಮುಖ ಸಪ್ಪಗಾಗಿದ್ದನ್ನು ಗಮನಿಸಿದೆ ನಾನು. ‘ಏನಾತ್ರಿ ಅಶ್ವಿನ್?’ ಎಂದೆ.

‘ಹೇಯ್ ಹೇಹೇ ಏನೂ ಆಗಿಲ್ರಿ. ಬಂದೆ ಇರ್ರಿ’ ಎನ್ನುತ್ತಾ ಇನ್ನೊಂದು ಕೋಣೆಗೆ ಹೋದ. 

ಅಶ್ವಿನ್ ತಾಯಿ, ‘ನಿಮಗ ಮದುವಿ ಆಗೇತಿ ಅನ್ಸೂದ ಇಲ್ಲ ನೋಡ್ರಿ. ಹಿಂಗಾಗಿ ನಿಮ್ಮ ಹುಡುಗನ್ನ, ನಿಮ್ಮ ಅಕ್ಕ ಇಲ್ಲಾ ಅಣ್ಣನ ಮಗ ಇರ್ಬೇಕು ಅಂಕೊಂಡಿದ್ದೆ ನಾ. ಅಶ್ವಿನ್ ಸೈತ ಏನೂ ಹೇಳಿರ್ಲಿಲ್ಲ’ ಎಂದರು. ಅವರ ಮಾತಿನಿಂದ ಅವರಿಬ್ಬರ ಮನದಲ್ಲೇನಿತ್ತು ಅನ್ನುವುದು ಅರಿವಾಗಿ ಮನಸಿಗೆ ಕ್ಷಣಕಾಲ ಮುದವೆನಿಸಿತಾದರೂ ಮರುಕ್ಷಣವೇ ಆಗೋದೆಲ್ಲ ಒಳ್ಳೆಯದಕ್ಕೇ. ಯಾವದೂ ವಿಪರೀತಕ್ಕೆ ಹೋಗುವ ಮೊದಲೇ ಅಂತ್ಯವಾಯಿತು ಅನಿಸಿ ನಿರಾಳವಾದೆ. ಕಲೀಗ್ಸ್ ಜೊತೆ ಹರಟೆ ಊಟ ಮುಗಿಸಿ ಎಲ್ಲರಿಗಿಂತ ಬೇಗ ಅಲ್ಲಿಂದ ಹೊರಟುಬಂದಿದ್ದೆ. ಅರಿಯದ ಜನರ ನಡುವೆಯೂ ಶಂತನು ಖುಷಿಯಾಗೇ ಇದ್ದ.

 ಸಧ್ಯ ಉಡುಗೊರೆ ಮರೆತು ಬಂದಿರುವೆ ಅನ್ನೋದು ನೆನಪಾಗಿದ್ದು ಒಳ್ಳೆದಾಯ್ತು ಎಂದುಕೊಳ್ಳುತ್ತಾ ಮರಳಿ ತರಕಾರಿ ಹೆಚ್ಚತೊಡಗಿದೆ. ಹೊರಗಿನಿಂದ ಮಿಯಾಂವ್ ಎನ್ನುವ ಬೆಕ್ಕಿನಮರಿಯ ದನಿ ಕೇಳುತ್ತಿದ್ದಂತೆಯೇ ಬೆಳಿಗ್ಗೆ ಆಭಾ, ಮಹಗಾಂವ್ಕರ್ ಭಾಭಿಯ ಛಜ್ಜಾ ಮೇಲೆ ಅವುಗಳಿಗೆ ಮನೆ ಮಾಡಿದ್ದು ನೆನಪಾಯಿತು. ಅಲ್ಲೇ ಇದ್ದಾವೋ ಅಥ್ವಾ ಜಾಗ ಏನಾದ್ರು ಬದಲಿಸಿತಾ ಮರಿಯೊಂದಿಗೆ ಎನ್ನುವ ಅನುಮಾನ ಕಾಡಿತು. ಏನೇ ಆಗ್ಲಿ ಬೆಳಿಗ್ಗೆ ಅವು ಕಾಣಿಸಿಕೊಂಡರೆ ಅವುಗಳಿಗೆ ಇಂದು ಮದ್ಯಾಹ್ನದ ಚಪಾತಿಯನ್ನ ಹಾಲಿನೊಂದಿಗೆ ಹಾಕಬೇಕು ಎಂದುಕೊಳ್ಳುತ್ತಾ ಚಪಾತಿಗೆ ಹಿಟ್ಟು ನಾದತೊಡಗಿದೆ. ಹೊರಗೆ ಮಳೆ ಧಾರಾಕಾರ. ಆರದ ಗಾಯ ಆಗಷ್ಟೇ ಕೂಡಿಕೊಳ್ಳುತ್ತಿರುವಾಗಲೇ ಬೆರಳು ತಾಗಿ, ಪುನಃ ಬಾಯಿ ಬಿಟ್ಟುಕೊಂಡಂತೆ ಮಳೆಯೊಂದಿಗೆ ಅಂಟಿಕೊಂಡ ಮರೆಯಬೇಕೆಂದಷ್ಟೂ ಜೀವಕ್ಕಂಟಿ ಕುಳಿತ ಮತ್ತದೇ ನೆನಪುಗಳು ನುಗ್ಗಿ ಬಂದವು…


***


 ‘ಪ್ಲೀಸ್ ಬಾಗ್ಲಾ ತಗಿ. ನನಗಂತ ಬ್ಯಾಡ ನಿನ್ನ ಕೂಸಿನ್ನ ಮಾರಿ ನೋಡೆರೆ ಬಾಗ್ಲಾ ತಗಿ. ಹೊರಗ ಸಿಳ್ಳಗಾಳಿ, ಮಳಿ ಜೋರೈತಿ. ಕೂಸು ನಡಗಾಕತ್ತತಿ. ಪ್ಲೀಸ್’. 

‘ತಗಿಯಂಗಿಲ್ಲ. ಹೋಗು ಎಲ್ಲ್ಯೊ ತಿರಾಗಾಕ ಹೋಗಿದ್ದೆಲ್ಲ ಯಾವನ ಜತಿನೋ, ಹೋಗಲ್ಲೇ. ಇಲ್ಲ್ಯಾಕ ಬಂದಿ?’

 ‘ಹೇ ರಮಣಾಭವಾನಿ!! ನಾ ಇಲ್ಲೇ ಕೆಳಗ ಮೃದುಲಾ ದೀದಿ ಮನಿಗೆ ಹೋಗಿದ್ನೋ ಮಾರಾಯ ನಾಕ್ ಕಾಳ್ ಹಾಲ ಇಸ್ಕೊಂಡು ಬರಾಕಂತ. ಕೂಸಿಗೆ ಥಂಡಿ ಆಕ್ಕತಿ, ಬಾಗ್ಲಾ ತಗಿ ಮದಲ.’ 

ನಾಲ್ಕು ತಿಂಗಳ ಶಂತನುವನ್ನು ಬಳಸಿ ಸೆರಗ ಹೊದೆಸಿ ಎದೆಗೊತ್ತಿಕೊಂಡು ನಿಂತಿದ್ದರೂ, ಹೊರಗಿನ ಸಿಳ್ಳುಗಾಳಿಯ ಎದುರು ನನ್ನ ಬಡಕಲು ದೇಹದ ಶಾಖ ಸಾಲಾದಾಗಿ ನಡುಗತೊಡಗಿತ್ತು ಕೂಸು. ಇನ್ನೂ ಸ್ವಲ್ಪ ಹೊತ್ತು ಅವರ ಮನೇಲೇ ಇದ್ದಿದ್ದರೆ ಒಳ್ಳೆಯದಿತ್ತೇನೋ, ಹೇಗೂ ಆಗಲೂ ಹೀಗೇ ಒದರಾಡುತ್ತಿದ್ದ. ಅಟ್ಲೀಸ್ಟ್ ಕೂಸು ಥಂಡಿಗೆ ನಡಗೋದಾದ್ರು ತಪ್ಪತಿತ್ತು ಎಂದು ಅನಿಸತೊಡಗಿತ್ತು. ಒಳಗಿನಿಂದ ಇವನ ಬಡಬಡ ಮುಂದುವರೆದೇ ಇತ್ತು. ‘ನೀ ಊರ ಹಾದರಗಿತ್ತಿ, ನೀನು ಅಂಥವಳು ನೀನು ಇಂಥವಳು’ ಎಂದೆಲ್ಲ. ಕೊನೆಯ ಪ್ರಯತ್ನವೆಂಬಂತೆ ನಾನು,

‘ಮತ್ತ ಬಾಯಿಗ್ ಬಂದಂಗೆಲ್ಲ ಮಾತಾಡಬ್ಯಾಡ. ಹೊರಗ ನಿಂತೀನಿ. ಆಜೂಬಾಜು ಫ್ಲ್ಯಾಟಿನ ಮಂದಿ ಕೇಳಸ್ಕೊಂಡ್ರ ನಿಂದs ಮರ್ಯಾದಿ ಕಮ್ಮಿ ಆಕ್ಕತಿ ಮಂದ್ಯಾಗ. ತಗಿ ಬಾಗ್ಲಾ’ ಎಂದೆ. 

ನನ್ನ ಈ ಮಾತು ಕೆಲಸ ಮಾಡಿತ್ತು. ಮರ್ಯಾದೆ ಅಂದರೇನು ಎಂದೇ ಗೊತ್ತಿಲ್ಲದವ ಪೊಳ್ಳು ಮರ್ಯಾದೆಗೆ ಹೆದರಿ ಬಾಗಿಲು ತೆರೆದಿದ್ದ. ಬಾಗಿಲಿನ ಎರಡೂ ತೋಳುಗಳಿಗೆ ಕೈಯಾನಿಸಿ ಅಡ್ಡಗಟ್ಟಿ ನಿಂತವನ ಎಡ ಕೈ ಕೆಳಗಿನಿಂದ ನುಸುಳಿ ಒಳಗೋಡಿ, ಮಗುವಿನ ತಲೆಗೆ ಕುಂಚಗಿ ಕಟ್ಟಿ, ಒಗೆದು ಮಡಿಚಿಟ್ಟ ಸೀರೆಯನ್ನೆ ದಪ್ಪಗೆ ಹೊದೆಸಿ ಮಂಚದ ಮೇಲೆ ಮಲಗಿಸಿದೆ. ಪಾಟೀಲ್ ದೀದಿ ಕೊಟ್ಟ ಹಾಲು ಪೂರ್ತಿ ಕಾವು ಕಳೆದುಕೊಂಡಿರಲಿಲ್ಲವಾಗಿ ಮತ್ತೆ ಬಿಸಿ ಮಾಡಲು ಹೋಗದೆ ಮಗುವಿನ ಬಾಟಲಿಗೆ ಹಾಕಿ ಕುಡಿಸಿದೆ. ತಲಬಾಗಿಲು ಹಾಕಿಕೊಂಡು ಬಂದವನು ಬೆಡ್ರೂಮಿನ ಬಾಗಿಲಲ್ಲಿ ಕಾಯುತ್ತಾ ನಿಂತಿದ್ದಾನೆಂದು, ಅತ್ತ ಕಡೆಗೆ ಬೆನ್ನು ಮಾಡಿ ಮಗುವಿನ ಆರೈಕೆಯಲ್ಲಿ ತೊಡಗಿದ್ದರೂ ಅನುಭವಕ್ಕೆ ಬಂದಿತ್ತು. ಮಗುವಿನ ಬಳಿ ಇರುವಷ್ಟು ಹೊತ್ತೂ ಅವನು ನನ್ನನ್ನೇನೂ ಮಾಡಲಾರ ಎನ್ನುವುದು ಗೊತ್ತಿತ್ತಾದ್ದರಿಂದ, ಆಗಷ್ಟೆ ಕುಡಿಸಿದ ಮೇಲಿನ ಹಾಲಿಗೆ ಶಂತನುವಿನ ಹೊಟ್ಟೆ ತುಂಬಿದ್ದರೂ ನಾನು ಜಂಪರನ್ನು ಮೇಲೆತ್ತುತ್ತಾ ಅವನ ಪಕ್ಕದಲ್ಲಿ ಮಲಗಿ ಕೂಸಿಗೆ ಮೊಲೆಯೂಡಿದೆ. ಜಂಪರಿನ ಹುಕ್ಕು ಬಿಚ್ಚಬೇಕಾದ ಅವಶ್ಯಕತೆಯೇ ಇಲ್ಲವೆನ್ನುವಷ್ಟು ಕೃಶವಾಗಿ ಹೋಗಿದ್ದೆ ನಾನು. ಬತ್ತಿದ ಹಾಲಿಲ್ಲದ ಮೊಲೆಯ ಚೀಪುತ್ತ ಮಗು ನಿಧಾನಕ್ಕೆ ನಿದ್ದೆಗಿಳಿಯತೊಡಗಿತ್ತು. ಅಷ್ಟೊತ್ತು ಬಾಗಿಲ ಬಳಿಯೇ ನಿಂತಿದ್ದವನು ಹತ್ತಿರ ಬಂದಿದ್ದ ಅವನು ‘ಸಾಕೆದ್ದೇಳು ಅಲ್ಲಿಂದ’ ಎಂದ. 

ಇನ್ನು ಪ್ರಯೋಜನವಿಲ್ಲವೆಂದರಿತಿದ್ದ ನಾನು ನಿಧಾನಕ್ಕೆ ಕೂಸಿಂದ ಬಿಡಿಸಿಕೊಂಡು ಮೇಲೆದ್ದೆ. ಪಡಸಾಲೆಗೆ ನನ್ನನ್ನು ದರದರ ಎಳೆದುಕೊಂಡು ಬಂದವನು ವಿಚಾರಣೆಗೆ ತೊಡಗಿದ. 

‘ಖರೆ ಹೇಳು ಯಾಂವನ ಜತಿ ಹೋಗಿದ್ದಿ ನೀ? ನಾ ಅಕಡೆ ಆಫೀಸಿಗೆ ಹೋಗೂದ ಕಾಯ್ತಿರ್ತಿಯಲ್ಲ? ಖರೆ ಬೊಗಳು ಎಲ್ಲಿ ಹರಗಾಕ ಹೋಗಿದ್ದಿ?’ 

ಮೈಯೆಲ್ಲ ಉರಿಯ ತೊಡಗಿತ್ತಾದರೂ ಉತ್ತರಿಸಿದಷ್ಟೂ ಅವನ ಹೊಲಸು ಮಾತುಗಳು ಉಕ್ಕಿ ಉಕ್ಕಿ ಬರ್ತವೆ ಮತ್ತು ಬೈಗುಳದ ಜೊತೆಗೆ ಹೊಡೆತ ಒದೆತಗಳೂ ನಿಶ್ಚಿತ ಅನ್ನುವುದು ಈ ಒಂದೂವರೆ ವರ್ಷದಲ್ಲಿ ಅನುಭವಕ್ಕೆ ಬಂದ ಮಾತಾಗಿದ್ದರಿಂದ ಏನೂ ಹೇಳದೆ ಸುಮ್ಮನೆ ನಿಂತೆ. ನಾನು ಸುಮ್ಮನಿದ್ದರೆ ಅವನು ಒದರಾಡಿ ಸುಮ್ಮನಾಗುತ್ತಾನೆ ಎನ್ನುವುದು ನನ್ನ ತಪ್ಪು ಕಲ್ಪನೆಯಾಗಿತ್ತೆಂದು ಮರು ಘಳಿಗೆ ನನ್ನ ತಲೆ ಗೋಡೆಗಪ್ಪಳಿಸಿದಾಗಲೇ ತಿಳಿದಿದ್ದು. ಝಾಡಿಸಿ ನನ್ನ ಕಿಬ್ಬೊಟ್ಟೆಗೆ ಒದ್ದಿದ್ದ. ಅವನು ಒದ್ದ ಜೋರಿಗೆ ನನ್ನ ಇಡೀ ದೇಹ ಹಾರಿ, ನಾಲ್ಕಡಿ ಹಿಂದೆ ಇದ್ದ ಗೋಡೆಗೆ ಅಪ್ಪಳಿಸಿ ತಲೆಗೂ ತಾಗಿ ಕೆಳಗೆ ಬಿದ್ದಿದ್ದೆ ನಾನು. ನೋವಿನಿಂದ ನಾನು ಕಿರುಚಿಕೊಂಡಿದ್ದು ಗ್ರೌಂಡ್ ಫ್ಲೋರಿನವರೆಗೂ ಕೇಳಿಸಿತ್ತೆಂದು ಕಾಣುತ್ತದೆ. ಮೃದುಲಾ ದೀದಿ, ಭೋಸ್ಲೆ ಭಾಭಿ ಮೇಲೋಡಿ ಬಂದಿದ್ದರು. ಅಕ್ಕಪಕ್ಕದ ಫ್ಲ್ಯಾಟಿನವರೂ ಬಂದು ನಮ್ಮ ಬಾಗಿಲು ತಟ್ಟುವಷ್ಟರಲ್ಲಿ ನಾನು ಮೂರ್ಛೆ ಹೋಗಿದ್ದೆ. ಎಚ್ಚರವಾದಾಗ ಇವನು ಗಂಡನೆನಿಸಿಕೊಂಡ ಮಹಾನುಭಾವ ಸುಶೀಲ್, ನಾನು ತಲೆ ಸುತ್ತಿ ಬಿದ್ದೆನೆಂದೂ, ತಾನೋಡಿ ಬಂದು ನನ್ನನ್ನು ಹಿಡಿಯುವಷ್ಟರಲ್ಲಿ ಹೀಗಾಗಿ ಹೋಯಿತೆಂದೂ ಬಂದವರೆದುರು ವಿವರಿಸುತ್ತಿದ್ದ. ನಾಲ್ಕು ಗೋಡೆಗಳ ನಡುವೆ ಅವನಿಂದಾಗುತ್ತಿದ್ದ ಅವಮಾನ ಸಾಲದೆಂದು ಈ ತಮಾಶಾ ಬೇರೆ. ಅಳಲು ಕಣ್ಣೀರೂ ಉಳಿದಿರಲಿಲ್ಲ. ಸುಮ್ಮನೆ ಮಾತು ಬಾರದವಳಂತೆ, ಛಾವಣಿಯನ್ನು ನೋಡುತ್ತಾ ಮಲಗಿದ್ದೆ. ನನ್ನ ತಲೆ ನೇವರಿಸುತ್ತಿದ್ದ ಮೃದುಲಾ ದೀದಿ ಅಳುತ್ತಿದ್ದರು. ಭೋಸ್ಲೆ ಭಾಭಿ ನನಗಾಗಿ ಚಹಾ ಮಾಡಿ ತರಲೆಂದು ತಮ್ಮ ಮನೆಗೆ ಹೋಗಿದ್ದರು. 

ನಮ್ಮ ಫ್ಲೋರಿನ ಜನ ತಮ್ತಮ್ಮ ಮನೆಗೆ ತೆರಳಿದ ಮೇಲೆ, ನನ್ನ ಗಂಡನೆನಿಸಿಕೊಂಡವನಿಗೆ ಮೃದುಲಾ ದೀದಿ, ‘ಆಪ್ ಅಪನೆ ಬೀವಿ ಸೆ ಬಹುತ್ ಪ್ಯಾರ್ ಕರ್ತೆ ಹೋ, ಯೇ ಮೆ ಜಾನ್ತಿ ಥಿ ಭಯ್ಯಾ. ಆದ್ರ ಈ ಪರಿ ಪ್ರೀತಿ ಮಾಡ್ತೀರಂತ ಗೊತ್ತಿರ್ಲಿಲ್ಲ ಬಿಡ್ರಿ ನನಗ!’ ಎಂದರು.

ದೀದಿಯ ವ್ಯಂಗ್ಯದ ಮೊನಚು ಅವನಿಗೆ ತಾಗಿತ್ತು. ‘ನಹಿ ಬಾಯಿ, ನೀವು ತಪ್ಪು ತಿಳ್ಕೊಂಡೀರಿ. ನಾ ಅಕಿಗೆ ಏನೂ ಮಾಡಿಲ್ಲ. ಖರೇನ ಚಕ್ಕರ್ ಬಂದು ಬಿದ್ದಾಳ’ 

ಈಗ ದೀದಿ ಹುಬ್ಬೇರಿಸಿ ಮತ್ತೂ ಮೊನಚಾಗಿ ‘ಓಹೋ!’ ಎಂದರು.

ಆ ರೀತಿ ಮೃದುಲಾ ದೀದಿ ವ್ಯಂಗ್ಯವಾಡಲು ಕಾರಣವಿತ್ತು. ಅದು ಇಂದಿನ ಘಟನೆಗಲ್ಲ, ನಾಲ್ಕು ತಿಂಗಳ ಹಿಂದಿನದು. ಅಂದರೆ ಶಂತನು ಹುಟ್ಟಿ ವಾರದ ನಂತರದ ಒಂದು ದಿನದ್ದು. 


***


ನಾನು ತವರಿನಿಂದ ಇವನೊಂದಿಗೆ ಮೊದಲ ಬಾರಿ ಇಲ್ಲಿಗೆ ಬಂದಾಗ ಮೊದಲು ಎದುರಿಗೇ ಸಿಕ್ಕವರು ಮೃದುಲಾ ದೀದಿ. ಮೂಲತಃ ಔರಂಗಾಬಾದಿನವರಾದ ಪಾಟೀಲ್ ದಂಪತಿ ತಮ್ಮ ಮೂರು ಮಕ್ಕಳ ಜೊತೆಗೆ ನಾವಿದ್ದ ಅಪಾರ್ಟ್ಮೆಂಟಿನ ಗ್ರೌಂಡ್ ಫ್ಲೋರಿನ 2BHK ಫ್ಲಾಟಿನಲ್ಲಿದ್ದರು. ಅವರಲ್ಲಿಗೆ ಬಂದು ಅದಾಗಲೇ ೮-೧೦ ವರ್ಷಗಳಾಗಿದ್ದವು. ತವರಿನವರು ಹರಸಿ ಉಡಿಸಿದ್ದ, ಕೆಂಪಂಚಿನ ಹಸಿರು ರೇಶಿಮೆ ಸೀರೆಯನ್ನುಟ್ಟು ಶ್ರೀ ಸಾಯಿ ಅಪಾರ್ಟ್ಮೆಂಟಿನೊಳಗೆ ಕಾಲಿಟ್ಟಿದ್ದೆ ನಾನು. ನನ್ನನ್ನು ನೋಡಿದ ಅವರ ಕಣ್ಣಲ್ಲಿ ಮೆಚ್ಚುಗೆ ಮೂಡಿತ್ತು. ಮೆಚ್ಚುಗೆಯ ನೋಟಗಳು ನನಗೆ ಹೊಸದಲ್ಲವೆಂಬ ಹಮ್ಮು ನನಗಿದ್ದಿದ್ದು ನಿಜ. ಹೊಸಬರು ಎದುರಾದಾಗ ಆದಷ್ಟು ತಮ್ಮ ಬಿಗುಮಾನವನ್ನೇ ತೋರಿಸುವವರು ಹೆಚ್ಚಿರುವಾಗ ದೀದಿಯ ಸ್ವಚ್ಛ ಮನಸು ಅವರ ಕಣ್ಣ ಹೊಳಪಲ್ಲಿ ಕಾಣಿಸಿತ್ತು. ಬಹುಶಃ ಅಂದೇ ಕೊನೆಯನಿಸುತ್ತೆ ನಾನು ನೀಟಾಗಿ ಸೆರಗು, ನೆರಿಗೆ ಪಿನ್ ಮಾಡಿ ಉಟ್ಟಿದ್ದು. ಮುಂದೆ ಯಾವಾಗಲೂ ಮೈತುಂಬ ಸೆರಗು ಹೊದ್ದಿರುವುದು ಅನಿವಾರ್ಯವಾಯಿತು…

‘ಕೋಣ್ ಪಾಯ್ಜೆ?’(ಯಾರು ಬೇಕಿತ್ತು) ಹಸನ್ಮುಖಿಯಾಗಿ ಮರಾಠಿಯಲ್ಲಿ ಕೇಳಿದ್ದರು.

ತಿಂಗಳ ಹಿಂದೆಯಷ್ಟೇ ತಾನು ಈ ಅಪಾರ್ಟ್ಮೆಂಟಲ್ಲಿ ಮನೆಯೊಂದನ್ನು ಬಾಡಿಗೆ ಹಿಡಿದಿರುವುದಾಗಿ ನಮಗೆ ಮೊದಲೇ ಹೇಳಿದ್ದನಾದ್ದರಿಂದ, ಅವನನ್ನು ಮೃದುಲಾ ಅವರು ಅಪರಿಚಿತರೊಂದಿಗೆ ಮಾತಾಡುವಂತೆ ಮಾತಾಡಿದ್ದು ಸಹಜವೇ ಆಗಿತ್ತು. 

‘ನಹಿ, ಹಮ್ ಯಹಾಂ ರಹನೆ ಕೆ ಲಿಯೆ ಆಯೆ ಹೈಂ’ ಮರಾಠಿ ಬಾರದ ಇವನು ಹಿಂದಿಯಲ್ಲಿ ಉತ್ತರಿಸಿದ್ದ. 

‘ಅಚ್ಚಾಜೀ. ಮೆ ಹೂಂ ಮೃದುಲಾ ಪಾಟೀಲ್. ನಿಮ್ಮ ಹೆಸರು? ಯಾವ ಫ್ಲೋರು ನಿಮ್ದು?’ 

‘ನಾನು ಸುಶೀಲ್ ಚವ್ಹಾಣ್. ಮತ್ತಿಕಿ ನನ್ನ ಮಿಸಸ್ಸು. ನಮ್ದು ಮೂರನೇ ಫ್ಲೋರ್’ ಚುಟುಕಾಗಿ ಉತ್ತರಿಸಿದ್ದ ಇವನು.

‘ಅಚ್ಚಾ ಅಚ್ಚಾ. ಹೊಸಾ ಮದುಮಕ್ಕಳಗತೆ ಕಾಣ್ತೀರಿ. ಆಜಾವ್ ದೋನೊ ಅಂದರ್. ಆರಾಮ್ಸೆ ಒಂದ್ಕಪ್ ಚಾ ಕುಡ್ದು ನಿಮ್ಮನಿ ಸೆಟ್ ಮಾಡ್ಕೊಳ್ಳು ಕೆಲ್ಸಕ್ಕ ಕೈ ಹಚ್ಚೂವಂತ್ರಿ ಬರ್ರಿ.’ ಎಂದರು ದೀದಿ. 

ಇವನು ‘ಈಗ ಬ್ಯಾಡ್ರಿ ಮತ್ತ ಬರ್ತೀವ್ರಿ, ತ್ಯಾಂಕ್ಸ್’ ಎಂದವನೇ ದುಡುದುಡು ಮೆಟ್ಟಿಲೇರತೊಡಗಿದ್ದ. ನಾಲ್ಕಂತಸ್ತಿನ ಆ ಅಪಾರ್ಟ್ಮೆಂಟಿಗೆ ಲಿಫ್ಟ್ ಇರಲಿಲ್ಲ. ಪ್ರಯಾಣದ ಆಯಾಸಕ್ಕೆ ನನಗೆ ಚಹಾ ಬೇಕೆನಿಸಿದ್ದರೂ ಅವರಿಗೆ ತ್ಯಾಂಕ್ಸ್, ಬೈ ಎಂದು ಹೇಳುತ್ತಾ, ಸುಶೀಲ್ ನ ಹಿಂಬಾಲಿಸಿದ್ದೆ. ಮುಂದೆಲ್ಲ ಯಾರಾದರೂ ಇವನ ಕಡೆಯವರು ಊರಿಂದ ಬಂದಾಗ, ಅವರನ್ನು ಕಳಿಸಲು ನಾನು ಕೆಳಗೆ ಬಂದಾಗ ಮಾತ್ರ ಮೃದುಲಾ ದೀದಿಯ ಭೇಟಿಯಾಗುತ್ತಿತ್ತು. ಅದೂ ಅವರಾಗೇ ಮಾತಾಡಿಸಿ ಏನನ್ನಾದರು ಕೇಳಿದಾಗ, ಹೇಳುವುದು ಅನಿವಾರ್ಯವಾಗಿ ನಾಲ್ಕಾರು ನಿಮಿಷ ನಿಂತು ಅವರು ಕೇಳಿದ್ದಕ್ಕೆ ಉತ್ತರಿಸಿದವಳೇ ಬರ್ತೀನಿ ದೀದಿ ಎನ್ನುತ್ತಾ ಅಲ್ಲಿಂದ ಹೊರಟುಬಿಡುತ್ತಿದ್ದೆ. ಕೆದರಿದ ತಲೆ, ಸುಕ್ಕುಸುಕ್ಕಾದ ಸೀರೆಯುಟ್ಟು ಯಾರಾದರು ಎಷ್ಟೊತ್ತು ಬೇರೆಯವರೆದುರು ನಿಲ್ಲಲು ಸಾಧ್ಯ! ಮೂರೊತ್ತೂ ಮನೇಲಿ ಈ ಅವತಾರದಲ್ಲಿರುವ ನಾನು ಇಂಜಿನಿಯರಿಂಗ್ ನಲ್ಲಿ ಮೂರನೇ ರ್ಯಾಂಕ್ ಪಡೆದಾಕೆ ಎಂದರೆ ಯಾರಾದರೂ ನಂಬುತ್ತಾರಾದರೂ ಹೇಗೆ?! ಮೃದುಲಾ ದೀದಿ ಕೂಡ ನಂಬಿರಲಿಲ್ಲ. 

ನಮ್ಮ ಲಂಬಾಣಿ ಸಮಾಜದಲ್ಲಿ ಓದಿದವರ ಸಂಖ್ಯೆ ಕಮ್ಮಿ. ಅದರಲ್ಲೂ ಹುಡುಗಿಯರ ಸಂಖ್ಯೆ ಇನ್ನೂ ಕಡಿಮೆ ಇರುವಾಗ, ಹೀಗೆ ತಂದೆಯ ಬೆಂಬಲದಿಂದ ಇಂಜಿನಿಯರಿಂಗ್ ಓದಿ ರ್ಯಾಂಕ್ ಪಡೆದುಕೊಂಡುಬಿಟ್ಟರೆ, ಆ ಲೆವಲ್ಲಿನ ಗಂಡೆಲ್ಲಿಂದ ಹುಡುಕೋದು?! 

‘ಅದ್ಕ ಬಡ್ಕೊಂಡೆ, ಹೆಣ್ಣಿಗ್ಯಾಕ ಅದೆಲ್ಲಾ ಬಡಿವಾರ ಅಂತ. ಎಲ್ಲಿ ಕೇಳೀದಿ ಆಗ ನನ್ನ ಮಾತ್ನ ನೀನು’ ಬಾಪೂನ ಸ್ವಾಟಿ ತಿವಿದಿದ್ದಳು ನನ್ನ ಯಾಡಿ. ಆಕೆ ಮೊದಲಿನಿಂದಲೂ ಅಷ್ಟೇ. ‘ನಮ್ಮಂದಿ ಹೆಣ್ಮಕ್ಳು ಅಂದ್ರ, ಮನ್ಯಾಗ ಅಡ್ಗಿ ಮಾಡ್ಕೊಂಡು, ಗಂಡ ಹೇಳ್ದಂಗ ಕೇಳ್ಕೊಂಡು ಇದ್ದ್ರ ಸಾಕು’ ಅನ್ನುವಾಕೆ. ಅಂಥವಳಿಂದ ಹೆಚ್ಚಿಗೆ ನಿರೀಕ್ಷಿಸೋದಾದ್ರೂ ಏನು ನಾನು? ಊರಲ್ಲಿ ನನ್ನ ಯಾಡಿ ಮತ್ತು ಬಾಪೂ ಇಬ್ಬರದೂ ಒಳ್ಳೆಯ ಹೆಸರಿದೆ. ನನ್ನ ಬಾಪೂ ಕದರಾಪುರದಲ್ಲಿ ರೈತನಾಗಿ ನಲವತ್ತು ಎಕರೆ ನೀರಾವರಿ ಜಮೀನಿನ ಮಾಲಿಕನಾಗಿದ್ದರಿಂದ, ಆಗಾಗ ಅಡತಿಯ ವಹಿವಾಟಿಗಾಗಿ ಬಿಜಾಪುರಕ್ಕೆ ಹೋಗಿಬಂದು ಮಾಡುತ್ತಿದ್ದ. ಹೊರ ಜಗತ್ತನ್ನು ಕಂಡವನು ಅವನು. ಹೀಗಾಗಿ ಇತರರ ಮಕ್ಕಳಂತೆ ತನ್ನ ಮಕ್ಕಳೂ ಶಾಲೆಗೆ ಹೋಗಬೇಕೆಂದು ಬಯಸಿ ತನ್ನ ಆರೂ ಜನ ಮಕ್ಕಳನ್ನು ಶಾಲೆಗೆ ಹಾಕಿದ್ದ. ಬಾಪೂನ ಆಸೆಗೆ ತಕ್ಕಂತೆ ನಮ್ಮಲ್ಲಿ ನಾಲ್ಕು ಜನ ಶಾಲೆಯಲ್ಲಿ ಚೆನ್ನಾಗಿಯೇ ಓದಿ ಜಾಣ ಮಕ್ಕಳು ಎನಿಸಿಕೊಂಡವರು. ಉಳಿದಿಬ್ಬರಲ್ಲಿ ನನ್ನ ದೊಡ್ಡ ತಮ್ಮ ಉಡಾಳನಾಗಿ ತಿರುಗುವುದು ಚಂದ ಕಂಡು, ಓದದೇ ಟೆನ್ತಲ್ಲಿ ಲಾಗಾ ಒಗೆದು ಒಕ್ಕಲುತನಕ್ಕೆ ನಿಂತಿದ್ದ. ನಾಲ್ಕನೇ ನಂಬರಿನ ತಂಗಿಗೆ ಓದು ತಲೆಗೇ ಹತ್ತದೆ, ಒಂದೇ ಕ್ಲಾಸಲ್ಲಿ ಮೂರು ಮೂರು ಸಲ ಕುಳಿತಾಗ, ಅವಳನ್ನು ಶಾಲೆ ಬಿಡಿಸುವುದು ಬಾಪೂಗೆ ಅನಿವಾರ್ಯವಾಗಿತ್ತು. ಯಾಡಿಗೆ ಅಡುಗೆಗೆ ಸಹಾಯ ಮಾಡಿಕೊಂಡು ಆರಾಮಾಗಿದ್ದುಬಿಟ್ಟಿದ್ದಳು ಅವಳು. ಇನ್ನಿಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿಗೆ ನನ್ನಂತೆಯೇ ಓದಿನಲ್ಲಿ ಆಸಕ್ತಿ. ನಾನು ಪಿಯುಸಿ ಮತ್ತು ಸಿಇಟಿಯಲ್ಲಿ ಒಳ್ಳೆಯ ಮಾರ್ಕ್ಸ್ ತೊಗೊಂಡಿದ್ದರಿಂದ, ಇಂಜಿನಿಯರಿಂಗ್ ನ ಫ್ರೀ ಸೀಟ್ ಸಿಕ್ಕಿತ್ತು. ಎಲೆಕ್ಟ್ರಾನಿಕ್ & ಕಮ್ಯೂನಿಕೇಷನ್ ನ್ನು ವಿಷಯವಾಗಿ ಆರಿಸಿಕೊಂಡು ಮನಸ್ಸಿಟ್ಟು ಓದಿದ್ದೆ, ರ್ಯಾಂಕ್ ಬಂದಿದ್ದೆ. ಹೀಗಾಗಿ ಹಿರಿಯ ಮಗಳಾದ ನನ್ನ ಮೇಲೆ ವಿಶೇಷ ಅಭಿಮಾನ ಬಾಪೂಗೆ. ಓದು ಮುಗಿಯಿತಲ್ಲ, ಈಗ ತನ್ನ ಈ ಮುದ್ದಿನ ಮಗಳಿಗೆ ತಕ್ಕ ವರನನ್ನು ಹುಡುಕಿಯೇ ಹುಡುಕಿದ. ಇಂಜಿನಿಯರಿಂಗ್ ನಲ್ಲಿ ಡಿಗ್ರಿ ಮಾಡಿದವರು ಒಬ್ಬರೂ ಸಿಗಲಿಲ್ಲ ನಮ್ಮ ಜನಾಂಗದಲ್ಲಿ. ಕಾಯುತ್ತ ಕೂತರೆ ವಯಸ್ಸಾಗುವುದು ಎಂದು ಹೆದರಿ, ಕೊನೆಗೂ ಎಲೆಕ್ಟಿಕಲ್ ನಲ್ಲಿ ಡಿಪ್ಲೋಮಾ ಮಾಡಿದ್ದ ಇಂಜಿನಿಯರ್ ವರ ಸಿಕ್ಕು, ಇಷ್ಟರ ಮಟ್ಟಿಗಾದರೂ ಸೈ, ನಮ್ಮ ಜಾತಿಯಲ್ಲಿ ಅಂತೂ ತನ್ನ ಮಗಳಿಗೂ ಇಂಜಿನಿಯರ್ ಗಂಡನನ್ನೇ ಹುಡುಕಿದೆ ಎಂದು ಹೆಮ್ಮೆಪಟ್ಟ. ಬೆಳ್ಳಗೆ ಹಾಲಿನ ಬಣ್ಣದ ನುಣುಪು ಚರ್ಮದ, ಗಿಡ್ಡ ಮೂಗು, ಉಬ್ಬುಗೆನ್ನೆಯ, ಆರಡಿಯ ಈ ಗಂಡನೆಂಬ ಸುಶೀಲ್ ಆ ವಯಸ್ಸಿಗೇ ಇಷ್ಟು ದಪ್ಪ ಹೊಟ್ಟೆ ಬಿಟ್ಟಿದ್ದ. ಬಾಪೂ ನನ್ನನ್ನು ಇಂಜಿನಿಯರಿಂಗ್ ಓದಿಸಿದ ಕೃತಜ್ಞತೆಗೆ ಮತ್ತು ನಮ್ಮ ಮಂದಿಯಲ್ಲಿ ಇಷ್ಟು ಓದಿದ ಗಂಡು ಸಿಗುವುದು ಕಷ್ಟ ಎನ್ನುವ ಅನುಭವ ಈಗಾಗಲೇ ಆಗಿದ್ದರಿಂದ ತುಟಿ ಪಿಟಕ್ಕೆನ್ನದೆ ಮದುವೆಯಾಗಿದ್ದೆ. ಮದುವೆಯಾದ ಮೇಲೆ ಹುಡುಗಿ ಒಮ್ಮೆ ತವರಿನಿಂದ ಗಂಡನ ಮನೆಗೆ ಹೋದಳೆಂದರೆ, ಮತ್ತೆಂದೂ ತವರಿನ ಮುಖ ನೋಡುವ ಹಾಗಿಲ್ಲವೆಂಬ ನಮ್ಮಲ್ಲಿನ ಸಂಪ್ರದಾಯನ್ನು ನಮ್ಮ ತಾಂಡಾದ ಜನ ಪಾಲಿಸಿಕೊಂಡು ಬಂದಿದ್ದರಾದ್ದರಿಂದ, ಒಮ್ಮೆ ಮನೆಯಿಂದಾಚೆ ಹೋದರೆ ಮಗಳು ಮರಳಿ ಇಲ್ಲಿಗೆ ಬರಲಾರಳು ಎಂದು, ಬಾಪೂ ನಮ್ಮಿಬ್ಬರನ್ನೂ ತಿಂಗಳು ಕಾಲ ತನ್ನಲ್ಲಿಯೇ ಉಳಿಸಿಕೊಂಡಿದ್ದ. ಅಳಿಯದೇವರಿಗೆ ತಲೆಯಿಂದ ಕಾಲಿನವರೆಗೆ ಉಪಚಾರವೋ ಉಪಚಾರ. ನಮ್ಮ ಕುಲಗುರು ಸೇವಾಲಾಲ್ ಗೂ ಅಷ್ಟೊಂದು ನಡೆದುಕೊಂಡಿದ್ದನ್ನ ನೋಡಿರಲಿಲ್ಲ ನಾನು. ಸೇವೆಯಿಂದ  ಬಾಪೂನ ಅಳಿಯದೇವರು ಪ್ರಸನ್ನಚಿತ್ತರಾಗಿದ್ದರಾದ್ದರಿಂದ ನನ್ನೊಂದಿಗೆ ಚೆನ್ನಾಗಿದ್ದರು. ಹಾಗಾಗಿ ನಾನೂ ಖುಷಿಯಾಗಿಯೇ ಇದ್ದೆ. ಅವನ ದೇಹವಿಕಾರ ಗಣನೆಗೇ ಬರದಷ್ಟು ಮತ್ತು ಹಾಗೆಲ್ಲ ಹೊರಗಿನಾಕಾರ ನೋಡಿ ಮನುಷ್ಯನನ್ನ ಅಳೆದು ತಪ್ಪು ಮಾಡಿದ್ದೆ ಅನ್ನುವಷ್ಟು. ಬಾಪೂ ನನಗಾಗಿ ಮದುವೆಯಲ್ಲಿ ಪಾತ್ರೆ ಪಗಡಿ, ಪ್ಲೇನ್ ಶೀಟಿನ ಕಬ್ಬಿಣದ ಪಲ್ಲಂಗ, ಹಾಸಿಗೆ, ಒಂದು ಹಾಲು ಕರಿಯುವ ಆಕಳು ಎಲ್ಲವನ್ನೂ ನನಗಾಗಿ ಹೊಂದಿಸಿಟ್ಟಿದ್ದ. ಸುಶೀಲ್ ಅವೆಲ್ಲವನ್ನೂ ಊರಿಗೆ ಸಾಗಿಸುವುದಾಗಿಯೂ, ತಾನು ಕೆಲಸ ಮಾಡುತ್ತಿರುವ ಅಹಮದನಗರ ನ ಮನೆಯಲ್ಲಿ ಎಲ್ಲ ವ್ಯವಸ್ಥೆಯೂ ಇರುವುದರಿಂದ ಅದರ ಅಗತ್ಯವಿಲವೆಂದೂ ಎಂದಾಗ ಅಳಿಯನಿಗೆ ಸಂಸಾರದ ಬಗ್ಗೆ ಇರುವ ಆಸ್ಥೆ ನೋಡಿ, ಯಾಡಿ ಬಾಪೂ ಖುಷಿಯಾದರಾದರೂ, ಮಗಳಿಗಾಗಿ ತಂದ ಸಾಮಾನುಗಳು ಅವಳಿಗೆ ಸಲ್ಲುತ್ತಿಲ್ಲ ಎನ್ನುವುದು ಅವರಿಗೆ ಬೇಸರವನ್ನುಂಟು ಮಾಡಿತ್ತು. ಆದರೆ ಏನೂ ಅನ್ನುವ ಹಾಗಿರಲಿಲ್ಲ. 

ತಿರುಗಿ ನೋಡಲಾಗದ ತವರಿನ ಕರುಳುಬಳ್ಳಿಯನ್ನು ಕತ್ತರಿಸಿಕೊಂಡು ಸುಶೀಲನ ಹಿಂದೆ ಹೊರಟು ಬಂದು, ನಗರ್ ಎಂದು ಕರೆಸಿಕೊಳ್ಳುವ ಮಹಾರಾಷ್ಟ್ರದ  ಅಹಮದನಗರದ ಶ್ರೀಸಾಯಿ ಅಪಾರ್ಟ್ಮೆಂಟಿಗೆ ಸಂಜೆ ವೇಳೆಗೆ ಬಂದಾಗ, ಮನೆಯೊಳಗಿನ ಸಾಮಾನುಗಳನ್ನು ನೋಡಿ ಹೌಹಾರಿದ್ದೆ ನಾನು. 1BHK ಮನೆಯಲ್ಲಿ ಬರಿಮೈಯಲ್ಲಿದ್ದ ಒಂದು ಪಟ್ಟಾಪಟ್ಟಿ ಕಬ್ಬಿಣದ ಪಲ್ಲಂಗ, ಒಂದು ಕುರ್ಚಿ, ಟೇಬಲ್, ಒಂದು ಘಾಸ್ಲೆಟ್ ಸ್ಟೋವ್ ಮತ್ತು ಎರಡು ಬೋಗೋಣಿ, ಎರಡು ತಟ್ಟೆ, ಮತ್ತೊಂದು ನೀರು ಕುಡಿಯುವ ಸ್ಟೀಲ್ ಲೋಟ ಬಿಟ್ಟರೆ ಆ ಮನೆಯಲ್ಲಿ ಏನೆಂದರೆ ಏನೂ ಇರಲಿಲ್ಲ! ಈಗ ನಮ್ಮ ಜೊತೆಗೆ ತಂದಿರುವ ನನ್ನವೆರಡು ಮತ್ತು ಅವನದೊಂದು ಸೂಟ್ಕೇಸುಗಳು ಅವುಗಳ ಜೊತೆ ಸೇರಿ ಮೂರು ಸಂಖ್ಯೆ ಹೆಚ್ಚಾಯಿತು ಅಷ್ಟೆ. 

‘ಇಲ್ಲಿ ನೀನು ಎಲ್ಲಾ ವ್ಯವಸ್ಥಾ ಐತಿ ಅಂದಿದ್ದಿ ಸುಶೀಲ್. ಆದ್ರ…’

‘ತರೂನಂತ ಏನವಸ್ರಾ?’ ನಗುತ್ತಾ ನುಡಿದ. ಆ ನಗು ಸಹಜವಾಗಿಲ್ಲ ಎಂದು ಆಗಲೇ ಗಮನಿಸಿದ್ದರೆ ಗೊತ್ತಾಗುತ್ತಿತ್ತೇನೋ. ಹಿಂದಿನ ದಿನದವರೆಗಿನ ಸುಖದ ಅಮಲಿತ್ತಲ್ಲ ಇನ್ನೂ, ಹೀಗಾಗಿ ಅರಿವಿಗೆ ಬಂದಿರಲಿಲ್ಲ. ದಣಿವಾಗಿತ್ತು, ಮಲಗ್ತೀನಿ ಎಂದೆ. ಸರಿ ಊಟ ತರ್ತೀನಿ ಎಂದವನು ಹೊರಗಿನ ಬಾಗಿಲಿಗೆ ಚಾವಿ ಹಾಕಿ ಲಾಕ್ ಮಾಡಿಕೊಂಡು ಹೋದ. ನನಗೆ ಡಿಸ್ಟರ್ಬ್ ಆಗಬಾರ್ದು ಎಂದು ಎಷ್ಟೆಲ್ಲ ಮುಂಜಾಗ್ರತೆ ವಹಿಸ್ತಿದಾನೆ! ಬೆಳಿಗ್ಗೆ ಅವನಿಗೆ ಮಸ್ತ್ ಉಪ್ಪಿಟ್ಟು ಶಿರಾ ಮಾಡಿಕೊಡಬೇಕು. ಓದಿನಲ್ಲಿ ಮಾತ್ರ ಅಲ್ಲ ಅಡುಗೆಯಲ್ಲೂ ಮಿಸ್ ವನಮಾಲಾ ರಾಠೋಡ್ ಅಲ್ಲಲ್ಲ ಮಿಸಸ್ ಚವ್ಹಾಣ್ ಎತ್ತಿದ ಕೈ ಎಂದು ಮಿಸ್ಟರ್ ಚವ್ಹಾಣ್ ಅವರಿಗೆ ತೋರಿಸಬೇಕು. ಹೀಗೆ ಅಂದುಕೊಳ್ಳುತ್ತಾ ಪಲ್ಲಂಗದ ಮೇಲೆ ಜಮಖಾನವನ್ನು ಹಾಸಿಕೊಂಡು ನಿದ್ದೆಹೋದೆ. ಅದ್ಯಾವಾಗ ಸುಶೀಲ್ ಊಟದ ಪಾರ್ಸಲ್ಲಿನೊಂದಿಗೆ ಮರಳಿದ್ದನೋ ಗೊತ್ತಿಲ್ಲ, ಪಕ್ಕದಲ್ಲಿ ಮಲಗಿ ನನ್ನನ್ನು ಅವನ ತೋಳಿನಲ್ಲಿ ಬಳಿಸಿದಾಗ ಎಚ್ಚರವಾಯ್ತು. ಮಾತಿಗವಕಾಶವಿಲ್ಲದಂತೆ ನನ್ನನ್ನಾವರಿಸಿಕೊಂಡ. ಪುಳಕಗೊಂಡೆ. ಜಮಖಾನೆಯ ಕೆಳಗಿರುವ ಪಲ್ಲಂಗದ ಪಟ್ಟಿಗಳು ನನ್ನ ಬೆನ್ನಿಗೆ ಒತ್ತುತ್ತಿದ್ದವು, ಇವನು ಜೀಕುತ್ತಲೇ ಇದ್ದ. ನೋವಾಗುತ್ತಿದ್ದರೂ ಖುಷಿಯಿಂದಲೇ ಅವನಿಗೆ ಸಹಕರಿಸಿದೆ. ಮಗ್ಗುಲಿಗೆ ಹೊರಳಿದವನು ಸುಮ್ಮನೆ ಸ್ವಲ್ಪ ಹೊತ್ತು ಛಾವಣಿಯನ್ನು ದಿಟ್ಟಿಸಿ, ನಿಧಾನವಾಗಿ ನನ್ನತ್ತ ತಿರುಗಿ ಕೇಳಿದ್ದ, 

‘ಎಷ್ಟು ಮಂದಿ ಬಾಯ್ಫ್ರೆಂಡ್ಸ್ ಅದಾರ ನಿನಗ ಬಿಜಾಪುರದಾಗ?’

ಅನಿರೀಕ್ಷಿತವಷ್ಟೇ ಅಲ್ಲ, ಅವನಿಂದ ಈ ಪ್ರಶ್ನೆ ಬರಬಹುದೆಂಬ ಊಹೆಗೂ ನಿಲುಕದ ಪ್ರಶ್ನೆ ನನ್ನ ಮುಖಕ್ಕೆ ರಾಚಿತ್ತು. ದಿಗ್ಗನೆ ಎದ್ದು ಕುಳಿತೆ. ‘ಏನ್ ಮಾತಾಡಾಕತ್ತಿ ಅನ್ನು ಖಬರ್ ಐತಿ ನಿನಗ?’ 

‘ಹ್ಹೆಹ್ಹೆಹ್ಹೆ ಜಸ್ಟ್ ಮಜಾಕ್ ಮಾಡಿದೆ. ಅದಕ್ಕ್ಯಾಕ ಅಷ್ಟ್ ಸಿಟ್ಟಾಕ್ಕಿ! ಎದ್ದೇಳು ಊಟಾ ಮಾಡು. ನಾ ಅಲ್ಲೇ ಉಂಡು ಬಂದೀನಿ’ ಎಂದು ಹಲ್ಲು ಕಿಸಿದ. ಏನು ಹೇಳುವುದು ತಿಳಿಯದೇ ಸುಮ್ಮನೆ ಕುಳಿತವಳು, ಹಿಂಗೂ ಯಾರರ ಮಜಾಕ್ ಮಾಡ್ತಾರಾ… ಎಂದು ಮನದಲ್ಲಿ ಅಂದುಕೊಳ್ಳುತ್ತಲೇ ಬಚ್ಚಲಿಗೆ ನಡೆದೆ.

ಅಂದಿನಿಂದ ನನ್ನ ಪಾಲಿನ ನರಕದ ಬಾಗಿಲುಗಳು ಒಂದೊಂದಾಗಿ ತೆರೆದುಕೊಳ್ಳತೊಡಗಿದವು. ಅಡುಗೆಮನೆಗೆ ಪಾತ್ರೆಗಳು ಬೇಕು, ದಿನಸಿ ಬೇಕು ಎಂದು ಲಿಸ್ಟ್ ಮಾಡಿ ಅವನ ಕೈಯಲ್ಲಿಟ್ಟಾಗ, ‘ರೊಕ್ಕಿಲ್ಲ’ ಎಂದ. ಕಕ್ಕಾಬಿಕ್ಕಿಯಾದೆ. ‘ಯಾಕ?! ಅಂದೆ. ‘ಮದವ್ಯಾಗ ಎಲ್ಲಾ ಖಾಲಿ ಆದ್ವು’ ಅಂದ. 

‘ಹಂಗಿದ್ದ್ರ…’

‘ನಿನ್ನ ಕೈಯಾನ ಬಳಿ ಕೊಡು. ಪಗಾರ ಬಂದ ಮ್ಯಾಲೆ ಮಾಡೀಸಿ ಕೊಡ್ತೀನಿ ನಿನಗ’ ಅಂದ. 

ನಿರ್ವಾಹವಿಲ್ಲದೆ ಕೊಟ್ಟೆ. ಹೊರಗೆ ಹೋಗುತ್ತಾ ಬಾಗಿಲಿಗೆ ಮತ್ತೆ ಚಾವಿ ಹಾಕತೊಡಗಿದ. 

‘ಅರ್ರೇ, ನಾ ಎದ್ದೇ ಅದೀನಲ್ಲ ಬಿಡು ಹಾಕ್ಕೋತೀನಿ’ ಅಂದೆ. 

‘ಅರೀದ್ ಊರು. ಸುಮ್ನ ರಿಸ್ಕ್ ಯಾಕ ಆರಾಮಿರು ನೀ ಒಳಗ’ ಎನ್ನುತ್ತಾ ಚಾವಿ ಹಾಕ್ಕೊಂಡು ನಡದೇಬಿಟ್ಟ. 

ಅವನು ವಾಪಸ್ ಬಂದ ಮೇಲೆ ಕೈಯಲ್ಲಿನ ಸಾಮಾನುಗಳನ್ನು ತೆಗೆದುಕೊಳ್ಳುತ್ತಲೇ ನಗುತ್ತಾ ಸುಶೀಲ್ ನ ಕಾಲೆಳೆದೆ. 

‘ಅಲ್ಲಾ ಚಾವಿ ಹಾಕ್ಕೊಂಡು ಹೋದೆಲ್ಲಾ ಬಾಗ್ಲಿಗೆ, ನಾ ಏನ್ ಸಣ್ಣ ಪಾಪಾ ಏನು? ಯಾರರ ಬಂದು ನನ್ನ ಎತಗೊಂಡುಹೋಗಾಕ? ಎಷ್ಟರ ಪೊಸೆ…’ 

ನನ್ನ ಮಾತನ್ನು ಅವನ ತೀಕ್ಷ್ಣ ನೋಟ ಕತ್ತರಿಸಿತ್ತು. ನಾನು ಏನು ತಪ್ಪು ಮಾತನಾಡಿದೆ ಅರ್ಥವೇ ಆಗದೆ ಅವಮಾನವದಂತೆನಿಸಿ ದೃಷ್ಟಿ ಬದಲಿಸುತ್ತಾ, ತಂದ ಸಾಮಾನುಗಳ ಕಡೆಗೆ ನೋಡಿದರೆ ಲಿಸ್ಟಿನಲ್ಲಿಯ ಅರ್ಧಕ್ಕರ್ಧ ಸಾಮಾನುಗಳಿರಲೇಯಿಲ್ಲ. 

‘ಇಷ್ಟೇ?! ಉಳದ ಸಾಮಾನು?’ ನನಗೇ ಗೊತ್ತಿಲ್ಲದಂತೆ ಉದ್ಗಾರ ಹೊರಟಿತ್ತು ನನ್ನ ಬಾಯಿಂದ. 

‘ಮತ್ತೇನ್ ಗೋಳಗುಮ್ಮಟ ಕೊಡ್ತಾರೇನ್ ನಿನ್ನ ಸೊಟ್ಟ ನಾಕ್ ಬಳಿಗೆ?’ 

ನಾಲ್ಕು ತೊಲೆಯ ಬಳೆಗಳಿಗೆ ಅಂದ್ರೆ ಸುಮಾರು ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚು ಬೆಲೆ! ಅಷ್ಟು ಬೆಲೆ ಬಾಳುವ ಬಳೆಗಳಿಗೆ, ಎರಡು ಸಾವಿರ ರೂಪಾಯಿಗಳಷ್ಟೂ ಆಗದ ಪಾತ್ರೆಗಳು ಮತ್ತು ದಿನಸಿ ಸಾಮಾನು! ಉಳಿದ ಹಣ ಏನಾಯಿತು?! ಎಲ್ಲಿ ಹೋಯಿತು...? 

ಅದು ಬಾಪೂ ಹಗಲೂ ರಾತ್ರಿ ತೋಟಕ್ಕೆ ನೀರಿನಷ್ಟೇ ಬೆವರನ್ನೂ ಹರಿಸಿ ಗಳಿಸಿದ ಸಂಪತ್ತು. ನನ್ನ ಮೇಲಿನ ಪ್ರೀತಿಯಿಂದ ನಾಲ್ಕು ಬಳೆ, ಕತ್ತಲ್ಲಿ ಎರಡೆಳೆಯ ಚಪಲ್ಹಾರ, ಒಂದು ನೆಕ್ಲೆಸ್ ಮತ್ತು ಝುಮಕಿ ಮಾಡಿಸಿದ್ದ. ಮದುವೆಯಲ್ಲಿ ನಾನು ಇವೆಲ್ಲವನ್ನೂ ಧರಿಸಿ ನಿಂತಾಗ, 

‘ನನ್ನ ಮಗಳು ಥೇಟ್ ಗುಡ್ಯಾನ ಅಂಬಾಭವಾನಿ, ಥೇಟ್ ಅಂಬಾಭವಾನಿ. ಸುಕವಾಗಿರ್ ಬೇಟಿ ಸುಕವಾಗಿರು’ ಎನ್ನುತ್ತಾ ಧೋತರದ ಚುಂಗಿನಿಂದ ಕಣ್ಣೊರೆಸಿಕೊಂಡಿದ್ದ. 

ಯಾಡಿ ಅಂತೂ ಅತ್ತಿತ್ತ ಹೋದಾಗೊಮ್ಮೆ ಬಂದಾಗೊಮ್ಮೆ ಹತ್ತಿಪ್ಪತ್ತು ಸಲವಾದರೂ, ಜ್ವಾಕಿ ಜ್ವಾಕಿ ಎಂದು ಎಚ್ಚರಿಸುತ್ತಲೇ ಇದ್ದಳು. `ಗುಡಿಯಾ ಮಾಹ್ರೊ ಬೇಟಿ’ ಎನ್ನುತ್ತಾ ತುಟಿಯ ಕೆಳಗೆ, ಕೊರಳ ಬದಿಗೆ, ಅಂಗಾಲಿಗೆ, ಮೊಳಕೈ ಕೆಳಗೆ ಇಷ್ಟಿಷ್ಟಗಲ ಕಾಡಿಗೆ ಬೊಟ್ಟಿಟ್ಟೂ ಸಮಾಧಾನಗೊಳ್ಳದೆ, ದಸ್ತಿಯಲ್ಲಿ ನಿಂಬೆಹಣ್ಣು ಕಟ್ಟಿ, ನನ್ನ ಸೊಂಟದಲ್ಲಿ ಸೆರಗಿನ ಮರೆ ಮಾಡಿ ತುರುಕಿ, ಮುಖ ಸವರಿ ನೆಟಗಿ ಮುರಿದಿದ್ದಳು ನೆದರು ಹತ್ತಬಾರದೆಂದು. ಉಳಿದವರದು ಒತ್ತಟ್ಟಿಗಿರಲಿ, ಅಳಿಯನ ನೆದರು ಸೀದಾ ಬಂಗಾರದ ಮೇಲೆಯೇ ನೆಟ್ಟಿತ್ತು ಅನ್ನುವುದು ಅವರಿಗೆಲ್ಲಿ ಗೊತ್ತಿತ್ತು…?

ಸುಖ ಸಂಸಾರದ ಅಮಲು ಇಳಿದು ನನ್ನ ರಕ್ತ ಕುದಿಯತೊಡಗಿತು. 

‘ಖರೆ ಹೇಳು, ಎಲ್ಲಿ ಉಳ್ಕಿದ ರೊಕ್ಕ?’ ಸಿಟ್ಟಿನಲ್ಲಿ ನನ್ನ ದನಿ ನಡುಗುತ್ತಿತ್ತು. 

ಕೆನ್ನೆಗೆ ರಪ್ಪನೇ ಬಿದ್ದ ಏಟಿಗೆ ತಲೆ ಧಿಮ್ಮೆಂದಿತು. ಅವನು ಕೈ ಎತ್ತುತ್ತಾನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. 

‘ಲೆಕ್ಕಾ ಕೇಳ್ತಿ ಲೆಕ್ಕಾ ನನಗ? ಖಬರ್ದಾರ್! ಬಾಯಿ ಮುಚ್ಕೊಂಡು ಬಿದ್ದಿರ್ಬೇಕ್ ಅಷ್ಟ.’ ಅಬ್ಬರಿಸಿದ ಅವನು. ಕಾಲ ಕೆಳಗಿನ ನೆಲ ಕುಸಿದ ಅನುಭವ. ತವರಿನಲ್ಲಿ ತಿಂಗಳೊಪ್ಪತ್ತು ಚೆಂದದಿಂದ ಸಂಸಾರ ಮಾಡಿದ್ದು ಇದೇ ವ್ಯಕ್ತಿ ಜೋಡೀನಾ ನಾನು! ಇವನಿಗೆ ಎಥಿಕ್ಸ್ ಅನ್ನುವುದೇ ಇಲ್ಲ. ಇಲ್ಲಿಗೆ ಬರುವುದಕ್ಕೂ ಮೊದಲಿನ ಅವನ ನಡುವಳಿಕೆ ಎಲ್ಲವೂ ಬರೀ ಸೋಗು! ಪ್ರತ್ಯೇಕ ಸಂಸಾರ ಆರಂಭಿಸಿದ ಇಪ್ಪತ್ನಾಲ್ಕು ಗಂಟೆಗಳಲ್ಲಿಯೇ ಇವನ ಮುಖದ ಬಣ್ಣ ಹಕಳಿ ಹಕಳಿಯಾಗಿ ಉದುರತೊಡಗಿತ್ತು. ಅಗತ್ಯದ ಸಾಮಾನುಗಳೇ ಇಲ್ಲದ ಮನೆಯಲ್ಲಿ  ಮನರಂಜನೆಯ ಟಿವಿ ರೇಡಿಯೊಗಳನ್ನು ನಿರೀಕ್ಷಿಸುವುದಾದರೂ ಹೇಗೆ! ಹೊರಗೆ ಯಾರನ್ನಾದರು ಸಂಪರ್ಕಿಸಲೊಂದು ಫೋನೂ ಇಲ್ಲದಂತೆ ಅಸಹಾಯಕ ಸ್ಥಿತಿಯಲ್ಲಿಟ್ಟುಬಿಟ್ಟಿದ್ದ ನನ್ನನ್ನವನು. 

ಬಾಗಿಲಿಗೆ ಚಾವಿ ಹಾಕಿಕೊಂಡು ಹೋಗುವುದರ ಮುಂದಿನ ಹಂತ, ಅವನಿಲ್ಲದಿರುವಾಗ ಎಲ್ಲ ಕಿಟಕಿಗಳೂ ಮುಚ್ಚಿರಲೇಬೇಕೆಂಬ ನಿಯಮ! ನನಗೆ ಬಾಯ್ ಫ್ರೆಂಡ್ ಇದ್ದಾನಂತೆ, ಅವನು ಕಿಟಕಿ ಮೂಲಕವೂ ನನ್ನನ್ನು ಸಂಪರ್ಕಿಸುವ ಸಾಧ್ಯತೆ ಇರೋದ್ರಿಂದ ಕಡ್ಡಾಯವಾಗಿ ಇವನಿಲ್ಲದಾಗ ಕಿಟಕಿಗಳು ಮುಚ್ಚಿರಲೇಬೇಕು ಎಂದ. ಸೀರೆ ಮಾತ್ರ ಉಡಬೇಕು ಎಂಬ ಆದೇಶ. ಪೌಡರ್, ಕ್ರೀಮ್ ಏನೂ ಹಚ್ಚುವಂತಿಲ್ಲ. ಹಚ್ಚಿದರೆ ಅವುಗಳ ವಾಸನೆಗೆ ಯಾರ್ಯಾರೋ ನಮ್ಮ ಮನೆ ಬಾಗಿಲಿಗೆ ಎಡತಾಕುತ್ತಾರಂತೆ! ನನ್ನ ಎಲ್ಲ ಚೂಡಿದಾರ್ ಸೆಟ್ ಗಳನ್ನು, ಸೆಂಟ್ ಬಾಟಲಿಯನ್ನು ಎತ್ತಿ ಮೇಲಿಟ್ಟ. ಮುಂದೆ ಅವನ ತಂಗಿ ಮನೆಗೆ ಬಂದಾಗ ನಾನೇ ಅವುಗಳನ್ನು ಅವಳಿಗೆ ಕೊಟ್ಟುಬಿಟ್ಟೆ. ಮದುವೆಯಲ್ಲಿ ಕೊಟ್ಟ ಐದು ಸೀರೆಗಳಲ್ಲಿ ಎರಡು ರೇಶಿಮೆಯವು. ನಿತ್ಯ ಉಡುವುದು ಹೋಗಲಿ ಈಗಿನ ಸ್ಥಿತಿಯಲ್ಲಿ ಹಾಗೆ ಯೋಚಿಸುವುದೂ ಸಾಧ್ಯವಿರಲಿಲ್ಲ. ಉಳಿದ ಮೂರು ಸೀರೆಗಳು ನಿತ್ಯದುಡುಗೆಯಾದವು. ಕನ್ನಡಿಯ ಅಗತ್ಯವಿಲ್ಲ ಎನ್ನುತ್ತಾ ಅದನ್ನವನು ತರಲೇಯಿಲ್ಲ. ಅಂದಾಜಲ್ಲೇ ಬೈತಲ ತೆಗೆದು ತಲೆಬಾಚಿ, ಸ್ನಾನ ಮಾಡಿ ಬಂದ ಮೇಲೆ ಅಂದಾಜಿನ ಮೇಲೆಯೇ ಹಣೆಗೆ ಬಿಂದಿ ಇಟ್ಟುಕೊಳ್ಳುತ್ತಿದ್ದೆ. ತಲೆ ಬಾಚಿ ಸ್ನಾನ ಮಾಡುವುದೂ ಅವನ ಅನುಮಾನಕ್ಕೆ ಈಡಾಗುತ್ತಿತ್ತು ಕೆಲವೊಮ್ಮೆ. ರಾತ್ರಿ ಗಾದಿ ಇಲ್ಲದ ಕಬ್ಬಿಣದ ಪಟ್ಟಾಪಟ್ಟಿ ಪಲ್ಲಂಗದ ಮೇಲೆ ಹಾಸಿದ ಜಮಖಾನವನ್ನೂ ತೆಗೆದಿಟ್ಟು ನನ್ನನ್ನು ಅನುಭವಿಸುತ್ತಿದ್ದ. ನೋವಿನಿಂದ ನರಳಿದಷ್ಟೂ ಅವನ ಜೀಕುವಿಕೆ ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ಬಾಯಿ ಒತ್ತಿ ಹಿಡಿದು ನನ್ನ ಕಣ್ಣಲ್ಲಿನ ಭಯವನ್ನು, ನೋವಿಗೆ ಇಳಿಯುವ ಕಣ್ಣೀರನ್ನು ಆನಂದಿಸುತ್ತ ಉನ್ಮತ್ತನಾಗುತ್ತಿದ್ದ. ಮ್ಯಾರಿಟಲ್ ರೇಪ್! ಯಾರದೋ ಮೇಲಿನ ಸೇಡನ್ನು ತೀರಿಸಿಕೊಳ್ಳುವವನಂತೆ ಅವನು ನನ್ನನ್ನು ಭೋಗಿಸುತ್ತಿದ್ದ. ಅದು ಸಿರಿತನದ ಮೇಲಿನ ಸೇಡಾ? ಬಡತನಕ್ಕೆ ನೆರವಾಗದ ವ್ಯವಸ್ಥೆ ಮೇಲಿನ ಸೇಡಾ? ಅಥವಾ ಅವನನ್ನು ಹಿಂದೆ ಯಾವುದೋ ಹೆಣ್ಣು ಪ್ರೀತಿಸಿ ಕೈಕೊಟ್ಟು ವಂಚಿಸಿದ ಪರಿಣಾಮವಾಗಿ ಹುಟ್ಟಿಕೊಂಡ ಸೇಡಾ? ಆದರದಕ್ಕೆ ಬಲಿಯಾಗುತ್ತಿರುವುದು ಮಾತ್ರ ನಾನಾಗಿದ್ದೆ. ಸತತವಾಗಿ ಅವ್ಯಾಹತವಾಗಿ ಎಲ್ಲ ರೀತಿಯಲ್ಲೂ ಅತ್ಯಾಚಾರವಾಗ ತೊಡಗಿತ್ತು. ನಾಲ್ಕು ತಿಂಗಳ ಕಾಲ, ಅವನ ತಾಯಿ ಮತ್ತು ತಂಗಿ ಎರಡು ತಿಂಗಳ ಮಟ್ಟಿಗೆ ಇಲ್ಲಿ ಇರಲು ಬರುವವರೆಗೆ ಎಳ್ಳಷ್ಟೂ ಹೊರಗಿನ ಸಂಪರ್ಕವೇ ಇಲ್ಲದಂತೆ ಮಾಡಿಬಿಟ್ಟಿದ್ದ, ಅಷ್ಟರಲ್ಲಿ ಸುಮಾರು ಹದಿನೈದು ಕಿಲೊ ಕಮ್ಮಿಯಾಗಿತ್ತು ನನ್ನ ತೂಕ… ಯಾವ ತಪ್ಪೂ ಮಾಡದೇ ಗೃಹಬಂಧಿ ನಾನು! 

ನನ್ನ ಅತ್ತೆ, ನಾದಿನಿ ಬಂದ ನಂತರದಲ್ಲಿ ಅದೊಂದು ದಿನ ಅಚಾನಕ್ಕಾಗಿ ಮೃದುಲಾ ದೀದಿ ನಮ್ಮನೆಯ ಬಾಗಿಲೆದುರು ನಿಂತಿದ್ದರು ನಗುತ್ತಾ. ನನಗೋ ಅವರನ್ನು ಒಳಗೆ ಕರೆಯುವುದೋ ಬೇಡವೋ ಎನ್ನುವ ಗಲಿಬಿಲಿ. 

ಅವರಾಗೇ ಕೇಳಿದರು. ‘ಒಳಗ ಬರಬಹುದ ನಾನು?’

‘ಅರೇ ಮೇಡಂ ಬರ್ರಿ ಬರ್ರಿ. ಸಾರಿ, ಪ್ಲೀಸ್ ಬರ್ರಿ’ ಎನ್ನುತ್ತಾ ಅವರನ್ನು ಕರೆದು ಇದ್ದ ಒಂದೇ ಕುರ್ಚಿಯ ಮೇಲೆ ಕುಳ್ಳರಿಸಿದೆ. ಸ್ಮಶಾನಕ್ಕಿಂತಲೂ ಕಡೆಯಾದ ಮನೆ ನನ್ನದು. ರಣ ರಣ ಎನ್ನುತ್ತಿತ್ತು. ಜೊತೆಗೆ ಕೆದರಿದ ತಲೆಯ ನಾನು, ಅತ್ತೆ, ನಾದಿನಿ, ನೀಟುನೀಟಾದ ಅವರೆದುರು ಭಿಕ್ಷುಕರಂತೆ ಕಾಣುತ್ತಿದ್ದೆವು. ಮುಜಗರದಿಂದ ಹಿಡಿಯಾಗತೊಡಗಿದ್ದೆ. ಇದ್ಯಾವುದೂ ತಮ್ಮ ಗಮನಕ್ಕೇ ಬಂದಿಲ್ಲವೆನ್ನುವಂತೆ ಇದ್ದರು ಮೃದುಲಾ ದೀದಿ. 

‘ನೀವು ನನ್ನ ಮೇಡಂ ಗೀಡಂ ಎಲ್ಲಾ ಅನ್ನಬ್ಯಾಡ್ರಿ. ನಾ ಯಾ ನೌಕ್ರಿ ಮಾಡಾಕಿ ಅಂತ ನನ್ನನ್ನ ಮೇಡಂ ಅನಬೇಕು? ಮೃದುಲಾ ಅನ್ನ್ರಿ ಸಾಕು’ ಎಂದರು ನಗುತ್ತ. 

ಸುಮ್ಮನೆ ನಕ್ಕೆ ನಾನು. ಮುಂದೆ ಏನು ಮಾತಾಡುವುದು ತಿಳಿಯದೆ ಎಲ್ಲರೂ ಸುಮ್ಮನಿದ್ದೆವು ಸ್ವಲ್ಪ ಹೊತ್ತು. 

ಮೃದುಲಾ ದೀದಿನೇ, ‘ನಿಮ್ಮ ಹೆಸರೇನ್ರಿ? ಅವತ್ತ ನಿಮ್ಮನಿಯವ್ರು ನನ್ನ ಮಿಸಸ್ ಅಂತಂದೋರ ಹೊಂಟಬಿಟ್ಟ್ರು. ನೀವೂ ಹೇಳ್ಲಿಲ್ಲ. ಏನ್ ಓದ್ಕೊಂಡೀರಿ?’ ನಗುತ್ತ ಕೇಳಿದರು. 

ನನ್ನ ಬದಲಿಗೆ ನನ್ನತ್ತೆಯೇ ಕನ್ನಡದಲ್ಲಿ ‘ವನಮಾಲಾ ಅಂತ ನಮ್ ಸೊಸಿ ಹೆಸರ್ರೀ ಬಾಯಿ. ಇಂಜಿನರ್ ಓದ್ಯಾಳ್ರಿ. ಇವ್ರಪ್ಪ ದೊಡ್ಡ ಸಾವ್ಕಾರ. ಇಕಿ ನನ್ನ ಮಗಳು ಶಾಂತಾಬಾಯಿರೀ. ಗಂಡು ನೋಡಾಕತ್ತೀವ್ರಿ ಇಕಿಗೆ’. ಅವರಂಥ ಸುಶೀಕ್ಷಿತ ಮಂದಿ ನಮ್ಮನೆಗೆ ಬಂದಿದ್ದು ನನ್ನ ವಿಚಾರಿಸಿದ್ದು ಕಂಡು ತಮ್ಮ ಪರಿಚಯವನ್ನೂ ಮಾಡಿಕೊಳ್ಳುವ ಹುರುಪು ಅತ್ತೆಗೆ. ನಮ್ಮ ಲಂಬಾಣಿ ಭಾಷೆಯಲ್ಲಿ ಅಷ್ಟಿಷ್ಟು ಹಿಂದಿಯೂ ಬೆರೆತಿರುತ್ತಾದ್ದರಿಂದ ದೀದಿಯ ಮಾತುಗಳು ಅತ್ತೆಗೆ ಅರ್ಥವಾಗಿದ್ದವು.  ಪಾಪದವರು ನನ್ನತ್ತೆ ಮತ್ತು ನಾದಿನಿ. ಗಂಡ ಹೊಡೆಯುವುದು ಮತ್ತು ಹೆಂಡತಿ ಅವನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಅನ್ನುವ ಪುರುಷಪ್ರಧಾನ ಸಮಾಜದ ಅಲಿಖಿತ ನಿಯಮವನ್ನ ತಕರಾರಿಲ್ಲದೇ ಒಪ್ಪಿಕೊಂಡಿರುವವರು. ಅವರೇನು, ಈಗ ನಾನು ಮಾಡುತ್ತಿರುವುದೂ ಅದನ್ನೇ ಅಲ್ಲವೇ? ವಿರೋಧಿಸಿದಾಗೊಮ್ಮೆ ನೆಲಕ್ಕೆ ಒತ್ತಿ ಹಿಡಿದು ಗುಮ್ಮುತ್ತಿದ್ದ ಸುಶೀಲ್. ಅದರ ಬದಲು ಸುಮ್ಮನಿದ್ದು ಹೊಡೆಸಿಕೊಳ್ಳುವುದು ಬೆಟರ್ ಅಂದುಕೊಂಡು ನಾನೂ ಅವರಂತೆಯೇ ಆಗಿದ್ದೆನ್ನಲವೇ? ಕನ್ನಡ ಅರ್ಥವಾಗದಿದ್ದರೂ ನನ್ನ ಹೆಸರು ಮತ್ತು ನಾನು ಇಂಜಿನಿಯರಿಂಗ್ ಓದಿದ್ದು ಎಂದು ಕೇಳುತ್ತಿದ್ದಂತೆ ಕಣ್ಣರಳಿಸಿದ್ದ ದೀದಿ, ಏನೋ ಸರಿಯಿಲ್ಲ ಎಂದರಿತವರಂತೆ ಗಂಭೀರವಾಗಿದ್ದರು. 

‘ದೀದಿ ಚಾಯ್?’ ಔಪಚಾರಿಕ ಮಾತಂದೆ.

‘ನಹಿ, ಈಗರ ಕುಡುದು ಬಂದೀನಿ. ನೀವು ದೀದಿ ಅಂದ್ರೆಲ್ಲ ಹಂಗ ಕರೀರಿ. ನನಗೂ ಖುಷಿನೇ ಅದು.’ ಎಂದರು. 

‘ನೀವೂ ನನಗ ರೀ ಹಾಕಬ್ಯಾಡ್ರಿ ದೀದಿ. ಹಂಗ ಮಾಲಾ ಅನ್ನ್ರಿ ಸಾಕು’ ಎಂದೆ ನಾನು. 

‘ಡನ್’ ಎಂದವರೇ, ‘ನಿಮ್ಮನಿಗೆ ಯಾರೋ ಪೌಣ್ಯಾರು ಬಂದಾರಂತ ಅಂಕೊಂಡಿದ್ದೆ. ನಿಮ್ಮತ್ತಿಯವ್ರು ಅಂತ ಗೊತ್ತಿರ್ಲಿಲ್ಲ. ಈ ಸಂಡೆ ನೀವೆಲ್ಲಾ ತಪ್ಪದ ಮದ್ಯಾಹ್ನ ನಮ್ಮನಿಗೆ ಊಟಕ್ಕ ಬರಬೇಕು, ಕಾಯ್ತಿರ್ತೀನಿ.’ ಎನ್ನುತ್ತಾ ನಮ್ಮ ಒಪ್ಪಿಗೆಗೂ ಕಾಯದೆ ಬರ್ತೀನಿ ಎಂದು ಹೊರಟೇಬಿಟ್ಟರು. ಕುಂಕುಮ ಕೊಡ್ತೀನಿ ಇರಿ ಎನ್ನಲು ನಮ್ಮನೇಲಿ ಕುಂಕುಮವೂ ಇರ್ಲಿಲ್ಲ. 

ಮುಂದೊಮ್ಮೆ ದೀದಿ ‘ಅಷ್ಟು ಕಲ್ತು ಮನ್ಯಾಗ್ಯಾಕದಿ? ಕೆಲಸಕ್ಕ ಹೋಗೂದಲ್ಲಾ?’ ಎಂದಾಗ ಬರೀದೆ ನಕ್ಕು ಸುಮ್ಮನಾಗಿದ್ದೆ. ನಾನು ಬಸುರಿ ಎಂದು ಗೊತ್ತಾದಾಗ ನಮ್ಮನ್ನೆಲ್ಲ ಮತ್ತೆ ಮನೆಗೆ ಊಟಕ್ಕೆ ಕರೆದು, ಕುಬಸಾ ಮಾಡಿ ಸೀರೆ ಉಡಿಸಿ ಹರಸಿದ್ದರು. ಕಣ್ತುಂಬಿ ಬಂದಿತ್ತು ಆಗ. ಮನೆಗೆ ಬಂದವಳೇ ಬಿಕ್ಕಿಬಿಕ್ಕಿ ಅತ್ತಿದ್ದೆ ನಾನು. ಈ ಪ್ರಪಂಚದಲ್ಲಿ ಒಂದಾದರೂ ಜೀವ ನನಗಾಗಿ ಮಿಡಿಯುತ್ತಿದೆ ಎನ್ನುವುದು ನನ್ನ ಪಾಲಿಗೆ ತಡೆದುಕೊಳ್ಳಲಾಗದ ಆನಂದದ ವಿಷಯವಾಗಿತ್ತು. ದೀದಿಯಿಂದ ವಿಷಯ ತಿಳಿದು ಅದರ ಮುಂದಿನವಾರ ಅವರ ಪಕ್ಕದ ಫ್ಲ್ಯಾಟಿನ ಭೋಸ್ಲೆ ಭಾಭಿ ಕೂಡ ನಮ್ಮೆಲ್ಲರನ್ನು ಊಟಕ್ಕೆ ಕರೆದಿದ್ದರು. ಎರಡು ತಿಂಗಳಿಗೆಂದು ಬಂದ ಅತ್ತೆ ಮತ್ತು ನಾದಿನಿಯನ್ನು ನಾನೇ ಬಲವಂತದಿಂದ ನಮ್ಮ ಜೊತೆಗೇ ಇರಿಸಿಕೊಂಡಿದ್ದೆ. ಹಾಗೆ ಇರಿಸಿಕೊಳ್ಳಲು ನನ್ನ ಸ್ವಾರ್ಥವೂ ಇತ್ತು. ಅದು, ನಮ್ಮ ಬಾಗಿಲು ಮತ್ತು ಕಿಟಕಿಗಳು ಆ ದಿನಗಳಲ್ಲಿ ಮುಚ್ಚಿಕೊಂಡಿರುವುದಿಲ್ಲ ಮತ್ತು ಮಾತಾಡಲು ನನಗೂ ಯಾರೋ ಒಂದಿಬ್ಬರು ಇರುತ್ತಾರೆ ಎನ್ನುವುದು.


***


ಶಂತನುವಿನ ಜನ್ಮ, ಮೃದುಲಾ ದೀದಿಯ ಪತಿ ಡಾ. ಶೈಲೇಶ್ ಪಾಟೀಲರು ವೈದ್ಯರಾಗಿ ಕೆಲಸ ಮಾಡುತ್ತಿದ್ದ, ಹತ್ತಿರವೇ ಇದ್ದ ನರ್ಸಿಂಗ್ ಹೋಮಿನಲ್ಲಿ ಆಗಿತ್ತಾದ್ದರಿಂದ, ಮೊದಲ ದಿನ ಪಾಟೀಲ್ ದಂಪತಿ ಬಂದು ಮಗುವನ್ನು ನೋಡಿ ಅವನ ಕೈಗೆ ಐನೂರರ ನೋಟೊಂದನ್ನಿಟ್ಟು ಆಶೀರ್ವದಿಸಿದ್ದರು. ನನ್ನ ಜೊತೆಗೆ ಯಾರೂ ಇರದುದ್ದನ್ನು ಕಂಡು ಅಚ್ಚರಿಗೊಂಡ ದೀದಿ, 

‘ವನಮಾಲಾ, ಎಲ್ಲಿ ನಿಮ್ಮತ್ತಿ ಮತ್ತ ನಿನ್ನ ನಾದಿನಿ? ಮನೀಗೆ ಹೋಗ್ಯಾರೇನು?’ ಕೇಳಿದರು.

ಅಲ್ಲೇ ನಿಂತಿದ್ದ ನನ್ನ ಗಂಡ ಸುಶೀಲ್, ‘ನಾರ್ಮಲ್ ಡೆಲವರಿ ಆಯ್ತಲ್ಲ ಬಾಯಿ, ಅದಕ್ಕ ಅವ್ರೆಲ್ಲಾ ವಾಪಸ್ ಊರಿಗೆ ಹೋದ್ರು’ ಎಂದ. ಯಾರೆಲ್ಲರ ಬಗ್ಗೆ ಇವನಿಗೆ ಗೌರವ ಇದೆಯೋ ಅವರನ್ನು ಮಾತ್ರ ಬಾಯಿ ಎಂದು ಸಂಬೋಧಿಸುವುದು ಸುಶೀಲನ ಅಭ್ಯಾಸ. ಬಾಯಿ ಎಂದರೆ ಅಕ್ಕ ಎಂದರ್ಥ ನಮ್ಮಲ್ಲಿ. ದೀದಿಗೆ ಈಗ ಮತ್ತೂ ಅಚ್ಚರಿ. 

‘ನಾರ್ಮಲ್ ಆದ್ರೇನಾತು? ಡೆಲವರಿ ಆಗೇತಿ, ಬಾಣಂತಿ ಜೋಡಿ ಯಾರರೇ ಇರ್ಬೇಕಲ್ಲಾ ಹೆಣ್ಮಕ್ಕ್ಳು? ಬಿಸಿದೇನರೆ ಮಾಡ್ಕೊಂಡು ಬರಾಕ ಮನಿಗೆ ಹೋಗಿರ್ಬೇಕು ಅನ್ಕೊಂಡಿದ್ದೆ ನಾ. ನೀವ್ ನೋಡಿರ ಊರಿಗ್ ಹೋದ್ರು ಅಂತೀರಿ! ನೀವು ಗಂಡಸ್ರು. ಇದೆಲ್ಲಾ ತಿಳ್ಯಂಗಿಲ್ಲ ಅನ್ಕೊಂಡ್ರೂ, ಅವ್ರಾದ್ರೂ ಕೂಸು ಬಾಣಂತಿನ್ನ ಬಿಟ್ಟು ಅಧೆಂಗ ಹೋದ್ರು ಅಂತ!?’ ಎಂದ ದೀದಿ, 

‘ಇರ್ಲಿ, ನಾಳಿಯಿಂದ ನಾನು ಮತ್ತ ಭೋಸ್ಲೆ ಭಾಭಿ ಇಬ್ಬ್ರೂ ಪಾಳೆ ಮ್ಯಾಲೆ ಮಾಲಾಗ ನಾಷ್ಟಾ, ಊಟ ಕಳಸ್ತೀವಿ. ನೀವು ಇಲ್ಲೇ ಇದ್ದು ಇವರಿಬ್ರೂನು ಚಂದಂಗೆ ನೋಡ್ಕೋರಿ.’ ಹುಕುಂ ಹೊರಡಿಸಿದರು. 

ಬೇರೆ ದಾರಿ ಇಲ್ಲದೆ ನನ್ನ ಗಂಡ ಆಯ್ತು ಎನ್ನುವಂತೆ ತಲೆಯಾಡಿಸಿದ. ಆಕೆ ಹಾಗೆನೇ ನೇರ ಮಾತಿನವರು. ಹಚ್ಚಿಕೊಂಡವರ ನಡುವೆ ಶಿಷ್ಟಾಚಾರದ ಅಗತ್ಯವಿಲ್ಲ ಎಂದು ಭಾವಿಸುವವರು. ಯಾರಿಗೂ ಕೇಡು ಬಗೆಯುವವರಲ್ಲ. ವಯಸ್ಸಿನಲ್ಲಿ ನನಗಿಂತ ನಾಲ್ಕೈದು ವರ್ಷ ದೊಡ್ಡವರಿರಬಹುದೇನೋ ಅಷ್ಟೆ. 

ಹೇಳಿದಂತೆ ದೀದಿ ಮತ್ತು ಭೋಸ್ಲೆ ಭಾಭಿ ಇಬ್ಬರೂ ನಾನು ಆಸ್ಪತ್ರೆಯಲ್ಲಿದ್ದ ನಾಲ್ಕು ದಿನವೂ ತಿಂಡಿ ಊಟ ಕಳಿಸಿದರು. ಅದರಲ್ಲಿ ಅರ್ಧ ಇವನೇ ಮುಕ್ಕುತ್ತಿದ್ದನಾದ್ದರಿಂದ ನನ್ನ ಪಾಲಿಗೆ ಮತ್ತೆ ಅರೆಹೊಟ್ಟೆಯೇ ಗತಿಯಾಯಿತಾದರೂ ಅಷ್ಟಾದರೂ ಸಿಕ್ಕಿದ ಸಮಾಧಾನ ನನಗೆ. 

ಮಗ ಹುಟ್ಟಿದ ಮೇಲಾದರೂ ಒಳ್ಳೆಯದು ಘಟಿಸಬಹುದು, ಸುಶೀಲನ ಬದಲಾದ ಚಿತ್ರದ ಸಾಕ್ಷಾತ್ಕಾರವಾಗಬಹುದು ಎಂದು ನಾನು ಕಾದಿದ್ದೇ ಬಂತು. ವಿಕೃತಿ ವಿಪತರೀತವಾಗುತ್ತಲೇ ಹೋಯಿತೇ ವಿನಹ ಅವನ ಕಡೆಯಿಂದ ಯಾವ ಸುಖದ ನೆರಳೂ ಮನೆಯೊಳಗೆ ಕಾಲಿಡಲಿಲ್ಲ.

ಮನೆಗೆ ಬಂದ ಮೇಲೆ ಯಥಾ ಪ್ರಕಾರ ಬಾಗಿಲು ಕಿಟಕಿಗಳು ಮುಚ್ಚತೊಡಗಿದ್ದು ಸಾಲದೆಂಬಂತೆ ಬೆಡ್ ರೂಮ್ ಕಿಚನ್ ಗೆ ಪ್ರವೇಶಿಸುವ ಹಾಲ್ ನ ಬಾಗಿಲನ್ನೂ ಹಾಕಿಕೊಂಡು ಹೋಗತೊಡಗಿದ. 

ಮೊದಲಿಗೆ ನಮ್ಮನೆಯ ಹೊರಗಿನ ಬಾಗಿಲಿಗೆ ಬೀಗ ಇರುವುದನ್ನು ಕಂಡ ದೀದಿ, ನನ್ನನ್ನು ತವರಿಗೆ ಬಾಣಂತನಕ್ಕೆ ಕಳಿಸಿರಬೇಕು ಅಂದುಕೊಂಡಿದ್ದರಂತೆ. ಹಾಗೇ ಒಮ್ಮೆ ಎದುರಾದ ಸುಶೀಲನ ನಿಲ್ಲಿಸಿ ಕೇಳಿದ್ದಾರೆ. 

ಆಗ ಇವನು, ‘ಇಲ್ರೀ ಇಲ್ಲೇ ಅದಾಳ. ನಮ್ಕಡೆ ಒಮ್ಮೆ ಮದವಿ ಮಾಡಿಕೊಟ್ಟ ಮ್ಯಾಲೆ ತಿರಗಿ ತವರಮನಿ ನೋಡಂಗಿಲ್ಲ ಹೆಣ್ಮಕ್ಳು’ ಎಂದಿದ್ದಾನೆ. 

‘ಅಚ್ಚಾ, ಐಸಾ ಕ್ಯಾ.. ಆದ್ರ ಬಾಗ್ಲಿಗೆ ಕೀಲಿ ಯಾಕ ಹಾಕೀರಿ?’

ಅವರಿಂದ ಬಂದ ಈ ಅನಿರೀಕ್ಷಿತ ಪ್ರಶ್ನೆಗೆ ಬಾಯಿ ಸವರಾಡಿದ್ದಾನೆ ಸುಶೀಲ್. ‘ಏನಿಲ್ರೀ ಬಾಯಿ, ಸುಮ್ನ ಬಾಣ್ತಿಗೆ ಡಿಸ್ಟರ್ಬ್ ಆಗಬಾರ್ದಂತ…’

‘ಹಂಗಾ? ಹಂಗಾರ ಇವತ್ತಿಂದ ಹಾಕಬ್ಯಾಡ್ರಿ. ನಾನ ಬಿಸಿ ಬಿಸಿ ಸಜ್ಜಕ ಮಾಡಿ ತಂದುಕೊಡ್ತೀನಿ. ಡಿಸ್ಟರ್ಬ್ ಏನ್ ಮಾಡಂಗಿಲ್ಲ ನಾ’ 

ಅವರ ಆದೇಶದಂಥ ದನಿಗೆ ಇಲ್ಲ ಎಂದು ಹೇಳಲಾಗದೆ ಇವನು ಹೂಂ ಎಂದು ಬಂದವನು, 

‘ಅವ್ರು ಬರ್ತೀನಂದಾರ. ಅದನ್ನ ಎನ್ ಕ್ಯಾಶ್ ಮಾಡ್ಕೊಂಡು ಹೊರಗ ಕಾಲಿಟ್ಟೆಂದ್ರ ಹುಶ್ಶಾರ್, ಕೊಂದ ಹಾಕಿಬಿಡ್ತೀನಿ’ ಎಂದ. ಅವತ್ತು ರಾತ್ರಿ ತಾನೇ ಅವರ ಮನೆಗೆ ಹೋಗಿ ಅವರು ಮಾಡಿಕೊಟ್ಟ ಅನ್ನ ತಿಳಿ ಸಾರು, ಸಜ್ಜಕ ತೊಗೊಂಡು ಬಂದಿದ್ದ. ಮರುದಿನ ದೀದಿ ತಾವೇ ಸ್ವತಃ ಬಂದರು ಊಟ ತೆಗೆದುಕೊಂಡು. ಮೊದಲ ಬಾರಿಗೆ ಅವರು ನಮ್ಮ ಬೆಡ್ರೂಂ, ಕಿಚನ್ ನೋಡುತ್ತಿರುವುದು. ಮನೆಯ ಮತ್ತು ನನ್ನ ಅವಸ್ಥೆಯನ್ನು ಕಂಡು ಅವರ ಕಣ್ಣಲ್ಲಿ ನೀರು. 

‘ಅಲ್ಲ ವನಮಾಲಾ, ಮನ್ಯಾಗ ಏನಂದ್ರ ಏನೂ ಇಲ್ಲ. ಅದೇನ್ ಅಡಗಿ ಮಾಡ್ಕೋತೀ? ಅದೇನ್ ಉಣ್ತಿ?’ 

 ಇವನ ಸಂಶಯ ಸ್ವಭಾವ ಮತ್ತು ಜಿಪುಣತನದ ಬಗ್ಗೆ ಹೇಳಲೋಬೇಡವೋ ಎಂದು ಅನುಮಾನಿಸುತ್ತಿರುವಾಗಲೇ, 

‘ಖರೇ ಹೇಳು. ಯಾಕ ಹಿಂಗೈತಿ ನಿಮ್ಮನಿ? ಏನು ಮಜಕೂರ್?’ ಕೇಳಿದರು ದೀದಿ. ಸಂಕ್ಷಿಪ್ತವಾಗಿ ನನ್ನ ಅವಸ್ಥೆಯನ್ನು ತಿಳಿಸಿದೆ. ಮೃದುಲಾ ದೀದಿ ಸಿಟ್ಟಿನಲ್ಲಿ, 

‘ಇಷ್ಟೆಲ್ಲಾ ಅನುಭವಿಸಿನೂ ಇನ್ನೂ ಇಲ್ಲೆ ಯಾಕದಿ ಮಾಲಾ ನೀನು? ಬಿಟ್ಟು ನಡಿಯತ್ತಾಗ. ಅಷ್ಟು ಓದಿದೆಕಿ ಅದಿ, ಎಲ್ಲೆರೆ ಚೊಲೊ ನೌಕ್ರಿ ಸಿಕ್ಕ ಸಿಗತೈತಿ ನಿನಗ.’ ಅಂದರು.

‘ಎಲ್ಲೆಂತ ಹೋಗ್ಲಿ ದೀದಿ ನಾನು? ಚೂರೂ ಮೈಮ್ಯಾಲೆ ಬಂಗಾರ ಉಳೀಲಾರ್ದಂಗ ಎಲ್ಲಾ ಕಸಗೊಂಡಾನ ಇಂವಾ. ತವರಮನಿ ಇದ್ದೂ ನಾ ಅಲ್ಲಿಗೆ ಹೋಗಂಗಿಲ್ಲ. ಅಕಸ್ಮಾತ್ ನಿಯಮಾ ಮುರ್ದು ಅಲ್ಲಿಗೆ ಹೋದ್ರುನೂ, ಊರಾಗ ಅಪ್ಪಾ ಅವ್ವ ತಲಿ ಎತ್ತಿ ಹೆಂಗ ತಿರಗ್ಯಾರು? ಮದ್ಲ ಎಲ್ಲಾರ್ನೂ ಎದರ ಹಾಕ್ಕೊಂಡು ನಮ್ಮನ್ನೆಲ್ಲಾ ಓದಿಸ್ಯಾರ. ಅಲ್ಲಿಗೆ ಹೋಗಿ ಅವ್ರಿಗೆ ಮುಳುವಾಗ್ಲಾರೆ ನಾ… ನನ್ನ ನಸೀಬಿನ್ಯಾಗ ಇದs ಬರ್ದೈತಿ ಅನುಭೋಗಸ್ತೀನ್ರೀ.’ ನಿಟ್ಟುಸಿರಿಟ್ಟೆ. 

ಸಮಾಧಾನದ ನಾಲ್ಕು ಮಾತಾಡಿ, ದೀದಿ ತಾವೇನಾದರು ಮಾಡಿ ಸರಿಪಡಿಸುವುದಾಗಿ ಹೇಳಿ ಹೋದರು. ಇದಾಗಿ ಮುಂದೆರಡು ದಿನಕ್ಕೆನೇ ಇವನ ತಲೆಗೇನು ಹೊಕ್ಕಿತೋ, ಮತ್ತೆ ಬಾಗಿಲಿಗೆ ಬೀಗ ಜಡಿದು ಹೋಗತೊಡಗಿದ. ಅದು ಸಾಲದು ಎಂಬಂತೆ ಮದ್ಯಾಹ್ನದ ಹೊತ್ತಲ್ಲಿ ನಮ್ಮ ಅಪಾರ್ಟ್ಮೆಂಟಿನ ಹಿಂಬದಿಗೆ ಹೋಗಿ, ದೂರದಿಂದ ಸುಮಾರು ಹೊತ್ತು ನಮ್ಮ ಮನೆಯ ಕಿಟಕಿಯನ್ನೇ ನೋಡುತ್ತಾ ಇವನು ನಿಲ್ಲುವುದನ್ನ, ಮೂರ್ನಾಲ್ಕು ದಿನ ಸತತ ಗಮನಿಸಿದ್ದಾರೆ ಮೃದುಲಾ ದೀದಿ ಮತ್ತು ಭೋಸ್ಲೆ ಭಾಭಿ. ಇದು ಸಂಶಯ ಪಿಶಾಚಿ ಎನ್ನುವುದು ಅವರಿಗೆ ಮನದಾಟ್ಟಾಗಿದೆ ಆಗ. 

 ಒಂದು ಸಂಜೆ ಮೃದುಲಾ ದೀದಿ ಇವನು ಆಫೀಸಿಂದ ಬರುವುದನ್ನೇ ತಮ್ಮ ಬಾಗಿಲಲ್ಲಿ ನಿಂತು ಕಾದವರು, ತಡೆದು ನಿಲ್ಲಿಸಿ, ತಮಗೇನೂ ತಿಳಿದೇ ಇಲ್ಲವೆನ್ನುವಂತೆ ತುಂಬಾ ಅನುನಯದ ದನಿಯಲ್ಲಿ, 

‘ಕ್ಯೂಂ ಭಾಯ್, ವನಮಾಲಾನ್ನ ಅಷ್ಟು ಪ್ರೀತಿ ಮಾಡೊ ನೀವು ಯಾಕ ಹೊರಗಿಂದ ಚಾವಿ ಹಾಕ್ಕೊಂಡು ಹೋಕ್ಕೀರಿ? ಎನಿ ಪ್ರಾಬ್ಲಮ್?’ ಎಂದಿದ್ದಕ್ಕೆ ಮೊದಲು ಮೊದಲು ಹಾರಿಕೆಯ ಉತ್ತರ ಕೊಟ್ಟವನು ನಿಧಾನವಾಗಿ, 

‘ಹೌದು ಬಾಯಿ ನಾ ಅಕಿನ್ನ ಭಾಳ ಜೀವ್ ಮಾಡ್ತೀನಿ. ಆದ್ರ ನಿಮ್ಗ ಗೊತ್ತಿಲ್ಲ ಬಾಯಿ, ಅಕಿ ಮದ್ಲ ಕೆಲಸಾ ಮಾಡ್ತಿದ್ದ ಆಫೀಸಿನ್ಯಾಗ ಒಬ್ಬನ ಜತಿಗೆ ಅಕಿನ್ ಲಫಡಾ ಐತ್ರಿ. ಅಂವಾ ಇಕಿನ್ನ ಭೆಟ್ಟಿ ಆಗಾಕ ಬರ್ತಾನ. ಅದಕ್ಕ..’

‘ಓಹೋ ಅದs ಅಂತೀನಿ! ಇಲ್ದಿದ್ದ್ರ ಪಾಪ ನೀವ್ಯಾಕ ಹಿಂಗೆಲ್ಲ ಮಾಡಾಕ ಹೋಗ್ತಿದ್ದ್ರಿ. ಖರೆ ಖರೆ. ಇದರ ಮ್ಯಾಲೆ ಗೊತ್ತಾಕ್ಕತಿ ನೀವಕ್ಕಿನ ಎಷ್ಟು ಜೀವ್ ಮಾಡ್ತೀರಿ ಅಂತ.’ ಎಂದು ಕ್ಷಣಕಾಲ ಸುಮ್ಮನಿದ್ದು, ನಂತ್ರ ‘ಆದ್ರ…’

‘ಆದ್ರೇನ್ ಬಾಯಿ?’ 

‘ಅಲ್ಲಾ, ನೀವು ಹಿಂಗ ಚಾವಿ ಹಾಕ್ಕೊಂಡು ಹೋದ್ರ, ನೀವು ಅವ್ರನ್ನ ರೆಡ್ ಹ್ಯಾಂಡ್ ಆಗಿ ಹಿಡ್ಯಾಕ ಹೆಂಗ ಸಾಧ್ಯ ಅಂತೀನಿ! ಹೌದಿಲ್ಲೊ ನೀವ ವಿಚಾರ ಮಾಡ್ರಿ’

ಅರೇ ಹೌದಲ್ಲಾ! ಈ ಬಗ್ಗೆ ತಾನು ಯೋಚಿಸಿಯೇ ಇರಲಿಲ್ಲವಲ್ಲ ಅನಿಸಿರಬೇಕು ಅವನಿಗೆ. 

‘ಹಂಗಾರ ಏನ್ ಮಾಡಂತೀರಿ ಬಾಯಿ ನನಗ?’

ಸ್ವಲ್ಪ ಹೊತ್ತು ಯೋಚಿಸಿದಂತೆ ಮಾಡಿದ ಮೃದುಲಾ ದೀದಿ, 

‘ನೀವು ಮನಿ ಚಾವಿ ಹಾಕ್ಕೊಂಡು ಹೋಗ್ತಿದ್ದ್ರ ಅಕಿಗೆ ನಿಮ್ಮ್ಯಾಲೆ ಇನ್ನೂ ಸಿಟ್ಟು ಜಾಸ್ತಿ ಆಗಿ, ಪ್ರೀತಿ ಕಮ್ಮಿ ಆಕ್ಕತಿ ಖರೆ ಹೆಚ್ಚಾಗಂಗಿಲ್ಲ. ಸಡ್ಲ್ ಬಿಟ್ಟು ನೋಡ್ರಿ. ಅಕಸ್ಮಾತ್ ನಿಮ್ಮ ಅನುಮಾನ ಖರೆ ಇದ್ದ್ರ, ಬಾಗ್ಲಿಗೆ ಕೀಲಿಕಪ್ಪಿ ಇಲ್ದಿದ್ದು ಗೊತ್ತಾಗಿ ಅಂವ ಯಾರೋ ಅದಾನ ಅಂದ್ರೆಲ್ಲಾ ಅಂವ ಬಂದs ಬರ್ತಾನ. ಹೆಂಗೂ ನಮ್ಮನಿ ಗ್ರೌಂಡ್ ಫ್ಲೋರಿನ್ಯಾಗ ಇರೂದ್ರಿಂದ ನಾನೂ ಮ್ಯಾಲೆ ಹೋಗಿ ಬರೋರ ಮ್ಯಾಲೆ ನಜರ್ ಇಟ್ಟಿರ್ತೀನಿ. ಹಂಗೇನರ ಯಾರರ ಬಂದಿದ್ದು ಗೊತ್ತಾದ್ರ ತುರಂತ್ ನಿಮಗ ಫೋನ್ ಮಾಡ್ತೀನಿ, ನೀವು ನನಗ ನಿಮ್ಮ ಆಫೀಸ್ ನಂಬರ್ ಕೊಟ್ಟ್ರ. ಆದ್ರ ಒಂದ್ ಮಾತು. ನೀವು ಇನ್ನ ಮುಂದ ಅಕಿ ಮುಂದ ತಪ್ಪೀನೂ ನಿಮಗ ಅಕಿ ಮ್ಯಾಲ ಸಂಶೆ ಐತಿ ಅನ್ನೂದು ತೋರಸ್ಕೊಬ್ಯಾಡ್ರಿ. ಪ್ರೀತಿಯಿಂದ ನಡ್ಕೋರಿ. ಹೆಂಗೂ ನೀವಕ್ಕಿನ ಭಾಳ ಜೀವ್ ಮಾಡ್ತೀರಿ. ಅದೇನ್ ತ್ರಾಸ್ ಅಲ್ಲ ನಿಮಗ. ಹೌದಿಲ್ರಿ?’ 

ದೀದಿ ಈ ಮಾತು ಹೇಳಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡು ಮನೆಗೆ ಬಂದವನ ವರ್ತನೆಯಲ್ಲಿ ಬದಲಾವಣೆ ಕಂಡಿತ್ತು. ಬಾಗಿಲಿಗೆ ಬೀಗ ಹಾಕುವುದನ್ನು ನಿಲ್ಲಿಸಿದ ಮತ್ತು ಹಾಲ್ ನಡುಬವಿನ ಬಾಗಿಲ ಚಿಲಕ ಹಾಕುವುದನ್ನೂ ನಿಲ್ಲಿಸಿದ. ಕಿಟಕಿಗಳು ತೆರೆದುಕೊಂಡವು. ಉಳಿದಂತೆ ಮನೆ ಸಾರಿಸಿಗುಡಿಸಿದ ಹಾಗೆ ಖಾಲಿಖಾಲಿ. ಅಡುಗೆ ಮನೆಯ ಪಾತ್ರೆಗಳೂ ಸಹ.. ಆಗಾಗ ತಂದಿಟ್ಟಿದ್ದನ್ನೇ ನಾನು ಅಷ್ಟಷ್ಟೇ ಬಳಸುತ್ತಿದ್ದೆನಾದ್ದರಿಂದ ಸಾಯದೆ ಬದುಕಿದ್ದೆ. ಮಗುವಿಗಾಗಿ ಪಾವ್ ಲಿಟರ್ ಹಾಲು ತರುತ್ತಿದ್ದ ಆಫೀಸಿನಿಂದ ಬರುವಾಗ. ಅದಕ್ಕೇ ನೀರು ಬೆರೆಸಿ ಕುಡಿಸುತ್ತಿದ್ದೆನಾದ್ದರಿಂದ ಮಗುವೂ ಬದುಕಿತ್ತು. ಕೀಲಿಕಪ್ಪಿ ಹಾಕುವುದನ್ನು ನಿಲ್ಲಿಸಿದ ಮೇಲೆ ಆಗಾಗ ದೀದಿ, ಭೋಸ್ಲೆ ಭಾಭಿ ನಮ್ಮನೆಗೆ ಬಂದುಹೋಗತೊಡಗಿದರು. ಬರುವಾಗ ತಿಂಡಿ ಊಟ ಏನಾದರೂ ಹೊತ್ತೇ ಬರುತ್ತಿದ್ದರು. ಹಾಗೆ ಅವರು ಊಟ ತಿಂಡು ತರುವುದು ನನಗೆ ಸಂಕೋಚವಾಗುತ್ತಿತ್ತಾದರೂ ಹಸಿವೆಂಬುದು ನಾಚಿಕೆಯಿಲ್ಲದ ನಾಯಿಯಂತೆ. ‘ನನ್ನಿಂದ ಸುಮ್ನ ನಿಮ್ಮಿಬ್ಬರ್ಗೂ ತ್ರಾಸು’ ಎಂದೆನ್ನುತ್ತಲೇ ಅವರು ತಂದುಕೊಟ್ಟಿದ್ದನ್ನ ತೆಗೆದುಕೊಳ್ಳುತ್ತಿದ್ದೆ. 

ಒಂದಿಷ್ಟು ದಿನಗಳಾದ ಮೇಲೆ ದೀದಿ ಬಾಗಿಲಿನ ಬೀಗ ತೆರೆದ ಈ ರಹಸ್ಯ ಹೇಳಿ, 

‘ಮುಳ್ನ ಮುಳ್ಳಿಂದಾನ ತಗೀಬೇಕು ಅಂತಾರ ನೋಡು ಮಾಲ, ಅದು ಖರೆ ಆತು ನೋಡು ನಿನ್ನ ಗಂಡನ ವಿಷಯದಾಗ’ ಎಂದು ಹೇಳಿ ನಕ್ಕರು. ಒಂಚೂರು ನಿರಾಳವಾದೆ ನಾನು. ಅವನದೇ ಯೋಚನೆಯ ಧಾಟಿಯಲ್ಲಿ ಮಾತಾಡಿದ್ದ ಮೃದುಲಾ ದೀದಿಯ ಮೇಲಿನ ಗೌರವ ನಂಬಿಕೆ ಹೆಚ್ಚಾಗಿತ್ತು ಸುಶೀಲನಿಗೆ. ನನಗೂ ಸಹ. 


***


ಹೀಗಿರುವಾಗಲೇ ಮಳೆಗಾಲದ ಒಂದು ದಿನ ಆ ಘಟನೆ ನಡೆದಿತ್ತು. ಶಂತನು ಆಗ ನಾಲ್ಕು ತಿಂಗಳ ಮಗು. ಸುಶೀಲ್ ತರುತ್ತಿದ್ದ ಪಾವು ಲಿಟರ್ ಹಾಲು ಸಾಲದಾಗಿ, ಬಾಗಿಲನ್ನು ಮುಂದು ಮಾಡಿಕೊಂಡು, ಅಂದು ಅನಿವಾರ್ಯವಾಗಿ ಮೃದುಲಾ ದೀದಿಯ ಮನೆಗೆ ಹೋಗಿದ್ದೆ ಹಾಲು ಕೇಳಲು. ಹೊರಗೆ ಮಳೆ ಜಿಟುಗುಡುತ್ತಿತ್ತು. ಮಾತನಾಡುತ್ತ ಆಡುತ್ತಾ ಅರ್ಧ ಮುಕ್ಕಾಲು ಗಂಟೆಯಾಗಿ ಹೋಗಿತ್ತು. ಪಾತ್ರೆಯೊಂದರಲ್ಲಿ ಹಾಲು ಪಡೆದುಕೊಂಡು ಅವರ ಮನೆಯಿಂದಾಚೆ ಬಂದರೆ ಹೊರಗೆ ಮಳೆಯ ಜೊತೆ ಗಾಳಿ ಸುಂಯ್ಗುಡುತ್ತಿತ್ತು. ಮೆಟ್ಟಿಲೇರಿದೆ. ಬಂದು ಬಾಗಿಲನ್ನು ತಳ್ಳಲು ನೋಡಿದರೆ ಒಳಗಿನಿಂದ ಬೋಲ್ಟ್ ಹಾಕಿದ್ದು ಗೊತ್ತಾಗುತ್ತಿದ್ದಂತೆಯೇ ಎದೆ ನಡುಗಿತ್ತು… ಇವನು ಬಂದು, ಬೀಗ ಹಾಕದ ಬಾಗಿಲು ತಳ್ಳಿ ಒಳಹೋಗಿದ್ದಾನೆ. ನಾನು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಅವನ ಸಂಶಯ ನಿಜವಾಗಿಬಿಟ್ಟಿದೆ. ಅವನಲ್ಲಿ ಒಳಗೆ ಬುಸುಗುಡುತ್ತಿದ್ದಾಗಲೇ ನಾನು ಮನೆಗೆ ಬಂದಿದ್ದು. ನಂತರ ಕೂಗಾಟ, ಒದೆ.. ನಾನು ಕಿರುಚಿಕೊಂಡಿದ್ದನ್ನು ಕೇಳಿ ಮೇಲೆ ಓಡಿ ಬಂದು ನನ್ನನು ಉಪಚರಿಸುತ್ತಿದ್ದ ಮೃದುಲಾ ದೀದಿ ನನ್ನ ಗಂಡನೆನಿಸಿಕೊಂಡವನಿಗೆ, ‘ಆಪ್ ಅಪನೆ ಬೀವಿ ಸೆ ಬಹುತ್ ಪ್ಯಾರ್ ಕರ್ತೆ ಹೋ, ಯೇ ಮೆ ಜಾನ್ತಿ ಥಿ ಭಯ್ಯಾ. ಆದ್ರ ಈ ಪರಿ ಪ್ರೀತಿ ಮಾಡ್ಟತೀರಂತ ಗೊತ್ತಿರ್ಲಿಲ್ಲ ಬಿಡ್ರಿ ನನಗ!’ ಎಂದಿದ್ದು.

ದೀದಿಯ ವ್ಯಂಗ್ಯದ ಮೊನಚು ಅವನಿಗೆ ತಾಗಿ. ‘ನಹಿ ಬಾಯಿ, ನೀವು ತಪ್ಪು ತಿಳ್ಕೊಂಡೀರಿ. ನಾ ಅಕಿಗೆ ಏನೂ ಮಾಡಿಲ್ಲ. ಖರೇನ ಚಕ್ಕರ್ ಬಂದು ಬಿದ್ದಾಳ’ ಎಂದವನು ಅಂದಾಗ ದೀದಿ ಮತ್ತೂ ಮೊನಚಾಗಿ ‘ಓಹೋ!’ ಎಂದಿದ್ದು...

ನನ್ನನ್ನು ಸಮಾಧಾನಿಸುತ್ತ ತಲೆ ನೇವರಿಸುತ್ತಿದ್ದ ದೀದಿ ‘ಬೆನ್ನಿಗೇನಾದರೂ ಪೆಟ್ಟಾಗೇತೇನು?’ ಎನ್ನುತ್ತಾ ಬೆನ್ನು ಸವರಿದರು. ‘ಯಾಡೀರೇ..’ ಕಿರುಚಿದೆ ನಾನು!  ಬೆಚ್ಚಿಬಿದ್ದ ದೀದಿ, ನನ್ನ ಬೆನ್ನ ಮೇಲಿನ ಸೆರಗು ಸರಿಸಿ ಬೆನ್ನು ನೋಡಿದವರೇ ‘ಆಯಿಗ!!’ ಎಂದು ಉದ್ಘಾರ ತೆಗೆದರು. ಅವರು ನಡುಗುತ್ತಿದ್ದುದು ಸ್ಪಷ್ಟವಾಗಿ ನನ್ನನ್ನು ಹಿಡಿದುಕೊಂಡಿದ್ದ ಅವರ ಕೈನಡುಕದಿಂದ ಗೊತ್ತಾಗುತ್ತಿತ್ತು ನನಗೆ. ಗಾದಿ ಇಲ್ಲದ ಪಟ್ಟಾಪಟ್ಟಿ ಮಂಚದ ಮೇಲೆ ನಾನು ಆಗಾಗ ಅತ್ಯಾಚಾರಕ್ಕೊಳಗಾಗುತ್ತಲೇ ಇದ್ದ ಪರಿಣಾಮವಾಗಿ ಬೆನ್ನು ಮೂಳೆಯ ಮೇಲಿನ ಚರ್ಮವೆಲ್ಲ ಕಿತ್ತುಹೋಗಿ ಗಾಯ ಮಾಯುತ್ತಲೇ ಇರಲಿಲ್ಲ. ಅಂಥಾ ಹಸಿಗಾಯಗಳನ್ನು ದೀದಿ ನೋಡಿ ನಡುಗಿದ್ದರು. ಸುಶೀಲನ ಮೇಲೆ ಪೋಲಿಸ್ ಕಂಪ್ಲೇಂಟ್ ಕೊಡುವುದಾಗಿ ಗುಡುಗಿದ್ದರು. ಅವರ ಗಟ್ಟಿ ದನಿಯ ಧಮ್ಕಿ ಕೇಳಿ ತೋಯ್ದ ಬೆಕ್ಕಾಗಿದ್ದ ಸುಶೀಲ್, ತಪ್ಪಾಯಿತೆಂದು ಅವರ ಕಾಲು ಹಿಡಿದ. ಕಾಲನ್ನು ಹಿಂದಕ್ಕೆಳೆದುಕೊಂಡ ದೀದಿ, ‘ನನ್ನ ಕಾಲಲ್ಲ ಅಕಿನ್ ಕಾಲ್ ಹಿಡ್ದು ಕ್ಷಮಾ ಕೇಳ್ರಿ. ನಂದೇನು ನೀವು ಕಾಲ್ ಹಿಡ್ಯೂದು ನೀವು!’ ಎಂದರು.

ಆಗವನು ಸುಮ್ಮನೆ ತಲೆ ತಗ್ಗಿಸಿ ನಿಂತ. 

‘ನಾಚ್ಗಿ ಬರ್ಬೇಕು ನಿಮಗ. ಯಾ ಬಾಯಿಂದ ಇಕಿನ್ನ ಭಾಳ ಪ್ರೀತಿಸ್ತೀನಿ ಅಂತೀರೋ. ಥೂ’ ಎಂದವರೇ ಮನೆಗೆ ಹೋಗಿ, ಮುಲಾಮು ತಂದು ಬೆನ್ನಗೆ ಸವರಿದರು. ಭೋಸ್ಲೆ ಭಾಭಿ ತಂದ ಚಹಾದಲ್ಲಿ ಬಿಸ್ಕಿಟ್ ಅದ್ದಿ ತಿನ್ನಿಸಿ ಮನೆಯಿಂದ ಅವರ ಗಂಡನನ್ನು ಕೇಳಿ ತಂದಿದ್ದ ಎರಡು ಗುಳಗಿ ನುಂಗಿಸಿದರು ನನಗೆ. 

ಅದಾದ ನಂತರ ಸುಶೀಲ್ ಗೆ ತುಂಬಾ ಕಟುವಾಗಿ ವಾರ್ನಿಂಗ್ ಮಾಡಿದರು ದೀದಿ. ಮನೆಗೆ ಸರಿಯಾಗಿ ದಿನಸಿ ತರಬೇಕು, ಮಗುವಿಗೆ ಅಗತ್ಯವಾದ ವಸ್ತುಗಳನ್ನೆಲ್ಲ ತರಬೇಕು, ನನ್ನನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಅನುಭವಿಸುವಂತಿಲ್ಲ ಇತ್ಯಾದಿಯಾಗಿ ಹಲವು ವಿಷಯಗಳನ್ನು ಕಡ್ದಾಯ ಮಾಡಿ, ತಾವು ಆಗಾಗ ಬಂದು ನೋಡುವುದಾಗಿಯೂ, ಅಕಸ್ಮಾತ್ ತಾವು ಹೇಳಿದಂತೆ ನಡೆದುಕೊಳ್ಳದೇ ಹೋದರೆ ಪೋಲಿಸ್ ಕಂಪ್ಲೇಂಟ್ ಕೊಡುವುದು ಗ್ಯಾರೆಂಟಿ ಎಂದೂ ಹೆದರಿಸಿದರು. ಪೋಲಿಸ್ ಎನ್ನುತ್ತಿದ್ದಂತೆಯೇ ಅಂಜಿ ಸತ್ತಿದ್ದ ಸುಶೀಲ್ ಎಲ್ಲದಕ್ಕೂ ಒಪ್ಪಿಕೊಂಡ. ಸಿಕ್ಕ ಭರವಸೆಗೋ, ಒದೆಸಿಕೊಂಡ ದಣಿವಿಗೋ ಇಲ್ಲಾ ಗುಳಗಿಯ ಪ್ರಭಾವವೋ ಗೊತ್ತಿಲ್ಲ ಅವರಿನ್ನೂ ಮಾತಾಡುತ್ತಿದ್ದಾಗಲೇ ನಿದ್ದೆಗೆ ಜಾರಿದ್ದೆ ನಾನು.

ಮರುದಿನ ಕಣ್ಣು ಬಿಟ್ಟಾಗ ನಿಜವಾಗಲೂ ಹೊಸ ಬೆಳಗು ನನ್ನ ಬದುಕಿಗೆ. ತಕ್ಕಮಟ್ಟಿಗೆ ದಾರಿಗೆ ಬಂದಿದ್ದ ಸುಶೀಲ್. ನಿತ್ಯ ನರಕದ ಎದುರು ಬದಲಾವಣೆಗಳ ನಂತರದ ಕಿರುಕುಳಗಳನ್ನು ಸಹಿಸಿಕೊಳ್ಳುವ ಮಟ್ಟಿಗೆ ಅದಾಗಲೇ ಮುಂಚಿನ ನೋವುಗಳು ನನ್ನನ್ನು ತಯಾರು ಮಾಡಿದ್ದವು. ಸುಶೀಲನ ಪಾಲಿಗೆ ಈ ಬದಲಾವಣೆ ಸುಲಭವಾಗಿರಲಿಲ್ಲ. ತುಂಬಾ ಒತ್ತಾಯಪೂರ್ವಕವಾಗಿಯೇ ಮೃದುಲಾ ದೀದಿಯ ಆಜ್ಞೆಗಳನ್ನು ಪಾಲಿಸಲು ಯತ್ನಿಸುತ್ತಿದ್ದ. ಅದರ ಹಿಂದೆ ಪೋಲಿಸ್ ಭಯ ಇರುವುದು ಸ್ಪಷ್ಟವಿತ್ತು. ನೋಡ ನೋಡುತ್ತಲೇ ಶಂತನುವಿನ ಮೊದಲ ಬರ್ತ್ ಡೇ ಬಂದಿತ್ತು. ಎಲ್ಲ ಒಂದು ಹದಕ್ಕೆ ಬರುವ ದಾರಿಯಲ್ಲಿದ್ದ ಕಾರಣ, ಬರ್ತ್ ಡೇ ದಿನ ‘ಹತ್ತಿರದಲ್ಲೇ ಇದ್ದ ಅಂಬಾಭವಾನಿ ದೇವಿಗೆ ಸೀರೆ ಕೊಡೋಕಾಗುತ್ತಾ ನೋಡು ಆಕೆಯ ಆಶೀರ್ವಾದವಿರಲಿ ನಿನ್ನ ಮತ್ತು ಮಗುವಿನ ಮೇಲೆ’ ಎಂದರು ದೀದಿ. ಆಯಿತೆಂದು ಒಪ್ಪಿಕೊಂಡು ಸುಶೀಲ್ ಗೆ ದೀದಿಯ ಮಾತುಗಳನ್ನು ಹೇಳಿದೆ. ತಪ್ಪಿಯೂ ನಿನಗೂ ಒಂದು ಸೀರೆ ಕೊಂಡುಕೊ ಎಂದವನ ಬಾಯಿಂದ ಬರಲಿಲ್ಲ. ಅವನೊಟ್ಟಿಗೇ ಹೋಗಿ ಮಗುವಿಗೆ ಬಟ್ಟೆ ಮತ್ತು ಒಂದು ಸೀರೆ ತಂದೆ. 

ಶಂತನು ಬರ್ತ್ ಡೇ ದಿನ ಬೆಳಿಗ್ಗೆ ಎದ್ದವಳೇ ಮಗನಿಗೆ ಎಣ್ಣೆಸ್ನಾನ ಮಾಡಿಸಿ ನಾನೂ ಸ್ನಾನ ಮಾಡಿ ಮಗನಿಗೆ ಹೊಸ ಬಟ್ಟೆ ತೊಡಿಸಿ, ಅವನನ್ನು ಎತ್ತಿಕೊಂಡು ಮೃದುಲಾ ದೀದಿಯ ಮನೆಯ ಬಾಗಿಲು ತಟ್ಟಿದೆ. ಬಾಗಿಲು ತೆರೆದ ದೀದಿ, ಖುಷಿಯಿಂದ ಶಂತನುವನ್ನೆತ್ತಿಕೊಂಡು ಮುತ್ತಿಟ್ಟು ‘ಹ್ಯಾಪ್ಪಿ ಬರ್ತ್ ಡೇ ರಾಜ್ಕುಮಾರ’ ಎಂದರು. ಅವರನ್ನು ಅಲ್ಲೇ ಇದ್ದ ಸೋಫಾ ಮೇಲೆ ಕೂರಿಸಿ ನನ್ನ ಜೊತೆಗೆ ತಂದಿದ್ದ ಹೊಸ ಸೀರೆಯನ್ನು ಮಡಿಲಲ್ಲಿಟ್ಟು, ಅವರ ಪಾದಕೆ ಹಣೆಹಚ್ಚಿ ನಮಸ್ಕರಿಸಿದೆ. 

‘ಏನ್ ಮಾಡೀದಿ ಇದು ನೀ ಮಾಲಾ! ನನಗ್ಯಾಕ!?’ 

‘ನೀವs ನನ್ನ ಅಂಬಾಭವಾನಿ ದೀದಿ. ಮತ್ತ್ಯಾಕ ಗುಡೀಗೆ ಹೋಗ್ಲಿರೀ ನಾ? ನನ್ನ ಮತ್ತ ನನ್ನ ಮಗನ ನೆತ್ತಿ ಮ್ಯಾಲ ಹಿಂಗ ಮುಂದೂನೂ ನಿಮ್ಮಾಶೀರ್ವಾದ ಇರ್ಲಿರೀ’

ಅನಿರೀಕ್ಷಿತವಾಗಿ ನಡೆದ ಈ ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ದೀದಿ ನನ್ನನ್ನು ಸುಮ್ಮನೆ ಅಪ್ಪಿಕೊಂಡರು.


***


ಸಭ್ಯನಾಗುವ ತನ್ನ ಪ್ರಯತ್ನದಲ್ಲಿ ಸೋತಿದ್ದ ಸುಶೀಲ್ ಮತ್ತೆ ಮೊದಲಿನಂತೆ ಕಿರುಕುಳ ಕೊಡಲು ಆರಂಭಿಸಿದ್ದನಾದರೂ ಈಗ ನನ್ನೊಳಗೊಂದು ಬಲ ಬಂದಿತ್ತು. ಪ್ರತಿರೋಧಿಸುತ್ತಿದ್ದೆ. ಕಿರುಕುಳ ವಿಪರೀತವಾದಾಗ ದೀದಿ ಎದುರು ಹೇಳುವುದಾಗಿ ಹೆದರಿಸುತ್ತಿದ್ದೆ. ಆಗ ಒಂದೆರಡು ದಿನ ದಾರಿಗೆ ಬಂದಂತೆ ಕಾಣುತ್ತಿದ್ದವನು ಮತ್ತೆ ತನ್ನ ಚಾಳಿ ಮುಂದುವರೆಸುತ್ತಿದ್ದ. ಹೀಗೆ ಸೆಣಸಾಡುತ್ತಲೇ ನಾಲ್ಕಾರು ವರ್ಷ ಕಳೆದವು. ಬೆಳೆಯುತ್ತಿರುವ ಮಗನ ಎದುರೇ ಎಲ್ಲ ಅವಾಂತರಗಳು… ಅದರಿಂದ ಮಗನ ಮನಸಿನ ಮೇಲಾಗಬಹುದಾದ ಪರಿಣಾಮಗಳನ್ನು ಯೋಚಿಸಿ ಕಂಗೆಟ್ಟಿದ್ದೆ. ಏನೂ ಮಾಡಿದರೂ ಎಡವಟ್ಟಾಗುವ ಪರಿಸ್ಥಿತಿ ಎದುರು ಹತಾಶಳಾದೆ. ಈ ನಡುವೆ ನನಗೆ ಒಂದು ಅಬಾರ್ಷನ್ ಕೂಡ ಆಗಿಹೋಗಿತ್ತು. ಪುಟಕ್ಕಂಟಿಕೊಂಡು ಅಂದವಾಗಿ ಅಚ್ಚುಕಟ್ಟಾಗಿ ಹದವೊಂದರಲ್ಲಿ ಮೂಡಬೇಕಾದ ಅಕ್ಷರ, ಪದ, ವಾಕ್ಯಗಳೆಲ್ಲ ಹಿಡಿತ ತಪ್ಪಿ ಗಾಳಿಯಲ್ಲಿ ಆವಿಯಾಗುತ್ತಿದೆ ಎನಿಸುವ ಅಸಹಾಯಕತೆ. ಇನ್ನು ಸಹಿಸಲಾಗದು ಎನಿಸಿದಾಗ, ಮೃದುಲಾ ದೀದಿಯ 

ಒತ್ತಾಸೆಯಿಂದ ಅವರ ಮನೆಗೆ ತರಿಸುತ್ತಿದ್ದ ಪತ್ರಿಕೆಯಲ್ಲಿನ ಜಾಹೀರಾತುಗಳನ್ನು ನೋಡಿ ಅಲ್ಲಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕತೊಡಗಿದೆ. ಓದಿನ ನಂತರದ ನಾಲ್ಕು ವರ್ಷಗಳ ಗ್ಯಾಪ್ ಮತ್ತು ಅನುಭವ ಎರಡನ್ನೂ ಗಮನಿಸಿ ನನ್ನ ಅರ್ಜಿಯನ್ನು ವಜಾ ಮಾಡಿದವರೇ ಹೆಚ್ಚು. ಅಂತೂ ಕೊನೆಗೆ ಒಂದು ಕಂಪನಿಯಲ್ಲಿ ಅಹಮದನಗರ್ ನಲ್ಲೇ ಕೆಲಸ ಸಿಕ್ಕಾಗ ಸುಶೀಲ್ ಕೆಲಸಕ್ಕೆ ಹೋಗುವುದು ಬೇಡವೆಂದು ತಕರಾರು ತೆಗೆದ. ಮತ್ತೆ ದೀದಿ ಮಧ್ಯಸ್ಥಿಕೆವಹಿಸುವುದು ಅನಿವಾರ್ಯವಾಯಿತು. ಸುಶೀಲ್ ನೇ ನನ್ನನ್ನು ಆಫೀಸಿಗೆ ಬಿಟ್ಟು, ಕರೆದುಕೊಂಡು ಬರುವುದು ಎಂದಾಗ, ಅವನ ಕರಾರನ್ನು ಸಂತೋಷದಿಂದ ಒಪ್ಪಿಕೊಂಡೆ. ಶಂತನು ಶಾಲೆಗೆ ಹೋಗತೊಡಗಿದ್ದನಾದ್ದರಿಂದ ನಾವು ಮರಳಿ ಬರುವವರೆಗೆ ಅವನನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳುವುದಾಗಿ ಹೇಳಿದರು ದೀದಿ. 

ಕೆಲಸಕ್ಕೆ ಹೋಗಲು ಆರಂಭಿಸಿ ತಿಂಗಳೂ ಕಳೆದಿರಲಿಲ್ಲ, ಸುಶೀಲನ ಸಂಶಯದ ಭೂತ ಮತ್ತೆ ತಾಂಡವವಾಡತೊಡಗಿತು. ಆಫೀಸಿನ ಎಲ್ಲ ಪುರುಷ ಸಹೋದ್ಯೋಗಿಗಳ ಮೇಲೂ ಅನುಮಾನಪಡತೊಡಗಿದ. ಮತ್ತೆ ಹಿಂಸಿಸುವುದಕ್ಕೆ ಶುರು ಮಾಡಿದ. ಹೊಡೆತ ಬಡೆತ ಆರಂಭಗೊಂಡು ಮಗನನ್ನೂ ವಿನಾ ಕಾರಣ ಹೊಡೆಯಲಾರಂಭಿಸಿದ. ಅದನ್ನು ತಿಳಿದ ದೀದಿಯ ಪತಿ ಡಾ. ಶೈಲೇಶ್ ಪಾಟೀಲ್, ‘ಇದು ಮಾನಸಿಕ ಖಾಯಿಲೆ, ಚಿಕಿತ್ಸೆ ಇಲ್ಲದೇ ಗುಣವಾಗದು. ಆರಂಭದಲ್ಲೇ ಹೇಳೋಣವೆಂದುಕೊಂಡಿದ್ದೆ. ಆದರೆ ನೀವೆಲ್ಲಿ ತಪ್ಪು ತಿಳೀತೀರೋ ಅಂದುಕೊಂಡು ಸುಮ್ಮನಿದ್ದೆ’ ಎಂದರು. ಎಷ್ಟೇ ಹರಸಾಹಸ ಮಾಡಿದರೂ ಕೌನ್ಸಲಿಂಗಿಗೆ ಒಪ್ಪದ ಸುಶೀಲನನ್ನು ಆಸ್ಪತ್ರೆಗೆ ಸೇರಿಸುವುದು ಅನಿವಾರ್ಯ ಎನ್ನುವ ಸಲಹೆ  ಡಾ. ಶೈಲೇಶ್ ಪಾಟೀಲರಿಂದ ಬಂದಾಗ ಕಸಿವಿಸಿಗೊಂಡೆ. ಒಮ್ಮೆ ಆಸ್ಪತ್ರೆಗೆ ಹೋಗಿ ಬಂದರೆ ಈ ಜಗತ್ತು ಅವನನ್ನು ಹುಚ್ಚ ಎನ್ನುತ್ತದೆ. ಅದನ್ನು ಹೇಗೆ ಸಹಿಸುವುದು? ಬದಲಿಗೆ ನನ್ನನ್ನು ಹಿಂಸಿಸುತ್ತಾನಾದರೆ ಹಿಂಸಿಸಲಿ, ಸಹಿಸಿಕೊಳ್ಳುವೆ ಎಂದೆ. ಅಷ್ಟೊಂದು ಕಷ್ಟ ಕೊಡುವ ಅವನನ್ನು ನಾನು ಇಷ್ಟು ಪ್ರೀತಿಸುತ್ತೆನೆಯೇ?! ನನಗೇ ಅಚ್ಚರಿಯಾಯ್ತು. ಇರ್ಲಿಕ್ಕಿಲ್ಲ ಅದು ಕರುಣೆ ಇರಬಹುದು… ಅಥವಾ…

 ಡಾ. ಶೈಲೇಶ್ ಪಾಟೀಲ್ ನನ್ನನ್ನು ಮನೆಗೆ ಕರೆದು ಕೂರಿಸಿ ಮಾತಾಡಿದರು. ಈಗ ಸುಶೀಲನನ್ನು ಆಸ್ಪತ್ರೆಗೆ ಸೇರಿಸದಿದ್ದಲ್ಲಿ ಮುಂದೆ ಮಗುವಿನ ಮೇಲಾಗಬಹುದಾದ ಪರಿಣಾಮಗಳನ್ನು ವಿವರಿಸಿದರು. ಸುಶೀಲ್ ನಾರ್ಮಲ್ ಆದ ಮೇಲೆ ಸಹಜ ಜೀವನ ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು. ಮಗನ ಭವಿಷ್ಯದ ವಿಷಯ ಬಂದಾಗ ಅವರ ಮಾತನ್ನು ಒಪ್ಪುವುದೇ ಸರಿ ಅನಿಸಿತು ನನಗೆ… ಮನಸು ಗಟ್ಟಿ ಮಾಡಿಕೊಂಡು, ಅವನ ಊರಿಗೆ ಹತ್ತಿರ ಅನ್ನುವ ಕಾರಣಕ್ಕೆ ಹರಸಾಹಸದಿಂದ ಮೀರಜಿನಲ್ಲಿರುವ ಮಾನಸಿಕ ಆಸ್ಪತ್ರೆಯಲ್ಲಿ ಸುಶೀಲ್ ನನ್ನು ಭರ್ತಿ ಮಾಡಲಾಯಿತು. ಧಿಡೀರ್ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದೆ ತೊಳಲಾಡಿದೆ. ಸುಶೀಲ್ ಹುಚ್ಚಾಸ್ಪತ್ರೆಗೆ ಸೇರುವಂತಾಗಿದ್ದಕ್ಕೆ ಸಲ್ಲದ ಅಪರಾಧಿ ಪ್ರಜ್ಞೆಯಿಂದ ಬಳಲತೊಡಗಿದೆ. ಅವನ ಕಡೆಯವರಿಂದಲೂ ಏನೆಲ್ಲ ಕೇಳಬೇಕಾಯಿತು ನಾನು. ಅವರೆಲ್ಲರ ತಿರಸ್ಕಾರಕ್ಕೊಳಗಾದೆ. ಇದರಿಂದಾಗಿ ಮಾನಸಿಕವಾಗಿ ನಾನು ಮತ್ತೂ ಕುಗ್ಗುವಂತಾಯಿತು. ಆದರೆ ಮಗನಿಗಾಗಿ ಕೆಲಸಕ್ಕೆ ಹೋಗುವುದೂ ಅನಿವಾರ್ಯವಾಗಿತ್ತು. ಮೃದುಲಾ ದೀದಿ ಮತ್ತು ಡಾ. ಪಾಟೀಲ್ ನನಗಾಸರೆಯಾಗದೆ ಹೋಗಿದ್ದರೆ ಸುಶೀಲ್ ನೊಂದಿಗೆ ನಾನೂ ಅದೇ ಆಸ್ಪತ್ರೆಯ ಇನ್ನೊಂದು ಹಾಸಿಗೆ ಮೇಲಿರುತ್ತಿದ್ದೆನೋ ಏನೋ... ಅವರಿಂದಾಗಿ ನಿಧಾನವಾಗಿ ಚೇತರಿಸಿಕೊಂಡೆ. ಜಾಗದ ಬದಲಾವಣೆಯ ಅಗತ್ಯವಿತ್ತು. ಪುಣೆಯ ಬ್ರಾಂಚಿಗೆ ಕೇಳಿ ವರ್ಗ ಮಾಡಿಸಿಕೊಂಡು, ನನ್ನ ಪಾಲಿನ ಅಂಬಾಭವಾನಿ ಮೃದುಲಾ ದೀದಿಗೆ ನಮಸ್ಕರಿಸಿ ಅವರಿಂದ ಬೀಳ್ಕೊಂಡಿದ್ದೆ. 


***


‘ಮಮ್ಮಾ…. ಮಮ್ಮಾ… ಎಲ್ಲೆದಿ…? ಸುಸ್ಸೂ ಬಂದಾವ… ಮಮ್ಮಾ…’ ಶಂತನು ಎದ್ದು ನಿದ್ದೆಗಣ್ಣಲ್ಲಿ ಹಾಸಿಗೆಯಲ್ಲಿ ನನ್ನನ್ನು ಹುಡುಕಿ, ನಾನಲ್ಲಿ ಕಾಣದೆ ಹೆದರಿಕೆಯಿಂದ ಕರೆಯುತ್ತಿದ್ದ. ‘ಬಂದೆ ಬಾಳಾ’ ಎನ್ನುತ್ತಾ ಎದ್ದು, ನಾದಿಟ್ಟ ಹಿಟ್ಟನ್ನು ಮತ್ತು ಹೆಚ್ಚಿದ್ದ ತರಕಾರಿಯನ್ನು ಫ್ರಿಜ್ಜಿನೊಳಗಿಟ್ಟು ಧಾವಿಸಿದೆ ಮಗನೆಡೆಗೆ. ಹೊರಗಿನ ಮಳೆ ನಿಂತಿತ್ತು. ಒಳಗಿನ ಪುಟಗಳ ಸದ್ದೂ… 

------------------------------------------------------------------------------------------------------------------












22 comments:

chandrakala said...

ಒಂದು ದೊಡ್ಡ ನಿಟ್ಟುಸಿರು ಬಿಟ್ಟೆ ಕಥೆ ಒಂದೇ ಉಸಿರಲ್ಲಿ ಓದಿದ್ದೆನಲ್ಲ. ನಮ್ಮ ಹೆಣ್ಣುಮಕ್ಕಳು ಬಹಳ ಸಾಧು ಜನ. ಎಷ್ಟೆ ಕಷ್ಟ ಇದ್ದರೂ ಸಹಿಸಿಕೊಂಡು ಚೆನ್ನಾಗಿ ಬಾಳ್ವೆ ಮಾಡುವ ಕನಸು ಕಾಣುತ್ತಾ ನರಕದಲ್ಲೆ ಬದುಕುತ್ತಾರೆ.
ಟಾರ್ಚರ್ ಬೇರೆ ಬೇರೆ ಡಿಗ್ರಿಯಲ್ ಇರುತ್ದಷ್ಟೆ. ಎಲ್ಲೂ ಹೇಳಿ ಕೊಳ್ಳಲಾಗದಂತ ಪರಿಸ್ಥಿತಿ. ಹೆಣ್ಣಿನ ಕಷ್ಟವನ್ನ ಎಷ್ಟ್ ಚೆನ್ನಾಗಿ ಬರೆದಿದ್ದೀರಿ. ಇಂಥವರ್ನ ಹುಚ್ಚಾಸ್ಪತ್ರೆಗೇ ಸೇರಿಸಬೇಕು, ಜೈಲಿನಲಲ್ಲಾ!

Jayalaxmi said...

ಸ್ಪಂದನೆಗೆ ಧನ್ಯವಾದಗಳು ಚಂದ್ರಕಲಾ. ಹೌದು ಚಿಕಿತ್ಸೆ ಫಲಕಾರಿಯಾಗಬೇಕು.
- ಜಯಲಕ್ಷ್ಮಿ ಪಾಟೀಲ್

ವಿಶ್ವನಾಥ ಎನ್ ನೇರಳಕಟ್ಟೆ said...

ಹೆಣ್ಣುಮಗಳೊಬ್ಬಳು ಕೌಟುಂಬಿಕವಾಗಿ ಅನುಭವಿಸುವ ತೊಳಲಾಟಗಳನ್ನು ಕಥೆಯಲ್ಲಿ ಭಾವನಾತ್ಮಕವಾಗಿ ಅಭಿವ್ಯಕ್ತಿಸಲಾಗಿದೆ.ಅದ್ಬುತವಾದ ಕಥೆ. ಅಷ್ಟೆಲ್ಲಾ ಸಂಕಷ್ಟಗಳನ್ವು ಅನುಭವಿಸಿದ ವನಮಾಲಾಳ ಪಾತ್ರಚಿತ್ರಣ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ..

- ವಿಶ್ವನಾಥ ಎನ್ ನೇರಳಕಟ್ಟೆ

Akshay Pandith, Sagar said...

ಅನುಭವಿಸಿದ ವನಮಾಲ, ಅದರಿಂದ ಹೊರಬರಲು ಕಾರಣವಾದ ಅವಳ ಪಾಲಿನ ಅಂಬಾ ಭವಾನಿ, ಇಬ್ಬರೂ ಹೆಣ್ಣು.. ಇಬ್ಬರ ವ್ಯಕ್ತಿತ್ವದಲ್ಲೂ ಅದೆಷ್ಟ್ ವ್ಯತ್ಯಾಸ. ಬೆಳೆದ ಪರಿಸರ ಎಷ್ಟೆಲ್ಲಾ ಮುಖ್ಯ ಆಗ್ಗತ್ತಲ್ವಾ? ಇಷ್ಟ್ ದೊಡ್ಡ ಕತೆನಾ ಅಂತ ಶುರುವಾದಾಗ ಅನಿಸಿತ್ತು. ಆದರೆ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತು. ನಿಜಕ್ಕೂ ಇಂಥ ಕಷ್ಟ ಅನುಭವಿಸೋ ವನಮಾಲ ಥರದವರಿಗೂ ಮತ್ತು ಧೈರ್ಯ ಕೊಡೋ ಅಂಬಾ ಭವಾನಿ ಅಂತವರಿಗೂ ಶರಣು..

Unknown said...

Thanks for sharing beautiful story madam.

ನೀತಾ ರಾವ್ said...

ಅದ್ಭುತವಾದ ಕಥೆ. ಭಾರತೀಯ ಹೆಣ್ಣುಮಕ್ಕಳು ಕುಟುಂಬಕ್ಕೆ, ಪತಿಗೆ ಕೊಡುವ ಮಹತ್ವವನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಹಿಂಸಿಸುವ, ಶೋಷಿಸುವ ಸಾವಿರಾರು ಸುಶೀಲರು ನಮ್ಮ ನಡುವೆ ಇದ್ದಾರೆ. ಹಿಂಸೆಯ ಸ್ವರೂಪ ಮತ್ತು ಡಿಗ್ರಿ ಸ್ವಲ್ಪ ಹೆಚ್ಚೂ ಕಮ್ಮಿ ಅಷ್ಟೇ. ಹೆಣ್ಣು ತನಗಿಂತ ಜಾಣೆ, ಸುಗುಣೆ, ಚಲುವೆ ಇದ್ದರೆ ಗಂಡಸಿಗೆ ವಿಪರೀತ ಕೀಳರಿಮೆ ಶುರುವಾಗುತ್ತದೆ. ಅದು ಒಂದು ಮಾನಸಿಕ ರೋಗವಾಗಿ ಉಲ್ಭಣವಾಗುವ ಉದಾಹರಣೆ ಇಲ್ಲಿದೆ. ಓದುತ್ತಿದ್ದಂತೆ ಸುಶೀಲನ ಕ್ರೌರ್ಯ,ಆಲಾಳ ಅಸಹಾಯಕತೆಗೆ ಮೈ ಜುಂ ಎಂದುಬಿಡುತ್ತೆ. ಹೆಣ್ಣು-ಗಂಡಿನ ಮನಸ್ಸಿನ ಸಂಕೀರ್ಣ ತುಮುಲಗಳನ್ನು ಅಕ್ಷರರೂಪಕ್ಲಿಳಿಸುವಲ್ಲಿ ನಿಮ್ಮ ಕಲೆಗಾರಿಕೆ, ಕೌಶಲ ಗೆದ್ದಿವೆ. ಅಭಿನಂದನೆಗಳು ಮೇಡಂ.

Unknown said...

ಅಭಿನಂದನೆಗಳು ಮೇಡಂ. ಕಥೆ ತುಂಬಾ ಚೆನ್ನಾಗಿ ರಚಿಸಿದ್ದೀರಿ.ಇದು ಕೇವಲ ವನಮಾಲ ಎಂಬ ಇಂಜಿನಿಯರಿಂಗ್ ಓದಿದ ಹೆಣ್ಣುಮಗಳೊಬ್ಬಳ ಕಥೆಯಾಗದೆ ವ್ಯವಸ್ಥೆಯೊಳಗೆ ಗಂಡಿನ ಕ್ರೌರ್ಯವನ್ನು ಮೌನವಾಗಿ ಸಹಿಸಿಕೊಳ್ಳುತ್ತಲೇ ದಹಿಸುವ ಹೆಣ್ಣುಲೋಕದ ಆತ್ಮಚರಿತ್ರೆಯಂತಿದೆ.ಮಹಿಳಾ ಕಥಾಸಾಹಿತ್ಯವನ್ನ ಒಮ್ಮೆ ಗಮನಿಸಿದರೆ ಈ ಮಾತು ಖರೆ ಎನ್ನಿಸದೇ ಇರದು.ಕಥೆಯ ವಿನ್ಯಾಸ ಚೆನ್ನಾಗಿದೆ.ಕಥೆಯ ಪ್ರಥಮವ್ಯಕ್ತಿವಾಚಿ ನಿರೂಪಣೆಯು ನೇರವಾಗಿ ಓದುಗರೊಟ್ಟಿಗೆ ಸಂವಹನಗೊಳ್ಳುತ್ತದೆ.ನಿರೂಪಕಿಯು ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಎಳೆ ಎಳೆಯಾಗಿ ಚಿತ್ರಿಸುತ್ತಾ ಹೋಗುತ್ತದೆ.ಕಥೆ ವಾಸ್ತವದಿಂದ ಹಿಂದಿನ ನೆನಪುಗಳಿಗೆ ಜಿಗಿಯುತ್ತದೆ.ಅಷ್ಟೆ ಅಲ್ಲ ನೆನಪುಗಳ ಅಂತರಂಗದಲ್ಲಿ ಅಡಗಿದ ನೋವಿನ ಸುಳಿಗಳ ಮೂಲವನ್ನು ಶೋಧಿಸುತ್ತದೆ.ಹಿಂದಿ ಮಾತನಾಡುವ ಆಭಾಳ ಮಾತುಗಳು ಗಂಡನಾದ ಸುಶೀಲ್ ನ ಮಾತುಗಳಂತೆ ಕೇಳಿಬಂದು ಮತ್ತೆ ಮತ್ತೆ ನೆನಪಿನ ಪುಟಗಳು ಸದ್ದುಮಾಡುತ್ತವೆ.ಮಗ ಶಂತನುವಿನ ಮುಗ್ಧ ಪ್ರಶ್ನೆಗಳು ವನಮಾಲಾಳ ಗತಬದುಕಿನ ವೈಭವಗಳನ್ನ ಮತ್ತೆ ಕಣ್ಣಮುಂದೆ ತಂದು ನಿಲ್ಲಿಸುತ್ತವೆ.ಸರಳ ಮತ್ತು ಸಹಜವಾದ ನಿರೂಪಣೆಯಲ್ಲಿ ಕಥೆ ಆರಂಭವಾಗಿ ಓದುತ್ತಿದ್ದಂತೆ ಉಸಿರು ಬಿಗಿಹಿಡಿದಂತೆನ್ನಿಸಿ ಒಮ್ಮೆಲೆ ಅವಳು ಪುಣೆಯ ಬ್ರಾಂಚಿಗೆ ವರ್ಗವಾಗಿ ಹೊಸಬದುಕು ಕಟ್ಟಿಕೊಂಡದ್ದು ಓದಿದಾಗ ಉಸಿರು ಬಿಟ್ಟ ಅನುಭವ.ಇಂಜಿನಿಯರಿಂಗ್ ಪದವೀಧರೆಯಾದರೂ ಹೆಣ್ಣೊಬ್ಬಳು ಇಂಥ ಕ್ರೌರ್ಯಗಳನ್ನು ಸಹಿಸಿಕೊಳ್ಳುವುದಾದರು ಯಾಕೆ?ಅವಳನ್ನು ಬಂಧಿಸುವ ಹಿಂದಿನ ಶಕ್ತಿ ಯಾವುದು?ಇಷ್ಟೊಂದು ಸಂಕಟಗಳನ್ನು ಅವಳು ಅನುಭವಿಸಿದ್ದರೂ, ಅನುಭವಿಸುತ್ತಿದ್ದರೂ ಅದರಿಂದ ಬಿಡಿಸಿಕೊಂಡು ಬರಲಾಗದ್ದರ ಹಿಂದಿನ ಆ ಸೆಳೆತವಾದರೂ ಯಾವುದು?ವಾಸ್ತದಿಂದ ನೆನಪುಗಳಿಗೆ ಜಿಗಿಯುವ ಈ ಕಥೆ ಎಂದೋ ಆಗಿಹೋದದ್ದಲ್ಲ.ನಮ್ಮ ಸಮಾಜದ ಮೂಕ ವೇದನೆಯ ಹೆಣ್ಣುಗಳ ನಿತ್ಯವರ್ತಮಾನ.ಗಂಡಿನ ಈ ಮಾನಸಿಕ ಖಾಯಿಲೆಗೆ ಹೆಣ್ಣಿನ ಬದುಕಿನ ಅದೆಷ್ಟೋ ಪುಟಗಳು ಸಂಕಟದಲ್ಲಿ ತಲ್ಲಣದಲ್ಲಿ ತುಂಬಿಹೋಗಿವೆ.ಅಷ್ಟೆ ಅಲ್ಲ ಬದುಕಿನ ಎಷ್ಟೋ ಪುಟಗಳು ವ್ಯವಸ್ಥೆ ಕೊಡಮಾಡುವ ಟೀಕೆ ಟಿಪ್ಪಣಿಗಳನ್ನು ತುಂಬಿಕೊಳ್ಳುತ್ತಲೇ ದಷ್ಟ ಪುಷ್ಟವಾಗುತ್ತವೆ.ಬದುಕಿನ ಮತ್ತು ದಾಂಪತ್ಯದ ಎಲ್ಲಾ ಮಧುರ ಕಹಿಗಳನ್ನು ಜೀರ್ಣಿಸಿಕೊಳ್ಳುತ್ತಲೇ ಜೀವಂತವಾಗಬೇಕಿದೆ ಎಂಬುದನ್ನು ಕಥೆ ನಿರೂಪಿಸುತ್ತದೆ.ಬದುಕಿನ ಸಂಕೀರ್ಣತೆಗಳನ್ನು ಆಶಾವಾದ ಮತ್ತು ಛಲದಿಂದ ಗೆಲ್ಲುವ ವನಮಾಲ ಪಾತ್ರ ಓದುಗರನ್ನು ಆವರಿಸುತ್ತದೆ.ತನಗಾಗಿ ತಾನು ಬದುಕುವುದನ್ನು ಕಲಿಯುತ್ತಾ ಮಗನ ಮುದ್ದು ಮಾತುಗಳಲ್ಲಿ ಎಲ್ಲಾ ನೋವುಗಳನ್ನು ಮರೆಸುವ ಅಮೃತವನ್ನು ಹುಡುಕಿಕೊಳ್ಳುತ್ತಾಳೆ.ಮೃದುಲಾ ದೀದಿ ಮತ್ತು ಡಾ||ಶೈಲೇಶ್ ದಂಪತಿಗಳು ತಾಯ್ತಂದೆಯರಂತೆ ಬೆನ್ನಿಗೆ ನಿಂತವರು.ವನಮಾಲಾಳ ಬದುಕಲ್ಲಿ ಭರವಸೆಯನ್ನು ತುಂಬುತ್ತಾ ಬಂದವರು.ಸುಶೀಲನ ಅನುಮಾನ,ಅವಮಾನಗಳ ಜೊತೆಗೆ ಹೆಂಡತಿಗೆ ಅವನು ಕೊಡುತ್ತಿದ್ದ ಮಾನಸಿಕ ದೈಹಿಕ ಹಿಂಸೆಗಳಿಗೆ ಅವನ ಹಾದಿಯಲ್ಲಿಯೇ ಮೂಗುದಾರ ಹಾಕಿದವರು.ವ್ಯವಸ್ಥೆಯಲ್ಲಿ ಬಡತನದಲ್ಲಿದ್ದರೂ ತಮ್ಮ ಹೆಣ್ಣುಮಕ್ಕಳು ಓದಿ ಚಂದ ಬದುಕಲೆಂದು ಅಪೇಕ್ಷಿಸುವ ಮತ್ತು ನಿರೀಕ್ಷಿಸುವ ತಂದೆ ತಾಯಿಗಳಿಗೆ ಸುಶೀಲನಂಥ ಸುಂದರ ಕ್ರೌರಿಗಳ ಮುಖವಾಡ ಕಳಚುವುದಾದರೂ ಹೇಗೆ?ಊಹಿಸಲೂ ಸಾಧ್ಯವಾಗದ ನಟನೆ ಅದು.ಲಗ್ನ,ಕುಟುಂಬ,ದಾಂಪತ್ಯ, ಮತ್ತು ನಾಲ್ಕು ಗೋಡೆಗಳ ಮನೆಯೆಂಬ ಯಜ್ಞ ಕುಂಡದಲ್ಲಿ ಹೆಣ್ಣು ದನಿಗಳನ್ನೇ ಅಜ್ಯವಾಗಿಸುವ ಪರಿ ಹೊಸದಲ್ಲ.ಹಳ್ಳಿಯ ಹಟ್ಟಿಗಳಿಂದ ಹಿಡಿದು ನಗರದ ಎಸಿ ಪ್ಲಾಟ್ಗಳಲ್ಲಿಯೂ ನಿರಂತರ ಹೆಣ್ಣಿನ ಭಾವನೆಗಳ ಮತ್ತು ಬದುಕುಗಳ ದಹನ ನಡೆಯುತ್ತಲೇ ಇದೆ...ಅವಳ ವಿವೇಕಯುಕ್ತ ದಿಟ್ಟ ನಿರ್ಧಾರಗಳ ಹೊರತಾಗಿ ಅನ್ಯಮಾರ್ಗವಿಲ್ಲ ಎಂಬುದನ್ನು ಕಥೆ ಧ್ವನಿಸುತ್ತದೆ.ಕಥೆ ಆಶಾದಾಯಕವಾಗಿ ಮಗುವಿನ"ಮಮ್ಮಾ"ಎಂಬ ಮಾತುಗಳನ್ನು ಕೇಳಿಸುತ್ತಾ ನಿಡುಸುಯ್ಯುವ ನೆನಪುಗಳ ಸುಳಿಯಿಂದ ವಾಸ್ತವಕ್ಕೆ ಬಂದು ತೇಲಿಸುತ್ತದೆ.ಕಥೆ ಗೆಲ್ಲುತ್ತದೆ.ಉತ್ತರ ಕರ್ನಾಟಕದ ಪ್ರಾದೇಶಿಕ ಭಾಷೆಯ ಘಮಲು ಕಥೆಗೆ ಮೆರಗುಕೊಟ್ಟಿದೆ.ಕಥೆಯ ತಂತ್ರವೂ ಚೆನ್ನಾಗಿದೆ.ಕಥೆ ಒಂದು ನೆನಪಿಗೆ ಹಿಂದೆ ಜಿಗಿದು ಮತ್ತೆ ನೆನಪಿನೊಳಗೊಂದು ನೆನಪಿನ ಲೋಕಕ್ಕೆ ಕರೆದೊಯ್ಯುತ್ತದೆ.ಕಥೆಯಲ್ಲಿ ಅಲ್ಲಲ್ಲಿ ಸಂದರ್ಭೋಚಿತವಾಗಿ ಬಳಸುವ ರೂಪಕಗಳು ಹೊಸತಾಗಿವೆ.ಕಥೆಗೆ ಶೀರ್ಷಿಕೆಯೂ ಸೂಕ್ತವಾಗಿದೆ.ಇದು ಕಥೆ ಮಾತ್ರವಲ್ಲ ಸ್ರ್ತೀ ಲೋಕದ ಆತ್ಮಚರಿತ್ರೆಯ ಒಂದು ಭಾಗವೂ ಹೌದು...ಮತ್ತೆ ಅತ್ಯುತ್ತಮ ರಚನೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಾ...ವಂದನೆಗಳು ಮೇಡಂ.👍🙏💐
ಶ್ರೀಮತಿ ಪದ್ಮಶ್ರೀ.ಎಂ.ಅಥಣಿ.

Jayalaxmi said...

ಸ್ಪಂದನೆಗಾಗಿ ಧನ್ಯವಾದಗಳು ವಿಶ್ವನಾಥ್.

Jayalaxmi said...

ಸ್ಪಂದನೆಗಾಗಿ ಧನ್ಯವಾದಗಳು ಅಕ್ಷಯ್. ಮೃದುಲಾನ್ನ ವನಮಾಲಾಳ ಜೊತೆ ಸೇರಿ ನೀವೂ ಅಂಬಾಭವಾನಿ ಅಂದಿದ್ದು ನೆರವಿನಾಸರೆಯ ಭರವಸೆ ಸಮಾಜಕ್ಕೆ.

Jayalaxmi said...

ಕತೆ ಓದಿದ್ದಕ್ಕಾಗಿ ತಮಗೂ ಧನ್ಯವಾದಗಳು. ತಮ್ಮ ಹೆಸರೂ ಬರೆದಿದ್ದರೆ ಹೆಚ್ಚು ಖುಷಿ ಆಗಿರ್ತಿತ್ತು.

Jayalaxmi said...

ನಿಮ್ಮ ಈ ಸ್ಪಂದನೆಗಾಗಿ ಅನಂತ ಧನ್ಯವಾದಗಳು ಮೇಡಂ. ಬದುಕು ಎಲ್ಲ ಹೆಣ್ಣುಮಕ್ಕಳ ಪಾಲಿಗೆ ಬಸಿದ ಶಾವಿಗೆಯಂತೆ ಇರುವುದಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು
ಅಂತ ಆಗಾಗ ಅನಿಸುವುದುಂಟು. ಆದರೆ ಅದು ಕಲ್ಪನಾಲೋಕದ ಸ್ವರ್ಗ ಮಾತ್ರ.

Jayalaxmi said...

ಕಥೆಯನ್ನು ಅದೆಷ್ಟು ಚೆನ್ನಾಗಿ ವಿಮರ್ಶಿಸಿದ್ದೀರಿ! ಧನ್ಯವಾದಗಳು ಮೇಡಂ ನಿಮ್ಮ ಈ ದೀರ್ಘ ಪ್ರತಿಕ್ರಿಯೆಗಾಗಿ.

Jayashree Deshpande said...

'ಪುಟಗಳಾಚೆ ತೇಲಿದ ಪದ' ಕತೆ ಅತ್ಯಂತ ಗಾಢ ನೋವಿನ ಗಟ್ಟಿ ಅಭಿವ್ಯಕ್ತಿ ಜೆಪಿ.
ಸಾಂಸಾರಿಕ ಹಿಂಸೆ ಕೆಲವು ಹೆಣ್ಮಕ್ಕಳನ್ನು ಶಾಪವಾಗಿ ಕಾಡುತ್ತದೆ. ಅನೇಕ ವಿಕ್ಷಿಪ್ತ ಪುರುಷ ಮನಸುಗಳಿಗೆ ಒಳ್ಳೆಯ ಮಾತುಗಳೇ ತಟ್ಟುವುದಿಲ್ಲ ಎನ್ನುವುದಕ್ಕೆ ಸಂಕೇತದ ಹಾಗೆ ಇಲ್ಲಿ ಸುಶೀಲ್ ಮೂಡಿದ್ದಾನೆ. ವನಮಾಲಾಗೆ ಆ ಎಲ್ಲ ನೆರೆಹೊರೆಯ ಸಹೃದಯೀ ಹೆಣ್ಮಕ್ಕಳು‌ ಬೆಂಬಲ ಕೊಟ್ಟಿಲ್ದಿದ್ದರೆ ಏನಾಗಬಹುದಿತ್ತೋ ಅನಿಸುವ ನೋವು ಕತೆಯಿಡೀ ಕಾಡುತ್ತದೆ. ಅಥವಾ ಪೂರ್ಣವಾಗಿ pushed to the corner ಆದ ವನಮಾಲಾ ತಾನೇ ಅವನ ಕ್ರೌರ್ಯಕ್ಕೆ ಸರಿಯಾದ ಎದುರುತ್ತರ ಕೊಡ್ತಿದ್ದಳೋ? ಸಹನೆಗೆ ಮಿತಿ ಇರುತ್ತದಲ್ಲವೇ? ಗಟ್ಟಿ ಕಥಾವಸ್ತು ಸಶಕ್ತ ಬರಹ, ಕತೆ ಮನತಟ್ಟಿತು. ಅಭಿನಂದನೆಗಳು.��

Jayalaxmi said...

ನಿಮ್ಮಂಥಾ ಹಿರಿಯ, ಶ್ರೇಷ್ಠ ಕತೆಗಾರರು ನನ್ನ ಕತೆಯನ್ನು ಮೆಚ್ಚಿಕೊಂಡಿದ್ದು ನನಗೆ ಆಶೀರ್ವಾದವೇ ಸರಿ. ತುಂಬಾ ಧನ್ಯವಾದಗಳು ಜಯಕ್ಕಾ.

sunaath said...

ಅದ್ಭುತವಾದ ಕಥೆ. ಯಾಕನ್ನುತ್ತೀರಾ? ಅನೇಕ ಕಾರಣಗಳಿವೆ. ಕನ್ನಡದ ಸಾಮಾನ್ಯ ಓದುಗಸಮುದಾಯಕ್ಕೆ ಬಹುಮಟ್ಟಿಗೆ ಅಪರಿಚಿತವಾದ ಒಂದು ಸಮುದಾಯದ ಕಥೆಯನ್ನು ವಾಸ್ತವ ಮೀರದಂತೆ ತೋರಿಸಿದ್ದೀರಿ. ಕಥೆಯಲ್ಲಿ ಬಳಸಲಾದ ಭಾಷೆ (--ಕೇವಲ ಸಂಭಾಷಣೆ ಅಲ್ಲ--) ವಸ್ತುನಿಷ್ಠವಾಗಿದೆ. ಈ ಜವಾರಿ ನುಡಿ ಓದುಗನಿಗೆ ಮುದ ನೀಡುತ್ತದೆ. ಕಥೆಯ ಅಂತವನ್ನು ಕೊನೆಯಲ್ಲಿ ಹೇಳದೇ, ಮೊದಲೇ ಸೂಚಿಸಿದ್ದು ಸೊಗಸಾಗಿದೆ. ಕಥಾನಾಯಕಿಗೆ ನೀಡಲಾದ ಹಿಂಸೆಯಾಗಲೀ, ಅವಳ ನೆರೆಯಲ್ಲಿರುವ ಕರುಣಾಳುಗಳು ನೀಡಿರುವ ಅನುಕಂಪವಾಗಲೀ ಎಲ್ಲಿಯೂ ಕಥೆಗೆ over ಆಗಿ ಚಿತ್ರಿತವಾಗಿಲ್ಲ. ಅಭಿನಂದನೆಗಳು, ಮೇಡಮ್. ಇನ್ನೂ ಹೆಚ್ಚೆಚ್ಚು ಕಥೆಗಳನ್ನು ನಮಗೆ ನೀಡಿರಿ, ಮೇಡಮ್.

Jayalaxmi said...

ಧನ್ಯೋಸ್ಮಿ ಕಾಕಾ. ನೀವು ಕತೆ ಓದಿದ್ರಿ ಅನ್ನೋದು ನನಗೆ ತುಂಬಾ ಖುಷಿಯ ಸಂಗತಿ. ಜೊತೆಗೆ ಈ
ಮೆಚ್ವುಗೆ ಬಲ ನೀಡಿದೆ. ಮತ್ತೊಮ್ಮೆ ಧನ್ಯವಾದಗಳು ಕಾಕಾ.

ನಾಗಶ್ರೀ said...

ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವ ಕಥೆ. ಸರಾಗವಾಗಿ ಓದಿಸಿಕೊಂಡು ಹೋಯಿತು.ಆದರೆ ಓದು ಎಬ್ಬಿಸುವ ಅಲೆಗಳು ಅಷ್ಟು ಬೇಗ ಶಾಂತವಾಗುವ ಹಾಗಿಲ್ಲ.ಗಾಢ ಅನುಭವವೊಂದನ್ನು ಕಟ್ಟಿಕೊಡುವ ಈ ಕಥೆ ಕಾಡುತ್ತದೆ. ಮನಸ್ಸಿಗೆ ಹತ್ತಿರವಾಗುತ್ತಿದೆ.

Jayalaxmi said...

ತುಂಬಾ ಧನ್ಯವಾದಗಳು ನಾಗಶ್ರೀ.

akshata said...

ನಿಮ್ಮ ಎಲ್ಲ ಕಥೆಗಳನ್ನೂ ಓದಿದ್ದೇನೆ ಜಯಾ. ಈ ಕಥೆ ಓದುವಾಗ ಕಣ್ಣು ಒದ್ದೆಯಾದವು. ತಮ್ಮ ಸಹನೆಯನ್ನು ಪರೀಕ್ಷೆಗೊಡ್ಡಿ ಬದುಕುವ ಬದುಕುತ್ತಿರುವ ಹೆಣ್ಣುಮಕ್ಕಳು ಸಾಕಷ್ಟಿದ್ದಾರೆ. ಅವರ ವ್ಯಥೆಯನ್ನ ಕಥೆಯ ಮೂಲಕ ತುಂಬ ಸಮರ್ಥವಾಗಿ ಓದುಗರೆದುರು ಇಟ್ಟಿದ್ದೀರಿ. ವನಮಲಾಳಂತೆ ಕಷ್ಟಕ್ಕೆ ಸಿಲುಕಿರುವ ಎಲ್ರಿಗೂ ಅಂಬಾ ಭವಾನಿಯವರಂತಹವರ ಆಸರೆ, ಸಹಾಯ ಸಿಗಬೇಕು.
ತುಂಬ ಮನಮುಟ್ಟುವಂತಹ ಕಥೆ ಜಯಾ. ಹೀಗೆ ಇನ್ನಷ್ಟು ಕಥೆಗಳು ನಿಮ್ಮ ಲೇಖನಿಯಿಂದ ಮೂಡಿ ಬರಲಿ ಎಂದು ಹಾರೈಸುತ್ತೇನೆ 😊

Jayalaxmi said...

ತುಂಬಾ ಧನ್ಯವಾದಗಳು ಅಕ್ಷತಾ.ಖಂಡಿತ ಪ್ರಯತ್ನಿಸುವೆ.

RAJENDRA PATIL said...

ಪದ್ಮಶ್ರೀಯವರ ಈ ಸುದೀರ್ಘ ವಿಮರ್ಶೆ ಕತೆಗಾರ್ತಿಯ ಅಂತರಾಳಕ್ಕೆ ಕನ್ನಡಿ ಹಿಡಿದಂತೆ.‌ಸುಶೀಲನ ಕ್ರೌರ್ಯದ ಕೆಲವು ಮುಖಗಳು ನಮ್ಮ‌‌ ಕಣ್ಮುಂದೆಯೂ ನಡೆದಿವೆ. ಅಂಥ ಗಂಡನ ಕ್ರೌರ್ಯ ಸಹಿಸದೆ ಪುಟ್ಟ ಮಗುವಿನೊಂದಿಗೆ ಊರು ಬಿಟ್ಟು ವಿಜಾಪುರಕ್ಕೆ ಬಂದ ಆ ಹೆಣ್ಣು ಮಗನಿಗೆ ವಿದ್ಯಾಭ್ಯಾಸ ಕೊಡಲು ಪಟ್ಟ ಪರಿಶ್ರಮ ನೋಡಲಾಗುತ್ತಿರಲಿಲ್ಲ.ಮಗ ವಿದ್ಯಾಭ್ಯಾಸ ಮುಗಿಸಿ‌ಉದ್ಯೋಗಕ್ಕೆ ಹತ್ತಿದ ಕೆಲದಿನಗಳಲ್ಲಿ ಅವಳು ಸಾವಿಗೀಡಾದ ನತದೃಷ್ಟೆ.

RAJENDRA PATIL said...

ರಾಜೇಂದ್ರ ಪಾಟೀಲ, ಲೇಖಕ, ಪತ್ರಕರ್ತ
ಹುಬ್ಬಳ್ಳಿ
9591323453