Tuesday, October 20, 2009

ಚಾಚುತ್ತಿವೆ ಕೈಗಳು.

ಬಾವಿಗೆ ಹೋಗಿ
ನೀರು ಸೇದಿ
ಜೋಡುಗೊಡವ ಹೊತ್ತು
ತರುವ ಶ್ರಮವಿಲ್ಲ
ಬಟನ್ ಒತ್ತಿದರೆ ಸಾಕು
ಉಕ್ಕುತ್ತದೆ ಗಂಗಾಜಲ
ಬಾವಿಯಿಂದ, ಸಂಪಿನಿಂದ
ಮನೆಯ ಪ್ರತಿ ಕೋಣೆಯಲ್ಲಿ
ಹೀಗಾಗಿಯೇ ಹುರಿಗಟ್ಟುತ್ತಿಲ್ಲ ಗಂಡಸರ ತೋಳು, ತೊಡೆ
ಹೆಂಗಸರ ಸೊಂಟ ಬಳಕುತ್ತಿಲ್ಲ
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ ಯಾಂತ್ರಿಕವಾಗಿ
*
ಆಧುನಿಕರು ನಾವು
ಪ್ರಪಂಚವೇ ಯಂತ್ರಮಯ
ನೋಡುವ ನೋಟ, ಆಡುವ ಮಾತು
ಕೇಳುವ ಹಾಡು, ಆಡುವ ಆಟ
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ ಯಾಂತ್ರಿಕವಾಗಿ
*
ಬರೆವ ಪತ್ರ, ಓದುವ ಸುದ್ದಿ
ಕುಡಿವ ನೀರು, ಮಾಡುವ ಅಡುಗೆ
ಹೆಪ್ಪುಗಟ್ಟುವ ಮೋಡ, ಸುರಿವ ಮಳೆ
ಬೆಳೆವ ಬೆಳೆ, ಕೋಯ್ಲಿನ ಕಲೆ
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ
ಯಾಂತ್ರಿಕವಾಗಿ
*
ಎಲ್ಲ ಎಲ್ಲವೂ ಯಂತ್ರಮಯ
ಇಲ್ಲವಾದರೆ ವ್ಯರ್ಥವಾಗುವುದಿಲ್ಲವೆ ಸಮಯ?
ಯಂತ್ರಗಳ ಒಡೆಯರು ನಾವು
ಆಳುತ್ತಿವೆ ಯಂತ್ರಗಳು
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ ಯಾಂತ್ರಿಕವಾಗಿ
***********

[ಮಗನಂತಿರುವ ಪುಟ್ಟ ಗೆಳೆಯನ ಕೋರಿಕೆಯ ಮೇರೆಗೆ ಬರೆದು, ಅವನಿಗೆ ಅಷ್ಟು ಇಷ್ಟವಾಗದೆ, ನನ್ನೊಂದಿಗೇ ಉಳಿದ ಕವನವಿದು. :-) ]

Wednesday, September 23, 2009

"ನಮ್ಮನ್ಯಾನವ್ರೆಲ್ಲ ಸೇರಿ ನನ್ನ ಖೊಕಾ ಅಂಗ್ಡಿ ಅನ್ಕೊಂಡು ಈ ಬಸ್ ಸ್ಟ್ಯಾಂಡ್^ನ್ಯಾಗ ನಿಂದರ್ಸಿಬಿಟ್ಟಾರ್ರಿ..."


'ಪುಟಾಣಿ ಪಾರ್ಟಿ' ಚಿತ್ರದ ಶೂಟಿಂಗ್ ಗೆ ಅಂತ ಹೋದಾಗ ಅಲ್ಲಿಯ ಒಂದು ಘಟನೆ ನನ್ನಲ್ಲಿಯ ಒಬ್ಬ ಹೇಡಿಯನ್ನು, ನನ್ನ ನಿಸ್ಸಹಾಯಕತೆಯನ್ನು ನನಗೆ ಪರಿಚಯಿಸಿ ನನ್ನ ಬಗ್ಗೆ ನನಗೇ ಬೇಜಾರು ಮೂಡುವಂತೆ ಮಾಡಿತು. ಜೊತೆಗೆ ಏನಾದರು ಒಳ್ಳೆಯದನ್ನು ಮಾಡುವುದು ಕೂಡಾ ಅಂದುಕೊಂಡಷ್ಟು ಸುಲಭವಲ್ಲ ಅನ್ನುವದನ್ನು ಮನದಟ್ಟು ಮಾಡಿಕೊಟ್ಟ ಪ್ರಸಂಗ ಅದು...

ಅಂದು ದಿನಾಂಕ ೧೩-೧೨-೨೦೦೮, ಸುಮಾರು ಮದ್ಯಾಹ್ನದ ೧೨ ಗಂಟೆಯ ಹೊತ್ತು. ಕಲಕೇರಿ ಅನ್ನುವ ಪುಟ್ಟ ಗ್ರಾಮದಲ್ಲಿ ಅಂದಿನ ನಮ್ಮ ಶೂಟಿಂಗ್ ಇತ್ತು. ನನಗಿನ್ನೂ ಟೈಮ್ ಇತ್ತಾದ್ದರಿಂದ ಓದುವುದೂ ಬೇಜಾರಾಗಿ, ಕುಳಿತ ಕೋಣೆಯಿಂದ ಸುಮ್ಮನೆ ಹೊರಗೆ ದೃಷ್ಟಿ ಹಾಯಿಸಿದೆ. ಎದುರಿಗೆ ಊರ ಜನರಿಂದ ಬಸ್ ಸ್ಟ್ಯಾಂಡ್ ಎಂದು ಕರೆಸಿಕೊಳ್ಳುವ, ಒಂದು ದೊಡ್ಡ ಆಲದ ಮರ, ಪಂಚಾಯಿತಿ ಆಫೀಸ್ ಮತ್ತು ನಾಲ್ಕಾರು ಸಣ್ಣ ಸಣ್ಣ ಟೀ, ಬೀಡಾ ಅಂಗಡಿಗಳಿರುವ, ಒಂದು ಬಸ್ಸು ಬಂದರೆ ಇನ್ನೊಂದು ಬಸ್ಸು ಸ್ವಲ್ಪ ದೂರವೇ ನಿಂತು ಮೊದಲಿನ ಬಸ್ಸು ಹೋದ ನಂತರವೇ ಪ್ರದೇಶವನ್ನು ಪ್ರವೇಶಿಸಬಹುದಾದಂತಹ ಜಾಗ ಕಾಣಿಸುತ್ತಿತ್ತು.

ಅಲ್ಲಿಯ ಒಂದು ಬೀಡಾದ ಖೊಕಾ ( ಕಟ್ಟಿಗೆಯ ಫಳಿಗಳಿಂದ ಮಾಡಿದ )ಅಂಗಡಿಯ ಪಕ್ಕ ಹೆಂಗಸೊಬ್ಬಳು ಮೈ ಮೇಲಿನ ಸೀರೆಯ ಸೆರಗನ್ನು ಕೈಯ್ಯಾರೆ ಬಿಸುಟು, ಕುಪ್ಪಸದ ಗಂಟನ್ನು ಬಿಚ್ಚಿ ಮತ್ತೆ ಹಾಕಿಕೊಳ್ಳುವುದು, ಕೂದಲು ಕೆದರಿ ತಲೆ ತೊಳೆದುಕೊಳ್ಳುವವಳಂತೆ ಕೂದಲನ್ನು ಮುಂದೆ ಹಾಕಿಕೊಂಡು ಮತ್ತೆ ಹಿಂದಕ್ಕೆಳೆದುಕೊಂಡು ಸೆರಗನ್ನು ಹೊದ್ದುಕೊಳ್ಳುವುದು ಕಾಣಿಸಿತು!

ನನ್ನೊಳಗಿನ ಹೆಣ್ಣು ಕ್ಷಣಕ್ಕೆ ಅನುಭವಿಸಿದ ಲಜ್ಜೆ, ಅವಮಾನ ಮರು ಕ್ಷಣ ಮಾಯವಾಗಿ ವಾಸ್ತವವನ್ನು ನೆನಪಿಸಿ ಹೆಣ್ಣುಮಗಳೆಡೆಗೆ ಮರುಕವೊಂದು ಮೂಡಿತು. ಅಲ್ಲೇ ಆಟ ಆಡುತ್ತಿದ್ದ ಹುಡುಗನೊಬ್ಬನನ್ನು ಕರೆದು ಅವಳ ಬಗ್ಗೆ ವಿಚಾರಿಸಿದೆ.

" ಅಕೀರ್ಯಾ? ಅಕಿ ಹೆಸರು ಬಸವ್ವ ಅಂತರಿ, ಅಕಿಗೆ ಹುಚ್ಚ ಹಿಡದೈತ್ರಿ, ಅದಕ ಅವ್ರ ಮನ್ಯಾಗ ಅಕಿನ್ನ ಸೇರ್ಸೂದಿಲ್ರೀ. ಇಲ್ಲೇ ಬಸ್ ಸ್ಟ್ಯಾಂಡ್ ನ್ಯಾಗ ಇರ್ತಾಳ್ರೀ " ಅಂದ.

"ಅಕಿನ್ನ ಇಲ್ಲಿ ಕರ್ಕೊಂಡ್ ಬರ್ತೀ? " ಆಗೋಲ್ಲ ಅನ್ನುವ ಉತ್ತರವನ್ನು ನಿರೀಕ್ಷಿಸುತ್ತಲೇ ಕೇಳಿದೆ.

ಅದಕ್ಕೆ ವಿರುದ್ಧವಾಗಿ ಹುಡುಗ ಹೂಂ ಎಂದವನೇ "ಬುರ್ರ್ ಬುರ್ರ್ ಬುರ್ರ್" ಎಂದು ತನ್ನ ಕಲ್ಪನಾ ವಾಹನ ಸವಾರಿ ಮಾಡಿ ಅವಳನ್ನು ಕರೆ ತಂದ.

" ಯಾಕ? ಯಾರ ಕರೀತಾರ?" ಅನ್ನುತ್ತಲೇ ಬಂದ ಬಸವ್ವಳಿಗೆ ನನ್ನೆಡೆ " ಇವರು " ಎಂಬಂತೆ ಕೈ ಮಾಡಿ ಹೊರಟ ಹುಡುಗನನ್ನು ಕೇಳಿದೆ.

" ನಿನಗ ಹೆದ್ರಕಿ ಆಗ್ಲಿಲ್ಲ ಅಕಿನ್ನ ಕರ್ಕೊಂಡ್ ಬರಾಕ?"

" ಇಲ್ರೀ ಅಕಿ ಸಣ್ಣ ಹುಡುಗೂರ್ಗಿ ಏನೂ ಮಾಡಂಗಿಲ್ಲರೀ, ಉಲ್ಟಾ ಜೀವ ಮಾಡ್ತಾಳ್ರೀ , ಭಾಳ ಛೊಲೊ ಅದಾಳ್ರೀ " ಅಂದವನೇ ತನ್ನ ಕಲ್ಪನಾ ವಾಹನವನ್ನೇರಿ ಜಾಗ ಖಾಲಿ ಮಾಡಿದ.

ನಾನು ಬಸವ್ವಳೆಡೆಗೆ ತಿರುಗಿ ಕೇಳಿದೆ. "ಏನಾರ ತಿಂತೀ ಏನ್ ಬಸವ್ವ?"

" ಏನಂದ್ರೀ?" ನಾನು ಅವಳೊಡನೆ ಮಸ್ತಿ ಮಾಡ್ತಿದೀನಿ ಅನಿಸಿರಬೇಕು ಅವಳಿಗೆ. ಆದ್ದರಿಂದ ಒಂದು ನಿರ್ಲಕ್ಷ್ಯದೊಂದಿಗೆನೆ ಕೇಳಿದವಳು ಪಟ್ಟನೆ ವಿಚಿತ್ರ ಉನ್ಮಾದದಿಂದ ಕಣ್ಣರಳಿಸಿ ನನ್ನನ್ನು ಹೆದರಿಸುವಂತೆ ನೋಡಿದಳು.

ನೋಟಕ್ಕೆ ಸಣ್ಣಗೆ ನನ್ನ ಹೃದಯ ನಡುಗಿದ್ದು ಸುಳ್ಳಲ್ಲ. ಆದರೂ ಅವಳು ಹೆದರಿಸಿದ್ದು ಗಮನಿಸಿಯೇ ಇಲ್ಲವೆಂಬಂತೆ ಆತ್ಮೀಯ ದನಿಯಲ್ಲಿ ಮತ್ತೆ ಕೇಳಿದೆ.

"ಏನಾರ ತಿನ್ನಾಕ ಕೊಡಸ್ಲಿ?'

"ನೀವು ನನಗ ತಿನ್ನಾಕ ಕೊಡಸ್ತೀರಿ? ಯಾಕ್ರೀ?"

ಅವಳ ಮಾತಿಗೆ ಏನು ಹೇಳಬೇಕೋ ತಿಳಿಯದೆ " ಅಲ್ಲ, ನಿನಗ ಹಶೀವ್ಯಾಗಿದ್ರ ಅಂತ ಕೇಳ್ದೆ.." ಅಂದೆ.

ನಾನು ಹೆದರದೆ,ಅವಳನ್ನು ಛೇಡಿಸದೆ, ಸರಳವಾಗಿ ಮಾತಾಡಿಸಿದ್ದು ಅವಳಿಗೆ ನನ್ನಲ್ಲಿ ಭರವಸೆ ಮೂಡುವಂತೆ ಮಾಡಿರಬೇಕು. ಮೃದು ದನಿಯಲ್ಲಿ ಕೇಳಿದಳು.

" ಏನ್ ಕೊಡಸ್ತೀರಿ? "

" ಏನ್ ಬೇಕು ನಿನಗ ? "

"ನನಗ ಮಂಡಕ್ಕಿ ಮತ್ತ ಚಾ ಬೇಕ್ರಿ. ಕೊಡಸ್ತೀರಿ? "

ನಾನು ತಕ್ಷಣ "ಹೂಂ" ಅಂದೆ. ಕಾರಣ ನಾ ಕುಳಿತ ಕೋಣೆಯ ಪಕ್ಕದಲ್ಲೇ ಟೀ, ಮಂಡಕ್ಕಿ, ಭಜಿ ಸಿಗುವಂಥ ಸಣ್ಣ ಅಂಗಡಿಯೊಂದಿತ್ತು. ಅವಳೇನಾದರೂ ಊಟ ಕೇಳಿದ್ದರೆ ಇತ್ತು ನನ್ನ ಫಜೀತಿ! ಸಧ್ಯ ಅವಳ ಕೋರಿಕೆ ನನ್ನ ನಿಲುಕಿಗಿತ್ತಾದ್ದರಿಂದ ಕುಳಿತಲ್ಲಿಂದಲೇ ಅಂಗಡಿಯವರಿಗೆ ಮಂಡಕ್ಕಿ, ಟೀ ತರಲು ಹೇಳಿದೆ.


ಅಷ್ಟರಲ್ಲಿ ತನ್ನ ಶಾಟ್ ಮುಗಿಸಿ ಗೆಳತಿ ಭವಾನಿ ನಾವು ಕುಳಿತಲ್ಲಿಗೆ ಬಂದವಳು ಕಣ್ಣಲ್ಲೇ ಪ್ರಶ್ನಿಸಿದಳು " ಏನ್ ನಡೀತಿದೆ ಇಲ್ಲಿ? " ಎಂಬಂತೆ. ನಂತರ ಬಸವ್ವಳ ಬಗ್ಗೆ ಅವಳಿಗೂ ಕುತೂಹಲ ಉಂಟಾಗಿರಬೇಕು, ಕುಳಿತುಕೊಂಡಳು. ಟೀ ಅಂಗಡಿಯಿಂದ ಮಂಡಕ್ಕಿ ತಂದು ಕೊಟ್ಟರು, ಹಾಲಿಲ್ಲ ಆದ್ದರಿಂದ ಟೀ ಇಲ್ಲ ಎನ್ನುವ ಸಮಾಚಾರದೊಡನೆ. ನಾನು ಬಸವ್ವಳಿಗೆ ಮಂಡಕ್ಕಿ ತಿನ್ನಲು ಹೇಳಿದೆ. ಆಗ

"ನೀವೂ ತೊಗೋರಿ" ಬಸವ್ವ ನಮ್ಮನ್ನು ಆಗ್ರಹಿಸಿದಳು!!

ಅಚ್ಚರಿಯೊಡನೆ ಅವಳ ಸೌಜನ್ಯ 'ಇವಳು ನಿಜಕ್ಕೂ ಹುಚ್ಚಿಯಾ!?' ಎಂದು ಯೋಚಿಸುವಂತೆ ಮಾಡಿತು ನನ್ನನ್ನ. ನಾನು ಅವಳ ಎದುರಿಗೆ ಪೇಪರ್ನಲ್ಲಿ ಹಾಕಿಟ್ಟ ಮಂಡಕ್ಕಿಯಲ್ಲಿ ಮುಷ್ಟಿಯಷ್ಟು ತೆಗೆದುಕೊಂಡೆ. ಭವಾನಿ ಸುಮ್ಮನೆ ಕುಳಿತಿದ್ದಳು. ಬಹುಶಃ ಭವಾನಿ ಸಂಕೋಚ ಪಡುತ್ತಿದ್ದಾಳೆ ಎನಿಸಿರಬೇಕು ಬಸವ್ವಗೆ.

"ನೀವೂ ತಿನ್ರೆಲಾ, ತೊಗೋರಿ" ಎನ್ನುತ್ತಾ ಮುಟಗಿ( ಮುಷ್ಟಿ) ತುಂಬಿ ಭವಾನಿಗೆ ಕೊಡ ಹೋದಳು. ಭಾವಾನಿ ಹಿಂಜರಿಯುತ್ತಿದ್ದುದನ್ನು ಕಂಡು,

" ಬಸವ್ವಾ, ನಾ ಕೊಡ್ತೆನಿ ಬಿಡು ಅವ್ರಿಗೆ. ನೀ ತಿನ್ನು" ಎಂದೆ.

"ಯಾಕ್ರೀ ನಂ ಕೈಯಾಗಿಂದ ಅವ್ರು ತಿನ್ನಲ್ಲೆನ್ರಿ? ನಾವು ಲಿಂಗಾಯತರ್ರಿ, ಸಣ್ಣ ಮಂದಿ ಅಲ್ಲ ತೊಗೋರಿ! " ಇವಳು ಹುಚ್ಚಿ ಅನ್ನೋದು ಮತ್ತೆ ಅನುಮಾನವಾಗತೊಡಗಿತು ನನಗೆ.

"ಇಲ್ಲ ಬಸವ್ವಾ, ಅವ್ರು ಈಗರ ನಾಷ್ಟಾ ಮಾಡ್ಯಾರ, ಅದಕ ಒಲ್ಲ್ಯಾ ಅನ್ನಾಕತ್ಯಾರ ಅಷ್ಟ, ನೀ ತಿನ್ನು ".

ನಂಬಿಕೆ ಬರದ ಮುಖಭಾವದೊಡನೆ ಬಸವ್ವ ಮಂಡಕ್ಕಿ ತಿನ್ನುತ್ತಲೇ ಮಾತನಾಡಲು ಶುರು ಮಾಡಿದಳು.

"ನಮ್ಮನ್ಯಾನವ್ರೆಲ್ಲ ಸೇರಿ ನನ್ನ ಖೊಕಾ ಅಂಗ್ಡಿ ಅನ್ಕೊಂಡು ಈ ಬಸ್ ಸ್ಟ್ಯಾಂಡ್^ನ್ಯಾಗ ನಿಂದರ್ಸಿಬಿಟ್ಟಾರ್ರಿ..."

ಮೈ ಮರೆತು ಕೂತವರ ಹಿಂದಿನಿಂದ ಬಂದು 'ಅವ್ಕ್!' ಅಂದವರ್ಯಾರು ಎಂದು ಬೆಚ್ಚಿ, ಬೆರಗಿನಿಂದ ನೋಡುವಂತೆ ಅವಳನ್ನು ನೋಡಿದೆ. ದೊಡ್ಡ ವಿದ್ವಾಂಸರು, ಸಾಹಿತಿಗಳು ಉಪಮೆಯವಾಗಿ ಇಂಥ ಪದಗಳನ್ನು ಬಳಸಿ ಮತ್ತು ಇಂಥ ಅದ್ಭುತ ಉಪಮೆಯ ಹೊಳೆದಿದ್ದಕ್ಕಾಗಿ ತಮ್ಮೆ ಬಗ್ಗೆ ತಾವೇ ಹೆಮ್ಮೆಪಡುವ ಸಂಗತಿ ನೆನಪಾಗಿ ಬಸವ್ವನೊಡನೆ ಹೋಲಿಸಿತು ಮನ. ಒಬ್ಬ 'ಹುಚ್ಚಿ' ಎನ್ನುವ ಬಿರುದು ಹೊತ್ತ (ಕೆಲವೊಮ್ಮೆ ಎಂಥಾ ಕ್ರೌರ್ಯ ತುಂಬಿದ ಪದವಲ್ಲವಾ ಇದು!! ಎನಿಸುತ್ತದೆ) ಹಳ್ಳಿಯ ಹೆಣ್ಣುಮಗಳೊಬ್ಬಳ ಬಾಯಲ್ಲಿ ಸರಳವಾಗಿ ಬಂದ ಮಾತು!!

"ಏನ್ ಹಂಗಂದ್ರ?" ಕೇಳಿದೆ ನಾನು.

"ಮತ್ತ ಅಕಿ ಅದಾಳಲ್ರೀ ಅಕಿ ಮನ್ಯಾಗ ಇರು ಅಂದಳ್ರೀ, ತಲಿ ಬಾಚೂದು.. ಜಳಕಕ್ಕ ಬಿಸ್ನೀರ್ ಕಾಯ್ಸಿ ಕೊಡ್ತಾಳ್ರೀ...ಅಡಿಗೀನೂ ಚೊಲೊನ ಮಾಡ್ತಾಳ ಬಿಡ್ರಿ..."

ಅವಳ ಮಾತಿನ ತಲೆ ಬುಡ ಏನೂ ತಿಳೀತಾ ಇಲ್ಲ ನನಗೆ. ಈಗ ಅವಳದು ಅಸ್ವಸ್ಥ ಮನಸು ಅನಿಸಿತು .

ಕೇಳಿದೆ," ಅಕಿ ಅಂದ್ರ ಯಾರು ? ಯಾರಿಗೆ ಬಿಸ್ನೀರ್ ಕಾಯ್ಸಿ ಕೊಡೂದು...? ನಿನಗ?"

ಹೂತು ಹೋದ ಧ್ವನಿಯಲ್ಲಿ ಹೇಳಿದಳು "ನನಗಲ್ರೀ, ನನ್ನ ಗಂಡಗ್ರಿ..."

ಅನುಮಾನಗೊಂಡು ಕೇಳಿದೆ ಮತ್ತೆ " ಯಾರ್ ಅಕಿ? "

"ಅಕೀರ್ಯಾ ಅಕಿನ್ ಹೆಸ್ರು ..... ಅಂತ್ರಿ "(ಕ್ಷಮಿಸಿ, ಬಸವ್ವ ಹೇಳಿದ ಹೆಣ್ಣಿನ ಹೆಸರನ್ನು ಮರೆತಿದ್ದೇನೆ.ಬೇರೆ ಹೆಸರು ಬಳಸಲು ಇಷ್ಟವಿಲ್ಲ)

" ನಿನಗೆನಾಗ್ಬೇಕು? "

"ಅಕಿ ನನ್ನ 'ಸವತಿ'ರಿ..." ಮಾತು ಹೇಳುವಾಗ ಕ್ಷೀಣವಾದ ಬಸವ್ವನ ದನಿ ಇನ್ನೂ ಮಾರ್ದನಿಸುತ್ತಲೇ ಇದೆ. ಅವಳ ಕಣ್ಣಲ್ಲಿಯ ನೋವು...

ಅವಳ ಹುಚ್ಚಿಗೆ ಕಾರಣ ಇನ್ನೊಬ್ಬಾಕೆ! ಅವಳಿಂದಾಗಿ ಇವಳಿಗೆ ದುರ್ದೆಶೆ. ನಾನು ಕಂಡು ಕೇಳರಿಯದ ಹೆಣ್ಣಿನ ಬಗ್ಗೆ ಜಿಗುಪ್ಸೆ ಮೂಡಿತು.

"ಅಕಿ ಹೊರಗ ಹಾಕಿದ್ಲ ನಿನ್ನ? "

" ಅಲ್ರೀ ಅಕಿ ಅಲ್ರಿ, ನನ್ನ ಮಕ್ಕಳು ನನ್ನ ತಂದು ಇಲ್ಲಿ ನಿಂದರ್ಶ್ಯಾರಿ."

ಇನ್ನೂ ಇನ್ನೊಬ್ಬ ಹೆಣ್ಣಿನ ಬಗ್ಗೆ ಬೇಸರಗೊಂಡಿದ್ದ ನನ್ನ ಮನಸ್ಸು ಬಸವ್ವನ ಮಾತುಗಳನ್ನು ಸ್ವೀಕರಿಸಲು ಒಪ್ಪುತ್ತಿಲ್ಲ. ಜೊತೆಗೆ ಹೆತ್ತ ಮಕ್ಕಳೇ ತಾಯಿಯನ್ನು...

ಬಸವ್ವ ಮತ್ತೆ ಉನ್ಮಾದಗೊಂಡಿದ್ದಳು. ಸೆರಗನ್ನು ಎದೆಯ ಮೇಲಿಂದ ಹಿರಿದೆಳೆದು ಕುಪ್ಪಸದ.. " ಬಸವ್ವಾ! ಏನ್ ಮಾಡಾಕತ್ತಿ? ಹಾಕ್ಕೋ ಸೆರಗ್ ಮೈಮ್ಯಾಲೆ " ಅನುನಯದದೊಂದಿಗೆ ಒಂದು ಸಣ್ಣ ಗದರಿಕೆಯೂ ಇತ್ತು ನನ್ನ ಧ್ವನಿಯಲ್ಲಿ. ನನ್ನ ಮುಖವನ್ನು ನಿಟ್ಟಿಸಿದ ಬಸವ್ವ,

"ಇಲ್ರಿ ನಾ ಎಲ್ಲೆ ಹಂಗ ಮಾಡೀನ್ರಿ..." ಎನ್ನುತ್ತಾ ಮತ್ತೆ ಸೆರಗನ್ನು ಹೊದ್ದುಕೊಂಡಳು. ಕದ್ದು ಮಣ್ಣು ತಿನ್ನುತಿದ್ದ ಮಗುವೊಂದು ಅಮ್ಮನ ಕೈಯಲ್ಲಿ ಸಿಕ್ಕಿಬಿದ್ದ ರೀತಿಯಲ್ಲಿ. ಅವಳು ನನ್ನ ಮಾತು ಕೇಳಿದ್ದು, ನನ್ನನ್ನು ಅವಳ ಮನಸು ಒಪ್ಪಿಕೊಂಡಿದೆ ಎಂಬ ಭಾವ, ನನ್ನಲ್ಲಿ ಧೈರ್ಯ ಮೂಡಿಸಿತು.

" ಹಂಗೆಲ್ಲ ನಡಬಾಜಾರನ್ಯಾಗ ಮಾಡಬಾರದು ಬಸವ್ವ,ಎಷ್ಟ ಮಂದಿ ಇರ್ತಾರ ಇಲ್ಲಿ, ಎಲ್ಲಾರೂ ನಿನ್ನ ನೋಡಿ ನಗಂಗಿಲ್ಲ? ಇನ್ ಮುಂದ ಹಂಗೆಲ್ಲ ಮಾಡಬ್ಯಾಡ ತಿಳೀತ? " ಮಾತಾಡಾಡುತ್ತಲೇ ನನ್ನ ಮಾತುಗಳು ನನಗೇ ಬಾಲಿಶ ಅನಿಸತೊಡಗಿದವು.

"ಎಷ್ಟ್ ಮಕ್ಕಳು ನಿನಗ? "

" ನನಗ ಇಬ್ಬ್ರು ಗಂಡಮಕ್ಕಳದಾರ್ರಿ. "

" ಏನ್ ಮಾಡ್ತಾರ? "

ಉತ್ತರವಿಲ್ಲ. ಬದಲಿಗೆ ಫಿರ್ಯಾದಿ ಹೇಳುವವಳಂತೆ ಅಳು ದನಿಯಲ್ಲಿ " ಅಂವಾ ನನಗ ಭಾಳ ಹೊಡೀತಾನ್ರಿ " ಅಂದಳು.

" ಯಾರು ಮಗಾನ? "

"ಅಲ್ರೀ ನನ್ ಗಂಡ್ ರಿ. " ಇದನ್ನು ಹೇಳುವಾಗ ಅವಳ ಮುಖದಲ್ಲಿ ತಿರಸ್ಕಾರ ಭಾವ. ನಾನು ಭವಾನಿ ಮುಖ ಮುಖ ನೋಡಿಕೊಂಡೆವು. ನಮ್ಮಿಬ್ಬರಿಗೂ ಅನಿಸಿದ್ದು ಎರಡನೆಯ ಹೆಂಡತಿ ಮಾತು ಕೇಳಿ ಅವಳ ಗಂಡ ಅವಳನ್ನು ಹಿಂಸಿಸಿದ್ದಾನೆ ಅಂತ.

ಭವಾನಿ ಅದನ್ನು ಕೇಳಿಯೂ ಆಯಿತು. " ಯಾಕೆ? ನಿನ್ ಗಂಡ ಇನ್ನೊಬ್ಬಳ ಮಾತು ಕೇಳಿ ನಿನ್ನ ಹೊಡೀತಾನಾ ? ಅವ್ಳು ಹೇಳಿ ಕೊಡ್ತಾಳಾ ? "

" ಇಲ್ರಿ, ಅಕಿ ಚೊಲೋ ಅದಾಳ್ರಿ, ಇವ್ನ ಹೊಡೀತಾನ್ರಿ ನನಗ"

" ಯಾಕಂತೆ? ಏನ್ ರೋಗ ಅವ್ನಿಗೆ? " ಭವಾನಿ ಕೈಲಿ ಬಸವ್ವನ ಗಂಡ ಆಗ ಸಿಕ್ಕಿದಿದ್ರೆ ಅನುಮಾನ ಇಲ್ಲದೆ ನಾಲ್ಕು ತಟ್ಟಿಬಿಟ್ಟಿರೋಳು ಅವನ್ನ! ಅವನ ಪುಣ್ಯ, ಭವಾನಿ ಮತ್ತೆ ಶಾಟ್ ಗೆ ಅಂತ ಹೋದ ಮೇಲೆ ಬಂದ ಮಹಾನುಭಾವ .

*
ಅಂದು ಶೂಟಿಂಗ್ ಮುಗಿಸಿ ಧಾರವಾಡಕ್ಕೆ ಬರ್ತಾ ಮೆದುಳಿನ ಪದರು ಪದರಿನಲ್ಲೂ ಬಸವ್ವ...
ಅವಳ ಗಂಡ ಅನಿಸಿಕೊಂಡ ಪಾಪಿ, ಮುಂದೆ ಸ್ವಲ್ಪ ಹೊತ್ತಿನಲ್ಲೇ ಉಣ್ಣೆಗಾಗಿ ತಾನು ಬೆಳೆಸುತ್ತಿದ್ದ ಎರಡು ಕುರಿಗಳನ್ನು ಹೊಡೆದುಕೊಂಡು ನಾವು ಕುಳಿತ ಜಾಗದ ಮುಂದಿನಿಂದ ಹಾಯ್ದು ಹೋದ. ಅಷ್ಟರಲ್ಲಿ ಬಸವ್ವ ಎದ್ದು ಹೋಗಿ ಸ್ವಲ್ಪ ದೂರದಲ್ಲಿ ಮತ್ತೆ ಎಥಾಃ ಪ್ರಕಾರ ತಲೆತೊಳೆದುಕೊಳ್ಳುವುದರಲ್ಲಿ ಮಗ್ನಳಾಗಿದ್ದಳು! ಅವಳ ಗಂಡ ಅವಳ್ಯಾರೋ ಗೊತ್ತೇ ಇಲ್ಲ ಎಂಬಂತೆ, ತೀರ ಅಪರಿಚಿತನಂತೆ ಹೋದದ್ದು ನನಗೆ ಆಶ್ಚರ್ಯ ತರಿಸಿತ್ತು. ಆದರೆ ಬಸವ್ವ ತಲೆ ತೊಳೆಯುವುದನ್ನು ಬಿಟ್ಟು ಅವನನ್ನೇ ದುರುಗುಟ್ಟುತ್ತಿದ್ದಳು! ನಿಮಿಷಗಳ ನಂತರ ಮತ್ತೆ ಮಾಮೂಲಿನ ಕಾಯಕ...

ಅಲ್ಲಿಯ ಜನರನ್ನು ವಿಚಾರಿಸಿದೆ, ಬಸವ್ವನ ಗಂಡ ಫಾರೆಸ್ಟ್ ಡಿಪಾರ್ಟ್^ಮೆಂಟ್^ನಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಾನೆ. ರಿಟೈರ್^ಮೆಂಟ್ ಆಗಲು ಇನ್ನೂ ತುಂಬಾ ವರ್ಷ ಬೇಕು. ಅವನು ನಿಜಕ್ಕೂ ತುಂಬಾ ಕ್ರೂರಿಯಾಗಿದ್ದ. ಒಂದೊಮ್ಮೆ ಉತ್ತಮ ಸ್ಥಿತಿಯಲ್ಲಿದ್ದ ಬಸವ್ವ ತನ್ನ ನಡತೆಯಿಂದಾಗಿ ಊರ ಜನರಿಂದ ಭೇಷ್ ಅನಿಸಿಕೊಂಡಾಕೆ. ಆದರೆ ಸಣ್ಣಪುಟ್ಟದಕ್ಕೂ ಬೇಗ ಮನಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದಳು. ನಾಲ್ಕು(?) ಮಕ್ಕಳು ಬಸವ್ವಗೆ. ಎರಡು ಗಂಡು, ಎರಡು ಹೆಣ್ಣಾ? ನನಗೆ ಈಗ ಸರಿ ನೆನಪಿಲ್ಲ... ಗಂಡನ ದೌರ್ಜನ್ಯ ಸಹಿಸಿ ಬಾಳುವೆ ಮಾಡುತ್ತಿದ್ದ ಬಸವ್ವನ ಸೂಕ್ಷ್ಮತೆ ಅವಳ ಗಂಡನಿಗೆ ಬೋರು ಹೊಡೆಸಿತಂತೆ, ಅದಕ್ಕೆ ಅವನು ಇನ್ನೊಂದು ಮದುವೆ ಮಾಡಿಕೊಂಡು ಹೆಂಡತಿಯನ್ನು ಮನೆಗೆ ಕರೆತಂದ! ಮೊದಲೇ ಸೂಕ್ಷ್ಮ ಮನಸಿನ ಬಸವ್ವಳಿಗೆ ಈಗ ಆದ ಆಘಾತವನ್ನು ಊಹಿಸಿ ನೀವು. ಅತ್ತಳು, ಗೋಗರೆದಳು, ಕಾಲಿಗೆ ಬಿದ್ದಳು, ಅವಳ ಆರ್ತತೆಗೆ ಕರಗಬೇಕಾಗಿದ್ದ ಹೃದಯ ಇನ್ನೂ ಕಲ್ಲಾಗಿ ಹೊಡೆತ ಬಡೆತ ಇನ್ನೂ ಹೆಚ್ಚಾಯಿತು. ಒಮ್ಮೆ ಕೊಲ್ಲಲೂ ಪ್ರಯತ್ನಿಸಿದನಂತೆ ಪುಣ್ಯಾತ್ಮ! ಮಾತನ್ನು ಅಲ್ಲಿಯ ಜನ ಹೆದರುತ್ತಲೇ ಪಿಸುದನಿಯಲ್ಲಿ ಹೇಳಿದ್ದು ಅವರಿಗೂ ಅವನ ಬಗ್ಗೆ ಇದ್ದ ಭಯವನ್ನು ನಿಚ್ಚಳ ಪಡಿಸುತ್ತಿತ್ತು. ಬಸವ್ವ ಹೊಡೆತ ತಿನ್ನುವಾಗಲೆಲ್ಲ ಅದನ್ನು ನೋಡಲಾಗದೆ ಇನ್ನೊಂದು ಹೆಣ್ಣು, ಬಸವ್ವನ ಸವತಿ ಎನಿಸಿಕೊಂಡಾಕೆ ಬಿಡಿಸಿಕೊಳ್ಳಲು ಹೋಗಿ ತಾನೂ ಪೆಟ್ಟು ತಿನ್ನುತ್ತಿದ್ದಳಂತೆ! ತನ್ನ ಗಂಡನಿಗೆ ತಿಳಿಯದಂತೆ ಬಸವ್ವಗೆ ಊಟ ಕೊಡುತ್ತಿದ್ದಳಂತೆ. ಹೀಗಾಗಿಯೇ ಬಸವ್ವಗೆ ಅವಳನ್ನು ಕಂಡರೆ ದ್ವೇಷವಿಲ್ಲ.

ಯಾರಿಗಾದರು ದ್ವೇಷ ಇರಬೇಕಾದರೂ ಯಾಕೆ ಅಲ್ಲವೆ? ಅಂದರೆ ನನ್ನ ಮಾತಿನ ಅರ್ಥ ಸಂಗಾತಿ ತನ್ನ ಜೊತೆಯನ್ನು ಬಿಟ್ಟು ತಾನಾಗಿ ಇನ್ನೊಂದು ದಾರಿ ನೋಡಿಕೊಂಡಾಗ ನಿಜವಾಗಿ ಶಪಿಸಬೇಕಾದುದು ದಾರಿಗೋ? ಸಂಗಾತಿಗೋ? ತಪ್ಪು ಅಥವಾ ಜೊತೆಯನ್ನು ತೊರೆದುದು ದಾರಿಯಲ್ಲ ಅಲ್ಲವೇ?

ಮಕ್ಕಳು ಬೆಳೆದಂತೆಲ್ಲ ಸದಾ ಅಳುವ, ಅಪ್ಪನನ್ನು ಗೋಗರೆದು ಬೇಡುವ ಅಮ್ಮ ಬೇಡವಾದಳು. ಅವಳು ಮನೆಯಲ್ಲಿದ್ದರೆ ತಮಗೆ ಯಾರೂ ಹೆಣ್ಣು ಕೊಡರು ಎಂದು ಆಕೆಯನ್ನು ಮನೆಯಿಂದ ಆಚೆ ನೂಕಿದರು. ವರುಷಗಳಿಂದ ಗಂಡನ ದೌರ್ಜನ್ಯ ಸಹಿಸಿ ಇನ್ನೂ ಬದುಕಿಗಾಗಿ ಹಂಬಲಿಸುತ್ತಿದ್ದ ಬಸವ್ವ ಆಘಾತವನ್ನು ಸಹಿಸಲಾಗದೆ ಅವಧೂತಳಾದಳು!!! (ಕ್ಷಮಿಸಿ ಅವಧೂತದ ಅರ್ಥವನ್ನು ಬಲ್ಲೆ ನಾನು. ಆ ಪದವನ್ನು ನಾನಿಲ್ಲಿ ವ್ಯಂಗ್ಯವಾಗಿ ಹೇಳಿದುದು.)

ಒಬ್ಬ ಮಗನಿಗೆ ಮದುವೆಯಾಗಿದೆ. ಇನ್ನೊಬ್ಬ ಟ್ರಕ್ ಕ್ಲೀನರ್ ಆಗಿ ಊರು ಅಲೆಯುತ್ತಾನೆ. ಅವನಿಗೂ ತಾಯಿ ಮನೆಯಲ್ಲಿರುವುದು ಸಮ್ಮತವಿಲ್ಲ. ಊರ ಜನರೇ ಬಸವ್ವಗೆ ಊಟ, ಉಡುಗೆ ಕೊಡುವುದರ ಮೂಲಕ ಅವಳನ್ನು ಪೊರೆಯುತ್ತಿದ್ದಾರೆ. ರಾತ್ರಿ ಮಲಗಲು ತಮ್ಮ ಮನೆಯಂಗಳದಲ್ಲಿ ಜಾಗ ಕೊಡುತ್ತಾರೆ.

*

ಹೋಟೆಲ್ಲಿನ ರೂಮು ಸೇರಿ ಅಳು ತಡೆಯಲಾಗದೆ ಗಟ್ಟಿಯಾಗಿ ಅತ್ತುಬಿಟ್ಟೆ. ನಂತರ ಬಸವಳನ್ನು ನನ್ನ ಜೊತೆ ಕರೆ ತಂದರೆ ಹೇಗೆ ಅನ್ನುವ ವಿಚಾರ ಬಂದು ಮನಸಲ್ಲಿ ಗಟ್ಟಿಗೊಳ್ಳತೊಡಗಿತು. ರಾತ್ರಿ ಹನ್ನೊಂದು ಗಂಟೆಗೆ ಮನೆಗೆ (ಬೆಂಗಳೂರು) ಫೋನಾಯಿಸಿದೆ. ಬಸವಳನ್ನು ಕರೆ ತರುವ ವಿಷಯದ ಕುರಿತು ಮಾತಾಡಿದೆ.
ಪಾಪ, ಪಾಟೀಲರು ನಿದ್ದೆಯಲ್ಲಿದ್ದರು. "ನಾಳೆ ಇದರ ಬಗ್ಗೆ ಮಾತಾಡೋಣ ಈಗ ಮಲಗು" ಎಂದು ಸಮಾಧಾನಿಸಲು ನೋಡಿದರು.
ನನ್ನಿಂದಾಗುತ್ತಿಲ್ಲ
... ಆದರೂ ಜವಾಬ್ದಾರಿ ಅನ್ನೋದು ಸಣ್ಣ ಮಾತಲ್ಲ ಅನ್ನೋ ಅರಿವು ಇತ್ತಾದ್ದರಿಂದ ಜೊತೆಗೆ ಇದು ಇಂಥ ವಿಷಯವನ್ನು ಮಾತಾಡೊ ಹೊತ್ತಲ್ಲ ಅಂತನಿಸಿ ಫೋನಿಟ್ಟೆ. ಸಮಾಧಾನವಿಲ್ಲ..
ಅವಿಗೆ ಫೋನಾಯಿಸಿ ವಿಷಯ ತಿಳಿಸಿದೆ." ಬೇಡ, ಬೇಕಿದ್ದರೆ ಅಲ್ಲೇ ನಿಮ್ಮ ಕೈಲಾದ ಸಹಾಯ ಮಾಡಿ.ನೀವಂದುಕೊಂಡಷ್ಟು ಸುಲಭದ ಕೆಲಸವಲ್ಲ ಅದು" ಎಂದರು. ಅವಿ ಎಷ್ಟು ಭಾವುಕರೋ ಅಷ್ಟೆ ವಾಸ್ತವ ವಾದಿ ಕೂಡಾ. ಹೀಗಾಗಿಯೇ ಅವರ ಸಲಹೆ ನನಗೆ ಅಮೂಲ್ಯ.
"ನೋಡೋಣ " ಎಂದೇನಾದರೂ ಮನಸು ಒಪ್ಪುತ್ತಿಲ್ಲ.
ಪಾಪ ಭವಾನಿ ಸಹ ತಿಳಿಸಿ ಹೇಳಲು ಪ್ರಯತ್ನಿಸಿ ಕೊನೆಗೆ, "ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸೋದನ್ನ ಕಲ್ತ್ಕೋ, ಅತೀ ಆಡಬೇಡ " ಎಂದು ಗದರಿಸಿ ಮುಸುಗೆಳೆದುಕೊಂಡಳು.

ಯಾವೊಂದು
ನಿರ್ಧಾರಕ್ಕೆ ಬರಲಾಗದೆ ಹೊರಳಾಡಿ ಕೊನೆಗೆ ಬೆಳಗಿನ ಶೂಟಿಂಗಿಗೆ ಕಣ್ಣು ಊದಿಕೊಳ್ಳದಿರಲಿ ಎಂದು ಪ್ರ್ಯಾಕ್ಟಿಕಲಿ (!!) ಯೋಚಿಸಿ ನಿದ್ದೆಗೆ ಪ್ರಯತ್ನಿಸಿದವಳು ಮುಂದೆ ಯಾವಾಗಲೋ ನಿದ್ರಾದೇವಿಯ ಮಡಿಲನ್ನು ಅವಚಿ ಮಲಗಿದ್ದೆ.

ಮಾರನೆಯ ದಿನವೂ ಬಸವ್ವ ಇದ್ದ ಊರಲ್ಲೇ ಶೂಟಿಂಗ್ ಇತ್ತು. ಅವಳನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಆದರೆ ಮನಸು ಅವಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. 'ಊರಿಗೆ ಕರೆದುಕೊಂಡು ಬಂದು 'ನಿಮ್ಹಾನ್ಸ್' ಗೆ ಸೇರಿಸಿ, ಡಾ. ಸಿ.ಆರ್. ಚಂದ್ರಶೇಖರ್ ಅವರಲ್ಲಿ ಚಿಕಿತ್ಸೆ ಕೊಡಿಸಿ, ಅವಳು ಸರಿ ಹೋದ ನಂತರ ಮನೆಗೆ ಕರೆತರುವುದು.' ಎಂದು ಒಮ್ಮೆ ಯೋಚಿಸಿದರೆ ಮತ್ತೊಮ್ಮೆ, 'ಇಲ್ಲ ಅವಳನ್ನು ಅಲ್ಲೇ ಪಕ್ಕದ ಧಾರವಾಡದ ಆಸ್ಪತ್ರೆಗೆ ಸೇರಿಸಿದರಾಯ್ತು, ಸರಿ ಹೋದ ಮೇಲೆ ಅವಳು ತನ್ನ ಬಳಗನ್ನು ಸೇರಿಕೊಳ್ಳುವುದೇ ಲೇಸು, ಅರಿಯದ ನಮ್ಮೊಡನೆ ಅವಳು ಹೊಂದಿಕೊಳ್ಳಲಾರಳೆನೋ' ಅನಿಸಿತು. ವಿಚಿತ್ರವೆಂದರೆ ಮದ್ಯಾಹ್ನ ಕಳೆಯುವಷ್ಟರಲ್ಲಿ ಬಸವ್ವ ನನಗೂ ಊರಿನವರಿಗಾದಷ್ಟೇ ಮಾಮೂಲಾಗಿ ಹೋಗಿದ್ದಳೆನ್ನುವುದು!!
ಆದರೆ ಜೊತೆಗೆ ಕರೆ ತಂದು ಚಿಕಿತ್ಸೆ ಕೊಡಿಸುವ ವಿಚಾರ ಮಾತ್ರ ಸಡಿಲುಗೊಳ್ಳಲಿಲ್ಲ. ಅಂದು ಸಂಜೆ ಮತ್ತೆ ಗಂಡನಿಗೆ ಫೋನು ಮಾಡಿ ಕೇಳಿದೆ.
ಸಮಾಧಾನವಾಗಿ ಎಲ್ಲವನ್ನೂ ಕೇಳಿದ ಅವರು, "ಕರೆ ತರುವುದಾದರೆ ನನ್ನದೇನೂ ಅಭ್ಯಂತರವಿಲ್ಲ" ಅಂದರು.

ಮನದಲ್ಲೇ ಅವರ ಔದಾರ್ಯಕ್ಕೆ ನಮಿಸಿದೆ. ಮನಸು ಅರ್ಧ ಹಗೂರವಾಯಿತು. ಮುಂದೆರಡು ದಿನ ಅವಳನ್ನು ಹೇಗೆ ಕರೆದುಕೊಂಡು ಬರುವುದು ಅನ್ನುವುದರ ಬಗ್ಗೆ ತಲೆ ಕೆಡಿಸಿ ಕೊಂಡಂತೆಲ್ಲ ವಾಸ್ತವ ಹೆದರಿಸತೊಡಗಿತು ನನ್ನನ್ನು. ಅವಳು ಸರಿ ಹೋಗುವ ಬಗ್ಗೆ, ಆಸ್ಪತ್ರೆಯಲ್ಲಿ ಅವಳ ಕಡೆ ವಿಶೇಷ ನಿಗಾ ಇಡುವುದರ ಬಗ್ಗೆ, ಸರಿ ಹೋದದ್ದೇ ಆದರೆ ನಂತರ ಅವಳ ಜೀವನದ ಬಗ್ಗೆ...

' ಹೌದು, ಅವಳು ಸರಿ ಹೋದದ್ದೇ ಆದರೆ ಅವಳಿಗೆ ಎಲ್ಲವೂ ಮತ್ತೆ ನೆನಪಿಗೆ ಬರುತ್ತೆ. ತನ್ನ ಬದಕು ಮೊಟಕಾದುದರ ಅರಿವು ಮೂಡಿದಾಗ, ಛಿದ್ರವಾದ ತನ್ನ ಬಾಳ ಕನಸು ಮತ್ತೆ ಚೂರು ಚೂರಾದ ಸ್ಥಿತಿಯಲ್ಲಿಯೇ ಎದುರಾದಾಗ, ಇಷ್ಟು ದಿನ ತಾನು ಹುಚ್ಚಿಯ ಪಟ್ಟ ಹೊತ್ತುದದರ ಬಗ್ಗೆ ಗೊತ್ತಾದಾಗ, ಜನ ಮೊದಲಿನಂತೆ ತನ್ನೊಡನೆ ಸಹಜವಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವ ಪ್ರಜ್ಞೆ ಚುಚ್ಚತೊಡಗಿದಲ್ಲಿ ಆಕೆ ಹಿಂಸೆಗೊಳಗೊಳ್ಳುವ ಪ್ರಕ್ರಿಯೆಯೇ ಭೀಕರ!! ಅದರ ಬದಲು ಅವಳ ಈಗಿನ ಸ್ಥಿತಿಯೇ ಉತ್ತಮ. ಕನಿಷ್ಠ ಈಗ ಸಮಾಜದ ಕಟ್ಟುಪಾಡುಗಳ ಹಂಗು ತೊರೆದು ತನ್ನದೇ ಪ್ರಪಂಚದಲ್ಲಿದ್ದಾಳೆ , ಅದು ನೋವಿನಿಂದ ನಿರ್ಮಾಣಗೊಂಡ ಲೋಕವಾದರೂ ಅಲ್ಲವಳೇ ಒಡತಿ, ಅವಳಿಗವಳೇ ಸವತಿ, ಪತಿ, ಸತಿ, ಸುತ...'

ಏನೇನೋ ನೂರೆಂಟು ಯೋಚನೆಗಳು.. ಮೊದಲು ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದ ಮನಸೇ ಈಗ ಸಡಿಲಗೊಳ್ಳುತ್ತಾ ನಿರ್ಣಯಕ್ಕೆ ಬರಲಾಗದೆ ಹೊಯ್ದಾಡತೊಡಗಿತು. ಕೊನೆಗೆ ಅವಳಿದ್ದ ಸ್ಥಿತಿಯಲ್ಲಿರುವುದೇ ಉತ್ತಮ, ಈಗ ಕನಿಕರ ತೋರಿಯಾದರು ಜನ ಅವಳನ್ನು ಪೋಷಿಸುತ್ತಿದ್ದಾರೆ, ಸರಿ ಹೋದರೆ ಅವರೂ ಅವಳ ಪಾಲಿಗೆ ಇಲ್ಲವಾಗುತ್ತಾರೆ ಎನಿಸಿ ಬಸವ್ವಳನ್ನು ಮನದಲ್ಲುಳಿಸಿಕೊಂಡು ಶೂಟಿಂಗ್ ಮುಗಿದ ಮೇಲೆ ಮರಳಿ ಮನೆಗೆ ಬಂದೆ....

ತಿಂಗಳೆರಡು ಕಳೆದ ಮೇಲೆ ಅನಿಸತೊಡಗಿದ್ದು, ಕಾಡತೊಡಗಿದ್ದು ನಿಜವಾಗಲೂ ನಾನು ಅವಳ ಒಳಿತನ್ನು ಬಯಸಿ ಬಿಟ್ಟು ಬಂದೆನಾ...? ಅಥವಾ ಜವಾಬ್ದಾರಿ ಹೊರಲಾಗದ ಹೇಡಿತನದಿಂದಲೋ...?

Wednesday, August 12, 2009

ಲಾಖ್ ಚುಕಾ ಅಸತಿಲ ಕೇಲ್ಯಾ...

ಕ್ಷಮಿಸಿ, ಒಂದು ಚೆಂದದ ಮರಾಠಿ ಭಾವಗೀತೆಯನ್ನು ನಿಮಗೆ ಕೇಳಿಸುವ ಉದ್ದೇಶದಿಂದ ಮರಾಠಿ ಬಾರದ ಕನ್ನಡಿಗರಿಗೆಂದು ಅನುವಾದಿಸಿ ಅದನ್ನು ಬ್ಲಾಗಿನಲ್ಲಿ ಹಾಕಿದ್ದೆ. ಆದರೆ ದುರ್ದೈವದಿಂದ ಆ ಹಾಡನ್ನು ಇಲ್ಲಿ ಕೇಳಲು ಆಗುತ್ತಿಲ್ಲ. ಆ ಹಾಡು ಕೇಳದೆ 'ಅನುವಾದ' ಅನುಭೂತಿಗೆ ಬರದು. ಆದ್ದರಿಂದ ಭಾವಗೀತೆಯ ಅನುವಾದವನ್ನು ತೆಗೆದು ಹಾಕುತ್ತಿದ್ದೇನೆ.

Sunday, July 19, 2009

ನಿರಾಕರಿಸದಿರಿ ದೊರೆ

ಕೇಳಿದೆ ನೇಕಾರನಿಗೆ ಬೇಕಿದೆ
ಅಪರೂಪದ ಸೀರೆಯೊಂದು
ತಯಾರಿಸಿಕೊಡು ನನಗೆಂದು
ಕೇಳಿದ ನೇಕಾರಣ್ಣ
ಯಾವ ಬಣ್ಣ
ಹೆಣ್ಣೇ ಯಾವ ನೂಲು
ಎಂಥಾ ಸೆರಗು
ಹೇಗಿರಬೇಕು ಒಡಲು
ಮೊದಲು ಭಾಷೆ ಕೊಡು
ಹೇಳುವೆ ಸೀರೆಯ ಸೆರಗು ಬೆಡಗು
ದಿಟ್ಟಿಸಿದ ನೇಕಾರಣ್ಣ
ಮನ ಬಗೆಯುವಂತೆ
ಒಪ್ಪಿ ಭಾಷೆಯಿತ್ತ
ಎಲ್ಲ ಬಲ್ಲೆನೆಂಬಂತೆ
ನೂಲು ಹತ್ತಿಯದಿರಲಿ
ಪ್ರೀತಿಯ ತೆರದಿ ಮೃದು
ಎಲ್ಲಾ ಕಾಲಕ್ಕೂ ಸಲ್ಲುವುದು
ಬಣ್ಣವಿರಲಿ ಪಂಚರಂಗಿ
ಜ್ಞಾನ, ಶ್ರಮ, ಸಾಧನೆ,
ಯಶಸ್ಸು, ಸಮ್ಮಾನ
ಸಮವಾಗಿ ಮೇಳೈಸಿರಲಿ
ನೇಯಬೇಕು ನೋಡು
ಸೆರಗ ತುಂಬಾ
ಮಲ್ಲಿಗೆಯ ಪರಿಮಳದ ನಗುವ
ಅಂಚೂ ಅಷ್ಟೆ ಹಬ್ಬಬೇಕದು
ನೆಮ್ಮದಿಯ ಬಳ್ಳಿಯಾಗಿ
ಜನ ಬೆರಗುಗೊಳ್ಳಬೇಕು
ಇನ್ನು ಒಡಲು ಮಾರಾಯಾ
ಔದಾರ್ಯ, ಮಮತೆ,
ಸ್ನೇಹವೆಂಬ ಮುತ್ತು
ರತ್ನ, ಹವಳಗಳ ಕುಸೂರಿಯಾಗಬೇಕು
ನೋಡಿದವರು ರೆಪ್ಪೆ ಮೀಟುಕಿಸುವುದು
ಮರೆಯುವ ಹಾಗಿರಬೇಕು...
ವಿವರ ಆಲಿಸಿದ ನೇಕಾರ
ಕೇಳಿದ ಒಂದು ಪ್ರಶ್ನೆ
ಹೆಣ್ಣೇ ನಿನಗಾಗಿ ಸೀರೆ
ನೇಯುವಿನೇನೋ ಸರಿ
ಆದರೆ...
ಪ್ರೀತಿ, ನಗು, ಔದಾರ್ಯ
ಇತ್ಯಾದಿಗಳನ್ನೆಲ್ಲ ಎಲ್ಲಿಂದ ಹುಡುಕಿ ತರಲೆ?
ಅದು ಅಂಥ ಕಷ್ಟವಲ್ಲ ನೇಕಾರಣ್ಣ
ಹೋಗು ನನ್ನವರ ಹತ್ತಿರ
ಅವರು ಇವೆಲ್ಲದರ ಆಗರ
ಕೇಳಿದರೆ ಕೊಡದಿರಲಾರರು
ಉಪಚರಿಸದೆ ನಿನ್ನ ಕಳಿಸಲಾರರು
ಮೆರೆಯಬೇಕಿದೆ ಅಪರೂಪದ ಸೀರೆಯುಟ್ಟು
ಜಗದೇಕ ಸುಂದರಿ ಎಂದು ಜಂಭ ಪಟ್ಟು
ಇಷ್ಟರಲ್ಲೆ ಬರಬಹುದು ನೇಕಾರ
ಮನೆಯ ಬಾಗಿಲಿಗೆ
ಕೊಡಲಾರೆನೆಂದು ನಿರಾಕರಿಸದಿರಿ ದೊರೆ
ಬೇಡಿ ಬಂದವರಿಗೆ...

Thursday, July 16, 2009

ಕನಸು ಎಚ್ಚರಿಸುತ್ತಿದೆ..

"ಹೆಲೊ ಪುಟ್ಟಾ, ಹೆಲೊ, ಹೆಲೊ...ಹಲೋ.... ಮಲಗಿದೀಯಾ..? ಹ್ಹಾ ಹ್ಹಾ ನಿದ್ದೆಯಲ್ಲಿರುವ ನಿನ್ನೆದೆ ಬಡಿತ ಈ ಫೋನಲ್ಲೂ ಎಷ್ಟು ಸ್ಪಷ್ಟವಾಗಿ ಕೇಳ್ತಿದೆ ನೋಡು! ಸರಿ ಮಲಗು ಮಗು, ಎದ್ದ ನಂತರ ಫೋನ್ ಮಾಡು, ಸರೀನಾ?" ಅವನ ಈ ಮುದ್ದಿನ ಸುಖವನ್ನು ಅನುಭವಿಸುತ್ತಲೇ ನಿದ್ದೆಯಾಳಕ್ಕಿಳಿದಳು ಆಕೆ. ಅತ್ತೆ ಮಹಡಿ ಮೇಲೆ ಏನೋ ಕೆಲಸದಲ್ಲಿದ್ದಾರೆ, ಮಹಡಿಯ ಬಾಲ್ಕನಿ ತುಂಬಾ ಸಾಮಾನು ಹರಡಿವೆ. ಅಷ್ಟರಲ್ಲಿ ಮತ್ತೆ ಫೋನು. " ಈ ಅಮ್ಮಂಗೆ ಸ್ವಲ್ಪಾನೂ ಬುದ್ದಿ ಇಲ್ಲ ನೋಡು, ಈಗ್ಯಾಕೆ ಆ ಕೊಮಲನ್ನ ಮನೆಗೆ ಕರೀಬೇಕಿತ್ತು? ಮೊದಲೇ ಇಕ್ಕಟ್ಟಿನ ಮನೆ, ಯಾರಾದರು ಬಂದರೆ ಅವರ ಕೈ ಕಾಲಿಗೆ ಸಾಮಾನು ತಾಗ್ತವೆ, ಅಲ್ಲದೆ..." ಹೀಗೆ ಅವನು ಪರದಾಡುತ್ತಿರುವಾಗಲೆ ಆಕೆ ನಕ್ಕು "ಯಾಕೆ ಟೆನ್ಶನ್ ಮಾಡ್ಕೊಳ್ತೀರಿ? ನಾನಿಲ್ವಾ? ಮನೆ ಒಪ್ಪ ಮಾಡಿದ್ರೆ ಆಯ್ತಲ್ಲಾ. ಡೋಂಟ್ ವರಿ." ಎಂದು ಅವನು ಮಾತು ಮುಂದುವರೆಸಲು ಅವಕಾಶ ಕೊಡದೆ ಫೋನ್ ಕಟ್ ಮಾಡಿ ಅಲ್ಲಿ ಇದ್ದ ಬಟ್ಟೆ, ಮೆಟ್ಟಿಲ ಮೇಲಿದ್ದ ಮೊರವನ್ನು ಎತ್ತಿಕೊಂಡು ಮಹಡಿ ಮೇಲೆ ಹೊರಟವಳು ಒಂದು ಕ್ಷಣ ಅವಕ್ಕಾಗಿ ನಿಂತಳು. ಅತ್ತೆ ೧೦-೧೫ ಮೂಟೆಗಳಷ್ಟು ರಾಶಿ ಧಾನ್ಯವನ್ನು(ಅವರೆಕಾಳು) ಎದರು ಹಾಕಿಕೊಂಡು ಅದನ್ನು ಮೊರದಲ್ಲಿ ತುಂಬಿ ಹೊರಗೆ ಒಣಗಿಸಲೆಂದು ಒಬ್ಬಳ ಕೈಯಲ್ಲಿ ಕೊಡುತ್ತಿದ್ದಾರೆ,ಅವರ ಸಹಾಯಕ್ಕೆಂದು ಇನ್ನೊಂದು ಮೊರದಲ್ಲಿ ಸಿಪ್ಪೆ ಬಿಡಿಸಿದ ಅವರೆಕಾಳನ್ನು ತುಂಬಿಕೊಂಡು ಅವರೆದುರು ನಿಂತಿದ್ದಾಳೆ ಕೋಮಲ! ಇವಳಿಗೋ ಎಲ್ಲವೂ ಗೋಜಲು ಗೋಜಲು. ಈ ಕೋಮಲ ಬಂದದ್ದ್ಯಾವಾಗ? ಮತ್ತೆ ಆಕೆ ಅತ್ತೆಗೆ ನನ್ನ ಜಾಗದಲ್ಲಿ ನಿಂತು ಸಹಾಯ ಮಾಡುತ್ತಿದ್ದಾಳಲ್ಲ ಯಾಕೆ? ವಿಚಿತ್ರ ತಳಮಳವೊಂದು ಮನವನಾವರಿಸಿದಂತಾಗಿ ಓಡು ಹೆಜ್ಜೆಯಲ್ಲಿ ಅತ್ತೆ ಹತ್ತಿರ ಹೋಗಿ, " ಅಮ್ಮ ಇದೇನು ಮಾಡ್ತಿದೀರಿ? ಅದೂ ಈ ಹೊತ್ತಲ್ಲಿ? ನನಗೆ ಹೇಳಿದ್ದರೆ.." ಇವಳ ಮಾತಿಗೆ ಅಷ್ಟಾಗಿ ಗಮನ ಕೊಡದವರಂತೆ ಅತ್ತೆ ಕೋಮಲ ಕೈಯಿಂದ ಮೊರ ಇಸಿದುಕೊಂಡು ತಮ್ಮ ಕೆಲಸ ಮುಂದುವರೆಸಿದರು. ನಿಸ್ಸಾಹಾಯಕತೆಯಿಂದ ಆಕೆಗೆ ನಿಶ್ಯಕ್ತಿ ಆವರಿಸಿದಂತಾಗಿ ಕುಸಿದು ಕೂರಲೂ ಆಗದೆ ಸುತ್ತಲೂ ದೃಷ್ಟಿ ಹರಿಸಿದವಳಿಗೆ ಅಚ್ಚರಿ! ನಮ್ಮ ಮನೆಯಲ್ಲಿ ಇಷ್ಟು ದೊಡ್ಡ ಅಂಗಳ ಎಲ್ಲಿಂದ ,ಯಾವಾಗ ಬಂತು?! ಇಷ್ಟೊಂದು ಧಾನ್ಯ ಯಾರು ಕೊಟ್ಟವರು? ನಾನು ಅತ್ತೆಯ ಜೊತೆ ಮಹಡಿ ಮೇಲಿರದೆ ಕೆಳಗೆ ಸೆಪರೇಟ್ ಆಗಿ ರೂಮೊಂದರಲ್ಲಿ ಯಾಕಿದ್ದೇನೆ? ನಮ್ಮ ಮನೆ ಪುಟ್ಟದಲ್ಲವಾ? ಮಹಡಿ ಕೂಡಾ ಇಲ್ಲ ನಾವಿರೋದು ನಾಲ್ಕನೆ ಫ್ಲೋರ್^ನ ಪುಟ್ಟ ಫ್ಲಾಟಿನಲ್ಲಿ....

ಹೀಗೆ ಯೋಚಿಸುತ್ತಿದ್ದಂತೆ ಎಚ್ಚರವಾಯ್ತವಳಿಗೆ. ಮೈ ಎಲ್ಲಾ ಸಣ್ಣಗೆ ನಡುಕ. ಹಾಗಿದ್ದರೆ ಇಷ್ಟೊತ್ತು ತಾನು ಕಂಡದ್ದು ಕನಸು! ಕನಸೆಂದು ಅರಿವಾದಾಗಲೂ ಅಲ್ಲಿನ ದೃಶ್ಯವನ್ನು ಒಪ್ಪಿಕೊಳ್ಳಲು ಮನಸು ತಯಾರಿಲ್ಲ. "ವಿಚಿತ್ರ" ಎಂದು ಮುಗುಳು ನಗುತ್ತಾ ಎದ್ದು ದಿಂಬನ್ನು ಅವಚಿಕೊಂಡು ಕುಳಿತವಳಿಗೆ ಮದುವೆಯಾದ ಹೊಸತರಲ್ಲಿನ ಘಟನೆಯೊಂದು ನೆನಪಾಯ್ತು.

ಆಕೆ ಅವನವಳಾಗಿ ಮನೆಗೆ ಬಂದು - ದಿನಗಳಾಗಿದ್ದವು. ಆಕೆಯ ಗೆಳತಿಗೆ ಅತ್ತೆಯೊಂದಿಗಿನ ತನ್ನ ಹೊಂದಾಣಿಕೆಯ ಬಗ್ಗೆ ಫೋನಿನಲ್ಲಿ ವಿವರಿಸಿದ್ದಳು. ಈಕೆ ಹೊಂದಿಕೊಂಡಳು ಅನ್ನುವುದಕ್ಕಿಂತ ಅತ್ತೆಯೇ ಈಕೆಯನ್ನು ಮಗಳಂತೆ ಭಾವಿಸಿ ಆದರ ತೋರಿದ್ದರು. ಅತ್ತೆಯ ಒಲುಮೆಗೆ ಆಕೆಯ ಮನದಲ್ಲಿ ಎತ್ತರದ ಸ್ಥಾನವಿತ್ತು. ಅವರ ಆತ್ಮೀಯತೆ ಆಪ್ಯಾಯಮಾನ ಆಕೆಗೆ. -ದಿನಗಳಲ್ಲಿ ಅವರಿಬ್ಬರೂ ಎಷ್ಟು ಚೆನ್ನಾಗಿ ಹೊಂದಿಕೊಂಡರೆಂದರೆ ಆಕೆ ತನ್ನ ಮಿತಿಯಲ್ಲಿಯೇ ಅತ್ತೆಗೆ ಇಷ್ಟವಾದ ಹಾಡುಗಳನ್ನೆಲ್ಲ ಸಂಕೋಚ ತೊರೆದು ಹಾಡಿದ್ದಳು. ವಿಷಯವನ್ನು ಗೆಳತಿಗೆ ತಿಳಿಸಿದಾಗ ಅವಳಿಗೂ ಇವರ ಮನೆಯ ಆತ್ಮೀಯ ವಾತಾವರಣವನ್ನೊಮ್ಮೆ ನೋಡಬೇಕೆಂಬ ಹಂಬಲವಾಗಿ ತಾನು ಬರುತ್ತಿರುವುದಾಗಿ ತಿಳಿಸಿದಳು. ಸಂಭ್ರಮದಿಂದ ಗೆಳತಿ ಬರುತ್ತಿರುವ ವಿಷಯವನ್ನು ಹೇಳಲು ಅತ್ತೆಯತ್ತ ತಿರುಗಿದರೆ ಅವರ ಮುಖದಲ್ಲಿ ಮುಜುಗರ ಎದ್ದು ಕಾಣುತ್ತಿತ್ತು. ತನ್ನವನ ಕಡೆನೋಡಿದರೆ ಅವನದೂ ಅಂಥದೇ ಮುಖಭಾವ! ಗೆಳತಿಯ ಸಿರಿತನದ ಮುಂದೆ ನಮ್ಮ ಮನೆ ಪುಟ್ಟದೆನಿಸುತ್ತದೆ ಅನ್ನುವ ಸಂಕೋಚ ಅವರಿಬ್ಬರಿಗೂ.ಆದರೆ ಗೆಳತಿ ಎಂಥ ಸರಳ ಸ್ವಭಾವದವಳು ಎನ್ನುವುದನ್ನು ಈಕೆ ಬಲ್ಲಳು. ತಾಯಿ ಮಗನ ಮುಜುಗರದ ಕಾರಣ ಹಲವು ದಿನಗಳ ನಂತರ ಗೊತ್ತಾಗಿತ್ತು.ಆದರೆ ಈಗ ಆಕೆಗೆ ಗೆಳತಿಯನ್ನು ಕರೆದು ತಪ್ಪು ಮಾಡಿದಿನೇನೋ ಅನಿಸಿ ಅಳುಕುತ್ತಾ, "ಬೇಡವಾ ಗೆಳತಿಯನ್ನು ಕರೆಯುವುದು?" ಕೇಳಿದಳು ಅವನನ್ನು. "ಬರಲಿ ಆದರೆ ರಾತ್ರಿ ಉಳಿಯುವುದು ಬೇಡ" ಎಂದವನನ್ನು ಯಾಕೆ ಎಂದುಕೇಳಲು ಧೈರ್ಯ ಬಾರದೆ ಸುಮ್ಮನಾದವಳು ಮನೆಯನ್ನು ಒಪ್ಪಗೊಳಿಸುವ ಕಾರ್ಯದಲ್ಲಿ ತೊಡಗಿದಳು. ಆಕೆಯ ಆತ್ತೆಗೆ ಮಂಡಿ ನೋವು.ಕೂರಲು ಏಳಲು ಕಷ್ಟ. ಜೊತೆಗೆ ಜೀವನದ ಕಹಿ ಅನುಭವದಿಂದಾಗಿ ಒಂಥರದ ನಿರಾಸಕ್ತಿ ಮನೆ ಮಾಡಿತ್ತು ಅವರಲ್ಲಿ. ಅದು ಮನೆಯ ಓರಣ ಮೇಲೆ ಅಲ್ಪ ಸ್ವಲ್ಪ ಪರಿಣಾಮ ಬೀರಿತ್ತು. ಹಾಗಂತ ಮನೆ ಗಲೀಜು ಅಂತ ಅರ್ಥವಲ್ಲ. ಅದೂ ಅಲ್ಲದೆ ಅವರ ಏಕಮಾತ್ರ ಸುಪುತ್ರ, ಈಕೆಯ ಅವನು ಪಕ್ಕಾ ಭಾರತೀಯ ಗಂಡಸು ಮನೆಗೆಲಸದ ವಿಷಯದಲ್ಲಿ. ವಿಷಯದಲ್ಲಿ ಮಾತ್ರ ಅವನಿಂದ ಯಾವ ಸಹಾಯವನ್ನೂ ಅಪೇಕ್ಷಿಸಲಾಗದು. ಹೀಗಾಗಿ ಈಗ ಗೆಳತಿಯ ಬರುವಿನ ಕಾರಣವನ್ನಿಟ್ಟುಕೊಂಡು ಆಕೆ ಮನೆಯನ್ನು ಸ್ವಚ್ಚ ಮಾಡುತ್ತಿದ್ದರೆ ಅತ್ತೆಗೆ ಸಂಕೋಚ. "ಬೇಡ ಯಾಕೆ ಕಷ್ಟಪಡ್ತೀಯ"ಅಂತ ಅವರು ಅಕ್ಕೆರೆಯಿಂದ ಹೇಳಿದರಾದರೂ ಈಕೆಗೆ ತನ್ನ ಮನೆ ಅನ್ನುವ ಒಲುಮೆ. ಅವರನ್ನು ಸಮಾಧಾನಿಸಿ, ಮನೆ ಓರಣಗೊಳಿಸಿ ಒಪ್ಪ ಮಾಡಿದವಳನ್ನು ಅತ್ತೆ ಉಪಚರಿಸಿದ್ದರು. ವಾತ್ಸಲ್ಯದ ಹೊಳೆ ಹರಿಸಿದ್ದರು. ಆದರೆ ಇವತ್ತಿನ ಕನಸು ಮಾತ್ರ....

ಬಾಗಿಲಿನ ಕರೆಗಂಟೆಯ ಶಬ್ಧವಾಯ್ತು. ಇದು ಅವನು ಮನೆಗೆ ಬರುವ ಸಮಯ. ಮುಖದಲ್ಲಿ ನಗು ಧರಿಸಿ ಬಾಗಿಲಿನತ್ತ ನಡೆದಳು ಆಕೆ.

Tuesday, July 14, 2009

ಪುಟಾಣಿ ಪಾರ್ಟಿ ಟ್ರೇಲರ್ !

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಹಿಂದೆ ನಾನು ರಾಮಚಂದ್ರ ಪಿ ಎನ್ ಅವರ ನಿರ್ದೇಶನದ, ನಾನು ಅಭಿನಯಿಸಿದ ಮಕ್ಕಳ ಚಿತ್ರ 'ಪುಟಾಣಿ ಪಾರ್ಟಿ' ಬಗ್ಗೆ ಲೇಖನವೊಂದನ್ನು ಬರೆದಿದ್ದೆ. ಈಗ ಅದರ ಟ್ರೇಲರ್ ನಿಮಗೆಲ್ಲ ನೋಡಿಸುವ ಆಸೆ ನನಗೆ.
video

ಬಹುಶಃ ಬಿಡುಗಡೆಗೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೇನೋ.. ನಿಮ್ಮಂತೆ ನಾನೂ ಕಾತರಳಾಗಿದೀನಿ ಚಿತ್ರವನ್ನು ಥೇಟರ್^ನಲ್ಲಿ ನೋಡೋಕೆ. ಸಧ್ಯಕ್ಕೆ ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳೋಣ.

Wednesday, June 17, 2009

ರೇಶ್ಮೆಯ ನುಣುಪು

ರೇಶ್ಮೆಯ ನುಣುಪು
ಸಂಬಂಧಕ್ಕೆ..
ನಾಜೂಕು ಮಾಡಬೇಕು
ಜಾರಿಬೀಳದಂತೆ ಜೋಪಾನವಾಗಿರಬೇಕು
ಅಮೂಲ್ಯ ರೇಶಿಮೆ ಹೊದ್ದಿದ್ದೇನೆ
ಸುಕ್ಕಾಗದಂತೆ, ಕೊಳೆಯಾಗದಂತೆ
ನೋಡಿಕೊಳ್ಳುವ ಆತಂಕದೊಡನೆ
ಸಂಭ್ರಮಿಸುತ್ತಿದ್ದೇನೆ
ರೇಶಿಮೆ ತೊಟ್ಟ ಸುಖವನ್ನು,
ಇಷ್ಟರಲ್ಲೇ ಕಳಚಿ
ಕಪಾಟಿನಲ್ಲಿ
ಭದ್ರವಾಗಿಡಬೇಕು
ಮುಚ್ಚಿ ಅನ್ನುವ ವಾಸ್ತವಕ್ಕೆ
ಬೆನ್ನು ಹಾಕಿ..

Wednesday, June 10, 2009

ಪುಟಾಣಿ ಪಾರ್ಟಿ.





'Children's film society' ನಿರ್ಮಾಣದ 'ಪುಟಾಣಿ ಪಾರ್ಟಿ' ನಾನು ಅಭಿನಯಿಸಿದ ಎರಡನೆಯ ಕಲಾತ್ಮಕ ಮತ್ತು ಮೊದಲ ಮಕ್ಕಳ ಚಲನಚಿತ್ರ. ಚಿತ್ರದ ನಿರ್ದೇಶಕರು ರಾಮಚಂದ್ರ ಪಿ ಎನ್. ತುಂಬಾ ಸಹನಶೀಲ ಮತ್ತು ಸಮರ್ಥ ನಿರ್ದೇಶಕರು. ಚಿತ್ರದಲ್ಲಿ ಅಭಿನಯಿಸಿದ ಬಹುತೇಕ ಜನರು ಯಾವತ್ತೂ ಕ್ಯಾಮರಾದ ಮುಂದೆ ನಿಂತು ಅಭಿನಯಿಸಿದವರಲ್ಲ, ಅಂಥವರಿಂದ ನಾನೀಗ ನಿಮಗೆ ಹೇಳಿರುವುದು ಸುಳ್ಳು ಎನ್ನುವಷ್ಟು ಸಹಜಾಭಿನಯವನ್ನು ಹೊರಹೊಮ್ಮಿಸಿದ ವ್ಯಕ್ತಿ ಅವರು. ಮಕ್ಕಳಂತೂ ಎಷ್ಟು ಲೀಲಾಜಾಲವಾಗಿ ಮತ್ತು ತನ್ಮಯತೆಯಿಂದ ಅಭಿನಯಿಸಿದ್ದಾರೆಂದರೆ ಆಹಾ ಅದ್ಭುತ! ಎಲ್ಲ ಮಕ್ಕಳು ೫ನೆ ತರಗತಿಯಿಂದ ೧೦ನೆ ತರಗತಿಯಲ್ಲಿ ಓದುತ್ತಿರುವವರು. ಮೊದಲು ಅವರಿಗೆ ಚಿತ್ರ ಕತೆಯನ್ನು ಮತ್ತು ಅವರವರ ಪಾತ್ರಗಳನ್ನು ವಿವರಿಸಿ,ಮೂರು ದಿನ ಸತತವಾಗಿ ಮಕ್ಕಳಿಗೆ ಹೇಗೆ ಅಭಿನಯಿಸಬೇಕು ಮತ್ತು ಯಾಕೆ ಹಾಗೆ ಅಭಿನಯಿಸಬೇಕು ಅನ್ನುವುದನ್ನು ಹೇಳಿಕೊಟ್ಟು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಎಷ್ಟು ಚೆನ್ನಾಗಿ ರಾಮ್ ಸರ್ ತಯಾರು ಮಾಡಿದ್ದರೆಂದರೆ ಕ್ಯಾಮೆರಾದ ಪರಿಚಯವಿದ್ದ ನಾನು ಮತ್ತು ಭವಾನಿ ಕೆಲವೊಮ್ಮೆ ಗೊಂದಲಗೊಳ್ಳುತ್ತಿದ್ದೆವಾದರೂ ಮಕ್ಕಳು ಮಾತ್ರ ಅಂಗಳದಲ್ಲಿ ಲಗೋರಿ ಆಡಿದಷ್ಟೇ ಸಹಜವಾಗಿ ಅಭಿನಯಿಸಿಬಿಡುತ್ತಿದ್ದರು!! ರಂಜಿತಾ ಜಾಧವ್, ಶರತ್,ಗುರುದತ್ತ,ಪವನ,ದೀಪಕ್, ಮಮತಾ,ಮನೋಜ್ ಮುಂತಾದ ಮಕ್ಕಳನ್ನು ಮೊದಲ ಸಲ ನೋಡಿದಾಗ ಅವರುಗಳ ಖದರು ಕಂಡು "ಇದೇನಪ್ಪಾ ಮಕ್ಕಳ ಜೊತೆ ನಾನು -೧೦ ದಿನ ಕಳೆಯಬಲ್ಲೇನಾ?!" ಅನಿಸಿತ್ತು. ಆದರೆ ದಿನ ಕಳೆದಂತೆಲ್ಲ ಮಕ್ಕಳು ಎಷ್ಟು ಹತ್ತಿರದವರಾದರೆಂದರೆ ಇತ್ತೀಚೆಗೆ ನಾನು ಡಬ್ಬಿಂಗ್ಗಿಗೆ ಅಂತ ಧಾರವಾಡಕ್ಕೆ ಹೋದಾಗ ಎಲ್ಲರೂ ಸಂಜೆ ಬಂದು ನನ್ನೊಡನೆ ಎರಡು ಗಂಟೆಗಳ ಕಾಲ ಹರಟೆ ಹೊಡೆಯುತ್ತಾ ಕುಳಿತರು.ನಾನೇ "ಹೊತ್ತಾಗುತ್ತೆ ಹೋಗ್ರೋ ಇನ್ನ ಮನೆಗೆ" ಅಂತ ಬಲವಂತ ಮಾಡಿ ಕಳಿಸಬೇಕಾಯಿತು(ಆಗ ಅವರಿಗೆಲ್ಲ ಪರೀಕ್ಷೆಯ ಸಮಯ ಬೇರೆ!!)

ರಂಜಿತಾ
ಧಾರವಾಡದ ಒಂದು ಅಪ್ಪಟ ಪ್ರತಿಭೆ. ಹುಡುಗಿಗೆ ಎಂಥಾ ಆತ್ಮವಿಶ್ವಾಸ ಮತ್ತು ಅಭಿನಯದ ತುಡಿತವೆಂದರೆ ಇಡೀ ಯುನಿಟ್ಟೆ ( ಚಿತ್ರ ತಂಡ ) ಬೆರಗಾಗುತ್ತಿತ್ತು ಈಕೆ ಅಭಿನಯಿಸುವಾಗ. ರಂಜಿತಾ ಚಿತ್ರದಲ್ಲಿ ನನ್ನ ಮಗಳ ಪಾತ್ರ(ಗೀತಾ) ನಿರ್ವಹಿಸಿದ್ದಾಳೆ. ಒಂದು ಶಾಟ್.. ರಂಜಿತಾ ಸಭಿಕರೆದುರು ನಿಂತು ಊರಲ್ಲಿಯ ಅನಾನುಕೂಲತೆಗಳಿಂದಾಗಿ ಮಕ್ಕಳಿಗಾಗುತ್ತಿರುವ ತೊಂದರೆಗಳನ್ನು ವಿವರಿಸುತ್ತಿರುತ್ತಾಳೆ. ಮೈಲುದ್ದದ ಸಂಭಾಷಣೆ ಅದು. ಸರಾಗವಾಗಿ,ಭಾವಪೂರ್ಣತೆಯಿಂದ ಎಂಥಾ ಅದ್ಭುತವಾಗಿ ಅಭಿನಯಿಸುತ್ತಿದ್ದಾಳೆ ಎಂದು ನಾವೆಲ್ಲ ಬಿಟ್ಟ ಕಣ್ಣಿಂದ ನೋಡುತ್ತಿರುವಾಗಲೇ " ಕಟ್" ಅನ್ನುವ ರಾಮ್ ಸರ್ ಅವರ ಸಿಟ್ಟಿನ ಧ್ವನಿ ಕೇಳಿ ಬೆಚ್ಚಿಬಿದ್ದೆವು! ಅಲ್ಲಿವರೆಗೂ ರಾಮ್ ಸರ್ ಸಿಟ್ಟಲ್ಲಿದ್ದುದನ್ನ ನಾನು ಕಂಡೆ ಇರಲಿಲ್ಲ.. ಅವರ ಕೋಪಕ್ಕೆ ಕಾರಣ ಅಷ್ಟು ಅದ್ಭುತವಾಗಿ ಅಭಿನಯಿಸುತ್ತಿದ್ದ ರಂಜಿತಾಳ ಬಗಲಲ್ಲಿ ಇರಬೇಕಾದ ಚೀಲವೊಂದು ಸಹಾಯಕ ನಿರ್ದೇಶಕರ ಮರೆವಿನಿಂದಾಗಿ ಮಿಸ್ ಆದುದು. ಮತ್ತೆ ಮಗು ಅಷ್ಟುದ್ದದ ಡೈಲಾಗ್ ಅನ್ನು ಅಷ್ಟೆ ತನ್ಮಯತೆಯಿಂದ ಹೇಳಬಲ್ಲುದಾ? ಅನ್ನುವ ಆತಂಕ ಸಿಟ್ಟಿಗೆ ಕಾರಣ . ಆದರೆ ರಂಜಿತಾ ಮೊದಲಿನಷ್ಟೇ ತನ್ಮಯತೆಯಿಂದ ಮತ್ತೆ ಅಭಿನಯಿಸಿದಳು!

ಏಳನೇ
ಕ್ಲಾಸ್ನಲ್ಲಿ ಓದುತ್ತಿರುವ ಶರತ್ ಒಳ್ಳೆ ನುರಿತ ನಟನೇನೋ ಎನ್ನುವಷ್ಟು ಆತ್ಮವಿಶ್ವಾಸದಿಂದ ಅಭಿನಯಿಸಿದ ಹುಡುಗ. ಗುರುದತ್ತ, ಪವನ, ದೀಪಕ್, ಮನೋಜ್ ಮತ್ತು ಮಮತಾ ಕೂಡಾ ಅಷ್ಟೆ , ಒಳ್ಳೆಯ ನಟರು, ವಿನಯವನ್ನು ಮೈಗೂಡಿಸಿಕೊಂಡ ಮಕ್ಕಳು.
ಚಲನಚಿತ್ರ ಕನ್ನಡದ್ದಾದರೂ ನಟವರ್ಗ ಮತ್ತು ನಿರ್ದೇಶಕರನ್ನು ಹೊರತುಪಡಿಸಿ ಚಿತ್ರ ತಂಡದ ಉಳಿದೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದ ಬಂದವರು ಎನ್ನುವುದು ವಿಶೇಷತೆ. ೧೮ ದಿನಗಳ ಕಾಲ ಧಾರವಾಡದಲ್ಲಿ ಮಿನಿ ಭಾರತ ನೆಲೆಯೂರಿತ್ತು!! :-)
ತಿಂಗಳೋಪ್ಪತ್ತಿನಲ್ಲಿ ಚಿತ್ರದ ಬಿಡುಗಡೆಯ ನಿರೀಕ್ಷೆ ಇದೆ. ಚಿತ್ರ ನಿರ್ಮಾಣದ ವೇಳೆಯ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮತ್ತೆ ಬರೆಯುತ್ತೇನೆ..

Tuesday, May 19, 2009

ಮಗಳಿಗೊಂದು ಬಹಿರಂಗ ಪತ್ರ.


ಗೊಂಬೆ,
ನಾನು ಹೀಗೆ ನಿನಗೆ ಬರಹದ ಮೂಲಕ ಹೇಳುತ್ತಿರುವುದು ಹೊಸದಲ್ಲವಾದ್ದರಿಂದ ನಿನಗೆ ಯಾವ ಆಶ್ಚರ್ಯವೂ ಆಗದೆಂದು ಗೊತ್ತು ನನಗೆ. ನಾವಿಬ್ಬರೂ ಕೆಲವು ವಿಷಯಗಳನ್ನ ಪರಸ್ಪರ ನೇರವಾಗಿ ಹೇಳಿದರೆ ಎಲ್ಲಿ ಆಭಾಸ ಆಗುತ್ತೋ ಅನ್ನೋ ಕಾರಣಕ್ಕೆ ಆಗಾಗ ಹೀಗೆ ಬರೆದು ಹೇಳ್ಕೊಳ್ತೇವೆ ಆಲ್ವಾ? ಆದರೆ ನಾನು ಹೀಗೆ ಬಹಿರಂಗವಾಗಿ ಎಲ್ಲರೂ ಓದುವಂತೆ ಬರೆದಿರುವುದನ್ನು ಕಂಡು ಮುಜುಗರವಾಗ್ತಿದೆಯಾ? ನಾನು ಹೀಗೆ ಬರೆಯೋಕೆ ಕಾರಣ ಇದೆ ಕಂದ. ಓದುತ್ತಾ ಹೋಗು ನಿನಗೆ ಅರ್ಥ ಆಗುತ್ತೆ..
ಇಷ್ಟು ದಿನ ನಿನ್ನ ಅಮ್ಮ ಪೂರ್ತಿ ಅಲ್ಲದಿದ್ದರೂ ಹೆಚ್ಚಿನಂಶ ನಿನ್ನ ಕುರಿತು ನೆಮ್ಮದಿಯಿಂದಾನೆ ಇದ್ದಳು. ಕಾರಣ ನೀನು ಈವರೆಗೆ ಇದ್ದ ವಾತಾವರಣ. ಸ್ಕೂಲು,ಹೈಸ್ಕೂಲು ಮನೆ ಮುಂದಿನ ತೋಟವಿದ್ದಂತೆ, ಅಲ್ಲಿ ಅನಾಹುತ ಅಪಘಾತಗಳ ಸಂಭವ ಇಲ್ಲ ಅಥವಾ ಕಮ್ಮಿ ಅನ್ನೊ ನಿರಾಳತೆ. ಆದರೆ ಇನ್ನು ಮುಂದೆ ನೀನು ಕಾಲೇಜು ಮೆಟ್ಟಿಲು ತುಳಿಯುವಾಕೆ. ಅಲ್ಲಿಗೆ ಮಗು, ಮನೆಯಂಗಳದ ತೋಟ ದಾಟಿ ನಗರದ ಕಾಡಿನೊಳಗೆ ಕಾಲಿಡುತ್ತಿದ್ದೀಯಾ, ಜೋಪಾನ ಅಲ್ಲಿ ಜೀವನಕ್ಕಾಧಾರವಾದ ಅನೇಕ ಥರದ ಹಣ್ಣು , ಹಂಪಲು, ವನಸ್ಪತಿಗಳಿವೆಯಾದರೂ ಕಾಡು ಮೃಗಗಳೂ ಬೇಟೆಗೆ ಹೊಂಚಿ ಕುಳಿತಿರುತ್ತವೆ.. ನಾನು ಹೇಳುತ್ತಿರುವ ಧಾಟಿ ಸ್ವಲ್ಪ ಕ್ಲೀಷೆ ಆಗ್ತಿದೆಯಲ್ವಾ? ಇರು ಸರಳವಾಗಿ ಹೇಳೋ ಪ್ರಯತ್ನ ಮಾಡ್ತೀನಿ. ನೋಡು ಪುಟ್ಟಾ, ನೀನೀಗ ನಿನಗೆ ಹೊಸದು ಎನಿಸುವ ಪ್ರಪಂಚಕ್ಕೆ ಕಾಲಿಡ್ತಿದೀಯಾ. ನಿನ್ನ ಸಂಭ್ರಮ, ದುಗುಡ ಎರಡೂ ಅರ್ಥ ಆಗ್ತವೆ ನನಗೆ. ನಾನೂ ಹಿಂದೆ ನಿನ್ನ ಸ್ಥಿತಿಯನ್ನು ದಾಟಿ ಬಂದವಳೇ ಅಲ್ಲವೇ? ಸಂಭ್ರಮ ಸಹಜ ಹಾಗೆಯೇ ದುಗುಡವೂ. ಭಯ ಬೇಡ ಪುಟ್ಟಾ ನಿನ್ನ ಜೊತೆ ನಾನಿದೀನಿ , ನಿನ್ನ ಅಪ್ಪಾಜಿ ಇದಾರೆ ನಿನ್ನ ಪುಟ್ಟ ಭಾವ ಜೀವದಾಸರೆಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಲು. ಆದರೆ ಎಲ್ಲವನ್ನೂ ನಾವೇ ಮಾಡಲಾಗುವುದಿಲ್ಲ ಆಲ್ಲವೆ? ನಿನ್ನನ್ನು, ನಿನ್ನತನವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಈಗ ಸಂಪೂರ್ಣ ನಿನ್ನದೇ. ನೀನು ತಿಳಿದಷ್ಟು ಲೋಕ ಸರಳವಾಗಿಲ್ಲ, ಸುಂದರವೂ ಅಲ್ಲ. ನಾನು ಹೀಗೆ ಹೇಳ್ತಿದೀನಿ ಅಂದ ಮಾತ್ರಕ್ಕೆ ಭಯಾನಕವೂ ಆಗಿಲ್ಲ ಬಿಡು. ಪಿಯುಸಿಯಲ್ಲಿ ನಿನ್ನ ಜೋತೆಗಿರೋರೆಲ್ಲ ನಿನ್ನ ಹಾಗೇನೇ ಒಂದು ಆತಂಕ ಹೊತ್ತೇ ಮೊದಲ ದಿನ ಕ್ಲಾಸಿಗೆ ಹೆಜ್ಜೆ ಇಟ್ಟಿರ್ತಾರೆ. ಮೊದಲಿದ್ದ ಸ್ನೇಹಿತರಿಲ್ಲ ಇಲ್ಲಿ. ಎಲ್ಲರೂ ಎಲ್ಲರಿಗೂ ಹೊಸಬರೇ. ಹೀಗಾಗಿ ಮೊದಲಿನ ವಾತಾವರಣ ಮರೆತು ಹೊಸದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತಾಗಬಹುದೇನೋ. ಭಯ ಬೇಡ, ಸ್ನೇಹಮಯಿ ನೀನು, ಬೇಗ ಹೊಸ ಸ್ನೇಹಿತರು ಸಿಗುತ್ತಾರೆ ಬಿಡು. ಆದರೆ ನಕ್ಕು ಮಾತಾಡಿಸಿದವರೆಲ್ಲ ಸ್ನೇಹಿತರಾಗಿಬಿಡೋದಿಲ್ಲ ನೆನಪಿರಲಿ. ಓದು ಈಗ ನಿನಗೆ ಮುಖ್ಯವಾಗಬೇಕು. ಹಾಗಂತ ನಿನ್ನ ನೆಚ್ಚಿನ ಹವ್ಯಾಸಕ್ಕೇನು ನಾನು ಅಡ್ಡಿ ಮಾಡೋಲ್ಲ ಭಯ ಬೇಡ. ಆದರೆ ನಿಮ್ಮಗಳ ಭವಿಷ್ಯ ರೂಪಗೊಳ್ಳ ತೊಡಗುವುದೇ ಹಂತದಲ್ಲಿ. ನಿಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಬೇಕಾದ ಜವಾಬ್ದಾರಿಯೂ ನಿಮ್ಮದೇ. ನಾವು ತಂದೆ ತಾಯಿಗಳು ನಿಮ್ಮಗಳ ಸದ್ವಿಚಾರಗಳಿಗೆ, ಒಂದು ಹಂತದವರೆಗಿನ ಆರ್ಥಿಕ ನೆರವಿಗೆ, ಒಳ್ಳೆಯ ಭಾವನೆಗಳಿಗೆ ಆಸರೆಯಾಗಿ ನಿಲ್ಲಬಲ್ಲೆವೆ ಹೊರತು ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಬೇಡ ನಮ್ಮಿಂದ. ಅಮ್ಮನ ಮಾತು ಕಠೋರ ಅನಿಸ್ತಿದೆಯಾ ಗೊಂಬೆ? ಇಲ್ಲ ಪುಟ್ಟಾ ಇದೇ ವಾಸ್ತವ. ಈಗಲೇ ನಿನಗೆ ಮತ್ತು ಅಮ್ಮೂಗೆ ವಿಚಾರ ಗೊತ್ತಿದ್ದರೆ ಮುಂದೆ ಭ್ರಮೆಯಲ್ಲಿ ಬದುಕಲಾರಿರಿ.
ಏನ್ ಗೊತ್ತಾ? ಇನ್ನು ಮುಂದೆ ನಿನ್ನ ಜೊತೆ ನಾನು ಸ್ವಲ್ಪ ಸ್ಟ್ರಿಕ್ಟ್ ಆಗಿ ವರ್ತಿಸಬಹುದು. ಸಿಟ್ಟಿಗೆಳಬೇಡ ನನ್ನ ಮಾತು ಪೂರ್ತಿ ಕೇಳು ಮೊದಲು. ಇಲ್ಲೀವರೆಗೆ ಯಾವತ್ತೂ ನಿನ್ನ ಮತ್ತು ಅಮೋಲನ್ನ ಬೇರೆಯಾಗಿ ನೋಡಿಕೊಂಡಿಲ್ಲ. ಹಾಗಂತ ಅವನು ಹೆಚ್ಚು ನೀನು ಕಡಿಮೆ ಅನ್ನೊ ಭಾವನೆಯಲ್ಲ. ನನಗೆ ನೀವಿಬ್ಬರೂ ಒಂದೇ..
ಆದರೆ ಈಗ ನಿನಗೆ ಅಂತಲೇ ಕೆಲವು ಮಾತುಗಳನ್ನ ಹೇಳಬೇಕಿದೆ, ನಿನಗೆ ಎಷ್ಟರ ಮಟ್ಟಿಗೆ ಅರ್ಥವಾಗುತ್ತೋ ಅರಿಯೆ. ಆದರೂ ನಿನಗೆ ತಿಳಿಯುವಂತೆ ಹೇಳುವ ಪ್ರಯತ್ನ ಮಾಡ್ತೀನಿ. ನೋಡು ಪುಟ್ಟಾ, ಸೃಷ್ಟಿಯಲ್ಲಿ ಹೆಣ್ಣು ಗಂಡುಗಳ ದೇಹ ರಚನೆಯಲ್ಲಿ ಅಗಾಧ ವ್ಯತ್ಯಾಸಗಳಿವೆ. ಆದ್ದರಿಂದಲೇ ಗಂಡು ಮತ್ತು ಹೆಣ್ಣು ಅಂತ ಗುರುತಿಸಲು ಸಾಧ್ಯವಾಗೋದು. ''ಇದೇನು ಅಮ್ಮಾ ಹೀಗೆ ಸಿಲ್ಲಿ ಸಿಲ್ಲಿ ಆಗಿ ಮಾತಾಡ್ತಿದಾಳೆ " ಅನಿಸ್ತಿದೆಯಾ? ಇರು ಒಮ್ಮೆ ನನ್ನ ಮಾತು ಮುಗಿಸಿಬಿಡ್ತೀನಿ, ನಂತರ ನಿನ್ನ ಕಮೆಂಟ್ಸ್ ಎಲ್ಲಾ ಸರೀನಾ? ದೇಹ ರಚನೆ