Monday, May 22, 2017

ಬುದ್ದ

ಮನಸು ಮಾಗತೈತಿ,
ಮನಿಬಿಟ್ಟು ಹ್ವಾದ್ರೂ ಮನ್ಯಾಗಿದ್ದ್ರೂ
ಮಾಯಿನಹಣ್ಣಿನ ಸುಗ್ಗೆಂತ ಹಣ್ಣಿನ
ಬುಟ್ಟಿನ ಎದ್ರಿಗಿಟ್ಕೊಂಡು ಕುಂತೆ
ಆಯಿ ಅಂದ್ಳು ಚೊಲೊ ಅಲ್ಲ ಅತೀ
ತಗಿ ಹತ್ತೀತು ಹೊರಕಡಿಗಿ ವಾಂತಿ
ಬುದ್ದ ಅಂದ ಆಸೆಯೆ ದುಃಖಕ್ಕೆ ಮೂಲ
ಆಯಿಗೂ ಬುದ್ದಗೂ ಫರಕ್ ಕಾಣಲಿಲ್ಲ

ಒಮ್ಮೊಮ್ಮೆ ಅನ್ಸ್ತೈತಿ ಇಟ್ಟ್ ಹೇಳಾಕ
ಅಂವ ಮನಿ ಬಿಟ್ಟು ಹೊಂಟ್ಯಾಕ?
ದೂರಿದ್ದು ಹೆಂಡ್ರಮಕ್ಕಳ ಜೀವಾ ತಿನ್ನಾಕ?

ಬುಡ್ಡಿದೀಪಾನೂ ಬೆಳದಿಂಗ್ಳೂ ಒಂದs ಏನು
ಯಾರೊ ಕೆಣಕಿ ಕೇಳಿ ನಕ್ಕಂಗಾತು
ಬುಡ್ಡಿದೀಪದ ಆಸ್ರ್ಯಾಗ ಕಾಣು ಸೂಜಿ ಕಣ್ಣು
ಬೆಳದಿಂಗ್ಳಿನ್ಯಾಗೂ ಕಂಡೀತು ಅಂತ ಸೂಜಿ
ದಾರದ ಜೊತಿ ಹೊರಗ ಬಂದ್ರ ಹೂವೆಲ್ಲ
ಓಡೋಡಿ ಬಂದು ಎದ್ರಿಗೆ ಪಾಳೇಕ ನಿಂತೂವು
ಮುಗಿಳ್ನಗಿ ಸದ್ದು ಆಯೀದೋ? ಬುದ್ದಂದೋ?

- ಜಯಲಕ್ಷ್ಮೀ ಪಾಟೀಲ್

Tuesday, May 16, 2017

ಮಾಯೆ

ಹೆಣ್ಣೆಂದರು ಜರಿದರು

ಹೆಣ್ಣೆಂದರು ಕೊಂಡಾಡಿದರು

ಹೆಣ್ಣೆಂದರು ಆಸೆಪಟ್ಟರು

ಹೆಣ್ಣೆಂದರು ಕೊಂಡರು ಮಾರಿದರು

ಹೊನ್ನು ಮಣ್ಣುಗಳ ಸಾಲಲ್ಲಿ ನಿಲ್ಲಿಸಿ

ಬೇಕು ಬೇಕೆನ್ನುತಲೇ ಬೇಡವಾದುದೆಂದರು


ತಮ್ಮೊಳಗಿನ ಮೋಹ; ಮಾಯೆ ಎಂದರು

ಮಾಯೆಗೆ ಹೆಣ್ಣ ರೂಪ ಕೊಟ್ಟರು

ಮಾಯೆಯ ಗೆಲಿದವನು ಅವನು!

ಬೀಗಿದರು ಮಾಯೆಗೆ ಸೋತವರೂ

ಮಾಯೆ ಸ್ತ್ರೀಲಿಂಗವೇ ಆದುದ್ಯಾಕೆ

ಮನಸಿನ ಕುದುರೆಗೆ ಕಡಿವಾಣವಿಲ್ಲದೆ

ಚಾಬೂಕು ನಮ್ಮ ಬೆನ್ನ ಸವರುವುದೇಕೆ

- ಜಯಲಕ್ಷ್ಮೀ ಪಾಟೀಲ್
(01-04-2017)