Tuesday, November 8, 2016

ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದಂತೆ

ಇದು ಇಂದಿನ ಪ್ರಜಾವಾಣಿಯ ‘ಮೆಟ್ರೊ’ ಪುರವಣಿಯಲ್ಲಿನ, ಜನದನಿಯ ಕಿರುಚಿತ್ರದ ಬಗೆಗಿನ ಬರಹವಾದರೂ ನನ್ನ ಒಡಲ ಕುಡಿ ಅಮೋಲ್ ಪಾಟೀಲ್’ ಸಹ ಬರಹದಲ್ಲಿ ಒಡಮೂಡಿದ್ದು ಕಂಡು ಸಂತಸದ ಕಡಲು ಈ ಮಡಿಲು. ಹೀಗೆ ನಿನ್ನ ಕೆಲಸಗಳಿಂದಲೆ ಗುರುತಿಸುವಂತೆ ಎತ್ತರೆತ್ತರಕ್ಕೆ ಬೆಳೆ ಕೂಸೆ.



Friday, November 4, 2016

ಹೃಸ್ವಕತೆ - ಕನ್ನಡಪ್ರಭ

http://www.kannadaprabha.com/rajyotsava/articles/tiny-tales-in-kannada/262670.html#.VjnrS7vWsd8.facebook

ಹೃಸ್ವಕತೆ-ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ಬಗೆ!

tiny tales
ಹೃಸ್ವಕತೆ

1) ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ. 
– ಅರ್ನೆಸ್ಟ್ ಹೇಮಿಂಗ್ವೇ [ಅಮೇರಿಕಾದ ಖ್ಯಾತ ಕತೆಗಾರ, ಪತ್ರಕರ್ತ)
(For sale: baby shoes, never worn. – Ernest Hemingway) 
2)  ಡೈನಾಸರ್: ಅವನು ನಿದ್ದೆಯಿಂದೆದ್ದಾಗ ಆ ಡೈನಾಸರ್ ಇನ್ನೂ ಅಲ್ಲಿಯೇ ಇತ್ತು. 
- ಅಗಸ್ತೊ ಮಾಂಟರ್ರೊಸೊ [ಗ್ವಾಟಾಮಾಲೆನ್ ದೇಶದ ಖ್ಯಾತ ಸ್ಪ್ಯಾನಿಶ್ ಕತೆಗಾರ] 
(The Dinosaur: When he woke up, the dinosaur was still there. – Augusto Monterroso)
ಈ ಎರಡು ಜಗತ್ತಿನ ಅತಿ ಸಣ್ಣ ಕತೆಗಳನ್ನು ಎಸ್. ದಿವಾಕರ್ ಸರ್ (ಖ್ಯಾತ ವಿಮರ್ಶಕ, ಕತೆಗಾರ) ನಮಗೆಲ್ಲ ‘ಈ ಹೊತ್ತಿಗೆ’ಯ ಚರ್ಚೆಯವೊಂದರಲ್ಲಿ ಹೇಳುತ್ತಾ ಅವುಗಳು ಜಗತ್ತಿನಾದ್ಯಂತ ಚರ್ಚೆಯಾದ ಬಗೆಯನ್ನು ವಿವರಿಸುತ್ತಿದ್ದರೆ ಅದನ್ನು ಕೇಳುತ್ತಿದ್ದ ನನ್ನ ಮೈ ನವಿರೆದ್ದಿತ್ತು! ಅಲ್ಲಿದ್ದ ಉಳಿದವರ ಸ್ಥಿತಿಯೂ ನನಗಿಂತ ಭಿನ್ನವಾಗಿರಲಿಲ್ಲ. ಜಗತ್ತಿನಾದ್ಯಾಂತ ತುಂಬಾ ಪ್ರಸಿದ್ಧಿ ಹೊಂದಿದ್ದು ಡೈನಾಸರ್ ಕತೆಯಾದರೂ (ಈ ಒಂದು ಸಾಲಿನ ಕತೆಗೆ ಮುನ್ನೂರು ಪುಟದ ವಿಮರ್ಶೆ ಬರೆದಿದ್ದಾರಂತೆ ಒಬ್ಬರು! ಕನ್ನಡದಲ್ಲಿ ಎಸ್. ದಿವಾಕರ್ ಸರ್ ಸಹ ಈ ಕತೆಯ ಕುರಿತು ಪುಟಗಳಗಟ್ಟಲೆ ವಿಮರ್ಶೆ ಬರೆದಿದ್ದಾರೆ.) ಮಗುವಿನ ಶೂ ಕತೆ ಸಹ ಕಡಿಮೆ ತಾಕತ್ತಿನದೇನಲ್ಲ. 
ನಂತರ ‘ಈ ಹೊತ್ತಿಗೆ’ಯ ಕಥಾ ಕಮ್ಮಟದಲ್ಲೂ ಈ ಅತಿ ಸಣ್ಣ ಕತೆಗಳ ಪ್ರಸ್ತಾಪವಾಯಿತು. ನಾನಿನ್ನೂ ಕಮ್ಮಟದ ಗುಂಗಿನಲ್ಲಿದ್ದಾಗಲೇ ಮನೋಹರ್ ನಾಯಕ್ (ಮುಂಬೈನ ಧ್ವನಿಮುದ್ರಣ (Audio Recording) ಸಂಸ್ಥೆಯಾದ ಲಿಂಗೊ ಇಂಡಿಯಾ ಲಿಮಿಟೆಡ್ನೇ ಮಾಲಿಕರು) ಅವರು ಫೇಸ್ಬುಸಕ್ನರಲ್ಲಿರುವ Terribly Tiny Tale ಪುಟದಿಂದಾಯ್ದ ಕತೆಗಳನ್ನು ಕನ್ನಡದಲ್ಲಿ ಭಾವಾನುವಾದ ಮಾಡುವ ಚಟುವಟಿಕೆಯೊಂದನ್ನು ತಮ್ಮ ಸ್ನೇಹ ಬಳಗದಲ್ಲಿ ಶುರು ಮಾಡಿದರು. ಅದು ನನಗೆ ತುಂಬಾ ಆಸಕ್ತಿದಾಯಕವೆನಿಸಿ, ಅವರ ಸಾರಥ್ಯದಲ್ಲೇ ಫೇಸ್ ಬುಕ್ ನ ನನ್ನ ಮುಖಪುಟದ ಮೇಲೆ ಮುಂದುವರೆಸಿದೆ. ಇದರಲ್ಲಿ ಸ್ನೇಹಿತರ ಪಾಲ್ಗೊಳ್ಳುವಿಕೆಯ ಉತ್ಸಾಹ ಕಂಡು ಕನ್ನಡ ಭಾಷೆಯದೇ ಇಂಥಾ ಕತೆಗಳಾದರೆ ಎಷ್ಟು ಚೆನ್ನ ಎನ್ನುವುದು ನನ್ನ ಮನದಲ್ಲಿ ಹೊಳೆದು, ಅದು ಹೃಸ್ವಕತೆಯ ಹುಟ್ಟಿಗೆ ಕಾರಣವಾಯಿತು.
ನಮ್ಮ ಕನ್ನಡಕ್ಕೆ ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ತಾಕತ್ತು ಹೇರಳವಾಗಿ ಇರುವುದರಿಂದ ಅಂಥ ಬಹಳಷ್ಟು ಅತಿ ಸಣ್ಣ ಕತೆಗಳನ್ನು ನಾವು ಕನ್ನಡಿಗರು ಕೊಡಬಲ್ಲೆವು ಅನಿಸಿತು. ಜೊತೆಗೆ ಹೊಸ ಬರಹಗಾರರು ಹೊಟ್ಟಿಕೊಳ್ಳಲು ಒಂದು ಅವಕಾಶವಿದು ಅಂತಲೂ ಅನಿಸಿತು. ಹೊಸ ವರ್ಷದ ಮೊದಲ ದಿನ ಇದನ್ನು ಕಾರ್ಯರೂಪಕ್ಕೆ ತರಬೇಕೆಂದು ನಿಶ್ಚಯಿಸಿದೆ. ಪುಟ್ಕತೆ ಅನ್ಬೇಕು ಅನ್ಕೊಂಡಿದ್ದೆ. ಹೃಸ್ವ ಪದ ಕಡಿಮೆ ಬಳಕೆಯಲ್ಲಿರುವುದರಿಂದ ಮತ್ತು ಅತೀ ಸಣ್ಣ ಅನ್ನುವ ಅರ್ಥವೂ ಇದೆಯಾದ್ದರಿಂದ ಹೃಸ್ವಕತೆ ಅಂದರೆ ಚೆನ್ನಾಗಿರುತ್ತೆ ಅಂದರು ಸ್ನೇಹಿತರಾದ ಮನೋಹರ್ ನಾಯಕ್. ಮನೋಹರ್ ಅವರೊಡನೆ ಪುಟ ವಿನ್ಯಾಸ ಕುರಿತು, ಪ್ರೊಫೈಲ್ ಫೋಟೊ ಮತ್ತದರಲ್ಲಿನ ಬರವಣಿಗೆ ಹೇಗಿರಬೇಕೆಂಬುದರ ಕುರಿತು, ಪುಟವನ್ನು ಸ್ನೇಹಿತರ್ಯಾರಾದರೂ ನನ್ನ ಜೊತೆಯಾಗಿ ನಿರ್ವಹಿಸಬಲ್ಲರಾ ಎನ್ನುವುದರ ಕುರಿತು ಸುಮಾರು ಹೊತ್ತು ಚರ್ಚಿಸಿ, ಕೊನೆಗೆ ಅಂಥವರು ಸಿಗದೇ, ನಾನೊಬ್ಬಳೇ ನಿರ್ವಹಿಸುವುದು ಎಂದಾಗಿ, ಪುಟದ ಪ್ರೊಫೈಲ್ ಮತ್ತು ಕವರ್ ಫೋಟೊಗಳನ್ನು ನನ್ನ ಮಗ ಅಮೋಲ್ ನಿಂದ ತಯಾರಿಸಿಕೊಂಡು (ಫೋಟೊಗಳ ರೀತಿಯಲ್ಲಿ ‘ಟೆರ್ರಿಬಲಿ ಟೈನಿ ಟೇಲ್’ನ ನಿರ್ವಾಹಕರು ಕತೆಗಳನ್ನು ಪ್ರಕಟಿಸುತ್ತಿದ್ದುದನ್ನು ಕಂಡು ಅದನ್ನೇ ಅನುಸರಿಸಿದೆ) ಇದೇ ವರ್ಷದ ಮೊದಲ ದಿನದಂದು ‘ಹೃಸ್ವಕತೆ’ ಪುಟವನ್ನು ಫೇಸ್ಬುಕ್ನಲ್ಲಿ ಪ್ರಾರಂಭಿಸಿಯೇಬಿಟ್ಟೆ.
ಹೀಗೆ, ೦೧ ಜನವರಿ ೨೦೧೫ರಂದು ‘ಹೃಸ್ವಕತೆ’ ಹುಟ್ಟಿಕೊಂಡಿತು. ೦೨.೦೧.೨೦೧೫ರಂದು ಮೊದಲ ಐದು ಕತೆಗಳು ಪ್ರಕಟಗೊಂಡವು. ನಂತರ ದಿನಕ್ಕೆರೆಡು ಕತೆಗಳು ಭಾನುವಾರದ ಹೊರತಾಗಿ ಪ್ರಕಟಗೊಂಡವು. ಈಗದು ನನ್ನ ಸಮಯದ ಅಭಾವದಿಂದಾಗಿ ಪ್ರತಿ ಗುರುವಾರಕ್ಕೊಮ್ಮೆ ಅಂತಾಗಿದೆ. ಉತ್ತಮವಾದವುಗಳನ್ನೇ ಆಯ್ದು ಪ್ರಕಟಿಸುವುದು ಎಂದು ನಿಶ್ಚಯಿಸಿರುವುದರಿಂದ ಕೆಲವೊಮ್ಮೆ ವಾರಕ್ಕೊಂದೇ ಕತೆ ಪ್ರಕಟಗೊಳ್ಳುವುದೂ ಇದೆ! ಅನೇಕ ಜನ ಸಾಹಿತ್ಯಾಸಕ್ತರು, ಕತೆಗಾರರು, ಹಾಗೂ ಕೋರಿಕೆಯ ಮೇರೆಗೆ ಕೆಲವು ಖ್ಯಾತ ಕತೆಗಾರರು ಇಲ್ಲಿ ಹೃಸ್ವಕತೆಗಳನ್ನು ಬರೆಯುವುದರ ಮೂಲಕ, ಓದಿ ತಮ್ಮ ಅಭಿಪ್ರಾಯಗಳನ್ನು , ಮೆಚ್ಚುಗೆಯನ್ನು ವ್ಯಕ್ತಪಡಿಸುವುದರ ಮೂಲಕ ಭಾಗವಹಿಸುತ್ತಾ ಹೃಸ್ವಕತೆ ಪುಟವನ್ನು ಮುನ್ನಡೆಸುತ್ತಿದ್ದಾರೆ. ಮುಂದುವರೆಸುವ ಭಾರವೂ ಅವರುಗಳ ಹೆಗಲ ಮೇಲಿಯೇ. ನಾನೇನಿದ್ದರೂ ಇಲ್ಲಿ ನಿಮಿತ್ತ ಮಾತ್ರ. 
ಅನೇಕ ವಾಹ್! ವಾಹ್! ಅನ್ನುವಂಥ ಕತೆಗಳು ಹೃಸ್ವಕತೆ ಪುಟದಲ್ಲಿ ಮೂಡಿದ್ದು ನನಗೊಂದು ಪುಟ್ಟ ಸಾರ್ಥಕತೆಯ ಭಾವವನ್ನು ಒದಗಿಸಿವೆ. ಇಲ್ಲಿಯವರೆಗೆ ಒಟ್ಟು 176 ಹೃಸ್ವಕತೆಗಳು ಪ್ರಕಟಗೊಂಡಿವೆ. ‘ಹೃಸ್ವಕತೆ’ ಪುಟಕ್ಕಾಗಿ ಕತೆಗಳನ್ನು ಬರೆಯುತ್ತಿರುವ ಎಲ್ಲ ಕತೆಗಾರರಿಗೂ ನಾನೀ ಹೊತ್ತಲ್ಲಿ ಕೃತಜ್ಞತೆಗಳನ್ನ ಹೇಳಲಿಚ್ಛಿಸುತ್ತೇನೆ. ನಡೆವ ದಾರಿ ಇನ್ನೂ ತುಂಬಾ ಉದ್ದಕಿದೆ. ನಮ್ಮ ಕನ್ನಡದ ಹೃಸ್ವಕತೆಗಳು ಜಗತ್ತಿನ ಅತ್ಯುತ್ತಮ ಅತಿ ಸಣ್ಣ ಕತೆಗಳ ಸಾಲಲ್ಲಿ ಸೇರಬೇಕೆಂಬುದು ನನ್ನಾಸೆ. ಅದು ನೆರವೇರುವುದೆಂಬ ಭರವಸೆಯೂ ನನಗಿದೆ. ಯಾಕೆಂದರೆ ಕನ್ನಡ ಭಾಷೆಯ ಸತ್ವ ಅಂಥದ್ದು.
ಇಲ್ಲಿ ಬರೀ ಕತೆಗಳ ಬಗ್ಗೆ ಮಾತ್ರವಲ್ಲ, ‘ಹೃಸ್ವಕತೆ’ ಎಂಬ ಶೀರ್ಷಿಕೆಯ ಬಗ್ಗೆಯೂ ಸಹ ಹೃಸ್ವ ಅಲ್ಲ ಅದು ಹ್ರಸ್ವ ಎಂದಾಗಬೇಕು, ನಿಘಂಟಿನಲ್ಲಿ ಹ್ರಸ್ವ ಎಂದಿದೆ ಎಂದು ಅನೇಕರು ಮುಕ್ತವಾಗಿ ಚರ್ಚಿಸಿದ್ದಾರೆ. ಹೌದು ನಿಘಂಟಿನಲ್ಲಿ ಹ್ರಸ್ವ ಎಂದಿದೆ ನಿಜ. ಆದರೆ ಮುಂಚೆ ಹೃಸ್ವ ಎಂದೇ ಬಳಕೆಯಲ್ಲಿತ್ತು ಈ ಪದ. ಜೊತೆಗೆ ಋ ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನಿಧಾನವಾಗಿ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅದನ್ನು ಚಿಕ್ಕಂದಿನಿಂದಲೂ ಬಳಸಿದ ವ್ಯಾಮೋಹ ಮತ್ತು ನಾನು ಕಲಿತಿದ್ದು (ಶಾಲೆಯಲ್ಲಿ ಕಲಿಸಿದ್ದು), ಅನೇಕ ಹಿರಿಯ ಖ್ಯಾತ ಸಾಹಿತಿಗಳೂ ಹೃಸ್ವ ಎಂದೇ ಬಳಸಿದ್ದು, ‘ಹೃಸ್ವ’ ಪದ ತಪ್ಪಲ್ಲವೆಂಬ ನಿರ್ಧಾರಕ್ಕೆ ಬರಲು ಕಾರಣವಾಗಿ ಹೃಸ್ವವನ್ನು ಹ್ರಸ್ವವನ್ನಾಗಿಸದೆ ಹಾಗೇ ಉಳಿಸಿಕೊಂಡು ಬಂದಿದ್ದೇನೆ.
ಹೃಸ್ವಕತೆ: ಸ್ನೇಹಿತರ ಕಿವಿಯಲ್ಲಿ ಮೆಲುದನಿಯಲ್ಲಿ ಗಹನವಾದುದನ್ನು ಚುಟುಕಾಗಿ ಹೇಳಿ ಮುಗಿಸುವಂತೆ, ಅದನಾಲಿಸಿದವರ ಕಣ್ಣಲ್ಲಿ ಮೂಡುವ ಬೆರಗಿನಂತೆ, ನೋವಿನಂತೆ, ನಲಿವಿನಂತೆ, ಅರ್ಥವಾಯಿತು ಎಂದು ತಲೆದೂಗಿದಂತೆ, ಕಣ್ಣು ಕಿರಿದಾಗಿಸಿ ವಿಚಾರ ಮಾಡುವಂತೆ, ಓದಿದವರು ಮರೆಯದಂತೆ ಕಾಡುವ, ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ಬಗೆ! 
-ಜಯಲಕ್ಷ್ಮೀ ಪಾಟೀಲ್
ಫೇಸ್ ಬುಕ್ ನಲ್ಲಿ ಹೃಸ್ವ ಕತೆ : http://on.fb.me/1PlR020
Posted by: RK | Source: Online Desk

Tuesday, October 25, 2016

ತೋಂತನನ ಧಿರಿನ...



ಇದು ನಾನು ಬರೆಯುತ್ತಿರುವ ಕತೆಯ ಭಾಗ. ಕತೇನ ಮುಂದುವರೆಸೋದಾ? ಬೇಡ್ವಾ? ಹೇಳಿ.

ತೋಂತನನ ಧಿರಿನ...
------------------------

“ಐ ಲವ್ ಯೂ”

“ನಾನೂ”

“ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?” ಹೀಗೆ ಕೇಳುವಾಗ ತುಂಟ ನಗೆಯೊಂದು ಅವನ ಮುಖದಲ್ಲಿ ಮೂಡಿರುವುದನ್ನು ಅವನ ದನಿಯಿಂದಲೇ ಗುರುತಿಸಬಲ್ಲಳು ಅವಳು. ಅದು ಅವಳನ್ನು ಇನ್ನೂ ನಾಚಿಕೊಳ್ಳುವಂತೆ ಮಾಡಿಬಿಡುತ್ತದೆ.

’ಏನಿಲ್ಲ” ಎಂದು ಬಿಡುತ್ತಾಳೆ ಪಟಕ್ಕಂತ.

“ರೀ ಬೇಗ, ಫೋನ್ ಬಿಲ್ ಹೆಚ್ಚಾಗುತ್ತೆ”

“ಊಂಹೂಂ ನನ್ ಕೈಲಾಗಲ್ಲ ಹೋಗ್ರಿ”

“ಕೈಲೆ ಅಲ್ಲ್ರೀ ಬಾಯಿಲೆ ನೀವು ಹೇಳಬೇಕಾಗಿದ್ದು, ಪ್ಲೀಸ್ ಪ್ಲೀಸ್ ಪ್ಲೀಸ್”

“ರೀ....”

“ಏನ್ರೀ..?”

“ರೀ....” ಸತಾಯಿಸಬೇಡಿ ದಮ್ಮಯ್ಯ ಅನ್ನುವ ಕೋರಿಕೆ ದನಿಯಲ್ಲಿ.

“ಹೇಳ್ರೀ ಬೇಗ”

“ಊಂಹೂಂ”

"ನಾನ್ ಹೇಳಲ್ವಾ? ನಿಮ್ ಥರಾ ಆಡ್ತೀನಾ? ಇವತ್ತಿಗೆ ಆರ್ ತಿಂಗಳಾಯ್ತು, ನಾನು ದಿನಾಲೂ ತಪ್ಪದೇ ಅಷ್ಟಷ್ಟು ಸಲ ಹೇಳ್ತೀನಿ, ನೀವು ಮಾತ್ರ... ಇವತ್ತು ನೀವು ಹೇಳಿಲ್ಲಾಂದ್ರೆ ಅಂದ್ರೆ ನಾನಿನ್ಮುಂದೆ ಮಾತೇ ಆಡಲ್ಲ ಹೋಗಿ. ನಿಜ್ಜ ಹೇಳ್ತಿದೀನಿ!"

“ ರೀ ಪ್ಲೀssಸ್...”

“ಸರಿ ಹಾಗಿದ್ರೆ ಹೇಳಿ ಮತ್ತೆ. ಬೇಗ”

“ಅದು... ಅದು... ಅ.. ಅ..ಅ...” ಅವಳು ಫೋನ್ ಹಿಡಿದ ಅಂಗೈ ಪೂರ್ತಿ ಬೆವರಿ, ಸಣ್ಣಗೆ ಕಂಪಿಸುತ್ತಿರುವ ಹೃದಯ, ಅದರುತ್ತಿರುವ ತುಟಿ, ಮೈಯ ಇಡೀ ರಕ್ತ ಮುಖಕ್ಕೇ ನುಗ್ಗಿತೇನೋ ಎಂಬಂತೆ ಬಿಸಿಯಾದ ಮುಖ, ಲಜ್ಜೆಯಿಂದ ಬಾಗಿದ ಕಣ್ಣುಗಳು...

“ಹೂಂ....”

“...........”

“ಮಗೂ, ಪ್ಲೀಸ್ ಒಂದೇ ಒಂದ್ಸಲ...ಅದೇನ್ ಅಷ್ಟು ಕಷ್ಟದ್ದಾ? ಸೋ ಸಿಂಪಲ್, ನಾನ್ ಹೇಳೊಲ್ವಾ?”

ಸಹನೆಗೆಡದ ಅವನು ಪುಸಲಾಯಿಸುತ್ತಲೇ ಇದ್ದ. ಅವಳು ಅ... ಅ... ಐ.... ತಡವರಿಸುತ್ತಲೇ ಇದ್ದಳು. ಕೊನೆಗೊಮ್ಮೆ ಅವಳ ಕಣಕಣದಲ್ಲೂ ಹರಿದಾಡುತ್ತಿದ್ದ ಭಾವ ತುಟಿ ಬಿರಿದು ಉಕ್ಕಿದ್ದೂ ಆಯ್ತು! ಆ ಕಡೆಯಿಂದ ಮುತ್ತಿನ ಸುರಿಮಳೆ. ಈ ಕಡೆ ಇವಳು ಸಂಭ್ರಮಕ್ಕೆ ನಡುಗುತ್ತಿರುವ ಕಾಲುಗಳನ್ನು ಗಟ್ಟಿ ನೆಲಕ್ಕೂರುತ್ತಾ ಗೋಡೆಗಾನಿಸಿ ನಿಧಾನಕ್ಕೆ ಕುಳಿತುಕೊಂಡಳು. ಕೆಲ ಕ್ಷಣಗಳ ನಂತರ ಆ ಕಡೆಯಿಂದ ಅವನು ಮೃದುವಾದ ದನಿಯಲ್ಲಿ,
“ಫೋನ್ ಇಡ್ಲಾ...?’
ಇವಳು ಹೇಳಿದಳೋ ಇಲ್ಲವೋ ಅನ್ನುವಷ್ಟು ಮೆಲುದನಿಯಲ್ಲಿ, “ಊಂಹೂಂ......” ಫೋನ್ ಡಿಸ್ಕನೆಕ್ಟ್ ಮಾಡದೆ, ಮಾತೂ ಆಡದೆ ಮೌನವಾಗಿದ್ದುಕೊಂಡೇ ಎಷ್ಟೋ ಹೊತ್ತಿನ ತನಕ ಇಬ್ಬರೂ ಜೊತೆಗಿದ್ದರು, ತಂತಾನೇ ನಿಸ್ತಂತು ನಿಸ್ತೇಜವಾಗುವ ತನಕ....

ಏನೀ ಮಹಾನಂದವೇ, ಓ ಭಾಮಿನಿ, ಏನೀ ಸಂಭ್ರಮದಂದವೇ, ಬಲು ಚಂದವೆ...

ತನ್ನನ್ನು ತಾನು ಪ್ರೀತಿಸುವುದಕ್ಕಿಂತಲೂ ಅವನನ್ನು ಪ್ರೀತಿಸುವ ಅವಳ ನಡುವಳಿಕೆಯಲ್ಲಿ, ಮಾತಿನ ಹಿನ್ನೆಲೆಯಲ್ಲಿ ಡಿಫಾಲ್ಟ್ ಎಂಬಂತೆ ಅವನ ಪ್ರತಿ ಹೊಮ್ಮುತ್ತಿದ್ದ ಪ್ರೀತಿ, ಮಾತಾಗಿ ಬರಲು ಮಾತ್ರ ಯಾವಾಗಲೂ ಲಜ್ಜೆಯಿಂದಾಗಿ ತಡವರಿಸುತ್ತಿತ್ತು. ಅದನ್ನವ ಚೆನ್ನಾಗಿ ಬಲ್ಲವನಾಗಿದ್ದರಿಂದಲೇ ಅವಳಿಂದ ಐ ಲವ್ ಯೂ ಹೇಳಿಸಿಕೊಳ್ಳೋದು ಅವನಿಗೆ ಮುದ. ಸತಾಯಿಸಿ ಸತಾಯಿಸಿ ಅವಳಿಂದ ಹೇಳಿಸಿಯೇ ಸೈ. ಕೆಲವೊಮ್ಮೆ ಹೇಳಲೂ ಆಗದೆ, ಹೇಳದಿರಲೂ ಆಗದೆ, ಅವನು ಐ ಲವ್ ಯೂ ಅಂದಾಗಲೆಲ್ಲ “ನಾನೂss...” ಅಂದು ಬಿಡುವಳು. ಮತ್ತೆ ಅವನ ತುಂಟತನ ಶುರು, “ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?”

***

ಸಾಹಿತ್ಯ ಸಮಾರಂಭವೊಂದರಲ್ಲಿ ಅವರಿಬ್ಬರ ಪರಿಚಯವಾಗಿ ವರ್ಷದ ಮೇಲಾಗಿತ್ತು. ಯಾವುದಾದರೂ ಸಭೆ ಸಮಾರಂಭಗಳಲ್ಲಿ ಆಗಾಗ ಭೇಟಿಯಾದಾಗಲೆಲ್ಲ, ‘ಚೆನ್ನಾಗಿದೀರಾ?’ ‘ಚೆನ್ನಾಗಿದೀನಿ’. ‘ನೀವೂ” “ನಾನೂ’. ಎನ್ನುವುದರ ಜೊತೆಗೆ ಇನ್ನೊಂದೆರೆಡು ಮಾತುಗಳನ್ನು ಬಿಟ್ಟರೆ, ಹೆಚ್ಚು ಮಾತಿಲ್ಲದ್ದವರು ಅವರಿಬ್ಬರೂ. ಅದೊಂದು ದಿನ ಬಾಂದ್ರಾ ರೇಲ್ವೆ ಸ್ಟೇಷನ್ನಿನಲ್ಲಿ ಇವರಿಬ್ಬರ ಅಚಾನಕ್ ಭೇಟಿಯಾಗಿ, ಇಬ್ಬರೂ ಒಂದೇ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಗೊತ್ತಾಗಿ ಜೊತೆಗೂಡಿ ಸ್ಟೆಷನ್ನಿನ ಒಳಗೆ ಬರುವಷ್ಟರಲ್ಲಿ ಲೋಕಲ್ ಟ್ರೇನ್ ಬಂದು ನಿಂತಾಗಿತ್ತು. ಲೇಡೀಸ್ ಕಂಪಾರ್ಟ್ಮೆಂಟ್ ದೂರವಿದ್ದ ಕಾರಣ ತನ್ನ ಜೊತೆಗೇ ಬರಲು ಹೇಳಿದವನ ಮಾತನ್ನು ಒಪ್ಪಿದ ಅವಳು ಟ್ರೇನ್ ಹತ್ತಿದ್ದಳು. ಎಂದಿನಂತೆ ವಿಪರೀತ್ ರಶ್. ಜನರನ್ನು ತಳ್ಳಿಕೊಂಡು ಜಾಗ ಮಾಡಿಕೊಳ್ಳುತ್ತಾ, ಬಾಗಿಲಿಗೆ ತುಸು ದೂರವಾಗಿ ಬೆನ್ನಾಸರೆಗೆ ಜಾಗ ಸಿಕ್ಕಲ್ಲಿ ಬಂದು ನಿಂತವಳು ನುಗ್ಗುವ ಜನರ ಒತ್ತಡಕ್ಕೆ ಕದಲಲೂ ಆಗದೆ ನಿಲ್ಲಲೂ ಆಗದೆ ಒದ್ದಾಡುತ್ತಿರುವಷ್ಟರಲ್ಲಿ, ಅವಳನ್ನು ಮುಂದು ಮಾಡಿಕೊಂಡು ಏರಿದ್ದ ಅವನು ಅವಳ ಎದುರು ನಿಂತು, ಅವಳು ಆಸರೆಯಾಗಿ ನಿಂತ ಆ ಕಬ್ಬಿಣದ ಗೋಡೆಯ ಮೇಲೆ ತನ್ನೆರೆಡೂ ಕೈಗಳನ್ನೂರಿ ಅವಳಿಗೆ ಭದ್ರ ಕೋಟೆಯಾಗಿ ನಿಂತ. ಉಸಿರಾಡಲು ತುಸು ಗಾಳಿ ಸಿಕ್ಕಂತಾಗಿ ಅವಳು ಸಾವರಿಸಿಕೊಂಡು ತಲೆ ಎತ್ತಿ ನೋಡಿದರೆ ನಾಲ್ಕು ಬೆರಳಿನಂತರದಲ್ಲಿ ನಿಂತಿದ್ದ ಅವನು! ಥ್ಯಾಂಕ್ಸ್ ಹೇಳಲು ಬಾಯ್ದೆರದವಳನ್ನು ಸುಮ್ಮನಾಗಿಸಿ ಅರಿವಿಲ್ಲದೆಯೇ ಲಜ್ಜೆಯಿಂದ ನೆಲ ನೋಡುವಂತೆ ಮಾಡಿದ್ದು ಅವನ ಕಣ್ಣುಗಳು! ಆ ಒಂದು ಕ್ಷಣದಲ್ಲಿ ಅದೆಷ್ಟೆಲ್ಲ ಮಾತನಾಡಿದ್ದವು ಮಿತಿಭಾಷಿಯ ಕಣ್ಣುಗಳು! ಉಸಿರಾಡಲು ಸಿಕ್ಕ ತುಸು ಗಾಳಿಗೀಗ ಮಧುರ ಕಂಪೊಂದು ಬೆರೆತು ನಸುಕಂಪನ ಅವಳ ಒಡಲಲ್ಲಿ...

ಯಾವುದೀ ಹೊಸ ಸಂಚು, ಎದೆಯಂಚಿನಲಿ ಮಿಂಚಿ.... ಮನಸು ಕನಸುಗಳನ್ನು ಕಲಿತಿರುವುದು.. ಗಿರಿ ಕಮರಿಯಾಳದಲಿ ತೆವಳಿಟ್ಟ ಭಾವಗಳ, ಮುಗಿಲ ಮಂಚದಲ್ಲಿಟ್ಟು ತೂಗುತಿಹುದು...

- ಜಯಲಕ್ಷ್ಮೀ ಪಾಟೀಲ್

Sunday, October 16, 2016

ನೆಲ ಸೋಕದ ಕನಸು

ಆಸರೆ ಬಯಸುವ ಮನಸು
ಜೀಕುವುದು ಅನವರತ ಕನಸು
ಕನಸುಗಳನು ಕೊಲ್ಲುವ ಮೊನಚು
ಶರಗಳನ್ನು ಹೂಡುವನು ಕಾಲ
ಹೆದೆಯೇರಿಸಿ ಬಿಲ್ಲ ಝೇಂಕರಿಸುತ್ತಾ
ಹೂಂಕರಿಸುತ್ತಾ ಅಟ್ಟಹಾಸ
ಅನುಗೊಳ್ಳಬೇಕು ನನಗೆ ನಾನೆ ಎನ್ನುವ ಆಸರೆಗೆ
ಮಟ್ಟಹಾಕಬೇಕು ವಿಕಟ ಅಟ್ಟಹಾಸವ
ಕಾಲನನ್ನು ಕಾಲಲ್ಲಿ ಮೆಟ್ಟಿ ಕುಣಿಸಬೇಕು
ನೆಲ ಸೋಕದ ನನ್ನ ಹೆಜ್ಜೆಗಳ ತಾಳಕ್ಕೆ
ಗೆಜ್ಜೆಗಳ ಝೇಂಕಾರ ಮುಗಿಲು ಮುಟ್ಟಬೇಕು
ಕಾಲ ದಣಿದು ಬಸವಳಿದು ಕಾಲ್ಕೋಳವಾಗುವ
ಮೊದಲು ಸಾಗಬೇಕು ಕುಣಿತದ ಹೆಜ್ಜೆ
ದೂರ ದೂರಕ್ಕೆ ಎತ್ತರೆತ್ತರಕ್ಕೆ
ತೇಲಬೇಕು ಗಾಳಿಯಲ್ಲಿ ಸುಗಂಧವಾಗಿ
ಅದೋ ಅದೋ ಕನಸುಗಳು
ನನಸಾಗಿ ಘಮಗುಡುತ್ತಾ ಮುಗಿಲೇರಿ
ಮುತ್ತಿಕ್ಕಿದ ಮುದಕೆ ಗಗನ ದ್ರವಿಸಿ
ಹನಿಯುತಿದೆ ಭುವಿಯೊಡಲಲಿ
ಮತ್ತೆ ಅದೆಷ್ಟೋ ಕನಸುಗಳ ಮೊಳೆಕೆ
ಕನಸಿಗೂ ಕಾಲನಿಗೂ ಹೊಸ ಹುಟ್ಟು ಏಕಕಾಲದಲ್ಲಿ...

- ಜಯಲಕ್ಷ್ಮೀ ಪಾಟೀಲ್
(೧೫-೧೦-೨೦೧೬)

Wednesday, September 21, 2016

ಗೋಪಾಲ್ ವಾಜಪೇಯಿ ಕಾಕಾ...

ವಾಜಪೇಯಿ ಕಾಕಾ...
ನಾ ನಿಮ್ಮನ್ನ ಮದ್ಲೆ ಸರ್ತಿ ಭೆಟ್ಟಿ ಆಗಿದ್ದು ಯಾವಾಗ ಅಂತ ನೆನಪ ಆಗವಲ್ತು... :( ನಿಮ್ಮನ್ನ ಕಾಕಾ ಅಂತ ನಾನs ಮೊದಲ ಕರ್ದಾಕಿ. ಆಮ್ಯಾಲೆ ಎಲ್ಲಾರಿಗೂ ಇಲ್ಲಿ ನೀವು ಕಾಕಾ ಆದ್ರಿ. ಇನ್ನ ಕೆಲವು ಮಂದಿಗೆ ಮಾಮಾ ಆದ್ರಿ, ದೊಡ್ಡಪ್ಪ ಆದ್ರಿ, ಅಜ್ಜಾರಾದ್ರಿ, ಗೋ ವಾ ಸರ್ ಅಂತೂ ಸುರೂನಿಂದ ಇದ್ದ್ರಿ.

ಅವತ್ತ ನೆನಪೈತಿ ನಿಮಗ? ಸುನಿಲನ ಹುಟ್ಟಿದ ಹಬ್ಬಾ ಅಂತ ಅಂವಾ ನಮ್ಮೆಲ್ಲಾರ್ನೂ ಕರ್ದಿದ್ದ. ಮರದಿನಾನs ನಮ್ಮನ್ಯಾಗ ‘ಸಂಗೀತ ಸಂಜಿ’ ಇತ್ತು. ಬರ್ರಿ ಕಾಕಾ ಮನಿಗೆ ಅಂದೆ ನಾ. "ಒಬ್ಬಾಂವಗ ಮನಿ ಹುಡುಕ್ಕೊಂಡು ಬರೂದು ಆಗುದಿಲ್ಲ ಜಯಕ್ಕಾ, ಯಾರರ ಜೋಡ ಆದ್ರ ಬರ್ತೀನಿ" ಅಂದ್ರಿ. ನಿಮ್ ಬಾಜೂಕ ನವೀನ್ ಸಾಗರ್ ಕುಂತಿದ್ದ್ರು. ಅವ್ರಿಗೆ ಕೇಳ್ಕೊಂಡೆ. ನವೀನ್ ಹೂಂ ಅಂದೋರು ಅದೇನಾತೋ ಬರ್ಲಿಲ್ಲ, ಆದ್ರ ನೀವು ಬಂದ್ರಿ ಮಗನ್ನ ಕರ್ಕೊಂಡು. ಎಷ್ಟು ಖುಷಿ ಆತಂತೀರಿ ಅವತ್ತ! ಬಂದ್ರಿ, ಭಾರಿ ಖುಷೀಲೆ ಹಾಡಾ ಕೇಳಿದ್ರಿ. ರಮೇಶ್ ಗುರುರಾಜ್ ಸರ್ ರಂಗಗೀತೆ ಹಾಡಿದಾಗಂತೂ ನಿಮ್ಮಾರಿ ನೋಡುವಂಗಿತ್ತು! ಕೂಸಿಗೆ ಜಾತ್ರ್ಯಾಗ ಕಳ್ಕೊಂಡ ಅವ್ವ ಸಿಕ್ಕಷ್ಟು ಖುಷಿ ಇತ್ತು ನಿಮ್ಮ ಮಾರಿ ಮ್ಯಾಲೆ. ಕಣ್ಣಿಗೆ ಕಟ್ಟಿದಂಗೈತಿ ಅವತ್ತಿನ ನಿಮ್ಮ ಖುಷಿ. ಈಗ ಹಿಂಗ ನಾ ಮಾರಿ ಇಳಬಿಟಗೊಂಡು ಕುಂಡ್ರುವಂಗ ನೀವು ಮಾಡಿದ್ದು ನಿಮಗರ ಬರೊಬ್ಬರಿ ಅನಸ್ತೈತಿ?...

ನಿಮ್ಮ ‘ನಂದ ಭೂಪತಿ’ ಪುಸ್ತಕ ಹೊಳ್ಳಿ ಮತ್ತೊಮ್ಮೆ ಬಿಡುಗಡೆ ಆತಲ್ಲ ಅವತ್ತ, ಅದs ಸುಧಾ ಚಿದಾನಂದ ಗೌಡ ಮತ್ತ ಅವ್ರ ಮನಿಯವ್ರುದೂ ಪುಸ್ತಕ್‍ಗೋಳೂ ಬಿಡುಗಡೆ ಆದ್ವೂ, ಅವತ್ತ ನಾ ಮಂಗ್ಯಾನಂಥಾಕಿ ಭರ್ತಿ ಸಭಾದಾಗ, ಕುಂವಿ ಅವ್ರು ಹಿಂಗಂದ್ರು ಅಂತ ಯಾರೋ ಅಂದ ಮಾತಿಗೆ ಸಿಟ್ಟಾಗಿ, ಹಂಗೆಂಗಂದ್ರು ಅವ್ರು? ಅನಬಾರ್ದಿತ್ತು, ಹಂಗ ಹಿಂಗ ಅಂತ ಮೈಕ್ ಮುಂದ ನಿಂತು ಒದರ್ಯಾಡಿದೆ. ಹಂಗ ಮಾತಾಡ್ತಾ ಮಾತಾಡ್ತಾ ನಿಮ್ ಕಡೆ ನೋಡ್ದೆ. ನೀವು ಸಾಕ್ ಬಿಡಬೆ ಇನ್ನ ಅಂತ ಸೊನ್ನಿ ಮಾಡಿ ನನ್ನ ಗಪ್ಪ್ ಮಾಡಿದ್ದಲ್ದ, ಅಲ್ಲಿ ನಾ ಹಂಗ ವಿರೋಧಿಸಿ ಮಾತಾಡಿದ್ದಕ್ಕ ಸಿಟ್ಟಾದ ಒಂದಿಬ್ಬರನ್ನ ನನ್ನ ಪರ ನಿಂತು ಸುಮ್ಮ ಮಾಡಿದ್ರಿ. ಆಮ್ಯಾಕ ನಿಮಗ ನನ್ನಿಂದ ನಾಕ್ ಮಂದ್ಯಾಗ ಖಜೀಲ್ಯಾತು ಅನಿಸಿ, ಸಭಾ ಮುಗದ ಮ್ಯಾಲೆ, "ಕಾಕಾ, ನಾ ತಡಕೊಳ್ಳಾಕಾಗದ ಹೆಚ್ಚಿಗ್ ಮಾತಾಡ್ದೆ. ನನ್ನಿಂದ ನೀವು.."
"ಏನಾತ್ ತೊಗೊ ಜಯಕ್ಕಾ. ಆಕ್ಕಿರ್ತಾವು ಹಿಂಗ. ಅದನ್ನ ತಲಿಯೊಳಗ ಇಟಕೊಂಡು ಕುಂಡರ್ಬ್ಯಾಡ್ರಿ. ಹೋಗ್ಲಿ ಬಿಡ್ರಿ" ಅಂತ ಉಲ್ಟಾ ನನ್ನನ್ನs ಸಮಾಧಾನ ಮಾಡಿ ಸರಾಸರಾ ಅಲ್ಲಿಂದ ನಡದುಹೋದ್ರಿ. ಮತ್ತ ಬೇಕಾದಷ್ಟ ಸಲ ಸಿಕ್ಕ್ರಿ, ನಕ್ಕೋತ ಮಾತಾಡಿಸಿದ್ರಿ. ಆದ್ರ ಈಗ ಹಿಂಗ್ಯಾಕ ಹೊಡಮಳ್ಳಿ ಬರಾಕ ದಾರಿಲ್ಲದ ಊರಿಗೆ ನಡದ್ರಿ...?

ಅವತ್ತ ಮದ್ಯಾನ ಅನಸ್ತೈತಿ, ಫೋನ್ ಮಾಡಿದ್ರಿ. "ಜಯಕ್ಕಾ, ನನ್ನ ‘ಸಂತ್ಯಾಗ ನಿಂತಾನ ಕಬೀರ’ ನಾಟ್ಕಾ ರೀಡಿಂಗ್ ಮಾಡಿದ್ರ ಹೆಂಗ?" ಅಂದ್ರಿ. ನಾ ಗಬಗ್ನ ಒಪಗೊಂಡೆ. ಇಬ್ರೂ ಸೇರೇ ಒಂದಿಷ್ಟು ಮಂದಿ ಉತ್ತರ ಕರ್ನಾಟಕದ ಕಲಾವಿದರನ್ನ ಕೇಳಿದ್ವ್ಯಾದ್ರೂ ನೀವು ಕೇಳಿದಾಗ ಒಪಗೊಂಡು ಬಂದೋರ ಹೆಚ್ಚು. ನಮ್ಮನ್ಯಾಗs ರೀಡಿಂಗ್ ಆತು. ಮಂಜುಳಾ ಬಬಲಾದಿ, ಶ್ರೀಪತಿ ಮಂಜನಬೈಲು, ಧನಂಜಯ್ ಕುಲಕರ್ಣಿ, ಪ್ರಮೋದ್ ಶಿಗ್ಗಾಂವ್, ದಿಲಾವರ್, ರಾಜು ಕುಲಕರ್ಣಿ, ನೀವು, ನಾನು, ಮತ್ತ್ಯಾರಿದ್ದ್ರು...? ಮರತಿನ್ರಿ ಕಾಕಾ, ನೆನಪಾಗವಲ್ತು.. ರಾಜು ಕುಲಕರ್ಣಿ ಅವರಂತೂ ಹೊಸ್ಪೇಟಿಯಿಂದ ಬಂದಿದ್ದ್ರು. ನಾವೆಲ್ಲಾರು ನಾಟ್ಕಾ ವಾಚನಾ ಮಾಡಿದ್ವಿ, ಒಂದಿಷ್ಟು ಮಂದಿ ಹಚಗೊಂಡೋರು ಬಂದು ಕೇಳಿ ಭಲೆ ಅಂದ್ರು. ಮತ್ತೊಂದು ಖುಷಿ ನನ್ನ ಉಡ್ಯಾಗ ಹಾಕಿದ್ರಿ ನೀವು ಅವತ್ತ. ಇವತ್ತ್ಯಾಕ ಹಿಂಗ ಮಾಡಿದ್ರಿ...?

ಮಗನ ಮದವಿ ಮಾಡಿ, ನಮ್ಮನ್ನೆಲ್ಲಾ ಮನಿಗೆ ಕರ್ಶಿ ಊಟಾ ಹಾಕಿಶಿದ್ರಿ. ಫೋನ್ ಮಾಡೀದಾಗೆಲ್ಲಾ ನಕ್ಕೋತ ಮಾತಾಡಿದ್ದ್ರಿ, ಒಮ್ಮೆ ಫೋನ್ ಮಾಡಿದ್ದಾಗ ನಿಮಗ ಆರಾಮ್ ತಪ್ಪಿತ್ತು. ಸುಸ್ತ್ ಆಗಿದ್ದ್ರೂ ಬ್ಯಾಸರಾ ಮಾಡ್ಕೊಂಡಾಳು ಅಂತ ಭಿಡೇಕ್ ಬಿದ್ದು ನೀವು ದಣದ ದನ್ಯಾಗ ಮಾತಾಡೂದು ಕೇಳಿ ನಾನs ‘ರೆಸ್ಟ್ ಮಾಡ್ರಿ ಕಾಕಾ ನಾ ಮತ್ತ ಮಾತಾಡ್ತೀನಿ.’ ಅಂತ ಫೋನ್ ಇಟ್ಟಾಕಿ ಮತ್ತ ನಿಮಗ ಫೋನ್ ಮಾಡೂದು ಆಗಲಿಲ್ಲ...

ಧನಂಜಯ್ ಹೇಳಿದ್ರು ಅವತ್ತ, ನೀವು ‘ಬಚ್ಚಾಸಾನಿ’ ನಾಟ್ಕಾ ಬರ್ದು, ಧನಂಜಯ್ ನಿರ್ದೇಶನ ಮಾಡಿ, ನಾನು ಮತ್ತ ಹನುಮಕ್ಕ ಇಬ್ರೂ ಒಂದs ಪಾತ್ರಾನ ಬ್ಯಾರೆ ಬ್ಯಾರೆ ಶೋ ಮಾಡೂದು ಅಂತ. ಅವತ್ತ ಖುಷೀಲೆ ಕುಣಕೋತ ಹೂಂ ಅಂದಿದ್ದೆ. ಯಾಕೊ ತಡಾ ಆಗಾಕತ್ತೈತಲ್ಲಾ ಅಂತ ಅನಿಸಿ ನಿಮ್ಮನ್ನ ಕೇಳಿದ್ರ, "ಧಾರವಾಡದ ಮಂದಿ ಬಗ್ಗೆ ಒಂದಿಷ್ಟು ಬರ್ಯಾಕತ್ತೀನಿ. ಅದನ್ನಿಷ್ಟು ಮುಗಿಶಿಬಿಟ್ಟ್ನೆಪಾ ಅಂದ್ರ ನೆಕ್ಸ್ಟ್ ‘ಬಚ್ಚಾ ಸಾನಿ’ನs. ಮಾಡೂನಂತ ಮಾಡೂನಂತ." ಅಂತಂದ್ರಿ. ಹಂಗಂದೋರು ಹಿಂಗ ಎದ್ದ ಹ್ವಾದ್ರ ಏನ್ ಮಾಡೂನ್ ಹೇಳ್ರಿ ನಾವು...? :(

ಬದುಕು ಭಾಳ ದಣಿಶೇತ್ರಿ ಕಾಕಾ ನಿಮ್ಮನ್ನ, ಹೊಡತದ ಮ್ಯಾಲೆ ಹೊಡತಾ ಕೊಟ್ಟೂ ಸೋತಿದ್ದು ಅದs ಈಗ! ನೀವು ಗೆದ್ದ್ರಿ ಕಾಕಾ, ನೀವು ಗೆದ್ದ್ರಿ...


(ಜೂನ್ ೧, ೧೯೫೧- ಸೆಪ್ಟೆಂಬರ್ ೨೦, ೨೦೧೬)

Monday, September 12, 2016

ನೀರಡಿಸಿದೆ ನೀರು



ನೀರಡಿಸಿದೆ ನೀರು, ಭಯಗೊಂಡಿದೆ ಭುವಿಯು (೨)

ಇಲ್ಲದೆ ಹೋದರೆ ಜೀವಜಲ

ಬದುಕುವೆಯಾ ನೀ ಮರುಳ ಮರುಳ


ಜುಳುಜುಳು ನಾದವ ಕಾಪಿಡು ನೀ

ಹರಿಯುವ ತೊರೆಯನು ಕಾಪಿಡು ನೀ

ಜಿನುಗುವ ಸೆಲೆಯ ಕಾಪಿಡು ನೀ

ಹನಿಹನಿ ಪ್ರತಿಹನಿ ಕಾಪಿಡು ನೀ

ಸೊರಗಿದೆ ಕಡಲು ಒಣಗಿದೆ ಮುಗಿಲು (೨)

ಜ್ವಲಿಸುತ ಅಳುತಿದೆ ಇಳೆಯಾ ಒಡಲು

ನೀರಡಿಸಿದೆ ನೀರು ಭಯಗೊಂಡಿದೆ ಭುವಿಯು (೨)


ಉಸಿರಿಗೆ ಹಸಿರಿಗೆ ನೀರು ನೆಲೆ

ಅರಿಯದೆ ಹೋದೆವು ಅದರ ಬೆಲೆ

ಜೀವದ ಸೆಲೆಯ ಉಳಿಸೋಣ

ಬದುಕಿನ ಬಿಂದಿಗೆ ಭರಿಸೋಣ

ಮುಂದಿನ ಪೀಳಿಗೆ ಕಾಣದು ನಾಳೆಯ (೨)

ಉಳಿಸದೆ ಹೋದರೆ ಶರಧಿಯ ಮರುಳ

ನೀರಡಿಸಿದೆ ನೀರು, ಭಯಗೊಂಡಿದೆ ಭುವಿಯು (೨)


ಹಿಂದಿ ಮೂಲ: ಮುನ್ನಾ ಧೀಮನ್
ಅನುವಾದ: ಜಯಲಕ್ಷ್ಮೀ ಪಾಟೀಲ್ (15 ಜುಲೈ 2012)



JAL NAA JAAYE JAL

JAL NAA JAAYE JAL (2)

DHARAA NAA KAL HO MAARUTHAL

SAMBHAL JAA RE AB PAAGAL PAAGAL

JAL NAA JAAYE JAL

JAL NAA JAAYE JAL (2)


ANTRA 1

SAAGAR SAAGAR PEHRA DE

GAAGAR GAAGAR PEHRA DE

BOOND BOOND PAR PEHRA DE

BAADAL BAADAL PEHRA DE

NADI HAI PYAASI

GHADAA HAI PYAASA (2)

MAR NA JAAYE KAL AREY PAAGAL

JAL NAA JAAYE JAL

JAL NAA JAAYE JAL (2)




ANTRA 2

SAANSON KA AUR BOONDON KA

DONON KA BAL EK SAA

DONON JEEVAN BAANTEIN

DONON KA PHAL EK SAA

BOONDON KO BHI

SAANSON JAISI (2)

MAAN KE CHAL , AREY SAMAJH LE PAAGAL

JAL NAA JAAYE JAL

JAL NAA JAAYE JAL (2)

- Munna Dhiman

Wednesday, August 31, 2016

ಮರಳ ಮೇಲೆ ಬರೆದು ನನ್ನ ಹೆಸರ

ಮರಳ ಮೇಲೆ ಬರೆದು ನನ್ನ ಹೆಸರ ಮರಳಿ ಅಳಿಸದಿರು
ನಿಜ ನುಡಿಯುತಿವೆ ಕಣ್ಣುಗಳು ತುಳುಕುತಿರುವ ಪ್ರೀತಿಯ ತಡೆಹಿಡಿಯದಿರು ||ಪ||

ಕಂಡಿದ್ದಕ್ಕೆಲ್ಲ ಕತೆ ಕಟ್ಟುವರು ಕಂಡಕಂಡವರೆಲ್ಲ
ಎಲ್ಲರಿಗೂ ಕಾರಣಗಳ ಅರುಹುತ ಅಲೆಯದಿರು ||1||


ಎದುರಾದವರೆಲ್ಲ ಅಶ್ವಿನಿದೇವತೆಗಳಲ್ಲ
ಪ್ರೀತಿಯ ನೋವದು ಬಲು ಅಮೂಲ್ಯ ಅನ್ಯರೆದುರು ಅದನು ತೆರೆದಿಡದಿರು ||2||

ಕಂಡಿದ್ದಕ್ಕೆಲ್ಲ ಕತೆ ಕಟ್ಟುವರು ಕಂಡಕಂಡವರೆಲ್ಲ
ಎಲ್ಲರಿಗೂ ಕಾರಣಗಳ ಅರುಹುತ ಅಲೆಯದಿರು ||3||

ಭಾವನೆಗಳ ನಗರಿಯಲಿ ಈಗ ಆಲಿಕಲ್ಲಿನ ಮುಸಲ ಧಾರೆ
ಹೃದಯವ ಗಾಜಿನ ಪೆಟ್ಟಿಗೆಯಲ್ಲಿಟ್ಟು ಪ್ರದರ್ಶನಕ್ಕಿಡದಿರು ||4||

- (ಅನುವಾದ) ಜಯಲಕ್ಷ್ಮೀ ಪಾಟೀಲ್

*

ret par likh ke mera naam mitaayaa naa karo
aankh sach bolati hai pyaar chhupaayaa naa karo

log har baat kaa afasaanaa banaa lete hai
sabako haalaat ki rudaad sunaayaa naa karo

yeh zururi nahi har shakhs masihaa hi ho
pyaar ke zakhm amaanat hai dikhaayaa naa karo

shahar e ehasaas mein patharaav bahut hai mohasin
dil ko shishe ke jharokho mein sajaayaa naa karo

- Unknown Lyricist  



Saturday, August 27, 2016

ಒಲೆ

ಮುರಳಿ ಮೋಹನನ ಮಾತು ಗಾನ ವಾಹ್ವಾ ವಾಹ್ವಾ

ಮಿಂದೇಳುತ್ತಿದ್ದಾರೆ ಗೋಪ ಗೋಪಿಯರೆಲ್ಲ ಹಾಲಿನಲ್ಲಿ

ಅಡುಗೆ ಮನೆಯಲ್ಲಿ ಅವಳ ಕೈಯಲ್ಲಿ ಊದುಗೊಳವೆ

ಮತ್ತೆ ಮತ್ತೆ ಸೆರೆಯುಬ್ಬಿ ಕಣ್ತುಂಬಿ ಬರುತ್ತಿರುವುದು ಉರಿ

ಯದ ಹಸಿಹಸಿ ಕಟ್ಟಿಗೆ, ಮಡಿಲು ತುಂಬಿಕೊಳ್ಳುವ ಬಯಕೆ

ತಟ್ಟಿದ ಬೆರಣಿಯನ್ನೂ ಪುಟುವಿಗೆ ಇಟ್ಟಾಗಿದೆ ಒಲೆಗೆ

ಊಫ್… ಊಫ್… ತಿತ್ತಿ ತುಂಬಿಕೊಳ್ಳುತ್ತಿವೆ ಹೊಗೆಗೆ ಒಳಗೆ

ಹೊರಗೆ ಹೆಣ್ಣಿಗಾಗಿ ಕನಿಕರಿಸುವ ಚರ್ಚೆಗೆ ಅಮಲು

ರನ್ನ ಪಂಪರಾದಿಯಾಗಿ ಇಂದಿನವರೆಗೂ ಹರಿಯಿತದರ ಹೊನಲು

ನಡು ನಡುವೆ ಮಧು’ರ ಮಾತು ಮೆಲು ನಗು ಛೇಡಿಸುವಿಕೆ

ಗೆ ಇಲ್ಲೊಂದು ನಿಡಿದಾದ ನಿಟ್ಟುಸಿರು ಬಿಸಿಗೆ ಹೊತ್ತಬಾರದೆ ಒಲೆ

ಹಾಳಾದ್ದು ಬೆಂಕಿಪೊಟ್ಟಣದ ತುಂಬಾ ಮದ್ದಲ್ಲದ ಮದ್ದು

ತಡ ಮಾಡಿದರೆ ಪ್ರತಿಷ್ಠೆ ಹಾಳಾಗಿ ಬೀಳದಿರುವುದೆ ಗುದ್ದು?

ಪೆಟ್ಟುಂಡ ಮನಸದು ಒಡೆದ ಕಟ್ಟಿಗೆಯಂತೆ ಸಿಬಿರು ಸಿಬಿರು

ಹೊಗೆಗಿಂಡಿಯಿಂದಿಣುಕುವ ಬಿಸಿಲು ಕೋಲಿಗೆ ನೆಟ್ಟ ದಿಟ್ಟಿ

ಸುಟ್ಟ ಕನಸುಗಳ ಸಾಲು ಮೆರವಣಿಗೆಯ ತುದಿಯಲ್ಲಿ ಕಣ್ಣೀರ ಬಿಂದು

ಬಿಂದು ಬಿಂದು ಸೇರಿ ಮಿಂದು ಹೊತ್ತಿಕೊಳ್ಳುತ್ತಲೇ ಇಲ್ಲ ಒಲೆ

ಹಸಿ ಕಟ್ಟಿಗೆ ಹುಸಿ ಮದ್ದು ಇತ್ಯಾದಿ ರವುದಿ ಸಬೂಬು

ಗಳಿಂದ ಇಂಗಲಾರದು ಬದುಕ ಬಯಕೆ ಸಾಕು ಸಹಜ ಕಾತರ

ಹತ್ತದ ಒಲೆಯೀಗ ಅಗ್ನಿ ಪರ್ವತ ಜ್ವಾಲೆ

ಎದ್ದು ನಿಂತು ಒದರಿ ನೆರಿಗೆ ನೇರ ನಡೆದಳು ಬಯಲಿಗೆ

- ಜಯಲಕ್ಷ್ಮೀ ಪಾಟೀಲ್



Thursday, August 18, 2016

ಇಳಿಸಿದಂತೆ ಯಾವುದೋ ಋಣಭಾರವ - ಗುಲ್ಜಾರ್



Din kuch aise gujaarataa hai koyi - Gulzar


ಇಳಿಸಿದಂತೆ ಯಾವುದೋ ಋಣಭಾರವ
ದೂಡುತ್ತಿರುವೆ ನಿತ್ಯವೂ ದಿನವ

ಈ ಮನೆಯಲಿ ಯಾರೋ ಗುರುತಿಸಿದಂತೆ ನನ್ನ
ಕನ್ನಡಿಯ ಕಂಡು ತುಸು ಸಮಾಧಾನ

ಮತ್ತೆ ಯಾರೋ ಎಸೆಯುತಿಹರು ಕಲ್ಲ
ಪಕ್ವಗೊಂಡಿರಬಹುದು ಮರದಲ್ಲಿನ ಫಲ

ನಿನಗ್ಯಾರೋ ಮಾಡಲು ಹೊರಟಂತಿದೆ ಮೋಸ
ಮತ್ತೆ ಕಣ್ಣಲ್ಲಿ ಕಾಣುತಿದೆ ರಕ್ತದ ಹನಿಗಳ ವಾಸ

ಯಾರೋ ನನ್ನನ್ನು ಕರೆಯುತ್ತಿರುವಂಥ ಅನಿಸಿಕೆ
ಆಗಿನಿಂದಲೂ ಇಲ್ಲಿ ಬರೀ ನಿಶ್ಯಬ್ದದ ಆಲಿಕೆ


- ಜಯಲಕ್ಷ್ಮೀ ಪಾಟೀಲ್ (ಅನುವಾದ)

*
- Gulzar

Din kuch aise gujaarataa hai koyi
jaise ehasaan utaarataa hai ko_ii

aa_iinaa dekh ke tasallii hu_ii
ham ko is ghar me.n jaanataa hai ko_ii

pak gayaa hai shazar pe phal shayaad
phir se patthar uchhalataa hai ko_ii

phir nazar me.n lahuu ke chhii.nTe hai.n
tum ko shaayad mughaalataa hai ko_ii

der se guu.Njate.n hai.n sannaaTe
jaise ham ko pukaarataa hai ko_ii

ಔದಾರ್ಯ

ಮೀಸೆಯಲುಗಿಸಿ ಮೂಸುತ್ತಿದ್ದವು ನೊಣಗಳು
ಮಿಕ್ಕಿದನ್ನ ವಡೆ ಚೂರು ಪಾಯಸವಂಟಿದ ಪತ್ರೊಳೆ
ಗುಪ್ಪೆ ಗುಪ್ಪೆಗೂ ತಿಪ್ಪೆಯಲಿ ಗುಂಪಾಗಿ ಮುತ್ತಿಗೆ
ಸದ್ದಿಲ್ಲದಂತೆ ಪಾದಗಳೂರಿ ಪಾಲಿಗೆ ಬಂದ ನಾಯಿ
ಗುಂಪಿಗೆ ಗುಂಪೇ ಹೆದರಿ ಹಾರಿ ಗುಂಯಿಗುಟ್ಟಿದವು
ಹೆದರಿಸದೆ ಕಮಕ್ ಕಿಮಕ್ ಅನ್ನದೆ ಜೊತೆಗೂಡಿದ್ದೇ
ನಾಯಿಯ ಔದಾರ್ಯಕೆ ಹಿಗ್ಗಿ ಕೊಂಡಾಡಿ ಬಾಲ
ಸವರಿ ತಲೆ ಮೇಲೇರಿ ಬೆನ್ನ ಸವಾರಿ ಸೂಪರ್ರುರೀ
ದೊಡ್ಡ ಪಾಲು ದೊಡ್ಡ ಬಾಯಿಗೆ ಮಿಕ್ಕಿ ಉಳಿದರೆ ಸಣ್ಣವರಿಗೆ
ವಿಳಂಬಿಸದೆ ಶ್ವಾನಸ್ವಾಮಿಗಳು ಆಹಾರ ಸೇವಿಸಿ ಸಂತೃಪ್ತಿ
ನಿಂತ ನೆಲೆಯ ವೀಕ್ಷಿಸಿ ಹಾಗೇ ಗಿರ್ರನೆ ಸ್ವಪ್ರದಕ್ಷಿಣೆ ರಿಂಗ್ ರಿಂಗ್
ರೋಡಿಗಿಳಿದು ಬಿಜಯಂಗೈದರು ಘನಗಾಂಭಿರ್ಯದಿಂದ
ಮುರುಕಿರಿದ್ದ ನೊಣಗಳು ಎಗರಿ ಬಿದ್ದವು ಶುಷ್ಕ ತಿಪ್ಪೆಯ ಮೇಲೆ

- ಜಯಲಕ್ಷ್ಮೀ ಪಾಟೀಲ್

Tuesday, August 16, 2016

ಹೆಣ್ಣೆಂದರೆ



ದ್ರೌಪದಿಯ ದರುಶನವಾಯ್ತು!
ತಟ್ಟನೆ ತಿರುಗಿದೆ ಮತ್ತೊಮ್ಮೆ ಮಗದೊಮ್ಮೆ
ಇನ್ನೊಮ್ಮೆ ಎದುರಾಗಿತ್ತು ಅದೇ ಸಂಬೋಧನೆ

ಎದುರಿಗೆ ಐಸ್ಕ್ರೀಮಿನಂಥಾ ತಣ್ಣಗಿನ ಸಿಹಿದನಿ
ಮೆಚ್ಚುಗೆಯ ಮಾತದು ಕೊಂಕಿನ ಸೋಂಕಿಲ್ಲ
ನನ್ನೊಳಗಿನ ಅಗ್ನಿಕನ್ಯೆ ನಂದಾದೀಪವಾಗ

ನನ್ನ ನಾಟಕದ ದ್ರೌಪದಿಯ ಪಾತ್ರಕ್ಕೆ ನೀನೆ ಫಿಟ್ಟು
ಹೀಡಂಬಿ ಪಾತ್ರಕ್ಕೆ ಉಮಾಶ್ರಿ ಪರ್ಫೆಕ್ಟು
ಲಲಿತಕ್ಕ ಅಂದು ಹೇಳಿದ್ದು ಅನುರುಣಿಸಿತು ಮನದಿ

ನಿಲುವುಗನ್ನಡಿಯ ಎದುರಿನ ಅಲಂಕೃತ ರೂಪ
ರೂಪಗಳನು ದಾಟಿ ದ್ವಾಪರ ಯುಗದ ರಾಜಕಾರಣ
ದ ಚಾಟಿ ಏಟಿನ್ನು ಅನುಭವಿಸುತಲಿತ್ತು ಕಲಿಯುಗದಲ್ಲಿ

ಉರಿಯ ಉಯ್ಯಾಲೆಯಲ್ಲಿ ಬೆಂದವಳನ್ನು ಬಳಸಿತ್ತು
ಅಂಚಲ್ಲಿನ್ನು ಕೆಂಪು ಉಳಿಸಿಕೊಂಡ ತಣ್ಣಗಿನ ಕೆಂಡ
ದ ಸೀರೆ ಉಟ್ಟವಳು ಮಾತ್ರ ಇನ್ನೂ ಧಗ ಧಗ

ಶಿರದ ಮೇಲಿನ ಗುಗ್ಗಳ ಎದೆಯೊಳಗಿನ ಕಿಚ್ಚು ನೀನು
ನೀನಾಗಿ ನಟಿಸಿಯೇ ಜ್ವಲಿಸಿ ತಪಿಸುವ ನಾನು
ಪಾಂಡವರನ್ನು ಪಣಕ್ಕಿಟ್ಟು ಕೀಚಕರ ಕೊಲ್ಲಬಯಸುತ್ತೇನೆ

ಚೌಪದಿಗಳಂತೆ ವರ್ತಿಸುವ ಪಂಚರೊಡನೆಯ ಬದುಕು
ಸಾವಿರ ಹೆಂಡಿರ ಗಂಡನಿಗಿದ್ದಷ್ಟು ಸುಲಭವೆಲ್ಲಿತ್ತೆ ನಾರಿ ನಿನಗೆ
ತುಳಿದ ಸಪ್ತಪದಿ ಆಸೆಗಳನ್ನರಳಿಸಿತ್ತೇ ಇಲ್ಲಾ ನಿನ್ನ ಕೆರಳಿಸಿತ್ತೆ?

ದ್ರೌಪದಿಯ ಚೌಪದಿ ಸಪ್ತಪದಿಗೇ ಸೀಮಿತವಾಯಿತೆ ಮತ್ತೆ
ನಕ್ಕ ನಗುವಿಗೂ ಸತ್ತ ಮಗುವಿಗೂ ದಿಕ್ಕು ದೆಶೆ ತಪ್ಪಿ ಮಹಾಭಾರತ
ಹೆಣ್ಣೆಂದರೆ ಕರಗುವ ಐಸ್ಕ್ರೀ ಮ್ ಚಪ್ಪರಿಸಬಹುದಾದ ನಾಲಿಗೆ ಸ್ವಾದ!

- ಜಯಲಕ್ಷ್ಮೀ ಪಾಟೀಲ್
(ಫೇಸ್‌ಬುಕ್‌ ನ 'ಚೌ ಚೌಪದಿ' ಗುಂಪು ಈ ಪದ್ಯಕ್ಕೆ ಪ್ರೇರಣೆ)

Friday, July 8, 2016

ನಿರ್ವಾತದ ಗಾಳಿ

ಇದ್ದಕ್ಕಿದ್ದಂತೆ ಮೆಟ್ಟಿಕೊಳ್ಳುತ್ತದೆ ನಿರ್ವಾತದ ಗಾಳಿ
ಶ್ಯೂನ್ಯದೆಡೆಗೆ ಸಾಗುವ ದಾರಿಯಲ್ಲಿ ಆಗಾಗ
ಎದುರಗುವ ಮೈಲುಗಲ್ಲಿನಂತೆ ಧುತ್ತೆಂದು 
ಪ್ರತ್ಯಕ್ಷಗೊಂಡು ದಾಟಿ ಮುಂದೆ ಸಾಗಿ ಇನ್ನೆಲ್ಲೋ
ಕಳೆದುಹೋಗುವವರೆಗೂ ಕಾಡುತ್ತಲೇ ಇರುತ್ತದೆ
ಏನನ್ನು ಸೂಚಿಸುತ್ತದೆ?
ಸವೆದ ದಾರಿಯನೋ ಸವಿಸಬೇಕಾದುದನ್ನೋ?
ಬದುಕಿನ ಫಲವ ಪ್ರತಿಫಲಿಸಲೆಂದೇ ಸಪಾಟಾಗಿ ಕನ್ನಡಿಯಂತೆ
ನಿಂತ ಅಸಂಖ್ಯ ಸಂಖ್ಯೆ ಬರೆಯದ ಮೈಲುಗಲ್ಲುಗಳು
ಬಿಂಬಗಲ್ಲಿನಲ್ಲಿ ಶ್ಯೂನ್ಯ ಬಿಂಬ!
ನಕ್ಕು ನಗಿಸಿ ಅತ್ತು ಅಳಿಸಿ ಸುಖವನರಸಿ ಆಲಂಗಿಸಿದ್ದು
ಪದಗಳ ಪೋಣಿಸಿ ಧರಿಸಿದ್ದು ಅನ್ಯರ ಮೆರೆಸಿದ್ದು ಮೆರೆದಿದ್ದು
ಅಲ್ಲಲ್ಲಿ ಧ್ವಜನೆಟ್ಟು ಮಟ್ಟ ಹಾಕಲು ಬಂದವರ ಮೆಟ್ಟಿ ನಿಂತೆನೆಂದು ಅಟ್ಟ ಹತ್ತಿದ್ದು
ಸುಟ್ಟು ಹೋದವೇ ಹಿಂದೆ ಹಿಂದೆಯೇ ಹೆಜ್ಜೆ ಸಾಗಿದಂತೆ ಮುಂದೆ ಮುಂದೆ!
ಇದುವೇನೇ ಶ್ಯೂನ್ಯ ಸಂಪಾದನೆ? ಮತ್ತೆ
ಎತ್ತ ಸಾಗಲೆಂದು ಈ ಎದುರಿಗಿರುವ ದಾರಿ? ಇನ್ನೆಷ್ಟು ಹರದಾರಿ...?


-ಜಯಲಕ್ಷ್ಮೀ ಪಾಟೀಲ್

Monday, June 13, 2016

ಬೆಳೆ



ಅಗಿಯು ಗಿಡವಾಗಬೇಕು ಹೂ ಹಣ್ಣು ಬಿಡಬೇಕು
ಅಗೆಯುತ್ತಿರುತ್ತೇನೆ ಪಾತಿಯನ್ನು ಹಸನು ಮಾಡಲು

ಕಸದ ಜೊತೆ ಇನ್ನೊಂದು ಸಸಿ ಮೊಳೆತರಲ್ಲಿ
ಮತ್ತೊಂದು ಪಾತಿಯಲ್ಲಿಟ್ಟದನು ಪೊರೆದೇನು


ನೆಟ್ಟ ಸಸಿಯೇ ಕಾಣದಂತೆ ಕಸ ಆವರಿಸೆ
ಸುತ್ತಲೂ ತರಿಯದೆ ಪೊರೆದೇನು ಹೇಗೆ

ಕಸ ತೆಗೆವ ಭರದಲ್ಲಿ ಬೇರಿಗೆ ಕುರಪಿಯ ಅಲುಗು
ಜೀವರಸ ಜಿನುಗಿ ಕಣ್ಣ ಹನಿಯಾಗಿ ಮಣ್ಣು ಹಸಿಯಾಗಿ

ಧಕ್ಕೆಯ ದುಃಖ ಕೇವಲ ಅಗಿಯದ್ದಲ್ಲ ಅಗೆದ ಜೀವದ್ದೂ
ಕುರಪಿ ಹಿಡಿದ ಕೈಗೆ ಸಣ್ಣಗೆ ನಡುಕ

ಇಲ್ಲ ನಿನ್ನ ನೋಯಿಸಲಲ್ಲ ಈ ಆಯುಧ
ಇಲ್ಲಿ ಸಲ್ಲದ್ದನ್ನು ನಿವಾರಿಸಲು ಈ ಯುದ್ಧ

ಕೊಸರು ಕಳೆದು ಪೊರೆಯು ಹರಿದು ಕೊನರಬೇಕು ಗೆಳೆತನ
ಬೆಳೆದ ಗಿಡದಿ ಬಿಡುವ ಹೂ ಘಮಿಸೆ ಹಣ್ಣು ಹಂಚಿ ಉಣ್ಣುವುದೇ ಜೀವನ

-ಜಯಲಕ್ಷ್ಮೀ ಪಾಟೀಲ್

Saturday, June 11, 2016

ಪ್ರಜಾವಾಣಿಯಲ್ಲಿ ದಿನಾಂಕ ೧೬-೦೮-೨೦೧೩ ರಂದು ನನ್ನ ಬ್ಲಾಗ್ ಕುರಿತು

http://www.prajavani.net/article/%E0%B2%B9%E0%B3%87%E0%B2%B3%E0%B2%AC%E0%B3%87%E0%B2%95%E0%B3%86%E0%B2%A8%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%86-%E0%B2%8F%E0%B2%A8%E0%B3%86%E0%B2%B2%E0%B3%8D%E0%B2%B2%E0%B2%BE

ನಮಸ್ಕಾರ. ಹೌದು ಹೇಳಿಕೋಬೇಕೆನಿಸ್ತಿದೆ, ಹತ್ತು ಹಲವು ವಿಚಾರಗಳನ್ನು. ಮನದಲ್ಲೇಳುವ ಅಲ್ಲೋಲ ಕಲ್ಲೋಲಗಳನ್ನು’ – ಹೀಗೆ ತಮ್ಮ ಪರಿಚಯ ಶುರು ಹಚ್ಚಿಕೊಳ್ಳುವ ಜಯಲಕ್ಷ್ಮಿ ಪಾಟೀಲರು ಮೂಲತಃ ಬಿಜಾಪುರದವರು. ಈಗ ಬೆಂಗಳೂರು ವಾಸಿ. ‘ಹೇಳಬೇಕೆನಿಸುತ್ತಿದೆ...’ (antaraala-jayalaxmi.blogspot.in) ಅವರ  ಬ್ಲಾಗ್ ಹೆಸರು.
ಕಿರುತೆರೆಯ ವೀಕ್ಷಕರಿಗೆ ಜಯಲಕ್ಷ್ಮಿ ಪಾಟೀಲರದು ಪರಿಚಿತ ಮುಖ. ಪ್ರಸ್ತುತಈಟೀವಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ
ಟಿ.ಎನ್‌. ಸೀತಾರಾಂ ಅವರಮಹಾಪರ್ವಧಾರಾವಾಹಿಯಲ್ಲಿ ಜಯಲಕ್ಷ್ಮಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಡೆಯಲಾಗದೆ, ಕುರ್ಚಿಯಲ್ಲಿ ಕೂತಿರಬೇಕಾದ ಸ್ಥಿತಿಯಲ್ಲಿಯೂ ಜೀವನೋತ್ಸಾಹ ಕಳೆದುಕೊಳ್ಳದ ಹೆಣ್ಣುಮಗಳ ಪಾತ್ರದಲ್ಲಿ ಅವರು ಸಹೃದಯರಿಗೆ ಇಷ್ಟವಾಗಿದ್ದಾರೆ. ಪಾತ್ರದ ಜೀವಂತಿಕೆ ಅವರ ವ್ಯಕ್ತಿತ್ವಕ್ಕೂ ಹೊಂದುವಂತಹದು. ಓದು, ಬರಹ ಮತ್ತು ಸಂಗೀತ ಎಂದರೆ ಅವರಿಗೆ ತುಂಬಾನೇ ಇಷ್ಟ. ನಟನೆಯಂತೂ ಬದುಕಿನ ಅವಿಭಾಜ್ಯ ಭಾಗ ಎನ್ನುವಷ್ಟು ಆಪ್ತ. ಧಾರಾವಾಹಿಗಳ ಜೊತೆಗೆ ಕಲಾತ್ಮಕ ಸಿನಿಮಾಗಳಲ್ಲೂ ನಟಿಸುವ ಹಂಬಲ ಅವರದು. ಎಂಥ ಪಾತ್ರದಲ್ಲಿ ಬೇಕಾದರೂ ನಟಿಸಿಯೇನು, ಬದುಕಿನಲ್ಲಿ ಮಾತ್ರ ನಟನೆ ಕಷ್ಟ ಎನ್ನುವುದು ಅವರ ಅನಿಸಿಕೆ.
ಹೇಳಬೇಕೆನಿಸುತ್ತಿದೆ...’ ಜಯಲಕ್ಷ್ಮಿ ಪಾಟೀಲರ ಬಹುಮುಖಿ ಆಸಕ್ತಿಗಳ ಅಭಿವ್ಯಕ್ತಿಯಂತಿದೆ. ತಮ್ಮ ಅನಿಸಿಕೆಗಳು, ವಿಚಾರಗಳು ಹಾಗೂ ಅನುಭವಗಳ ಜೊತೆಗೆ ತಮ್ಮ ಒಡನಾಟಕ್ಕೆ ಬಂದವರ ಬರಹಗಳನ್ನೂ ಇಲ್ಲಿ ದಾಖಲಿಸಿದ್ದಾರೆ. ಹಾಗಾಗಿಯೇ ಪುಸ್ತಕವೊಂದರ ಮಾತುಕತೆಯ ಜೊತೆಗೆ ಸಂಗೀತ ಕಛೇರಿ ವಿವರಗಳೂ ಬ್ಲಾಗಿನಲ್ಲಿವೆ.  ಕಳೆದ ಬದುಕಿನ ಸಾವಧಾನ ಮತ್ತು ಏರುಗತಿಯ ವರ್ತಮಾನದ ಬದುಕಿನ ಸಾಮ್ಯತೆಗಳು ಮತ್ತು ವೈರುಧ್ಯಗಳನ್ನು ಕಾಣಿಸಲು ಬ್ಲಾಗ್ ಬರಹಗಳು ಹಂಬಲಿಸುವಂತೆ ಕಾಣಿಸುತ್ತವೆ. ಉದಾಹರಣೆಯಾಗಿ ಬರಹವೊಂದರ  ತುಣುಕು ನೋಡಿ
‘‘ಆರು ತಿಂಗಳ ಹಿಂದೆ ಪತಿಯನ್ನು ಕಳಿದುಕೊಂಡಿದ್ದ ೨೭ರ ಹರೆಯದ, ಪುಟ್ಟ ಮಗಳಿರುವ ನನ್ನ ತಂಗಿಗೆ (ಕಾಕಾನ ಮಗಳು) ಮೊದಲಿನಂತೆ ಅವಳು ಉಡುವುದು ತೊಡುವುದು ಮಾಡಲು ನಾವೆಲ್ಲ ಮನವೊಲಿಸುತ್ತಾ ಧೈರ್ಯ ತುಂಬಿ ಅವಳನ್ನು ರೆಡಿ ಮಾಡಿದ್ದೆವು. ಆದರೆ ಎಲ್ಲರಿಗೂ ಕಷ್ಟಕ್ಕೆ ಬಂದಿದ್ದು ಆಯಿಯನ್ನು ಒಪ್ಪಿಸುವ ವಿಷಯದಲ್ಲಿ. ಈಗ ನೋಡಿದರೆ ಎಲ್ಲಾ ಉಲ್ಟಾಪಲ್ಟಾ! ಹಣೆಯ ಕೆಂಪು ಬಿಂದಿ, ಕತ್ತಲ್ಲಿನ ಎರಡೆಳೆ ಸರ, ಕಿವಿಯ ಝುಮುಕಿ, ಮುಡಿಯ ಮಲ್ಲಿಗೆ ಎಲ್ಲವನ್ನು ಗಮನಿಸಿಯೂ ಯಾವುದನ್ನೂ ನಿರಾಕರಿಸಲಿಲ್ಲ ಅವರು! ಆಯಿಯ ಆಧುನಿಕತೆಗೆ ಖುಷಿಯಿಂದ ನಾವೆಲ್ಲ ಮೂಕರಾಗಿದ್ದೆವು. ಆಯಿಯ ಬಗೆಗೆ ನೋವು ಬೆರೆತ ಹೆಮ್ಮೆ ನನ್ನವ್ವನ ಕಣ್ಣಲ್ಲಿ.
ಮನೆಯಲ್ಲಿ ಮದುವೆ ಸಮಾರಂಭ. ಆಯಿ ಎಂದಿನಂತೆ ಎಲ್ಲರಿಗೂ ಕೆಲಸ ಹಂಚಿ ತಾವು ಮೇಲ್ವಿಚಾರಣೆ ಮಾಡುತ್ತಾ ನಿಂತಿದ್ದರು. ಆಕೆ ಯಾವತ್ತೂ ಯಾವ ಶುಭಕಾರ್ಯದಲ್ಲೂ ನೇರ ಭಾಗವಹಿಸಿದವರೇ ಅಲ್ಲ, ಯಾರಿಗಾದರೂ ಕುಂಕುಮವಿಟ್ಟಿದ್ದನ್ನೂ ಕಾಣೆ ನಾನು. ಅಂದೂ ಮತ್ತೊಮ್ಮೆ ಆಯಿ ಹೂವು ಮುಡಿಯಲಿ ಎಂಬ ಆಸೆಯಿಂದ ಮಾರುದ್ದ ಮಾಲೆಯನ್ನು ತೆಗೆದುಕೊಂಡು ಹೋಗಿ ಆಯಿಯ ಎದುರು ಹಿಡಿದೆ. ಸೌಮ್ಯವಾಗಿ ನನ್ನನ್ನು ನೋಡಿ, ‘ನನಗ ಬ್ಯಾಡ, ನೀ ಮುಡ್ಕೊ, ಸಣ್ಣಮಕ್ಕಳು ಮುಡ್ಕೊಂಡ್ರನ ಛಂದಎಂದು ಹೇಳಿ ನನ್ನನ್ನು ಸಾಗಹಾಕಿದರು ಅಲ್ಲಿಂದ. ಆಯಿಗೆ ನನ್ನ ಕಂಡರೆ ಪ್ರೀತಿಯಿಲ್ಲ, ಅದಕ್ಕೇ ನನ್ನ ಕೈಯಿಂದ ಆಕೆ ಹೂವು ಸ್ವೀಕರಿಸುತ್ತಿಲ್ಲ ಎನ್ನುವ ಭಾವನೆಯಿಂದ ಅವ್ವನ ಹತ್ತಿರ ಆಯಿಯನ್ನು ದೂರಿದೆ.
ಆಗ ಅವ್ವ, ‘ಬ್ಯಾಡ, ಆಯಿಗೆ ಇನ್ನೊಮ್ಮೆ ಹಂಗ ಹೂವ್ ಕೊಡಾಕ ಹೋಗಬ್ಯಾಡ, ಅವ್ರು ಮುಡ್ಕೊಳ್ಳಾಂಗಿಲ್ಲ.’ ಅಂದ್ಳು.
ಯಾಕ?’
ಯಾಕಂದ್ರ ಉಡಕಿಯಾದವ್ರು ಹೂವು ಮುಡೀಬಾರ್ದಂತ, ಯಾವ್ದ ಕಾರ್ಯಾದಾಗೂ ಭಾಗವಹಿಸ್ಬಾರ್ದಂತ, ಅದಕ ನಿಮ್ಮ್ ಆಯಿ ಹೂವ್ ಮುಡ್ಕೊಳ್ಳಾಂಗಿಲ್ಲ, ಯಾರಿಗೂ ಕುಂಕುಮಾ ಹಚ್ಚಂಗಿಲ್ಲ, ಆರ್ತಿ ಮಾಡಾಂಗಿಲ್ಲ. ಅದಕೇನಾಕ್ಕತಿ ನೀವು ನನಗ ಕುಂಕುಮಾ ಹಚ್ಚಿ ಆರ್ತಿ ಮಾಡ್ರಿ ಅಂತ ನಾ ಒಮ್ಮಿ ಹೇಳಿದ್ದಕ್ಕ ನನಗ ಬೈದು ಸುಮ್ನಾಗಿಸಿದ್ರುಅಂದಳು ಅವ್ವ.
ಉಡಕಿ ಅಂದರೆ ಮರುಮದುವೆ. ಆಯಿಗೆ ತೊಟ್ಟಿಲಲ್ಲೇ ಅಂದರೆ ಹಸುಗೂಸಾಗಿದ್ದಾಗಲೇ ತಾಳಿಕಟ್ಟಲಾಗಿತ್ತಂತೆ. ಹಾಗೆ ತಾಳಿ ಕಟ್ಟಿದ ಹುಡುಗ ತನ್ನ ಏಳನೇ ವಯಸ್ಸಲ್ಲಿ ಯಾವುದೋ ಖಾಯಿಲೆ ಬಂದು ತೀರಿಕೊಂಡ. ಮುಂದೆ ಆಯಿ ಹನ್ನೊಂದು ವರ್ಷದವಳಿದ್ದಾಗ ಹೆಂಡತಿ ಸತ್ತ ಹದಿನಾರು ವರ್ಷದ ನನ್ನ ಮುತ್ತ್ಯಾರ (ಮುತ್ತ್ಯಾ=ಅಜ್ಜ) ಜೊತೆ ಮದುವೆಯಾಯಿತು. ಹೀಗೆ ಉಡುಕಿಯಾದ ಹೆಣ್ಣು ಹೂ ಮುಡಿಯುವುದು, ಶುಭಕಾರ್ಯದಲ್ಲಿ ಭಾಗವಹಿಸುವುದರ ಹೊರತಾಗಿ ಉಳಿದೆಲ್ಲರಂತೆ ಸಂಸಾರ ಮಾಡಬಹುದು ಎನ್ನುವುದು ಮದುವೆಯ ನಿಯಮವಂತೆ. ಹಾಗಾಗಿ ಮೊಳಕಾಲುದ್ದದ ಕೂದಲು ಅದಕ್ಕೂ ಮಿಗಿಲಾದ ಆಸೆಗಳಿದ್ದರೂ ಆಯಿ ಅದನ್ನೆಲ್ಲ ಹತ್ತಿಕ್ಕಿ ಬಿಗಿ ತುರುಬು ಕಟ್ಟಿ ಬದುಕಿದ್ದರು. ತನ್ನ ಕೈಯಲ್ಲಿ ಸಾಧ್ಯವಾಗದ್ದನ್ನು ಮೊಮ್ಮಗಳಿಂದ ಸಾಧ್ಯ ಮಾಡಿಸಿದರು, ಅವಳನ್ನು ಬೆಂಬಲಿಸುವುದರ ಮೂಲಕ ಕೆಟ್ಟ ಪರಂಪರೆಯೊಂದನ್ನು ನಮ್ಮನೆಯಿಂದ ಒದ್ದೋಡಿಸಿದರು’’.
ಜಯಲಕ್ಷ್ಮಿ ಅವರ ಮೇಲಿನ ಬರಹ ಎರಡು ತಲೆಮಾರುಗಳ ಕಥನಗಳನ್ನು ಅತಿರೇಕವಿಲ್ಲದೆ ಓದುಗರ ಮುಂದಿಡುತ್ತದೆ. ಹೀಗೆ ಬದುಕಿನ ವೈವಿಧ್ಯ ಕಾಣಿಸುವ ಇಂಥ ಬರಹಗಳು ಬ್ಲಾಗ್ನಲ್ಲಿ ಸಾಕಷ್ಟಿವೆ. ಅಂದಹಾಗೆ, ಅವರು ಕವಿತೆಯನ್ನೂ ಬರೆಯಬಲ್ಲರು. ರಚನೆಯೊಂದರ ತುಣುಕು ನೋಡಿ
ಜಾಗತೀಕರಣದ ವ್ಯಾಕರಣ
ಸಸ್ತಾ ಮಾಲಾಗಿ ಏಳು ಸಮುದ್ರದಾಚೆಯ ಭದ್ರ ಕೋಟೆಯೊಳಗಿನ ರಾಜಕುಮಾರಿ
ಕಂಡವರ ಬೆರಳ ತುದಿ ತಾಕಿ ಬೆತ್ತಲೆ
ಬೆಲೆ ಕಳೆದುಕೊಂಡ ಬದುಕೀಗ
ಹಗಲಿನಲ್ಲೇ ಕತ್ತಲೆ
ಬದುಕಿನಲ್ಲಿ ಇರುವ ಬೆರಗು, ಕೊರಗು ಎರಡನ್ನೂ ಜಯಲಕ್ಷ್ಮಿ ಪಾಟೀಲರ ಬ್ಲಾಗು ಸಮಚಿತ್ತದಲ್ಲಿ ದಾಖಲಿಸಲು ಪ್ರಯತ್ನಿಸುತ್ತದೆ. ಜೀವನಪ್ರೀತಿಯ ಬರಹಗಳು ಓದಿನ ರುಚಿ ಹೆಚ್ಚಿಸುವಂತಿವೆ.
-  ಸಾಕ್ಷಿ