Monday, December 30, 2013

ಸಂಗೀತದ ಮುಗುಳ್ನಗೆ - ಪ್ರೀತಿ, ವಿಶ್ವಾಸ, ಗೆಳೆತನದ ಮುಗುಳ್ನಗೆ

ಮೊನ್ನೆ ಶನಿವಾರದ ‘ಮುಗುಳ್ನಗೆ’ಯ ಸಂಗೀತ ಸಂಜೆಯ ಕುರಿತು ರಮೇಶ್ ಗುರುರಾಜ್ ಅವರ ವಿಮರ್ಶಾ ಲೇಖನವಿದು. 
ಕಳೆದೆರಡು ವರ್ಷಗಳೂ ರಮೇಶ್ ಸರ್ ಹೀಗೇ ವಿಮರ್ಶೆ ಬರೆಯುವ ಮೂಲಕ ನನ್ನಲ್ಲೊಂದು ರಾಗಗಳ ಜ್ಞಾನದ ಬೆಳಕಿಂಡಿ ತೆರೆದು, ಶಾಸ್ತ್ರೀಯ ಸಂಗೀತ ಕೇಳುವ ಬಗೆಯನ್ನು ಹೇಳಿಕೊಟ್ಟವರು ಮತ್ತು ನಮ್ಮನೆಯ ಕಾರ್ಯಕ್ರಮ ಬರಹಗಳಲ್ಲಿ ದಾಖಲೆಗೊಂಡಿದೆ ಎಂಬ ಧನ್ಯತೆ ಹಾಗೂ ಹೆಮ್ಮೆಯ ಗರಿ ಮೂಡಿಸಿದವರು. 
ರಮೇಶ್ ಸರ್, `ಮುಗುಳ್ನಗೆ’ಯ ಸಂಗೀತ ಸಂಜೆಗೆ ನಿಮ್ಮ ಬರಹದ ಈ ಶಾಸ್ತ್ರೀಯ ಚೌಕಟ್ಟಿಲ್ಲದಿದ್ದಲ್ಲಿ ಅದು ಅಪೂರ್ಣವೇ ಸರಿ! ಮತ್ತೊಮ್ಮೆ ಸಂಗೀತ ಸುಧೆಯನ್ನು ಬರಹದ ಮೂಲಕ ಉಣಬಡಿಸಿದ್ದಕ್ಕೆ ನಮ್ಮ ಮನೆಯವರೆಲ್ಲರ ತುಂಬು ಹೃದಯದ ಕೃತಜ್ಞತೆಗಳು. ಧನ್ಯೋಸ್ಮಿ ಧನ್ಯೋಸ್ಮಿ!!

*****************************************************************************************************************
ಚುಮು ಚುಮು ಛಳಿಯ ಕಾಲಕ್ಕೆ ಬೆಚ್ಚಗಿನ ಅನುಭವ ಕೊಟ್ಟಿದ್ದು ಪಾಟೀಲ್ ದಂಪತಿಗಳ ಕುಟುಂಬದ ಪ್ರೀತಿ, ವಿಶ್ವಾಸ, ಗೆಳೆತನ (ಅರೆ... ಸವಿಯಾದ ಸಂಗೀತ, ಭೋಜನ ಮರೆಯುವುದಾದರೂ ಎಂತು !!)... ಈ ಬಾರಿ ಕೂಡ, ಕಳೆದೆರಡು ವರ್ಷಗಳಂತೆ, ಸಂಗೀತ ಧಾರೆ, ವಿಶ್ವಾಸದ ಸಿಹಿಯೊಂದಿಗೆ ಬೆರೆಸಿ ಕೊಟ್ಟಿದ್ದು ಪಾಟೀಲರು ಮತ್ತವರ ಕುಟುಂಬ.

ಆರಂಭಕ್ಕೆ ಜಯಲಕ್ಷ್ಮಿ ಪಾಟೀಲರ ಸೋದರನ ಮಗ ಸಂಕಲ್ಪ್ ಹಾಡಲು ಮೈಕ್  ಮುಂದೆ ಕೂತಿದ್ದ. ಬಹುಷಃ ಇದು warmup ಇರಬಹುದು ಎಂದೆನಿಸಿದ್ದ ನಮಗೆ ಅಚ್ಚರಿ ಕಾದಿತ್ತು. ಸಣ್ಣದಾಗಿ ಹಾಡಿ ಮುಗಿಸಬಹುದು ಎಂದುಕೊಂಡಿದ್ದ ನಮಗೆ ಅವನು ಬಾಗೇಶ್ರೀ ರಾಗದಲ್ಲಿ ಬಂದಿಶ್ ಹಾಡಲಿದ್ದಾನೆ ಎಂದು ತಿಳಿದಾಗ, ಫಟಕ್ಕನೆ ಸೀರಿಯಸ್ ಶ್ರೋತೃವಾಗಿ ಬದಲಾದೆ. ಹಾಡುವ ಮೊದಲು ಈ ಉದಯೋನ್ಮುಖ ಕಲಾವಿದ, ತಾನು ಹಾಡುತ್ತಿರುವ ಬಗ್ಗೆ ವಿವರವಾಗಿ ತಿಳಿಸಿಕೊಟ್ಟ. ಇದು ಶ್ರೋತೃಗಳಿಗೆ ಅನುಕೂಲವಾಯಿತು.

"ಕೌನ ಕರತ ತೋರೆ ಬಿನತಿ ಪೆ...." ಬಂದಿಶ್ ಶುರುವಾಯಿತು ಸ್ವರಗಳ ನಡುವಿನ ಓಡಾಟ, ಅವುಗಳ ಮೇಲಿನ ಹಿಡಿತದ (ಇದಕ್ಕೆ ಚಲನ್ ಮತ್ತು ಪಕಡ್ ಎನ್ನುತ್ತಾರೆ) ಬಗ್ಗೆ ಗಮನ ಕೊಡುತ್ತಿರುವುದು ಸ್ಪಷ್ಟವಾಗಿತ್ತು. ಸ್ವರ ವಿಸ್ತಾರದ ಭಾಗದಲ್ಲಿ ಸ್ವಾರಸ್ಥಾನಗಳು ಸಾಕಷ್ಟು ಸ್ಪಷ್ಟವಾಗಿ ಇತ್ತು. ಇನ್ನೂ ಪುಟ್ಟ ಕಲಾವಿದನಾದ್ದರಿಂದ ಶೃತಿಯ ಮೇಲೆ ಹಿಡಿತ ಬರಬೇಕಿದೆ. ಲಯದ ಜೊತೆ ನಡೆಯುವ ಅಭ್ಯಾಸ ಆಗಬೇಕಿದೆ. ಸಂಕಲ್ಪ್ ಜೊತೆ ಕೇದಾರ ಲಿಂಗ ತಬಲಾ ಸಾಥಿಯಾದರೆ ಹಾರ್ಮೋನಿಯಂ ಸಾಥ್ ನೀಡಿದ್ದು ಗುಂಡಪ್ಪ ಕಲ್ಭಾವಿ.

ನಂತರ, ಸಂಕಲ್ಪ್, ಅಕ್ಕನ ವಚನ "ಅರಿಯದವರೊಡನೆ ಸಂಗವ ಮಾಡಿದರೆ" ಹಾಡಿದ. ಇದರಲ್ಲಿನ ಸಾಲು "ಕರ್ಪೂರ ಗಿರಿಯ ಉರಿಯ ಕೊಂಬಂತೆ', ನನಗಂತೂ ಸಾಕಷ್ಟು ನನ್ನದೇ ಅನುಭವಗಳನ್ನು ಮರಳಿ ನೆನಪಿಗೆ ತಂದುಬಿಟ್ಟಿತ್ತು.

ಇದಾದ ಮೇಲೆ ಬಹು ನಿರೀಕ್ಷಿತ, ಸಿತಾರ್ ವಾದನಕ್ಕೆ ವೇದಿಕೆ ಅಣಿಯಾಯಿತು. ಅದ್ಭುತ ಕಲಾವಿದ ಸಂಜೀವ್ ಕೊರ್ತಿ ತಮ್ಮ ಸಿತಾರಿನೊಂದಿಗೆ ವಿಶಿಷ್ಟ ವಿಭಿನ್ನ ಪ್ರಪಂಚ ಸೃಷ್ಟಿಗೆ ಅಣಿಯಾದರು.

ಪ್ರಾರಂಭಕ್ಕೆ ದೇಸ್ ರಾಗದಲ್ಲಿ ನುಡಿಸಿದ ಖ್ಯಾಲ್ ವಿಶಿಷ್ಟ ಶೈಲಿಯ ಚಿತ್ರ ಕಟ್ಟಿಕೊಟ್ಟಿತ್ತು. ಈ ದೇಸ್ ರಾಗದ ಬಗ್ಗೆ ಸ್ವಲ್ಪ ಹೇಳಬೇಕು. ಬಹುಷಃ ನಮ್ಮೆಲ್ಲರಿಗೂ ದೇಸ್ ರಾಗ ಎಂದ ಕೂಡಲೇ ನೆನಪಾಗುವುದು ದೂರದರ್ಶನದಲ್ಲಿ ಬರುತ್ತಿದ್ದ "ಬಜೇ ಸರ್ಗಮ್ ಹರ್ ತರಫ್ ಸೆ ಗೂಂಜ್ ಬನ್ ಕರ್ ದೇಸ್ ರಾಗ್" ಎಂಬ ಹಾಡು. ಹೌದು ಈ ಸುಂದರ ಕೃತಿ ರಚನೆಯಾದದ್ದು ದೇಸ್ ರಾಗದಲ್ಲಿಯೇ. ಖಮಾಜ್ ಥಾಟಿನ ಮೂಲದಿಂದ ಬಂದದ್ದು ಈ ದೇಸ್ ರಾಗ. ಇದು ಔಢವ-ಸಂಪೂರ್ಣ ರಾಗ. ಅಂದರೆ, ಆರೋಹಣದಲ್ಲಿ ೫ ಸ್ವರಗಳು (೫ ಸ್ವರಗಳಿದ್ದರೆ ಔಢವ ಎನ್ನುತ್ತಾರೆ) ಮತ್ತು ಅವರೋಹಣದಲ್ಲಿ ಎಲ್ಲಾ ೭ ಸ್ವರಗಳು (ಅದಕ್ಕೆ ಸಂಪೂರ್ಣ ಎನ್ನುತ್ತಾರೆ) ಪ್ರಯೋಗವಾಗುತ್ತವೆ.

ದೇಸ್ ರಾಗದ ಆಲಾಪದಲ್ಲಿಯೇ ಅದ್ಭುತವಾದ ಮೀಂಡ್ ಗಳ ಮೂಲಕ ಟ್ರಾನ್ಸ್ ಗೆ ಕರೆದೊಯ್ದ ಸಂಜೀವ ಕೊರ್ತಿ, ರಾಗದ ಆಳಕ್ಕೆ ನಮ್ಮನ್ನು ಕರೆದೊಯ್ದರು. ಸಿತಾರ್ ವಾದನ, ಸ್ವರಗಳು ಹೆಜ್ಜೆಯೊಳಗೊಂದು ಹೆಜ್ಜೆ ಇಟ್ಟು ನಡೆದ ಭಾವವನ್ನು ಕಟ್ಟಿಕೊಟ್ಟಿತ್ತು. ರಾಗದ ವಿಸ್ತಾರ, ಧ್ರುತ್ ಲಯದಲ್ಲಿ ಪ್ರಾರಂಭವಾಯಿತು (ಧ್ರುತ್ ಎಂದರೆ ವೇಗದ ನಡಿಗೆ ಮತ್ತು ವಿಲಂಬಿತ್ ಎಂದರೆ ನಿಧಾನ ನಡಿಗೆ). ಕಣ್ಣು ಮುಚ್ಚಿ ಕೇಳುತ್ತಿದ್ದರೆ, ಸ್ವರ ಗುಚ್ಛದಿಂದ ಸ್ವರ ಗುಚ್ಛಕ್ಕೆ ಚಲನ್, ಜಿಂಕೆಯೊಂದು ತನ್ನ ಗುರಿ ಸೇರಲು ಹಾರಿ ಸಾಗುವ ಚಿತ್ರ ಕಟ್ಟಿಕೊಟ್ಟಿತು. ಇದು ನಾನು ಅಂದು ದೇಸ್ ರಾಗ ಕಂಡುಕೊಂಡ ರೀತಿ.

ನಂತರ ಮೂಡಿಬಂದದ್ದು, ಕೀರವಾಣಿ ರಾಗದ ಪ್ರಸ್ತುತಿ. ಕರ್ನಾಟಕ ಸಂಗೀತದಿಂದ ಹಿಂದೂಸ್ತಾನಿ ಸಂಗೀತಕ್ಕೆ ಪ್ರಯಾಣಿಸಿದ್ದು ಎಂದು ಹೇಳಲಾಗುವ ಈ ರಾಗ ಇತ್ತೀಚಿಗೆ ಅಪರೂಪದ ಪ್ರಯೋಗ ಎಂದೇ ಹೇಳಬಹುದು. ಸಂಜೀವ ಕೊರ್ತಿ ಈ ರಾಗದ framework ತುಂಬಾ ಚೆನ್ನಾಗಿ ಕಟ್ಟಿಕೊಟ್ಟರು.  ಈ ರಾಗದೊಳಗಿನ ತೀವ್ರಭಾವ ಚೆನ್ನಾಗಿ ಮೂಡಿಬಂತು. ಪ್ರಸ್ತುತಿಯ ಕೊನೆಯಲ್ಲಿ ತಬಲಾದಲ್ಲಿ ಲಯಕಾರಿ (ಒಂದೇ ತಾಳವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸುವಿಕೆ) ತುಂಬಾ ವಿಶಿಷ್ಟವೆನಿಸುವ ರೀತಿಯಲ್ಲಿ ಇತ್ತು. ಸ್ವಲ್ಪ ಸಂಕೀರ್ಣ ಎನಿಸಬಹುದಾದ ಲಯಕಾರಿ ಈ ತಬಲಾ ಕಲಾವಿದನ ಕೈಚಳಕದಲ್ಲಿ ಸುಂದರ ಗುಚ್ಚವಾಗಿ ಅರಳಿತ್ತು.

ಇಲ್ಲಿಯವರೆಗೂ ಸಂಜೀವ್ ಕೊರ್ತಿ ಶುದ್ಧ ಶಾಸ್ತ್ರೀಯ ಎನಿಸುವ ಪ್ರಪಂಚ ಕಟ್ಟಿಕೊಟ್ಟರೆ, ಮುಂದೆ ಅವರು ತೆರೆದಿಟ್ಟಿದ್ದು ಇನ್ನೊಂದು ವಿಭಿನ್ನ ಪ್ರಪಂಚ. ಅದು ಧುನ್ ಗಳ ಪ್ರಪಂಚ. ನಾವು ಕನ್ನಡದಲ್ಲಿ ಜನಪದವೆಂದು ಹೇಳುವ, ಉತ್ತರ ಭಾರತದ ಲೋಕ್ ಸಂಗೀತ್ ಅನುಭವ ಕೊಟ್ಟ ಈ ಧುನ್ ಗಳು ವಿಶಿಷ್ಟವಾಗಿತ್ತು.

ನೆರೆದಿದ್ದ ಕಲಾ ರಸಿಕರ ಒತ್ತಾಯದ ಮೇರೆಗೆ ನುಡಿಸಿದ್ದು ಮದನ್ ಮೋಹನ್ ಸಂಗೀತ ನಿರ್ದೇಶನದ ವೋ ಕೌನ್ ಥಿ ಚಿತ್ರದ ಲತಾ ಮಂಗೇಶ್ಕರ್ ಹಾಡಿದ್ದ "ಲಗ್ ಜಾ ಗಲೇ, ಕೆ ಫಿರ್ ಯೇ ಹಸೀನ್ ರಾತ್' ಹೋ ನ ಹೋ...." ನಾವೆಲ್ಲಾ ವರ್ಷಗಳಿಂದ ಕೇಳಿದ್ದ ರಾಗ ಸಂಯೋಜನೆ ಮತ್ತು ಲಯದಿಂದ ಭಿನ್ನವಾಗಿ ಪ್ರಸ್ತುತಗೊಂಡ ಈ ಹಾಡು ಖುಷಿ ಕೊಟ್ಟಿತ್ತು (ಎಲ್ಲೋ  ಓದಿದ ನೆನಪು... ಮದನ್ ಮೋಹನ್ ಅವರಿಗೆ ಸಿತಾರ್ ತುಂಬಾ ಇಷ್ಟವಿತ್ತಂತೆ. ಹೀಗಾಗಿ ಸಾಧ್ಯವಿದ್ದಲ್ಲೆಲ್ಲಾ ತಮ್ಮ ರಾಗ ಸಂಯೋಜನೆಯಲ್ಲಿ, ಸಿತಾರ್ ಬಳಸಿಕೊಳ್ಳುತ್ತಿದ್ದರಂತೆ)

ಪ್ರಸ್ತುತಿಯನ್ನು ಚುರುಕುಗೊಳಿಸಿದ್ದು ಕಾಫಿ ರಾಗದ ಛಾಯೆಯಿದ್ದ ಠುಮ್ರಿ. ಸಾಮಾನ್ಯವಾಗಿ, ಹಿಂದೂಸ್ತಾನಿ ಸಂಗೀತದಲ್ಲಿ,ಹೋಳಿ ವರ್ಣನೆಗೆ ಕಾಫಿ ರಾಗ ಬಳಸುವ ಪದ್ಧತಿ ಇದೆ. ಹೀಗಾಗಿ ಇಲ್ಲಿ ಪ್ರಸ್ತುತಪಡಿಸಿದ ಠುಮ್ರಿ ಮತ್ತು ಹೋಳಿ ಛಾಯೆ ವಿಶಿಷ್ಟ ಎನಿಸಿತು.

ಸಂಜೀವ ಕೊರ್ತಿ ತಮ್ಮ ಸಂಗೀತ ಸುಧೆಯ ಕೊನೆಗೆ ತರಾನ ನುಡಿಸಿದರು. ಹಿಂದೂಸ್ತಾನಿ ಸಂಗೀತದ ತರಾನ, ಕರ್ನಾಟಕ ಸಂಗೀತದ ತಿಲ್ಲಾನ ಎರಡೂ ಒಂದೇ ನಾಣ್ಯದ ಮುಖಗಳು. ಯಾವುದೇ ಪದಗಳ ಪ್ರಯೋಗವಿಲ್ಲದೇ, ಬರೀ syllableಗಳ ಮೂಲಕ ಕಟ್ಟಿಕೊಡುವ ಒಂದು ವಿಶಿಷ್ಟ ಪ್ರಕಾರ ಇದು. ಯಮನ್ ರಾಗದಲ್ಲಿ ಪ್ರಸ್ತುತಗೊಂಡ ಈ ತರಾನದಲ್ಲಿ ವಿಶಿಷ್ಟವೆನಿಸಿದ್ದು ಸಿತಾರ್ ಮತ್ತು ತಬಲಾ ನಡುವಿನ ಸವಾಲ್ ಜವಾಬ್.

ಇವರಿಗೆ ತಬಲಾ ಸಾಥ್ ನೀಡಿದ ಕಲಾವಿದ ಅಮಿತ್ ಪಳಗುತ್ತಿರುವ ಕೈ.  ತಿಹಾಯಿಗಳು ಸರಾಗವಾಗಿ ಮೂಡಿಬರುತ್ತಿದ್ದವು.

ಇದಿಷ್ಟು ಒಂದು ತೂಕವಾದರೆ, ಅದಕ್ಕೆ ಕಳಶಪ್ರಾಯದಂತೆ ಮೂಡಿಬಂದಿದ್ದು ಸಂಜೀವ ಕೊರ್ತಿಯವರ ಸಹೋದರ ಪ್ರಸನ್ನ ಕೊರ್ತಿಯವರ ಗಾಯನ. ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪ್ರಸನ್ನ ಕೊರ್ತಿ ಮೂಲತಃ ಕಿರಾನಾ ಘರಾನಾದ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡವರು (ಈ ಘರಾನಾಗಳ ಬಗ್ಗೆ ಒಂದು ಲೇಖನವನ್ನೇ ಬರೆಯಬಹುದು. ಅಷ್ಟು ವಿಶಾಲವಾದ ಪ್ರಪಂಚ ಘರಾನಾಗಳದ್ದು).

ಪ್ರಸನ್ನ ಮೊದಲಿಗೆ ಹಾಡಿದ್ದು ಜೋಗ ಜೋಗ್ ರಾಗ. ಅತ್ರೌಲಿ ಘರಾಣೆಯ ಮೆಹಬೂಬ್ ಖಾನ್ ರಚಿಸಿದ್ದೆನ್ನಲಾದ (ಸ್ಪಷ್ಟವಾದ ಸಾಕ್ಷ್ಯಗಳಿಲ್ಲ) ಜೋಗ್ ರಾಗ, ದೇಸ್ ರಾಗದಂತೆ ಖಮಾಜ್ ಥಾಟ್ ಮೂಲದ ರಾಗ. "ಸಾಜನ್ ಮೊರ ಘರ್ ಆಯೇ... ಮನ್ ಅತಿ ಸುಖ್ ಪಾಯೇ...." . ಮೊದಲು ರಾಗದ ಲಕ್ಷಣವನ್ನು ಚೆಂದದಿಂದ ಕಟ್ಟಿಕೊಟ್ಟ ಪ್ರಸನ್ನ ಕೊರ್ತಿ, ನಂತರದಲ್ಲಿ ರಾಗವನ್ನು ಮನ ಮುಟ್ಟುವಂತೆ ಪ್ರಸ್ತುತ ಪಡಿಸಿದರು.

ದಾಸ  ಸಾಹಿತ್ಯದ, ಕೊನೆಯೇ ಇಲ್ಲದ ಭಂಡಾರದಲ್ಲಿ, ಎಲೆ ಮರೆಯ ಕಾಯಿಯಂತೆ, ಜನರಿಗೆ ಅಷ್ಟಾಗಿ ಪರಿಚಯವಿಲ್ಲದ ಸುರೇಂದ್ರದಾಸರು ರಚಿಸಿದ ಕೃತಿ "ತಾನೇ ಗೋಕುಲಕೆ ಬಂದ....ಶಿವ ಭವಭಯ ಹರ....". ಕೃಷ್ಣನನ್ನು ನೋಡಲು ಸಾಕ್ಷಾತ್ ಶಿವನೇ ಕೈಲಾಸದಿಂದ ಇಳಿದುಬಂದ ಎನ್ನುವು ಅದ್ಭುತವಾದ ಮತ್ತು ಅತಿ ವಿಶಿಷ್ಟವಾದ ಕಲ್ಪನೆ ಈ ಕೃತಿಯ ವಸ್ತು. ಇದುವರೆಗೂ ನಾನು ಕೇಳಿದ ದಾಸಸಾಹಿತ್ಯಕ್ಕಿಂತ ತುಂಬಾ ವಿಭಿನ್ನವಾದ ಆದರೆ ಅಷ್ಟೇ ಕುತೂಹಲಕಾರಿಯಾದ ರಚನೆ ಇದು. ಕೆಂಭಾವಿಯಲ್ಲಿ ಇವತ್ತಿಗೂ ವಾಸವಾಗಿರುವ ಸುರೇಂದ್ರದಾಸರ ರಚನೆಗಳಲ್ಲಿ ಬರುವ ಅಂಕಿತ "ಕೆಂಭಾವಿ ಭೀಮನೊಡೆಯ".

ಪ್ರಸನ್ನರು ಹಾಡಿದ ಬಸವಣ್ಣನ ವಚನ "ಎನ್ನ ಹೆಳವನ ಮಾಡಯ್ಯ....." ಮೇಲ್ನೋಟಕ್ಕೆ ವಿಚಿತ್ರವೆಂಬಂತೆ ಕಂಡರೂ, ಮನಸ್ಸನ್ನು ಅತ್ತಿತ್ತ ಹೋಗದಂತೆ, ಶಿವನಲ್ಲೇ ನೆಲೆ ನಿಲ್ಲುವಂತೆ ಹೆಳವನ ಮಾಡೆಂಬ ಕೋರಿಕೆ ಒಳಗೊಂಡಿದೆ.

ಪುರಂದರ ದಾಸರ ಕೃತಿಗಳಲ್ಲಿ ಕೃಷ್ಣನ ಲೀಲೆಗಳಿಗೆ ಅದೆಷ್ಟು ಬಣ್ಣಗಳಿವೆಯೋ !! ಅಂಥಾ ಕೃತಿಗಳಲ್ಲೊಂದು "ಆಡಿದನೋಕುಳಿಯ". ಪ್ರಸ್ತುತಿ ಚೆನ್ನಾಗಿತ್ತು. ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು (ಯಾವುದೇ ಹಾಡಿನ ಪ್ರಸ್ತುತಿ ಸಾರ್ಥಕತೆ ಕಾಣುವುದು ಈ ರೀತಿಯ ದೃಶ್ಯಗಳನ್ನು ಕಣ್ಣ ಮುಂದೆ ತಂದಾಗ ಮಾತ್ರ ಎನ್ನುವುದು ನನ್ನ ಅಭಿಪ್ರಾಯ)

ಬಾಜೇ ರೇ ಮುರಲಿಯಾ ಬಾಜೇ..... ಈ ಹಾಡು ಕೃಷ್ಣ ಕೊಳಲು ನೃತ್ಯ ಗೋಪಿಕೆಯರು ಇವುಗಳ ಅವಿನಾಭಾವವನ್ನು ಸುಂದರವಾಗಿ ಬಿಡಿಸಿತ್ತು. "ಮುರಲಿಯಾ" ಎನ್ನುವ ಪದವೊಂದನ್ನೇ ವಿಭಿನ್ನ ಛಾಯೆಗಳಲ್ಲಿ ಪ್ರಸ್ತುತ ಪಡಿಸಿದ್ದು ಸಂತಸದಾಯಕವಾಗಿತ್ತು.

ಸಂಗೀತ ಸಂಜೆಯ ಕೊನೆಗೆ ಈ ವಿಶಿಷ್ಟ ಕಲಾವಿದ ಹಾಡಿದ್ದು ಸಂಪೂರ್ಣ ಆಧ್ಯಾತ್ಮ. ದೇಹ ಮತ್ತು ಆತ್ಮಗಳ ಕುರಿತಾದ, ಅವುಗಳ ಅಸ್ತಿತ್ವದ ಗುರಿಯನ್ನು ಸಾರುವ "ಅಸ್ಥಿಪಂಜರ   ದೋಳ್ ಕಣ್ ಮುಚ್ಚಿ ಎಂದು ಆರಂಭವಾಗುವ ಸುರೇಂದ್ರದಾಸರ ಕೃತಿ ಭಾವದ ಮಾಯೆ, ಭಗವಂತನ ಸಾನ್ನಿಧ್ಯಕ್ಕೆ ತಹತಹಿಸುವ ಆತ್ಮ ಇದನ್ನು ಸುಂದರವಾಗಿ ಕಟ್ಟಿ ಕೊಟ್ಟಿತ್ತು. ಆತ್ಮಕ್ಕೆ  ಹಕ್ಕಿಯ ರೂಪ ಕೊಟ್ಟಿದ್ದು ವಿಶೇಷ ಎನಿಸಿತ್ತು.

ತಬಲಾ ಸಾಥಿಯಾಗಿ ಅಮಿತ್ ಮತ್ತು ಹಾರ್ಮೋನಿಯಮ್ ಸಾಥಿಯಾಗಿ ರೋಹಿತ್ ಲಯಬದ್ಧವಾಗಿ, ಅಷ್ಟೇ ಚಾಕಚಕ್ಯತೆಯಿಂದ ತಮ್ಮ ಪಾಲನ್ನು ನಿರ್ವಹಿಸಿದರು.

ಒಟ್ಟಾರೆ, ಎಂದಿನಂತೆ ಈ ವರ್ಷದ ಅಂತ್ಯವನ್ನು ಕೂಡ ನಿರಾಳತೆಯತ್ತ ಕೊಂಡೊಯ್ದ ಪಾಟೀಲ್ ದಂಪತಿಗಳ ಪ್ರೀತಿಗೆ, ಗೆಳೆತನಕ್ಕೆ, ಶರಣು...ಶರಣು.

- ರಮೇಶ್ ಗುರುರಾಜ್ ರಾವ್.

Wednesday, October 30, 2013

ನಾನೀಗ...

ಇಲ್ಲಿಯವರೆಗೆ
ಬಯಸಿದ್ದು ಸಿಕ್ಕೂ ಕೈ ಜಾರಿಯೋ
ಬಯಸಿದ್ದು ಸಿಗದೇ ಹೋಗಿಯೋ
ಯಾವುದು ಏನಂತಾನೇ ಗೊತ್ತಿರದೆ
ಬಯಸದೇ ಇರುವುದೋ
ಅಂತೂ ಆಸೆಗಳು ಮಣ್ಣಾಗಿ
ಕೆಲವೊಮ್ಮೆ ಹುಟ್ಟದೆಯೇ
ನಾನೀಗ ಅಷ್ಟರ ಮಟ್ಟಿಗೆ
ಬುದ್ದ

ಇನ್ನಷ್ಟು ಬಾಕಿ ಇದೆ ಜೀವನ
ಮುಟ್ಟು ನಿಂತಿಲ್ಲದ ಹೆಣ್ಣು
ಜೀವಂತವಾಗಿರುವುದರ ಪ್ರತೀಕ
ಈ ಉಸಿರಾಟ
ನಿತ್ಯ ಕಣ್ತೆರೆದು ಬದುಕನ್ನ
ಸಂಧಿಸಲೇಬೇಕಾದ ಅನಿವಾರ್ಯತೆಗೆ
ಗರ್ಭ ಕಟ್ಟುತ್ತದೆ
ಬೇಕೋ ಬೇಡವೋ ಹುಟ್ಟಿ ಬೆಳೆಯುತ್ತದೆ
ಆಸೆ ಸಂತಾನ
ಗರ್ಭಪಾತ ಮಹಾ ಪಾಪ
ತಾನಾಗಿ ಬರುವ ಸಾವಿಗೆ
ಕಾಯಬೇಕು ನವೆನವೆದು
ಅಂತೂ ಆಸೆಗಳು ಮಣ್ಣಾಗಿ
ಕೆಲವೊಮ್ಮೆ ಹುಟ್ಟದೆಯೇ
ನಾನೀಗ ಅಷ್ಟರ ಮಟ್ಟಿಗೆ
ಬುದ್ದ...

     -27th Oct 2013

ಶೃತಿ ಲಯ

ಚಿತ್ತ ಹುತ್ತಗಟ್ಟಿ
ಒಳಗಿನ ಭಾವಗಳು ನಲಿದು ನುಲಿದು
ಭುಸುಗುಟ್ಟಿದ ಸದ್ದು
ಕೊಳಲನಾದವಾಗಿ
ಸುದ್ದಿಯಾಯಿತಂದು
ಇಂದು
ಚಿತ್ತಹುತ್ತವ
ಗಾಳಿ ನೇವರಿಸಿದಾಗಲೆಲ್ಲ
ಒಳಗಿನ ನಿರ್ವಾತ ಕಲಕಿ
ಅಪಶೃತಿ
ತುಂತುಂಬಿ ಖಾಲಿಯಾಗುವುದೇ
ಬದುಕಿನ ರೀತಿ!

          - 21st Oct 2013

Sunday, September 1, 2013

ಮಂಜುಳಾ ಬಿರಾದರ್ ಎಂಬ ಹೆಸರಿನ ಅದಮ್ಯ ಚೇತನಕ್ಕಿಂದು ಅರವತ್ತರ ವಸಂತ.

"ಮಂಜು ಚಿಕ್ಕಮ್ಮ, ಕಲ್ಲುಮುಳ್ಳುಗಳ ಬಯಲಲ್ಲಿ ನಡೆದು, ದಾರಿ ಮಾಡಿ, ಈಗ ನಾವೆಲ್ಲ ಅನಾಯಸ ನಡೆವಂತೆ ಮಾಡಿದ ದಿಟ್ಟ ಹೆಣ್ಣು ನೀನು. ನಿನ್ನ ನಿಟ್ಟಿನಲ್ಲಿ ನಾವೆಲ್ಲ ನಾಲ್ಕು ಹೆಜ್ಜೆ ನಡೆದರೂ ಅದೆಷ್ಟೋ ಸಾರ್ಥಕಭಾವ ನಮ್ಮಲ್ಲಿ! ಅಷ್ಟಾದರೂ ನಾವೆಲ್ಲ ನಿನ್ನನನುಸರಿಸುವಂತಾಗಲಿ ಬದುಕ ದಾರಿಯಲಿ. ನಿನ್ನಂಥವರ ಸಂತತಿ ಹೆಚ್ಚಾಗಲಿ ನಮ್ಮ ಮನೆತನದಲ್ಲಿ. ನೋಡು, ನಿನಗೆ ಶುಭ ಹಾರೈಸಲೆಂದು ಬಂದವಳು ನಮ್ಮ ಸ್ವಾರ್ಥದ ಕುರಿತೇ ಮಾತಾಡುತ್ತಿರುವೆ ನಾನು!! ಹುಟ್ಟುಹಬ್ಬದ ಶುಭಾಶಯಗಳು ಚಿಕ್ಕಮ್ಮ. ನಿನ್ನ ಇಷ್ಟು ವರುಷಗಳ ದಣಿವು ಮುಂದಿನ ವರ್ಷಗಳ ಉತ್ಸಾಹವಾಗಲಿ. :) "
*
*
ಆರು ತಿಂಗಳ ಹಿಂದೆ ನನ್ನ ಒಬ್ಬ ಅಮ್ಮನ (ಪದ್ಮಾ ಆಂಟಿ) 60ನೇಯ ಹುಟ್ಟುಹಬ್ಬವಾಗಿತ್ತು, ಇಂದು ನನ್ನ ಇನ್ನೊಬ್ಬ ಅಮ್ಮ, ಮಂಜು ಚಿಕ್ಕಮ್ಮನ ನ 60ನೇಯ ಹುಟ್ಟುಹಬ್ಬ. :)
*
"ನನ್ನನ್ನು ಹೆತ್ತವಳು ಅವ್ವ ಸರೋಜಿನಿಯಾದರೂ, ನಾನು ಪುಣ್ಯವಂತಳಾದ್ದರಿಂದ ನನ್ನ ಉಡಿ ಇನ್ನೂ ಮೂರು ಜನ ಅಮ್ಮಂದಿರ ಪ್ರೀತಿ ವಾತ್ಸಲ್ಯಗಳಿಂದ ತುಂಬಿದೆ. ಅವರು ಮಂಜು ಚಿಕ್ಕಮ್ಮ, ಗಾಯತ್ರಿ ಆಂಟಿ ಮತ್ತು ಪದ್ಮಾ ಆಂಟಿ."
*
ಮಂಜು ಚಿಕ್ಕಮ್ಮ (ಮಂಜುಳಾ ಬಿರಾದರ), ಅವ್ವನ ಮೊದಲ ತಂಗಿ, ಅವ್ವನಿಗಿಂತ ಐದು ವರ್ಷಕ್ಕೆ ಚಿಕ್ಕವರು. ನನ್ನನ್ನು ನೋಡಿದ ನಮ್ಮ ಪರಿಚಯದ ಜನ, ನಾನು ಸರೋಜಿನಿಯ ಮಗಳೆಂದು ಗೊತ್ತಿದ್ದರೂ ಹೋಲಿಕೆಯಿಂದಾಗಿ ಕನ್ಫೂಸ್ ಮಾಡಿಕೊಂಡು, ‘ನೀನು ಮಂಜುನ ಮಗಳಲ್ಲಾ? ಸರೂನ ಮಗಳು ಅನ್ಕೊಂಡಿದ್ದೆ’ ಎಂದವರು ನಂತರ ನಾನೂ ಸರೂನ ಹೊಟ್ಟೆಲೇ ಹುಟ್ಟಿದ ಮಂಜುನ ಮಗಳು ಎಂದು ತಮ್ಮ ಸಂದೇಹವನ್ನು ಪರಿಹರಿಸಿಕೊಂಡು ನಗುತ್ತಾರೆ. ನನ್ನ ಮಂಜುಚಿಕ್ಕಮ್ಮ ನನ್ನನ್ನು ತಮ್ಮ ಅಕ್ಕನ ಮಗಳು ಎಂದು ಯಾರಿಗಾದರೂ ಪರಿಚಯಿಸಿದ್ದು ನೆನಪೇ ಇಲ್ಲ ನನಗೆ. ನನ್ನ ಮಗಳು ಎಂದೇ ಎಲ್ಲರಿಗೂ ಪರಿಚಯಿಸುವಷ್ಟು ಮಮತೆ ನನ್ನ ಮೇಲೆ. :)
*
  ಮಂಜು ಚಿಕ್ಕಮ್ಮನ ಸಾಧನೆ ನಮ್ಮವರೆಲ್ಲರೂ ಹೆಮ್ಮೆ ಪಡುವಂಥದ್ದು. ಕೇವಲ ಗೃಹಿಣಿಯಾಗಿ ಮಕ್ಕಳನ್ನು ನೋಡಿಕೊಳ್ಳುವುದು ನನ್ನ ಚಿಕ್ಕಮ್ಮನಂಥ ಅದಮ್ಯ ಚೇತನಗಳಿಗೆ ಸಾಧ್ಯವಿಲ್ಲದ ಮಾತು. ಹೀಗಾಗೇ ಉಂಡುಟ್ಟು ಆರಾಮಾಗಿರಲು ತೊಂದರೆ ಇಲ್ಲದಿದ್ದಾಗ್ಯೂ, ಐದು ಪುಟ್ಟಮಕ್ಕಳ ತಾಯಿ, ನನ್ನ ಈ ಚಿಕ್ಕಮ್ಮ ಮನೆಯಲ್ಲೇ Small scale industry ಒಂದು ಭಾಗವಾದ files ತಯಾರಿಸುವ ಉದ್ಯೋಗ ಶುರು ಮಾಡಿಕೊಂಡರು. ಜಿಲ್ಲೆ ಮತ್ತು ತಾಲೂಕುಗಳ ಪ್ರತೀ ಆಫೀಸಿಗೂ ಹೋಗಿ, files orders ತೆಗೆದುಕೊಂಡು ಬಂದು ಮನೆಯಲ್ಲಿ ಅಗತ್ಯಕ್ಕೆ ತಕ್ಕಂಥ files ತಯಾರಿಸಿ ಕೊಡುತ್ತಿದ್ದರು. ಮುಂದೆ ವರ್ಷಗಳು ಕಳೆದ ಮೇಲೆ ಈ ಉದ್ಯೋಗದ ಇತಿಮಿತಿ ಗೊತ್ತಾಗುತ್ತಿದ್ದಂತೆ ನನ್ನ ಚಿಕ್ಕಮ್ಮನ ಚಡಪಡಿಕೆ ಹೆಚ್ಚಾಗಿ, ಸರಿಯಾದ ದಾರಿ ಕಂಡುಕೊಂಡಿತು! ಅದು ರೊಟ್ಟಿ ಅಂಗಡಿ! ಹೌದು ಈಗ ರೊಟ್ಟಿ ಅಂಗಡಿ ಅಂದರೆ ಯಾರಿಗೂ ಅಚ್ಚರಿಯಾಗದಿರಬಹುದು. ಆದರೆ ಅದ್ಭುತವಾಗಿ ಅಡುಗೆ ಮಾಡುವ ನನ್ನ ಚಿಕ್ಕಮ್ಮ ಆಗ ಬಿಜಾಪುರದಲ್ಲಿ ರೊಟ್ಟಿ ಅಂಗಡಿ ತೆರೆದಾಗ, ‘ಅದೇನು ಹೊಳಿ ದಂಡೀಗೆ ಕುಂತು ನೀರು ಮಾರೋ ಹುಡುಗಾಟ!!’ ಎಂದವರೇ ಹೆಚ್ಚು. ಬಿಜಾಪುರ/ಉತ್ತರ ಕರ್ನಾಟಕದ ಮುಖ್ಯ ಆಹಾರವಾದ, ‘ಮನೆ ಮನೆಯಲೂ ನಿತ್ಯವೂ ಮಾಡುವ ರೊಟ್ಟಿಯನ್ನೇ ಮಾರುವುದೆಂದರೆ ಕೊಳ್ಳುವವರ್ಯಾರು?! ಇವಳಿಗೆಲ್ಲೋ ಹುಚ್ಚು’ ಎಂದು ಕುಹಕವಾಡಿದ ಜನರಿಗೇ ಈಗ, ‘ಜ್ಯೋತಿ ಗೃಹ ಉದ್ಯೋಗ’ದ ರೊಟ್ಟಿ, ಸೇಂಗಾದ ಹೋಳಿಗೆ, ಚಟ್ನಿಪುಡಿ, ಉಪ್ಪಿನಕಾಯಿಗಳೇ ಬೇಕು. ಮೊದಮೊದಲು ತಾವೊಬ್ಬರೇ ಇವೆಲ್ಲವನ್ನೂ ತಯಾರಿಸುತಿದ್ದ ನನ್ನ ಚಿಕ್ಕಮ್ಮ ಬೇಡಿಕೆ ಹೆಚ್ಚಾದಂತೆ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳ ತೊಡಗಿದರು. ಮಶಿನ್ನುಗಳನ್ನು ಕೊಂಡರು. ಮಾರುಕಟ್ಟೆಯಲ್ಲಿ ದೊರೆಯದ ಕೆಲವು ಮಶಿನ್ನುಗಳನ್ನು ತಾವೇ ಡಿಸೈನ್ ಮಾಡಿ ಮಾಡಿಸಿಕೊಂಡರು. ಈಗ ಎಪ್ಪತ್ತು ಜನ ಮಹಿಳೆಯರು ನನ್ನ ಚಿಕ್ಕಮ್ಮನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ‘ಜ್ಯೋತಿ ಗೃಹ ಉದ್ಯೋಗ’ ಅಂಗಡಿಗಳ ಸಂಖ್ಯೆ ಆರಕ್ಕೇರಿದೆ.
`Karnataka state co-operative Women Federation' ನ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು ನನ್ನ ಚಿಕ್ಕಮ್ಮ.
ಗುಡ್ಡಾಪುರದ ದಾನಮ್ಮದೇವಿಯ ಭಕ್ತೆಯಾದ ಮಂಜುಳಾ ಬಿರಾದಾರ್ ಹೆಸರಿನ ನನ್ನ ಈ ಚಿಕ್ಕಮ್ಮ ದಾನಮ್ಮದೇವಿಯ ಹೆಸರಿನಲ್ಲಿ ಪ್ರತೀವರ್ಷ ಶ್ರಾವಣದಲ್ಲಿ ಮಹಿಳೆಯರನ್ನು ಕರೆದು ಉಡಿತುಂಬಿ ಊಟ ಮಾಡಿಸುತ್ತಾರೆ. (ಉತ್ತರ ಕರ್ನಾಟಕದಲ್ಲಿ ಎಲ್ಲ ಮನೆಗಳಲ್ಲೂ ಶ್ರಾವಣ ಮಾಸದಲ್ಲಿ ಕೊನೆಯ ಶುಕ್ರವಾರ ಐದು ಜನ ಮುತೈದೆಯರನ್ನುಣ್ಣಿಸುವುದು [ಸುಹಾಸಿನಿಯರನ್ನು ಕರೆದು, ಅವರ ಪಾದಪೂಜೆ ಮಾಡಿ, ಉಡಿ ತುಂಬಿ ಊಟಕ್ಕೆ ಹಾಕುವುದು] ಪರಿಪಾಠ)
5, 11, 21, 51, 101,501, 1001 ಹೀಗೆ ವರುಷ ವರುಷವೂ ಉಡಿ ತುಂಬಿಸಿಕೊಂಡು, ಉಂಡು ಹಾರೈಸಲು ಬರುವವರ ಸಂಖ್ಯೆ ಹೆಚ್ಚಾಗುತ್ತಾ ಆಗುತ್ತಾ ಈ ವರ್ಷ, ಇಂದು 4500 ಜನ ಸೇರಬಹುದು ಎನ್ನುವ ಅಂದಾಜಿದೆಯಂತೆ! ಅದಕ್ಕೂ ಹೆಚ್ಚಾಗಬಹುದು ಎನ್ನುತ್ತಿದ್ದರು ಚಿಕ್ಕಮ್ಮ. ಕೊನೆಯ ಶುಕ್ರವಾರ  ಊರಿನ ಎಲ್ಲರ ಮನೆಯಲ್ಲೂ ಹಬ್ಬ ಅನ್ನುವ ಕಾರಣಕ್ಕೆ ಈ ಕಾರ್ಯಕ್ರಮವನ್ನು ಮಂಜು ಚಿಕ್ಕಮ್ಮ ಭಾನುವಾರ ಹಮ್ಮಿಕೊಳ್ಳುತ್ತಾರೆ. ಜಾತಿ, ಅಂತಸ್ತಿನ ಹಂಗಿಲ್ಲ ಅಲ್ಲಿ. ಎಲ್ಲರಿಗೂ ಆದರದ ಆತಿಥ್ಯ.
 ಇಂದು ಅಲ್ಲಿರಬೇಕಿತ್ತು ನಾನು. ಆಗಲಿಲ್ಲ... ಇಲ್ಲಿಂದಲೇ ಶುಭ ಹಾರೈಸುತ್ತಿರುವೆ. :)

Sunday, August 18, 2013

ಮುನಿಯದಿರು ತಾಯೇ ಕೈ ಮುಗಿವೆ


ಕಾಯ್ವ ಕೈಯೇ ಕೊಲುವುದಾದರೆ
ಮೊರೆಯಿಡುವುದಿನ್ನಾರಿಗೆ ತಾಯೇ
ಭುವಿ ಅಣುಅಣುವನೂ ಪೊರೆವ ಜೀವಜಲವೇ
ನೀ ಹೀಗೆ ಸ್ಪೋಟಿಸಿದ್ದು ಸರಿಯೇ?!
ಸಿಟ್ಟು ತಾಯಿ ಗಂಗೆ ನಿನ್ನಮೇಲೆನೆಗೆ
ಗೊತ್ತು ಬಿಡೆ ನಗಬೇಡ
ನಿನ್ನ ಸಿಟ್ಟಿನೆದುರು ನನ್ನದು
ಸೊಟ್ಟ ಸೌಟಿನಷ್ಟೆಂದು ಬಲ್ಲೆ ನಾ
ನನ್ನ ಸಿಟ್ಟು ನನಗಷ್ಟೇ ಕುತ್ತು
ನಿನ್ನ ಸಿಟ್ಟಿಗೆ ಜಗ ಒಂದೇ ತುತ್ತು!

ಕಲ್ಲು ಕಾಂಕ್ರೀಟಿನ ಗಟ್ಟಿ ಬಂಗಲೆಗಳನೂ
ಕಾಗದದ ದೋಣಿಯಂತೆ ತೇಲಿಸಿ
ಮಕ್ಕಳಾಟವಾದಿದೆಯಲ್ಲ ಆಗ
ನಿಷ್ಪಾಪಿ ಪ್ರಾಣಿಗಳೂ, ಗಿಡಮರಗಳೂ
ತಡಬಡಿಸಿ ನಿನ್ನ ರಭಸದ ಹರಿಗೋಲಾದವು
ಅಪ್ಪ ಅಮ್ಮಂದಿರ ಜೊತೆಗೆ
ಕೂಸುಕಂದಮ್ಮಗಳೂ ತೇಲಿದವು
ಕಾಣಲಿಲ್ಲವೇನೇ ಗಂಗಾಮಾಯಿ!!?

ಶಿಕ್ಷಿಸುವುದು ಎಂದರೆ ಹೀಗೇನೇ ನನ್ನವ್ವ?!
ನಿನ್ನನ್ನೂ ಕಟ್ಟಿಹಾಕಬಲ್ಲೆವು
ನಾವು ಬಯಸಿದಾಗಲೆಲ್ಲ ನೀ ದೊರೆಯದಿರೆ
ಬಗೆಬಗೆದು ಭಗೀರಥನಂತೆ
ನಿನ್ನ ಹುಡುಕಿ ತರಬಲ್ಲೆವು
ನಮ್ಮ ಅನುಕೂಲಕ್ಕೆ ಸ್ವಚ್ಛತೆಗೆ ಮುಕ್ತಿಗೆ
ನಿನ್ನನ್ನು ಕಕ್ಕಸದ ಕೋಣೆಯಾಗಿಸಬಲ್ಲೆವು
ಎಂಬ ನಮ್ಮ ಅಹಮ್ಮಿಗೆ
ನೀ ಕೊಟ್ಟ ಪೆಟ್ಟೇ ಇದು?!

ಮುನಿಯದಿರು ತಾಯೇ ಕೈ ಮುಗಿವೆ
ಕಣ್ಣಗಲಿಸಿ ಹೆದರಿಸು
ಇದ್ದಲ್ಲಿಯೇ ಅಬ್ಬರಿಸು
ಸಣ್ಣಪುಟ್ಟ ಶಿಕ್ಷೆ ಕೊಡು ಸಾಕು
ಈ ಪುಂಡ ಮಕ್ಕಳನ್ನು ಅಂಕೆಯಲ್ಲಿಡಲು
ಹೀಗೆ ಮೇಲೆ ಕೆಳಗೆ ಏಕವಾಗಿ ಸುರಿಹರಿದು
ಮಕ್ಕಳನೇ ಕಾಗದದ ದೋಣಿಯಾಗಿಸಿ
ಆಟವಾಡುವುದು ತರವೇ….?
ಮುನಿಯದಿರು ತಾಯೇ ಕೈ ಮುಗಿವೆ.
                                                -ಜಯಲಕ್ಷ್ಮೀ ಪಾಟೀಲ್.
  
(4th August 2013ರಂದು ಸಾಹಿತಿ ಮತ್ತು ಕಲಾವಿದರ ವೇದಿಕೆ ಆಯೋಜಿಸಿದ್ದ ‘ಪ್ರಕೃತಿ ವರವೋ ಅಥವಾ ಶಾಪವೋ?’ ಕಾರ್ಯಕ್ರಮದಲ್ಲಿ ಓದಿದ ಕವನವಿದು.)

Tuesday, July 9, 2013

ಅಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು.

*  ದೇವರ ಕೋಣೆಯಲ್ಲಿ ನಮ್ಮೆಲ್ಲರ ಗುಸುಗುಸು ಪಿಸುಪಿಸು ನಡೆದಿತ್ತು.`ಏನಾಗಂಗಿಲ್ಲ ಹೋಗು’,

*  `ಏ ಬ್ಯಾಡ ಬ್ಯಾಡ, ಆಯಿ ನೋಡಿದ್ಲಂದ್ರ ಅಷ್ಟ’,

*  `ನಾ ಒಲ್ಯವ್ವಾ, ಇದೇನೂ ಬ್ಯಾಡ ತಗೀರತ್ತಾಗ, ನಾನೂ ಎಲ್ಲಾರ್ ಹಂಗs ಇದ್ದಬಿಡ್ತೀನಿ, ಇಲ್ಲದ ರಗಳ್ಯಾಕ ಆಯಿ (ನನ್ನ ತಂದೆಯ ತಾಯಿ) ನೋಡಿದ್ಲಂದ್ರ ನನ್ನ ಹಂಪಹರೀತಾಳ, ಮಂದೀನೂ ಬಾಯಿಗ್ ಬಂಧಂಗ ಮಾತಾಡ್ಕೋತಾರ ಹಿಂದ, ಏನೂ ಬ್ಯಾಡ ನನ್ನ ಹಣ್ಯಾಗ ಇದೆಲ್ಲಾ ಬರ್ದಿಲ್ಲ, ಎಲ್ಲಾನೂ ತಗದಬಿಡ್ತೀನಿ.’

*  `ಹೌದೌದು ಮಂದಿ ಸುಮ್ನ ಬಾಯಿಗ್ ಬಂಧಂಗ್ ಮಾತಾಡ್ತಾರ ಬ್ಯಾಡಬಿಡು’

ಕೊನೆಗೆ ಯಾಕೊ ಎಲ್ಲವೂ ಎಡವಟ್ಟಾಗುತ್ತಿದೆ ಎನಿಸಿ ನಾನು,

*  `ಹಂಗೇನಾಗಂಗಿಲ್ಲ ಸುಮ್ಮಿರ್ರಿ, ನೀ ನಡಿ, ನಿನ್ ಜೊತಿ ನಾನೂ ಬರ್ತೀನಿ, ಆಯಿ ಏನರ ಅಂದ್ರ ನಾ ಮಾತಾಡ್ತೀನಿ ಆಯಿ ಜೋಡಿ’ ಅವಳನ್ನು ಬಲಂತವಾಗಿ ಪಡಸಾಲಿಗೆ ಕರೆದುತಂದೆ.

    ಆಯಿ, ಸೋಫಾದ ಮೇಲೆ ಕುಳಿತಿದ್ದರು. ಬಂದು ನಿಂತವರನ್ನು ನೋಡಿ ನನ್ನ ತಂಗಿಗೆ, 

*  `ಒಂದಿಷ್ಟ್ ತಗದಿಟ್ಟು ಎಷ್ಟು ಬೇಕೋ ಅಷ್ಟ ಮುಡ್ಕೋ’ ಅಂದ್ರು. ಹೂಂ ಆಯಿ ಎಂದವಳೇ ತಂಗಿ ಒಳಗೋಡಿದಳು, ಕಣ್ಣುಬಾಯಿ ಬಿಟ್ಟುಕೊಂಡ ನಾನು ಅವಳ ಹಿಂದೆ ಹೋದೆ. ಸ್ವಲ್ಪ ಹೊತ್ತು ನಾವ್ಯಾರೂ ಮಾತನಾಡಲೇ ಇಲ್ಲ!

ಅಸಾಧ್ಯವಾದುದು ಘಟಿಸಿಬಿಟ್ಟಿತ್ತು ನಮ್ಮ ಮನೆಯಲ್ಲಿ! ಒಂಥರಾ ನಮಗೆಲ್ಲಾ ಇದು ಶಾಕ್! ಆದರೆ ಸಿಹಿ ಶಾಕ್!

       ಆರು ತಿಂಗಳ ಹಿಂದೆ ಪತಿಯನ್ನು ಕಳಿದುಕೊಂಡಿದ್ದ ೨೭ರ ಹರೆಯದ, ಪುಟ್ಟ ಮಗಳಿರುವ ನನ್ನ ತಂಗಿಗೆ(ಕಾಕಾನ ಮಗಳು) ಮೊದಲಿನಂತೆ ಅವಳು ಉಡುವುದು ತೊಡುವುದು ಮಾಡಲು ನಾವೆಲ್ಲ ಮನವೊಲಿಸುತ್ತಾ ಧೈರ್ಯ ತುಂಬಿ ಅವಳನ್ನು ರೆಡಿ ಮಾಡಿದ್ದೆವು. ಆದರೆ ಎಲ್ಲರಿಗೂ ಕಷ್ಟಕ್ಕೆ ಬಂದಿದ್ದು ಆಯಿಯನ್ನು ಒಪ್ಪಿಸುವ ವಿಷಯದಲ್ಲಿ. ಈಗ ನೋಡಿದರೆ ಎಲ್ಲಾ ಉಲ್ಟಾಪಲ್ಟಾ!! ಹಣೆಯ ಕೆಂಪು ಬಿಂದಿ, ಕತ್ತಲ್ಲಿನ ಎರಡೆಳೆ ಸರ, ಕಿವಿಯ ಝುಮುಕಿ, ಮುಡಿಯ ಮಲ್ಲಿಗೆ ಎಲ್ಲವನ್ನು ಗಮನಿಸಿಯೂ ಯಾವುದನ್ನೂ ನಿರಾಕರಿಸಲಿಲ್ಲ ಅವರು! ಆಯಿಯ ಆಧುನಿಕತೆಗೆ ಖುಷಿಯಿಂದ ನಾವೆಲ್ಲ ಮೂಕರಾಗಿದ್ದೆವು. ಆಯಿಯ ಬಗೆಗೆ ನೋವು ಬೆರೆತ ಹೆಮ್ಮೆ ನನ್ನವ್ವನ ಕಣ್ಣಲ್ಲಿ.

     ನಾನು ಚಿಕ್ಕವಳಿದ್ದಾಗ ರಜೆಗೆ ಊರಿಗೆ ಹೋದಾಗಲೆಲ್ಲ, ಸಂಜೆಯಾದರೆ ದೊಡ್ಡವರು ಹೂವು ಹರಿಯಲು ಬಿಡುವುದಿಲ್ಲ ಎಂದು ಗೊತ್ತಿದ್ದ ನಾವು ಹುಡುಗಿಯರೆಲ್ಲ, ಸಂಜೆಗೂ ಮುನ್ನವೇ ತೋಟದಲ್ಲಿನ ಮಲ್ಲಿಗೆಯ ಮೊಗ್ಗುಗಳನ್ನೆಲ್ಲಾ ಬಳ್ಳಿಯಿಂದ ಬಿಡಿಸಿಕೊಂಡು ಮಾಲೆ ಕಟ್ಟುತ್ತಿದ್ದೆವು. ಮನೆಯಲ್ಲಿ ಎಲ್ಲರೂ ಹೂವು ಮುಡಿದರೂ ಆಯಿ ಮಾತ್ರ ಮುಡಿದದ್ದನ್ನು ನಾನ್ಯಾವತ್ತಿಗೂ ನೋಡಲೇ ಇಲ್ಲ. ಮೊಳಕಾಲವರೆಗೆ ಉದ್ದವಿದ್ದ ತನ್ನ ಕೂದಲನ್ನು ಆಕೆ ಸ್ನಾನಕ್ಕೂ ಮುನ್ನ ಎಣ್ಣೆ ಹಚ್ಚಿ, ಬಾಚಿ ತುರುಬು ಕಟ್ಟಿದರೆ ಮುಗಿಯಿತು. ಹೂವುಗೀವು ಏನೂ ಇಲ್ಲ, ಹಣೆಗೆ ಕಾಸಿನಗಲ ಕುಂಕುಮವಿಟ್ಟುಕೊAಡು, ತಲೆತುಂಬಾ ಸೆರಗು ಹೊದ್ದಿರುತಿದ್ದರು. 

           ಒಮ್ಮೆ ಆಯಿ ಮುಡಿಯಲಿ ಎಂದು ಆಸೆಯಿಂದ ಒತ್ತೊತ್ತಾಗಿ ಮಲ್ಲಿಗೆ ಮೊಗ್ಗುಗಳನ್ನು ಕಟ್ಟಿ, ದಂಡೆಯನ್ನು ಆಯಿಗೆ ಮುಡಿಸಲು ಮುಂದಾದೆ. ಬೇಡವೆಂದರು. ಬಲವಂತ ಮಾಡಿದ್ದಕ್ಕೆ ಗದರಿದರು. ಅಷ್ಟಕ್ಕೂ ಬಿಡದ ನನ್ನನ್ನು ಅಸಹನೆಯಿಂದ ದೂಡಿ ಮುಖ ತಿರುಗಿಸಿಕೊಂಡರು. ಸಣ್ಣವಳಾದ ನನಗೆ ಆಯಿ ಇಷ್ಟೊಂದು ಒರಟಾಗಿ ವರ್ತಿಸಿದ್ದೇಕೆ ಎಂದು ಅರ್ಥವಾಗಿರಲೇ ಇಲ್ಲ ಆಗ. ಆದರೆ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂದು ನೋವಾಗಿತ್ತು. 

        ಮತ್ತೊಮ್ಮೆ ಮನೆಯಲ್ಲಿ ಮದುವೆ ಸಮಾರಂಭ. ಆಯಿ ಎಂದಿನAತೆ ಎಲ್ಲರಿಗೂ ಕೆಲಸ ಹಂಚಿ ತಾವು ಮೇಲ್ವಿಚಾರಣೆ ಮಾಡುತ್ತಾ ನಿಂತಿದ್ದರು. ಆಕೆ ಯಾವತ್ತೂ ಯಾವ ಶುಭಕಾರ್ಯದಲ್ಲೂ ನೇರ ಭಾಗವಹಿಸಿದವರೇ ಅಲ್ಲ, ಯಾರಿಗಾದರೂ ಕುಂಕುಮವಿಟ್ಟಿದ್ದನ್ನೂ ಕಾಣೆ ನಾನು. ಅಂದೂ ಮತ್ತೊಮ್ಮೆ ಆಯಿ ಹೂವು ಮುಡಿಯಲಿ ಎಂಬ ಆಸೆಯಿಂದ ಮಾರುದ್ದ ಮಾಲೆಯನ್ನು ತೆಗೆದುಕೊಂಡು ಹೋಗಿ ಆಯಿಯ ಎದುರು ಹಿಡಿದೆ. ಹಿಂದಿನ ಸಲದ ಅನುಭವದಿಂದಾಗಿ ಒತ್ತಾಯಿಸುವ ಧೈರ್ಯವಿರಲಿಲ್ಲ. ಸೌಮ್ಯವಾಗಿ ನನ್ನನ್ನು ನೋಡಿ, `ನನಗ ಬ್ಯಾಡ, ನೀ ಮುಡ್ಕೊ, ಸಣ್ಣಮಕ್ಕಳು ಮುಡ್ಕೊಂಡ್ರನs ಛಂದ’ ಎಂದು ಹೇಳಿ ನನ್ನನ್ನು ಸಾಗಹಾಕಿದರು ಅಲ್ಲಿಂದ.

ಆಯಿಗೆ ನನ್ನ ಕಂಡರೆ ಪ್ರೀತಿಯಿಲ್ಲ ಅದಕ್ಕೇ ನನ್ನ ಕೈಯಿಂದ ಆಕೆ ಹೂವು ಸ್ವೀಕರಿಸುತ್ತಿಲ್ಲ ಎನ್ನುವ ಭಾವನೆಯಿಂದ ಅವ್ವನ ಹತ್ತಿರ ಆಯಿಯನ್ನು ದೂರಿದೆ.  

ಆಗ ಅವ್ವ,   *`ಬ್ಯಾಡ, ಆಯಿಗೆ ಇನ್ನೊಮ್ಮೆ ಹಂಗ ಹೂವ್ ಕೊಡಾಕ ಹೋಗಬ್ಯಾಡ, ಅವುö್ರ ಮುಡ್ಕೊಳ್ಳಾಂಗಿಲ್ಲ.’ ಅಂದ್ಳು.

*  `ಯಾಕ?’

*  `ಯಾಕಂದ್ರ ಉಡಕಿಯಾದವ್ರು ಹೂವು ಮುದಡ್ಕೋಬಾರ್ದಂತ, ಯಾವ್ದ ಕಾರ್ಯಾದಾಗೂ ಭಾಗವಹಿಸ್ಬಾರ್ದಂತ, ಅದಕ ನಿಮ್ಮ್ ಆಯಿ ಹೂವ್ ಮುಡ್ಕೊಳ್ಳಾಂಗಿಲ್ಲ, ಯಾರಿಗೂ ಕುಂಕುಮಾ ಹಚ್ಚಂಗಿಲ್ಲ, ಆರ್ತಿ ಮಾಡಾಂಗಿಲ್ಲ. ಅದಕೇನಾಕ್ಕತಿ ನೀವು ನನಗ ಕುಂಕುಮಾ ಹಚ್ಚಿ ಆರ್ತಿ ಮಾಡ್ರಿ ಅಂತ ನಾ ಒಮ್ಮಿ ಹೇಳಿದ್ದಕ್ಕ ನನಗ ಬೈದು ಸುಮ್ನಾಗಿಸಿದ್ರು.’ ಅಂದಳು ಅವ್ವ.

      ಉಡಕಿ ಅಂದರೆ ಮರುಮದುವೆ. ಆಯಿಗೆ ತೊಟ್ಟಿಲಲ್ಲೇ ಅಂದರೆ ಹಸುಗೂಸಾಗಿದ್ದಾಗಲೇ ತಾಳಿಕಟ್ಟಲಾಗಿತ್ತಂತೆ. ಹಾಗೆ ತಾಳಿದ ಕಟ್ಟಿದ ಹುಡುಗ ತನ್ನ ಏಳನೇ ವಯಸ್ಸಲ್ಲಿ ಯಾವುದೋ ಖಾಯಿಲೆ ಬಂದು ತೀರಿಕೊಂಡ. ಮುಂದೆ ಆಯಿ ಹನ್ನೊಂದು ವರ್ಷದವಳಿದ್ದಾಗ ಹೆಂಡತಿ ಸತ್ತ ಹದಿನಾರು ವರ್ಷದ ನಮ್ಮ ಮುತ್ತ್ಯಾ ಜೊತೆ ಮದುವೆಯಾಯಿತು. ಹೀಗೆ ಉಡುಕಿಯಾದ ಹೆಣ್ಣು ಹೂ ಮುಡಿಯುವುದು, ಶುಭಕಾರ್ಯದಲ್ಲಿ ಭಾಗವಹಿಸುವುದರ ಹೊರತಾಗಿ ಉಳಿದೆಲ್ಲರಂತೆ ಸಂಸಾರ ಮಾಡಬಹುದು ಎನ್ನುವುದು ಈ ಮದುವೆಯ ನಿಯಮವಂತೆ. 

ಹಾಗಾಗಿ ಮೊಳಕಾಲುದ್ದದ ಕೂದಲು ಅದಕ್ಕೂ ಮಿಗಿಲಾದ ಆಸೆಗಳಿದ್ದರೂ ಆಯಿ ಅದನ್ನೆಲ್ಲ ಹತ್ತಿಕ್ಕಿ ಬಿಗಿ ತುರುಬು ಕಟ್ಟಿ ಬದುಕಿದ್ದರು. ತನ್ನ ಕೈಯಲ್ಲಿ ಸಾಧ್ಯವಾಗದ್ದನ್ನು ಮೊಮ್ಮಗಳಿಂದ ಸಾಧ್ಯ ಮಾಡಿಸಿದರು, ಅವಳನ್ನು ಬೆಂಬಲಿಸುವುದರ ಮೂಲಕ ಕೆಟ್ಟ ಪರಂಪರೆಯೊಂದನ್ನು ನಮ್ಮನೆಯಿಂದ ಒದ್ದೋಡಿಸಿದರು. 


ಬದುಕನ್ನು ದಿಟ್ಟವಾಗಿ ಎದುರಿಸಿದ, ಅನೇಕ ಸಂದರ್ಭದಲ್ಲಿ ಊರಲ್ಲಿ ಮುಂದಾಳತ್ವ ವಹಿಸಿ, ಊರಿನ ಗಣ್ಯರಲ್ಲಿ ಒಬ್ಬರೆನಿಸಿಕೊಳ್ಳುವಷ್ಟು ಗಟ್ಟಿ ವ್ಯಕ್ತಿತ್ವವನ್ನು ಹೊಂದಿದ್ದ ನನ್ನ ಆಯಿ, ಇನಿತೂ ಪ್ರತಿಭಟಿಸದೇ, ತಮ್ಮ ಸಣ್ಣ ಸಣ್ಣ ಖುಷಿಗಳನ್ನೆಲ್ಲ ಸಂಪ್ರದಾಯದ ಅಗ್ನಿಕುಂಡಕ್ಕೆ ಅರ್ಪಿಸಿದ್ದು ನನ್ನಲ್ಲಿ ಬೆರಗು ಮೂಡಿಸುವುದಿಲ್ಲ. ಕಾರಣ ನಾ ಬಲ್ಲೆ ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು.




  - ಜಯಲಕ್ಷ್ಮಿ ಪಾಟೀಲ್

           27th March 2013

Monday, May 27, 2013

ಭಾರತಿ ಬರೆದ ಕಥೆ: ’ಸಾವು’ (ಅವಧಿಯಲ್ಲಿ ಪ್ರಕಟಗೊಂಡಿದ್ದು).

-ಭಾರತಿ ಬಿ ವಿ
‘ಎದ್ದೇಳು ಬೆಳಗಾಯ್ತು’ ಧ್ವನಿ ಬಂದಾಗ ನಾನು ಬೆಚ್ಚಿ ಎದ್ದೆ. ಸಮಯ ನೋಡಿಕೊಂಡರೆ ಆಗಿನ್ನೂ ೫ ಘಂಟೆ! ಇದನ್ನು ಬೆಳಗೆನ್ನುತ್ತಾರಾ? ಇದೇನು ಆತುರ ಇವರಿಗೆಲ್ಲ? ಇಷ್ಟು ಬೇಗ ಎದ್ದು ಮಾಡೋದಿಕ್ಕೆ ಏನು ಕೆಲಸವಿದೆ? ‘ಎದ್ದು ಸಿದ್ಧಳಾಗು’ ಧ್ವನಿಯಲ್ಲಿ ಆಜ್ಞೆಯಿತ್ತು. ಪಕ್ಕದಲ್ಲಿ ಹೊಸ ಬಟ್ಟೆ! ನನ್ನ ಮೆಚ್ಚಿನ ಬಣ್ಣದ್ದು. ಇವತ್ತು ಏನು ವಿಶೇಷವೋ ಅಂದುಕೊಂಡೆ. ಹೊಸ ಬಟ್ಟೆ ನೋಡಿ ಸಂಭ್ರಮ ಬಂದಿತ್ತು ನನಗೆ.
ಹಬೆಹಬೆಯಾಡುವ ನೀರು. ಜೊತೆಯಲ್ಲಿದ್ದವರೇ ಸ್ನಾನಕ್ಕೆ ಎಲ್ಲ ಸಿದ್ಧ ಪಡಿಸಿದ್ದರು. ಎಲ್ಲ ಉತ್ಕೃಷ್ಟ ಸಾಮಗ್ರಿಗಳು. ಆ ಸೋಪು ಅದೆಷ್ಟು ಪರಿಮಳವಿತ್ತು! ಹರಳೆಣ್ಣೆ ಹಚ್ಚಿ ಮೈಯ ನರ ನರವೆಲ್ಲ ಸಡಿಲಾಗುವ ಹಾಗೆ ನೀವಿದರು. ತಲೆಯಿಂದ ಪಾದದ ಬೆರಳಿನವರೆಗೆ ಎಲ್ಲವನ್ನೂ ಅವರ ವಶಕ್ಕೆ ಒಪ್ಪಿಸಿ ಕೂತೆ. ನನಗೆ ಆತುರದಲ್ಲಿ ಮೈಮೇಲೆ ನಾಲ್ಕು ಚೊಂಬು ನೀರು ಸುರಿದುಕೊಂಡು ಅದನ್ನೇ ಸ್ನಾನವೆಂದುಕೊಳ್ಳುವ ಅಭ್ಯಾಸವಾಗಿತ್ತು. ಈ ಪರಿಯ ಸೊಗಸು ಸ್ನಾನದಲ್ಲೂ?! ಬದುಕಿನ ಸಣ್ಣ ಸಣ್ಣ ಸಂಗತಿಗಳೂ ಇಷ್ಟು ಸಂತೋಷ ಕೊಡಲು ಸಾಧ್ಯವೇ? ನಡೆ ನಡೆದು ದಣಿದಿತ್ತಲ್ಲ ಪಾದ ಅದನ್ನು ಹಿತವಾಗಿ ಒತ್ತಿದರು .. ಆಯಾಸವೆಲ್ಲ ಪರಿಹಾರವೆನ್ನಿಸುವ ಹಾಗೆ … ನಡೆದ ಸುಸ್ತೆಲ್ಲಾ ಬರೀ ಭ್ರಮೆಯೇನೋ ಅನ್ನಿಸುವ ಹಾಗೆ. ಕಣ್ಣು ಕೂಡಾ ಅದೆಷ್ಟು ದಣಿದಿತ್ತು ಎಡಬಿಡದೆ ಹಾದಿ ನೋಡಿ ನೋಡಿ ನಡೆದು. ಅದಕ್ಕೆಲ್ಲ ಹರಳೆಣ್ಣೆಯ ಚುಕ್ಕೆಯಿಟ್ಟಾಗ ತಂಪು ತಂಪು. ಮಂಜಿನ ಪರದೆಯೊಂದು ನೋಟವನ್ನು ಒಂದಿಷ್ಟು ಮಂಜು ಮಾಡಿದ್ದರೂ ಅದೇನೋ ಹಿತ. ಆ ಚಿಗರೆ ಪುಡಿ ಬೆರೆತ ಸೀಗೆಯ ಘಮ ಮತ್ತೇರಿಸಿತು. ಅದೆಂಥ ಅಭ್ಯಂಜನ! ಇಡೀ ಜನ್ಮದಲ್ಲಿ ನಾನು ಅನುಭವಿಸಿಯೇ ಇರಲಿಲ್ಲ ಆ ಥರದ ಸ್ನಾನದ ಸೊಗಸನ್ನು. ನಾನು ಏನೂ ಮಾಡಬೇಕಾದ್ದೇ ಇರಲಿಲ್ಲ. ಸುಮ್ಮನೆ ಕುಳಿತರಾಯಿತು. ಅವರದೇ ಎಲ್ಲ ಕೆಲಸವೂ. ಗುಲಾಬಿಯ ಎಸಳು ತೇಲುತ್ತಿದ್ದ ನೀರು ನನ್ನ ಮೇಲೆ ಧಾರೆಯಾಗಿ ಸುರಿಯಿತು. ತಲೆಯ ಕೂದಲ ಎಳೆ ಎಳೆಯೂ ಮಿಂದು ತೃಪ್ತಿ ಪಡೆಯಿತು. ಬಿದ್ದ ಬಿಸಿ ಬಿಸಿ ನೀರಿಗೆ ದೇಹ, ಮನಸ್ಸು ಒಟ್ಟಿಗೇ ಸಡಿಲಾದವು. ಆ ಥರದ್ದೊಂದು ಅನುಭೂತಿ ಇದುವರೆಗೆ ಎಂದೂ ಆಗಿರಲೇ ಇಲ್ಲ.
ಇಡೀ ದೇಹವೇ ನನ್ನ ನಿಯಂತ್ರಣದಲ್ಲಿ ಇಲ್ಲವೇನೋ ಅನ್ನೋ ಹಾಗೆ ಆಯಿತು. ಅಷ್ಟು ಹಗುರ .. ಗರಿಯ ಹಾಗೆ. ಹೆಜ್ಜೆಗಳು ತಪ್ಪಿ ಎಲ್ಲೆಲ್ಲೋ ಇಡುತ್ತಿದ್ದೆ .. ಮೊದಲ ಬಾರಿ ನಡೆಯಲು ಕಲಿತ ಮಗುವಿನ ಹಾಗೆ. ಇಂಥ ಸುಖಕ್ಕೆ ಕಾರಣವಾದವರನ್ನು ಪ್ರೀತಿಯಿಂದ, ಕೃತಜ್ಞತೆಯಿಂದ ನೋಡಿದೆ.
ಅಲ್ಲಿಂದ ಮುಂದೆ ಹಬೆಯಾಡುವ ಸಾಂಬ್ರಾಣಿ ಧೂಪ ನನ್ನ ದೇಹಕ್ಕೆಲ್ಲ. ಇನ್ನೇನು ಬೇಕಿತ್ತು ಸ್ವರ್ಗಕ್ಕೆ ಕಿಚ್ಚು ಹಚ್ಚಲು? ಮೈಯೆಲ್ಲ ಪರಿಮಳ .. ಮತ್ತೇರಿಸುವ ಪರಿಮಳ! ಬದುಕೇ ಇಷ್ಟು ಮಾತ್ರ ಸುಖವನ್ನು ನನ್ನದಾಗಿಸಿದೆಯಲ್ಲ ಕಡೆಗೂ ಅಂತ ಸಂಭ್ರಮಿಸಿದೆ.
ಹೊಸ ಬಟ್ಟೆ ಇಟ್ಟಿದ್ದನ್ನು ಮುಂಚೆಯೇ ನೋಡಿ ಮೆಚ್ಚಿದ್ದೆನಲ್ಲ ಅದನ್ನು ತೊಡಿಸಿದರು. ಮೈಗೆ ಅಪ್ಪಿ ಕೂತ ಹೊಸ ಬಟ್ಟೆಯನ್ನು ಮನಸಲ್ಲೇ ಮೋಹಿಸಿದೆ. ನನಗೆ ಚೆಂದ ಕಾಣುತ್ತಿದೆಯೇ ಅಂತ ಕುತೂಹಲ ನನಗೆ. ಅವರನ್ನು ಕೇಳಲು ಸಂಕೋಚ. ಇರಲಿ ಬಿಡು ನನಗೆ ಇಷ್ಟವಾದ ಮೇಲೆ ಮತ್ತೇನು ಕೇಳುವುದು ಅಂತ ಸುಮ್ಮನಾದೆ. ನಂತರವೂ ಅಲಂಕಾರ ನಿಲ್ಲಲಿಲ್ಲ. ಕೈ ಕಾಲು ಪಾದಕ್ಕೆ ಎಂತೆಂಥದ್ದೋ ಲೇಪನ ಮಾಡಿದರು. ನವಿಲುಗರಿಯಂತಾಯ್ತು ದೇಹವೆಲ್ಲ! ಮುಖಕ್ಕೆ ಕೂಡಾ ಅದೇನೇನು ಲೇಪಿಸಿದರು! ಹೊಸ ಹುಟ್ಟು ಬಂದ ಹಾಗೆ ಭಾವನೆ ಮನಸಿನಲ್ಲೆಲ್ಲ …
ಕನ್ನಡಿ ತನ್ನಿ ಅನ್ನೋಣ ಅಂತ ಮನಸ್ಸು. ಹೇಗಿದ್ದ ನಾನು ಈಗ ಹೇಗಿದ್ದೇನೆ ಅಂತ ನೋಡಿಕೊಳ್ಳುವ ತವಕ ಮನಸಿನಲ್ಲಿ. ಕೇಳಲಾ, ಬೇಡವಾ ಅನ್ನುವ ದ್ವಂದ್ವದಲ್ಲಿದ್ದೆ ಇನ್ನೂ.
’ಸಮಯ ಮೀರುತ್ತಿದೆ .. ಎಲ್ಲ ಆಯಿತಾ? ನೇಣುಗಂಬಕ್ಕೆ ಏರಿಸಲು ಹೆಚ್ಚು ಸಮಯವಿಲ್ಲ …’ ಪಕ್ಕದಲ್ಲೊಂದು ಗದರು ಧ್ವನಿ …
ಆಗ ಅರಿವಾಯಿತು ನನಗೆ .. ನಾನು ಬಂದಿಖಾನೆಯಲ್ಲಿದ್ದೆ!!! ಅಲ್ಲಿಯವರೆಗಿನ ನನ್ನ ಸುಖದ ಅಭ್ಯಂಜನ ನೇಣುಗಂಬಕ್ಕೆ ಏರುವ ಮುಂಚಿನ ನನ್ನದೇ ಕಡೆಯ ಆಸೆಯಾಗಿತ್ತು!
ಬಂದೀಖಾನೆಯೆಂಬುದನ್ನೂ ಮರೆತು ಇಷ್ಟೆಲ್ಲ ಸಂಭ್ರಮದಲ್ಲಿ ಮೈಮರೆಯುವುದು ನನಗೆ ಹೇಗೆ ಸಾಧ್ಯವಾಯಿತು? ಸಾವಿನ ಭಯ ಕಾಡಲಿಲ್ಲ ಯಾಕೆ? ಬದುಕು ಮುಗಿಯುತ್ತಿದೆ ಅಂತ ಕೂಡಾ ಮರೆಸುವಂಥ ಸುಖ ಪಡೆಯುವುದು ನನಗೆ ಹೇಗೆ ಸಾಧ್ಯವಾಯಿತು? ಇದೇ ಬದುಕು ಅಂತ ಮೋಹಿತಳಾದೆನಲ್ಲ ಅದು ಹೇಗೆ ಸಾಧ್ಯ? ಸಾವಿನ ಭಯವನ್ನೂ ಮೀರಿದ ಜೀವನ ಪ್ರೀತಿ ನನ್ನಲ್ಲಿ ಇದ್ದುದರಿಂದಲೇ?
ಇಷ್ಟೆಲ್ಲ ಯೋಚಿಸುವಷ್ಟರಲ್ಲಿ ನನ್ನನ್ನು ನೇಣುಗಂಬಕ್ಕೆ ಕರೆದುಕೊಂಡು ಹೊರಟಾಗಿತ್ತು. ಆಗ .. ಆಗ ನಾನು ಸುಷುಪ್ತಿಯಿಂದ ಹೊರಬಂದೆ. ಇದು ಬದುಕಲ್ಲ .. ಸಾವು ಅನ್ನುವ ಅರಿವು ನುಗ್ಗಿ ಬಂತು. ಕೈಗಳನ್ನು ಕಟ್ಟಿದ್ದರು. ಅವರು ಹೆಜ್ಜೆಯಿಡುವಂತೆ ನನ್ನನ್ನು ನಿರ್ದೇಶಿಸುತ್ತಿದ್ದರು. ನಾನು ಎಲ್ಲಿ ಹೆಜ್ಜೆ ಇಡುತ್ತಿದ್ದೇನೆ ಅಂತಲೂ ಗೊತ್ತಿಲ್ಲದೆ ಸುಮ್ಮನೆ ಹೆಜ್ಜೆ ಹಾಕುತ್ತಿದ್ದೆ. ಹೌದು .. ಸಾವಿನ ಕಡೆಗೆ ಹೆಜ್ಜೆ ಇಟ್ಟು ಹೊರಟವಳಿಗೆ ದಾರಿಯ ಏರು-ತಗ್ಗುಗಳು, ಪೊದೆ ಕಂಟಿಗಳು ಏನು ಮಾಡುತ್ತವೆ ಹೇಳು? ಬಂದೀಖಾನೆಯೆಂದ ಮೇಲೆ ಸ್ವಲ್ಪ ಮಟ್ಟದ ದಾರಿಯಂತೂ ಇರಲೇ ಬೇಕಲ್ಲ? ಅವರು ನಡೆಸಿದರು .. ನಾನು ನಡೆದೆ. ದಾರಿ ಅನಂತವಾದ ಹಾಗೆ ಅನ್ನಿಸುತ್ತಿತ್ತು. ಸುಮ್ಮನೆ ನಡೆಯುತ್ತಲೇ ಇದ್ದರೆ ಹೇಗೆ? ನಡೆದು ನಡೆದೇ ಸುಸ್ತಾಗಿ ಸತ್ತರೆ ಎಷ್ಟೋ ವಾಸಿ ಅಲ್ಲವೇ? ಹೀಗೆ ಒಂದಿಷ್ಟು ಅಡಿಗಳ ದೂರದಲ್ಲಿ ನನ್ನ ಸಾವು ಕಾದು ನಿಂತಿದೆ ಅನ್ನುವ ಆ ಭೀಕರತೆಗಿಂತ ನಡೆಯುತ್ತ ಇರುವುದು ಮತ್ತು ಹಾಗೇ ಸತ್ತು ಹೋಗುವುದು ಸುಖಕರ ಅಲ್ಲವೇ?
ಇದೆಲ್ಲ ನನ್ನ ಅನಿಸಿಕೆ ಮಾತ್ರ …ಬದುಕು ನನ್ನಂತ ಕೋಳಿಯನ್ನು ಕೇಳಿ ಖಾರ ಅರೆಯಲು ಕೂತುಕೊಳ್ಳುವುದಿಲ್ಲ …
ನೇಣುಗಂಬ ಸಮೀಪಿಸಿತು. ಮುಖಕ್ಕೆ ಕಪ್ಪು ಕವಚ ಹಾಕಿದರು. ಜಗತ್ತು ಪೂರ್ತಿ ಕತ್ತಲಾಯಿತು. ಎಲ್ಲ ಮುಗಿಯಿತಲ್ಲವಾ? ಸಾವು ಬಂದಾಗ ನನಗೆ ಗೊತ್ತಾಗುತ್ತದಾ? ಅಥವಾ ಅರಿವಾಗುವ ಮುನ್ನವೇ ಪ್ರಾಣ ಹೋಗುತ್ತದಾ? ಆದರೆ ಈ ರೀತಿ ಹೇಳಿ ಸಾಯಿಸುವ ಬದಲು ಸುಮ್ಮನೆ ಇಷ್ಟು ವಿಷವನ್ನು ನಿದ್ರೆಯಲ್ಲೆ ಹಾಕಿದ್ದರೆ ವಾಸಿ ಇತ್ತು. ನನಗೇ ಗೊತ್ತಿಲ್ಲದೇ ಹೋಗಿ ಆಗಿರುತ್ತಿತ್ತು. ಸಾವಿನ ನಿರೀಕ್ಷೆ ಎಷ್ಟು ಅಸಹನೀಯ. ಕ್ರೌರ್ಯದ ಪರಮಾವಧಿ …
ಕಾಲುಗಳು ಬಲಹೀನವಾದವು… ಸಾವಿನ ಭಯದಿಂದ. ಕೈ ಕಾಲು ತಣ್ಣಗಾದವು. ನಾನೀಗ ಬದುಕಿದ್ದೇನಾ? ಅಥವಾ ಸತ್ತು ಆಗಿದೆಯಾ? ಯಾರು ಹೇಳಬೇಕು? ಗಲ್ಲಿಗೇರಿಸುವವನೊಬ್ಬನೇ ಅಲ್ಲಿ ಉಳಿದಿದ್ದು. ಅವನನ್ನು ಮಾತನಾಡಿಸಲು ಭಯವಾಯಿತು. ಸುಮ್ಮನುಳಿದೆ ನಿರೀಕ್ಷೆಯಲ್ಲಿ, ಭಯದಲ್ಲಿ.
ಕ್ಷಣಗಳು ಯುಗವಾಗುವುದು ಬರೀ ವಿರಹದಲ್ಲಿ ಮಾತ್ರವಲ್ಲ .. ಸಾವಿನ ಸನಿಹದಲ್ಲೂ. ಇವನು ಹಗ್ಗ ಜಗ್ಗಿಬಿಡಬಾರದೇ? ಮತ್ತೇಕೆ ಕಾಯುತ್ತಿದ್ದಾನೆ?
ಅಲ್ಲೆಲ್ಲೋ ಹೆಜ್ಜೆಗಳ ಗುರುತು ಕ್ಷೀಣವಾಗಿ ಕೇಳಿಸುತ್ತಿದ್ದುದು ಬರಬರುತ್ತಾ ಹತ್ತಿರವಾಯಿತು. ಬಂದವನು ‘ಇವಳು ಅಪರಾಧಿಯಲ್ಲವಂತ ಇದೀಗ ತಿಳಿಯಿತು. ಬಿಡುಗಡೆಯ ಆಜ್ಞೆ ಬಂದಿದೆ’ ಎಂದ!
ಹಾಕಿದ್ದ ಮುಸುಕು ತೆಗೆದರು. ಕತ್ತಲಿಗ್ಗೆ ಒಗ್ಗಿದ್ದ ಮತ್ತು ಸಾವಿನ ಲೋಕಕ್ಕೆ ನುಗ್ಗಿದ್ದ ಮನಸ್ಸಿಗೆ ಬೆಳಕು ಹಿಂಸೆಯಾಯಿತು. ಕಣ್ಣು ಮುಚ್ಚಿದೆ. ಕ್ಷಣಗಳ ಹಿಂದೆ ಇದ್ದ ಬದುಕುವ ಆಸೆ ಈಗ ಬದುಕುತ್ತೇನೆ ಅಂತ ತಿಳಿದ ಮೇಲೆ ಸತ್ತುಹೋಗಿತ್ತು. ‘ನಾನು ನಿರಪರಾಧಿಯಂತ ಹೇಳಿ ಈಗ ಕೈ ತೊಳೆದುಕೊಂಡಿರಲ್ಲ .. ಇಷ್ಟು ದಿನದ ನನ್ನ ನೋವಿಗೆ ಏನು ಬೆಲೆ ಕಟ್ಟುತ್ತೀರಾ?’ ಅಂತ ಕಿರುಚ ಬೇಕೆನ್ನಿಸಿತು. ಕಾಲೆಳೆದುಕೊಂಡು ಹಿಂದೆ ಬಂದೆ. ಮತ್ತೆ ಅಪರಾಧಿಯಂತ ಯಾವಾಗ ತೀರ್ಮಾನಿಸುತ್ತಾರೋ? ನನ್ನ ಕೊನೆ ಘಳಿಗೆ ಬಂದಿದೆ ಎಂದು ಮತ್ತೆ ಯಾವಾಗ ಹೇಳಿ ಬಿಡುತ್ತಾರೋ ಅನ್ನುವ ಭಯ ಆವರಿಸಿತು. ಇದಕ್ಕಿಂತ ಈಗಲೇ ನೇಣುಗಂಬಕ್ಕೆ ಏರಿಸಿದ್ದರೆ ಒಳ್ಳೆಯದಿತ್ತು ಅನ್ನುವ ಹುಚ್ಚು ಯೋಚನೆ. ಕೊನೆ ಘಳಿಗೆಯಲ್ಲಿ ನನ್ನ ಪರವಾದ ಸಾಕ್ಷ್ಯಾಧಾರಗಳು ಮತ್ತೆ ವಿರುದ್ಧವೂ ಆಗಬಹುದಾದ ಎಲ್ಲ ಸಾಧ್ಯತೆಗಳಿವೆ ತಾನೇ? ಅಂದ ಮೇಲೆ ಮತ್ತೆ ಯಾವಾಗ ಈ ಸಾವಿನ ಯಾತ್ರೆ ಶುರುವಾಗುತ್ತದೊ ಅನ್ನುವ ಅಗೋಚರ ಭಯ.
ಅವತ್ತು ಬಿಡುಗಡೆಯಾಗಿ ಬಂದೆ.
ಆದರೆ ನನ್ನ ಅನಿಸಿಕೆ ಸತ್ಯವೇ ಆಗಿತ್ತು. ನನ್ನ ವಿರುದ್ಧ ಮತ್ತಿಷ್ಟು ದೂರುಗಳು, ಮತ್ತಿಷ್ಟು ಸಾಕ್ಷ್ಯಾಧಾರಗಳ ಸಾಲು ಸರತಿ ನಿಂತಿದ್ದವು. ‘ಈ ಸಲಕ್ಕೂ ನನ್ನ ಬಿಡುಗಡೆಯಾಗುವುದಾ?’ ಅನ್ನುವ ದೂರದ ಆಸೆ ಈ ಸಲ. ಇದಕ್ಕಾಗಿಯೇ ನಾನು ಮೊದಲ ಸಲವೇ ಸತ್ತು ಹೋಗಬೇಕಿತ್ತು ಅಂತ ಹೇಳಿದ್ದು. ಆಗ ಭರವಸೆಯೇ ಇರಲಿಲ್ಲ. ಈಗ ನೋಡಿ ಮತ್ತೆ ಭರವಸೆಯ ಹಣತೆಯ ಮಂಕು ಬೆಳಕು. ಮತ್ತೆ ಆ ನಿರೀಕ್ಷೆ, ಮತ್ತೆ ಆ ನಿರಾಸೆ. ಎಲ್ಲ ಸಹಿಸಬಲ್ಲೆನೆ ನಾನು?
ಸವಾಲು, ಪಾಟಿಸವಾಲುಗಳ ಸರಮಾಲೆ. ನಾನು ಸುಸ್ತಾಗಿದ್ದೆ. ಕೋಪದಿಂದ ಕಿರುಚಾಡಿದೆ, ಅಸಹಾಯಕತೆಯಿಂದ ಕಣ್ಣೀರಾದೆ, ಯಾವುದಕ್ಕೂ ಬೆಲೆಯಿಲ್ಲ ಇಲ್ಲಿ. ಹೇಳಿ ಕೇಳಿ ಇದು ಬಂದೀಖಾನೆ. ಯಾರಿಗೆ ಕರುಣೆ ಇರಬೇಕು ಇಲ್ಲಿ? ನನ್ನ ಸಣ್ಣ ತಪ್ಪುಗಳೆಲ್ಲ ಬೆಟ್ಟದಾಕಾರ ಬೆಳೆದವು. ನಾನು ಕುಬ್ಜಳಾಗುತ್ತಾ ಹೋದೆ. ನನ್ನ ಅಪರಾಧ ಮತ್ತೆ ಸಾಬೀತಾಯಿತು. ಸಣ್ಣ ತಪ್ಪು ಮಾಡಿದ್ದು ಹೌದಾದರೂ ನೇಣುಗಂಬಕ್ಕೆ ಏರುವಂತದ್ದಂತೂ ಅಲ್ಲ. ಕಾಲಿಗೆ ಒಂದು ಸಣ್ಣ ಸಂಕೋಲೆ ಹಾಕಿದ್ದರೆ ಸಾಕಿತ್ತು .. ಓಡಿಹೋಗದ ಹಾಗೆ. ಅದು ಬಿಟ್ಟು ಮತ್ತೆ ನೇಣುಗಂಬ!
ಈ ಸಲ ನನ್ನ ಕೊನೆಯಾಸೆ ಏನು ಅಂತ ಕೇಳಿದಾಗ ನಾನು ಏನೂ ಹೇಳಲೇ ಇಲ್ಲ. ಯಾರಿಗೆ ಬೇಕು ಆ ಸುಳ್ಳು ಸಾಂತ್ವನ? ಸಾವು ಕಾದಿದೆ ಎಂದು ಈ ಸಲ ಖಚಿತವಾಗಿತ್ತು. ಕೊನೆಯಾಸೆಯಂತೆ! ಎಂಥದ್ದೂ ಬೇಡ .. ಈ ಸಲವಾದರೂ ನನ್ನ ಗಲ್ಲಿಗೇರಿಸಿ ಅದೇ ನನ್ನ ಕೊನೆಯಾಸೆ ಅಂತ ಹೇಳಿದೆ. ಎಲ್ಲ ಮುಗಿದುಹೋಗಲಿ ಒಂದೇ ಸಲಕ್ಕೆ … ಮತ್ತೆ ಮತ್ತೆ ಎದುರಾಗೋ ಈ ಭಯ ನನ್ನನ್ನು ತಿನ್ನುತ್ತದೆ. ಆದರೆ ಬದುಕಬೇಕು ಅಂದಾಗ ಹೇಗೆ ಬದುಕಲು ಕೂಡಾ ಬಿಡುವುದಿಲ್ಲವೋ ಹಾಗೆ ಸಾವು ಬರಲಿ ಅಂದಾಗ ಸಾಯಿಸುವುದೂ ಇಲ್ಲ. ಮತ್ತೇನು ಸಾಕ್ಷಿ ದೊರಕುತ್ತದೋ .. ಮತ್ತೆ ನನ್ನನ್ನು ಬಂಧಮುಕ್ತಳಾಗಿಸುತ್ತಾರೊ ಏನೋ. ಅಬ್ಬಾ ಇದೆಂಥ ವಿಷಚಕ್ರ.
ಈ ಬಾರಿ ಎಲ್ಲ ಸ್ವಲ್ಪ ಅಭ್ಯಾಸವಾಗಿತ್ತು. ಢವಗುಟ್ಟುವ ಎದೆಯೊಡನೆ ಮರಣದಂಡನೆಗೆ ಸಿದ್ಧಳಾದೆ. ಮೊದಲ ಬಾರಿ ಇದ್ದ ಆತಂಕದಲ್ಲಿ ಬಹುಪಾಲು ಈಗ ಕಡಿಮೆಯಾಗಿತ್ತು. ಆದರೂ ಸಾವು ಅದೆಂಥ ಕ್ರೂರಿ. ಬದುಕಿನ ಯಾವುದನ್ನೂ ಪ್ರೀತಿಸದ ಹಾಗೆ ಪಾಠ ಕಲಿಸಿಬಿಡುತ್ತದೆ. ಮೊದಲ ಸಲ ಬಂದೀಖಾನೆ ಅಂತಲೂ ಗೊತ್ತಾಗದ ಹಾಗೆ ಅಭ್ಯಂಜನ ಸುಖ ಅನುಭವಿಸಿದ್ದೆನಲ್ಲ ಈಗ ಅದು ಅಸಾಧ್ಯವಾಗಿತ್ತು. ಮರಗಟ್ಟಿದ ಅನುಭವ. ಬಿಸಿ ಕಾಲನ್ನು ಸುಟ್ಟರೆ ಮಂಜು ತಣ್ಣಗಿದ್ದರೂ ಕೂಡಾ ಒಳಗೊಳಗೆ ಕಾಲನ್ನು ಕೊಳೆಸುತ್ತದೆ. ಬಂಧನ-ಬಿಡುಗಡೆ ಎಲ್ಲವೂ ಅಷ್ಟೇ …
ಅದೇ ಕರಿ ಮುಸುಕು, ಅದೇ ಅನಂತಯಾತ್ರೆ ಮತ್ತು ಯಾತನೆ. ನಾನು ಮತ್ತೊಮ್ಮೆ ಅಲ್ಲಿ ನಿಂತಿದ್ದೆ. ಚರಿತ್ರೆಯ ಪುನರಾವರ್ತನೆ !! ಹೆಜ್ಜೆ ಗುರುತು ಕೇಳಿಸಿತು ಈಗ ಕೂಡಾ. ಅದು ಸತ್ಯವೋ ಅಥವಾ ನನ್ನ ಭ್ರಮೆಯೋ? ಅತಿಯಾದ ಆಶಾವಾದಿತನ ಅಲ್ಲವಾ ಇದು? ಆದರೆ .. ಆದರೆ … ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಕೇಳಿದ ಹೆಜ್ಜೆ ಗುರುತು ನನ್ನ ಭ್ರಮೆಯಾಗಿರಲಿಲ್ಲ. ಮತ್ತೆ ನನ್ನ ಬಿಡುಗಡೆಯಾಗಿತ್ತು. ನಾನು ನಿರಪರಾಧಿಯಂತ ಕಡೇ ಘಳಿಗೆಯಲ್ಲಿ ಗೊತ್ತಾಯಿತಂತೆ.
ಈ ಸಲ ಮುಖದ ಮುಸುಕು ತೆಗೆದ ಕೂಡಲೇ ಗಂಟಲು ಸರಿ ಮಾಡಿಕೊಂಡು ‘ಥೂ’ ಅಂತ ಕ್ಯಾಕರಿಸಿ ಉಗಿದೆ ನಿರ್ಲಕ್ಷ್ಯದಿಂದ. ನನಗೆ ಮೊದಲೇ ಗೊತ್ತಿತ್ತು ಬಿಡು ಅಂತ ಅವರಿಗೆ ತಿಳಿಸಿ ಹೇಳುವ ನನ್ನ ವಿಧಾನ ಇದು. ಮೊದಲ ಸಲ ಕಾಲೆಳೆದು ನಡೆದ ನನಗೆ ಈಗ ಏನೂ ಅನ್ನಿಸಲೇ ಇಲ್ಲ. ಬದುಕು ಎಲ್ಲವನ್ನೂ ಕಲಿಸಿತ್ತು .. ಬದುಕುವುದನ್ನು ಕೂಡಾ, ಸಾವನ್ನು ಎದುರಿಸುವುದನ್ನು ಕೂಡಾ.
ಎರಡು ಸಲ ಸಾವನ್ನು ಅತೀ ಹತ್ತಿರದಿಂದ ನೋಡಿ ಬಂದ ಮೇಲೆ ನಾನು ಬೇರೆಯದೇ ವ್ಯಕ್ತಿಯಾದೆ. ಗಟ್ಟಿಯಾದ ವ್ಯಕ್ತಿಯಾದೆ. ಸಾವು ಈಗ ನನ್ನನ್ನು ಹೆದರಿಸುತ್ತಿರಲಿಲ್ಲ. ಅದರೆಡೆಗೆ ನನ್ನದೊಂದು ದಿವ್ಯನಿರ್ಲಕ್ಷ್ಯ. ‘ಅದೇನು ಕಿತ್ಕೊಳ್ತೀಯೋ ಕಿತ್ಕೋ ಹೋಗು’ ಅನ್ನುವ ಉದ್ಧಟತನ ಈಗ ನನ್ನಲ್ಲಿ.
ನಾನೀಗ ಅಪರಾಧಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದೆ. ಏನೇ ಅಪರಾಧವಾದರೂ, ಸಣ್ಣ ಪುಟ್ಟ ತಪ್ಪಾದರೂ ಇವಳಿಂದಲೇ ಅಂತ ಬಂಧಿಸುವಷ್ಟು ಕುಖ್ಯಾತಳಾದೆ. ಬಾಗಿಲು ತಟ್ಟಿದರೆ ಸಾಕು ನಾನು ಬಂಧನಕ್ಕೆ ಸಿದ್ಧಳಾಗಿ ಏಳುತ್ತಿದ್ದೆ. ಯಾರೂ ಕೇಳದೇ ಕೂಡಾ ನಾನೇ ಕೈ ಒಡ್ಡುತ್ತಿದ್ದೆ ಕೋಳ ಹಾಕಿಸಿಕೊಂಡು ಹೊರಡಲು.
ಇನ್ನು ಹೆಚ್ಚು ಹೇಳಿ ನಿಮಗೆ ಬೇಸರ ಮಾಡೋದಿಲ್ಲ ನಾನು.
ಅದಾದ ಮೇಲೆ ಏನಾಯಿತು ಗೊತ್ತಾ? ನನ್ನ ಸಣ್ಣ ಪುಟ್ಟ ತಪ್ಪುಗಳಿಗೆಲ್ಲ ಸಾವಿನ ಹತ್ತಿರಕ್ಕೆ ಹೋಗಿ ಬರುವುದು ಒಂದು ದಿನಚರಿಯೇ ಆಗಿಹೋಯಿತು. ಅದೆಷ್ಟು ಸಲದ ಬಂಧನವೋ, ಅದೆಷ್ಟು ಕ್ಷಣಿಕ ಬಿಡುಗಡೆಯೋ. ಈಗ ಬಿಡುಗಡೆಯಾದೆ ಅನ್ನಿಸಿದರೂ ಮೊದಲಿನ ಹಾಗೆ ಸಂತೋಷವೂ ಇಲ್ಲ. ಸಾವಿನ ಗುಮ್ಮ ನನ್ನನ್ನು ಈಗ ಹೆದರಿಸುತ್ತಲೇ ಇರಲಿಲ್ಲ. ನಾನು ಸಾವನ್ನೇ ಗೆದ್ದಿದ್ದೆನೇ? ಊಟಕ್ಕೆ ಕರೆದಾಗ ಹೋಗಿ ಕೂರುವ ಹಾಗೆ, ನಿದ್ದೆ ಬಂದಾಗ ಮಲಗುವ ಹಾಗೆ ನೇಣುಗಂಬಕ್ಕೆ ಹೋಗಿ ಹಿಂತಿರುಗುವುದೂ ಅಭ್ಯಾಸವಾಗಿ ಹೋಯಿತು. ನನ್ನ ಆಪ್ತರಲ್ಲಿ ‘ನಾಳೆ ನನ್ನ ಗಲ್ಲು ಕಣಪ್ಪಾ’ ಅಂದರೆ ಅವರು ಕೂಡಾ ‘ನಾಡಿದ್ದು ನಮ್ಮನೇಲೇ ಊಟ .. ಬಿಡುಗಡೆಯಾಗಿ ಬಂದುಬಿಡು .. ಒಟ್ಟಿಗೆ ಊಟ ಮಾಡೋಣ’ ಅಂತ ಹಾಸ್ಯ ಮಾಡುತ್ತಿದ್ದರು!
ನಾನೀಗ ಸಾವನ್ನು ಗೆದ್ದ ಚಿರಂಜೀವಿ. ಅದೆಲ್ಲ ಕಲಿಸಿದ್ದು ನೀವು. ನಿಮಗೆ ನನ್ನದೊಂದು ನಮನ. ಸಾವನ್ನು ಕೂಡಾ ನಗೆಯಲ್ಲಿ ಸ್ವಾಗತಿಸುವ ಮನಃಸ್ಥಿತಿ ಬೆಳೆಸಿದ ನಿಮಗೆ ನನ್ನ ಕೃತಜ್ಞತೆಗಳು ಅಂತ ಹೇಳಬೇಕೆನ್ನಿಸಿದರೂ ನಾನು ಹೇಳುವುದಿಲ್ಲ. ಯಾಕೆಂದರೆ ನೀವು ನನ್ನ ಉದ್ಧಾರ ಮಾಡುವುದಕ್ಕೆ, ಬುದ್ಧಳಾಗಿಸುವುದಕ್ಕೆ ಹೊರಟು ಕಲಿಸಿದ್ದಲ್ಲ ಇದು. ನಿಮಗೆ ತಪ್ಪನ್ನು ತಪ್ಪಿನಂತೆ ನೋಡುವುದು ಗೊತ್ತಿರಲಿಲ್ಲ. ಅಪರಾಧದಂತೆ ನೋಡಿಯಷ್ಟೇ ಗೊತ್ತು. ನೀವು ಸುಮ್ಮನೇ ಪೆಟ್ಟು ಕೊಡುತ್ತಾ ಹೋದಿರಿ .. ಅದು ನಿಮಗೇ ಗೊತ್ತಿಲ್ಲದ ಹಾಗೆ ಅದು ಶಿಲ್ಪದ ರೂಪ ತಳೆಯಿತು ಅಷ್ಟೇ! ಅಷ್ಟಕ್ಕೆ ನೀವು ಶಿಲ್ಪಿಯಾಗುವುದಿಲ್ಲ … ನೆನಪಿರಲಿ!!
ಬದುಕೆಂಬ ಬಂದೀಖಾನೆಯಲ್ಲಿ ನಾನು ನಿರಂತರ ಬಂಧಿ. ಯಾರಿಗೂ ಅನಿವಾರ್ಯವಾಗದ ನನ್ನನ್ನು ಸ್ವಾಭಾವಿಕವಾಗೇ ಎಲ್ಲರೂ ಅಪರಾಧಿಯಾಗಿಸುತ್ತಲೇ ಹೋದರು. ನಾನು ಎಂದೂ ಸಂತಳಾಗಿರಲಿಲ್ಲ. ನನ್ನಲ್ಲೂ ಎಲ್ಲ ದೌರ್ಬಲ್ಯಗಳಿದ್ದವು .. ನಿಮ್ಮೆಲ್ಲರಲ್ಲೂ ಇರುವ ಹಾಗೆ. ಆದರೆ ನಾನು ಯಾರ ಬದುಕಿನ ಅವಿಭಾಜ್ಯ ಅಂಗವೂ ಆಗಿರಲಿಲ್ಲ. ಹಾಗಾಗಿ ಎಲ್ಲ ತಪ್ಪುಗಳನ್ನೂ ನನ್ನದಾಗಿಸಿದಿರಿ ನೀವು. ಅದಕ್ಕೂ ನನ್ನ ತಕರಾರಿರಲಿಲ್ಲ. ಎಲ್ಲ ಅಪರಾಧಗಳನ್ನು ಒಪ್ಪಿಕೊಂಡರಾದರೂ ನನ್ನನ್ನು ನಿಮ್ಮ ಬದುಕಿನ ಅನಿವಾರ್ಯ ಅಂದುಕೊಳ್ಳುತ್ತೀರೇನೋ ಅನ್ನುವ ಸುಪ್ತ ಆಸೆ ಮನಸ್ಸಿನ ಆಳದಲ್ಲಿ. ನಿಮಗೆ ಬೇಕೆಂದಾಗ ನನ್ನನ್ನು ಒಪ್ಪಿದಿರಿ, ಬೇಡವೆಂದಾಗ ಇದ್ದೇ ಇತ್ತಲ್ಲ .. ಸಿದ್ಧವಾಗಿ ನಿಂತಿದ್ದ ನೇಣುಗಂಬ. ನನ್ನೊಳಗಿನ ನಾನು ಬದುಕಿದ್ದೇನಾ, ಸತ್ತಿದ್ದೀನಾ ಅಂತ ಕೂಡಾ ಯೋಚಿಸದೇ ನನ್ನ ಗುರಿಯಾಗಿಸುತ್ತಾ ಹೋದಿರಿ. ನನ್ನನ್ನು ನನ್ನ ದೌರ್ಬಲ್ಯಗಳೊಡನೆ ಸ್ವೀಕರಿಸುವ, ನನ್ನ ಅಪರಾಧಗಳೊಡನೆ ಒಪ್ಪಿಕೊಳ್ಳುವಂಥವರು ನೀವಾಗಿರಲಿಲ್ಲ. ಜಗತ್ತಿನ ನಿಮ್ಮ ದೃಷ್ಟಿಯಲ್ಲಿ ಬಿದ್ದಿದ್ದ ನನ್ನೊಳಗೆ ತಡವರಿಸುತ್ತ ನಡೆವ ಒಂದು ಮಗುವಿತ್ತು. ತಪ್ಪು ತಪ್ಪಾಗಿ ಹೆಜ್ಜೆಯಿಡುವ ಪುಟ್ಟ ಮಗು. ಅತ್ತು ನಿಮ್ಮ ಪ್ರೀತಿ ಸೆಳೆವ ಹುನ್ನಾರದಲ್ಲಿರುವ ಪುಟ್ಟ ಮಗು. ಸಾವಿನ ಸಮ್ಮುಖದಲ್ಲಿ ಕೂಡಾ ಅಭ್ಯಂಜನವನ್ನು ಆಸ್ವಾದಿಸುವಂಥ ಒಂದು ಬೆಪ್ಪು ಮಗು. ಬದುಕು ಆಗ ತಾನೇ ಶುರುವಾಗಿತ್ತಲ್ಲ … ಯಾವುದನ್ನ, ಯಾರನ್ನ ಹೇಗೆ ಸರಿಯಾಗಿ ಬಳಸಿಕೊಳ್ಳಬೇಕು ಅನ್ನುವುದನ್ನು ಅರಿಯದ ಮೊದ್ದು ಮಗು. ರಾಶಿ ಆಟಿಗೆ ಸುರಿದಿರಿ. ಬಾಚಿಕೊಳ್ಳುವ ಭರದಲ್ಲಿ ಪಕ್ಕದಲ್ಲಿದ್ದವರಿಗೆ ನೋವಾಯಿತಾ ಅಂತ ಕೂಡಾ ಅರ್ಥ ಮಾಡಿಕೊಳ್ಳದ ಮೂಢ ಮಗು. ನನ್ನನ್ನು ನೀವು ಕ್ಷಮಿಸಬೇಕಿತ್ತು .. ಆ ದೊಡ್ಡತನ ನಿಮ್ಮಲ್ಲಿ ಇರಲಿಲ್ಲ.
ಬದುಕಲು ಬಿಡದ ನೀವು ನನ್ನ ಸಾಯಲೂ ಬಿಡಲಿಲ್ಲ… ಹಾಗಾಗಿ ಇಗೋ ಈಗ ನಿಮ್ಮೆಲ್ಲರೆಡೆಗೆ ನನ್ನದೊಂದು ತಿರಸ್ಕಾರ!
ಈಗ ನಿಮಗೆ ಆಘಾತ ಕೊಡುವಂತ ಸತ್ಯವೊಂದನ್ನು ಹೇಳಿಯೇಬಿಡುತ್ತೇನೆ .. ಮೊದಲ ಸಲ ನೇಣುಗಂಬಕ್ಕೆ ಏರಿಸಲು ಹೊರಟಾಗಲೇ ನಾನು ಹೃದಯ ಸ್ಥಂಭನವಾಗಿ ಸತ್ತಿದ್ದೆ! ಮತ್ತೆ ಮತ್ತೆ ನೀವು ಕರೆದುಕೊಂಡು ಹೋಗಿದ್ದು, ಬಿಡುಗಡೆ ಮಾಡಿದ್ದು ಎಲ್ಲ ಜೀವವಿಲ್ಲದ ನನ್ನನ್ನು ಮಾತ್ರ. ಅಲ್ಲಿ ನಾನಿದ್ದೆ ಅಂತ ತಿಳಿದು ನೀವು ಶಿಕ್ಷೆ, ಅಪರಾಧ ಅಂತೆಲ್ಲ ಹಾರಾಡುತ್ತಿದ್ದಿರಲ್ಲ … ನಿಮ್ಮ ಮೂರ್ಖತನ ಮತ್ತು ಭ್ರಮೆ ನೋಡಿ ನಗುತ್ತಿತ್ತು ಪಂಜರದೊಳಗಿಲ್ಲದ ನಾನೆಂಬ ಪಕ್ಷಿ!

ಭಾರತಿ ಬರೆದ ಕಥೆ: ಸಾವು « ಅವಧಿ / avadhi

Friday, March 29, 2013

ಸುದ್ದಿ




ರದ್ದಿಯಾಗುತ್ತಿವೆ ಸುದ್ದಿಗಳು
ಅತ್ಯಾಚಾರವೋ ಅನಾಚಾರವೋ
ಆಚಾರವೋ ಸುವಿಚಾರವೋ
ಮರಣವೋ ಆಮರಣ ಉಪವಾಸವೋ
ಸುದ್ದಿಯಾಗುತ್ತಿವೆ ರದ್ದಿ

ಸಂಬಂಧವ ಹೊತ್ತುತಂದು
ಕಿತ್ತಾಡಲು ಪರದೆ ಮೇಲೆ
ಒಳಗೂ ಹೊರಗೂ ಏಕವಾಗಿ
ಮನೆ ಮನೆಯಲೂ ಕೊಳೆತ ನಾತ
ಸಂಬಂಧಗಳೀಗ ಅನಾಥ

ಅಳು ಆಕ್ರಂದನಕೆ ಕಣ್ಣು ಕಿವಿ ತೆರೆದು
ಕುರುಡಾದ ಜಗ ಕಿವುಡಾಗಿದೆ ಈಗ
ಜನ ಕುರುಡಾದಂತೆಲ್ಲ ಬಟ್ಟ ಬಯಲಲ್ಲೇ
ಚಡ್ಡಿ ಕಳೆವ ಆಟ, ಅಂಗಿಗಾಗಿ ಹುಡುಕಾಟ
ಮಾಧ್ಯಮಗಳಿಗೆ ರಸದೂಟ

ಜಾಗತೀಕರಣದ ವ್ಯಾಕರಣ
ಸಸ್ತಾ ಮಾಲಾಗಿ ಏಳು ಸಮುದ್ರದಾಚೆ
ಯ ಭದ್ರ ಕೋಟೆಯೊಳಗಿನ ರಾಜಕುಮಾರಿ
ಕಂಡವರ ಬೆರಳ ತುದಿ ತಾಕಿ ಬೆತ್ತಲೆ
ಬೆಲೆ ಕಳೆದುಕೊಂಡ ಬದುಕೀಗ ಹಗಲಿನಲ್ಲೇ ಕತ್ತಲೆ

ಬಯಲನೋಯ್ದು ಮನೆಯೊಳಗಿಟ್ಟು
ಛಾವಣಿಯ ಹಾರಿ ಹೊಡೆದು
ಬಯಲಾದೆನೆಂದರೆ ದೆಸೆಗೇಡಿಯಾದೆಯಂತರ್ಥ
ಬಯಲಿನೊಡನೆ ಬಯಲಾಗಲು
ಅಲ್ಲಮನಾಗಬೇಕು

                                            - ಜಯಲಕ್ಷ್ಮೀ ಪಾಟೀಲ್
                                                 23rd Jan 2013.

Wednesday, February 27, 2013

ಕವನಗಳನ್ನು ಒಂದೊಂದೇ ಒಂದೊಂದೇ ಓದಿಕೊಂಡು ಬರುತ್ತಿದ್ದಂತೆ ಏನೋ ಪುಳಕ - ಸುಗುಣ ಮಹೇಶ್


ಕುವೈತಿನಲ್ಲಿರುವ ತಂಗಿಯಂತಹ ಗೆಳತಿ, ಸುಗುಣ ಮಹೇಶ್ ನನ್ನ ಕವನ ಸಂಕಲನಕ್ಕೆ ಪ್ರತಿಕ್ತಿಯಿಸಿದ್ದು ಹೀಗೆ.

ಅಕ್ಕ, 
ನಿಮ್ಮ ಕವನಗಳನ್ನು ಒಂದೊಂದೇ ಒಂದೊಂದೇ ಓದಿಕೊಂಡು ಬರುತ್ತಿದ್ದಂತೆ ಏನೋ ಪುಳಕ ಈ ಸಾಲುಗಳು ನನಗೇ ಏಕೆ ಹತ್ತಿರ ಎಂದೆನಿಸುವಷ್ಟು ಆಪ್ತವಾದವು.

ಬತ್ತಲಾಗುವುದೆಂದರೆ... ಪ್ರೀತಿಯನ್ನು ಬತ್ತಿ ಹೋಗಿಸುವ ಪರಿ ವಾಹ್.. ಬತ್ತಿದ ಒರತೆಯ ಒಡಲೀಗ ನಿಮ್ಮ ಶವ ಹೂಳುವ ಜಾಗ.. ಅಬ್ಬಾ ಎಂಥಾ ಕಲ್ಪನೆ...

ರೂಪಕ... ಇಲ್ಲಿನ ಎರಡನೇ ರೂಪಕ ಮಲ್ಲಿಗೆಯ ಬಗ್ಗೆ ... ದಿನ ಖರ್ಚಾಗುವುದೆಂದು ಪ್ಯಾಸ್ಟಿಕ್ ಮಲ್ಲಿಗೆ ಕೊಂಡವಳಿಗೆಲ್ಲಿ ತಿಳಿಯುತ್ತೆ ಘಮಿಸುವ ಮಲ್ಲಿಗೆಯ ಪರಿಮಳ ಅಲ್ಲವೇ..? ತುಂಬಾ ಇಷ್ಟವಾಯಿತು..
 
ಹಕ್ಕಿಯ... ಬಗೆಗಿನ ಆಲೋಚನೆ, ಅಲ್ಲಿ ಇಲ್ಲಿ ಕುಳಿತು ದಿನಕಳೆವ ಹಕ್ಕಿಗಳಿಗೆ ಆಕಾಶದತ್ತಲೇ ಚಲನೆ ಭೂಮಿಯತ್ತಲೇ ಗಮನ ಹೊಟ್ಟೆ ತುಂಬಿಸುಕೊಳ್ಳುವುದಕ್ಕೆ. ನಿಜ ಎಷ್ಟು ಸೂಕ್ಷ್ಮವಿರಬೇಕು ಅವುಗಳ ಕಣ್ಣು ಬಾನೆತ್ತರಲ್ಲಿ ಹಾರಾಡಿ ಭೂಮಿಯತ್ತ ಗಮನ ಹರಿಸುವುದು ಅಷ್ಟು ಸಲೀಸೇ... ಸಕ್ಕತ್ ಇಷ್ಟ ಆಯ್ತು ಇಲ್ಲಿ ಮೂಕಪಕ್ಷಿಯ ಜಾಣ್ಮೆ ಚುರುಕುತನ ಹೊಗಳಿದ್ದೀರಿ ಜೊತೆಗೆ ಅವುಗಳಿಗೆ ಸ್ವತಂತ್ರವಾಗಿ ಕೂರಲು ಬಿಡದ ಜನರ ಗಮನ ಸೆಳೆದಿದ್ದೀರಿ.

ಆಸೆಗಳು... ಬೇರುಗಳಾದರೆ ಆಸೆಗಳಿಗೂ ಸುಭದ್ರತೆ ಇರುತ್ತದೆಯಲ್ಲವೇ.. ಇನ್ನೊದೆಡೆ ಎಲೆಗಳಿಗೆ ಬೇರಿನಿಂದಲೇ ಆಹಾರ ಅದರಿಂದಲೇ ಹಸಿರಾಗಿರಲು ಸಾಧ್ಯ ಬೇರು ಬಿಟ್ಟು ನೆಡೆದರೆ ನೀವು ಹೇಳಿದಂತೆ ತಿಪ್ಪಿಗುಂಡೇ ಆಧಾರ... ವಿಭಿನ್ನ ಶೈಲಿಯ ಹೋಲಿಕೆ.. ಕವನಕ್ಕೆ ತಕ್ಕಂಟೆ ಚಿತ್ರ ಸೂಪರ್

ತಾಯಿ ಮತ್ತು ಮಗಳು... ಅಬ್ಬಾ ಎಂಥಾ ಪ್ರಶ್ನೆ .. ಭೂಮಿ ತಾಯಿ ನಮ್ಮೆಲ್ಲಾ ತಪ್ಪುಗಳನ್ನು ಎಷ್ಟು ದಿನ ಸಹಿಸಾಳು ಸಹಿಸಿ ಸಹಿಸಿ ಕೊನೆಗೊಂದು ದಿನ ಭೂಕಂಪವೋ ಯಾವುದೋ ಕೋಪಕ್ಕೆ ಸಿಲುಕುವೆವು.. ಅವಳಲ್ಲಿದ್ದ ಗುಣ ಮಗಳಾದ ಸೀತೆಗೆ ಏಕೆ ಬರಲಿಲ್ಲ.. ಅದೇ ಅರ್ಥವಾಗದ್ದು.. ಜನ ಸೀತೆಯಂತಿರಬೇಕು ಹೆಣ್ಣು, ಎಂದು ಹೋಲಿಸಿದರೆ ಸಿಟ್ಟು ಬರುತ್ತೆ... ಮಾಡಿದ್ದನ್ನೆಲ್ಲ ಒಪ್ಪಿಕೊಂಡು ಕೂರಲಾಗುತ್ತದೆಯೇ.. ಅಮೋಘ ಪ್ರಶ್ನೆ ಅಕ್ಕಾ... ನಮ್ಮ ಮನಸಲ್ಲೂ ಇಂತಹ ಪ್ರಶ್ನೇ ಹುಟ್ಟಿಸುವಂತಹಾ ಕವನ.

ಅರಿಕೆ... ಮುಖವಾಡಗಳಿಗೆ ಹೆಸರು ಕೊಟ್ಟರೂ ನಿಲ್ಲುತ್ತದೆ ಎಂಬ ಖಾತ್ರಿ ಇಲ್ಲ... ಹೆಸರಿಲ್ಲದೆಯೇ ಸಂಬಂಧಗಳು ಭದ್ರವಾಗಿದರೆ ಅವು ಚಿರಕಾಲ ಉಳಿಯುತ್ತವೆ.. ಪುಟ್ಟ ಸಾಲು ಒಳ್ಳೆಯ ಅರ್ಥವನ್ನು ನೀಡುತ್ತದೆ.

 ಕಳಕೊಂಡವಳು - ಯಾರು ಯಾರೋ ಏನೇನೋ ಅನ್ನುತ್ತಾರಂತ ನಮ್ಮ ಆಸೆಗಳನ್ನ ಏಷ್ಟೋ ಕಳೆದುಕೊಂಡಿದ್ದೀವಿ ಅರಿವಾಗುವಷ್ಟರಲ್ಲಿ ಇರುಳುಗಣ್ಣೇ ಸತ್ಯ... ಎಂತಾ ಮಾತು ಅಕ್ಕಾ ಹ್ಯಾಟ್ಸ್ ಆಫ್ ಟು ಯು.. 
 ವಾಸ್ತವದೆಡೆಗೆ-ಸಾಗಲೇ ಬೇಕು ಆದರೆ ವಾಸ್ತವವನ್ನು ಅರಿಯುವುದೇ ಕಷ್ಟ ಈಗಿನ ಕಾಲದಲ್ಲಿ.. ಪುಟಕಿಟ್ಟ ಚಿನ್ನವಾಗುವುದು ಹೇಗೆ ... ಹೆಣ್ಣು ಮತ್ತೊಂದು ಮನೆ ಹೊಕ್ಕರೆ ಅಲ್ಲಿನ ಕಟ್ಟುಪಾಡುಗಳಿಗೆ ಹೊಂದಿಕೊಳ್ಳುವುದಕ್ಕೆ ಸಮಯ ಬೇಕು ಇನ್ನು ಸೋಗಿನ ಬದುಕು ಎಷ್ಟೋ ಜನರಲ್ಲಿ ರೂಢಿಸಿಕೊಂಡು ಬಂದುಬಿಟ್ಟಿದೆ.
ಮಾತು-ಮೌನ ಇದನ್ನ ಹಿಡಿದೇ ನಾನು ಎಷ್ಟೋ ಆವಿಶ್ಕಾರ ಮಾಡೋಕ್ಕೆ ಹೊರಟಿದ್ದೆ... ಮಾತು ಇಲ್ಲದೇ ಮೌನವಾಗಿ ಜೀವಿಸಲು ಸಾಧ್ಯನಾ ಅಂತಾ... ನಿಮ್ಮ ಮಾತು-ಮೌನ ಕವನ ಓದಿದ ಮೇಲೆ ಮಾತು-ಮೌನ ಎರಡು ಇರಬೇಕು ಕವಿಯಾಗಿ ಮಾತು ಮೈಪುಳಕವಾಗಿ ಮೌನವಿರಬೇಕು ಎಂದೆನಿಸುತ್ತೆ.

ಆದದ್ದೆಲ್ಲಾ - ತದ್ಭವ-ತತ್ಸಮಗಳು ಬೆಚ್ಚಗಿನ ಗೂಡಾಗಿ ಕನಸುಗಳನ್ನೇಕೆ ಗರ್ಭಪಾತ ಮಾಡಿಸುವುದು ಸಲೀಸಾಗಿ ಪ್ರಸವ ಮಾಡಿಸಬಹುದಲ್ಲಾ..:) ಖಂಡಿತಾ ಗರ್ಭಪಾತವಾದಾಗ ಪಿಂಡಗಳನ್ನು ನೋಡಿ ನಿಟ್ಟುಸಿರೊಂದೇ ಸಮಾಧಾನ...

ನನ್ನೊಳು ನೀ- ಅಕ್ಕ ಮಹಾದೇವಿ ಪ್ರೇಮಿಸುವ ಪರಿ ನಮ್ಮಲ್ಲಿ ಹೇಗೆ ಹುಟ್ಟಲು ಸಾಧ್ಯ ಅವಳೊಬ್ಬಳು ಪ್ರೇಮ ತಪಸ್ವಿ... ಆಹಾ..!! ನಿಮ್ಮನ್ನು ನೀವು ಅವಳೊಂದಿಗಿನ ಪ್ರೇಮಕ್ಕೂ ನಿಮ್ಮ ಪ್ರೇಮಕ್ಕೂ ತಾಳೆ ಚೆನ್ನಾಗಿದೆ... ಪ್ರೀತಿ ದೊರಕಿದ ಪರಿ ಚೆಂದ..

ಅವ್ರು ಬಿಟ್ ಇವ್ಯ್ರಾರು- ಎಲ್ಲ ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ನೆನಪಾಯಿತು ಈ ಕವಿತೆ ಓದಿ. ನಾವುಗಳು ಲೌಕಿಕ ಬದುಕಿನಲ್ಲಿ ಆಸೆ-ಆಮಿಷಗಳಲ್ಲಿ ಬದುಕುತ್ತಿದ್ದೇವೆ ಇನ್ನೆಲ್ಲಿ ಆಗುವೆವು ಬುದ್ಧ ಬಸವರಂತೆ.. ತುಂಬ ಚೆನ್ನಾಗಿದೆ ನಿಮ್ಮ ಆಲೋಚನೆ.

ಕಡಲು - ಆಹ್..!! ಸಕ್ಕತ್ ಸಮಜಾಯಿಸಿನೇ ಕೊಟ್ಟೀರಿ ಸಮುದ್ರ ಹೆಣ್ಣುಗಳ ಸಮಾವೇಶವೇ ಸರಿ..!!

ಅನುಭವ್ಸು- ಊರಲ್ಲಿ ಹೋಗೋ ಮಾರಿನ ಮನೆಗೆ ತಂದ್ರಂತೆ ಹಹ ಈ ಗಾದೆ ನೆನಪಾಯಿತು ಈ ಸಾಲುಗಳನ್ನ ಓದಿದ ಮೇಲೆ.

ತಾವು- ಅಬ್ಬಾ.. ಎಷ್ಟು ಜನ ಯಾವ ಯಾವ ರೀತಿ ಯಾರನ್ನು ತಿನ್ನುತ್ತಾರೆ ನೋಡಿ... ಸಿಗರೇಟು, ಹೆಂಡ, ರಾಜ್ಕಾರಣಿ ಎಲ್ಲರೂ ಒಂದಲ್ಲ ಒಂದು ರೀತಿ ಕಬಳಿಸುವವರೇ... 

ಎಲ್ಲವೂ ವಿಭಿನ್ನತೆಯನ್ನು ಮೆರೆದಿದೆ ಅಕ್ಕಾ... ನನಗೆ ತುಂಬಾ ತುಂಬಾ ಇಷ್ಟವಾದ ಕವನಗಳ ಬಗ್ಗೆ ನನಗೆ ಅನ್ನಿಸಿದ್ದನ್ನು ಬರೆದೆ. ನೀವು ಕಳುಹಿಸಿದಾಗಿಂದ ಸುಮಾರು ೩,೪ ಬಾರಿ ಓದಿದ್ದೇನೆ ಎಲ್ಲಾ ಕವನಗಳು ನನಗೆ ಇಷ್ಟವಾದವು.. ಆದರೆ ಒಂದು ಕೋರಿಕೆ ದಯವಿಟ್ಟು ಮರು ಮುದ್ರಣ ಮಾಡಿಸಿ ಹಾಗೆ ಮತ್ತಷ್ಟು  ಕವನಗಳಿಗೆ ಹೊಸ ಪುಸ್ತಕವನ್ನು ಹೊರತನ್ನಿ... 

ನನಗಂತು ಕವನಗಳನ್ನು ಓದಿ ಬಹಳಷ್ಟು ಖುಷಿಯಾಗಿದೆ... ಎಷ್ಟು ಫ್ರೌಢತೆ ಇದೆ ಸಾಲುಗಳಲ್ಲಿ ಅರ್ಥಗರ್ಭಿತವಾಗಿವೆ.ಶುಭವಾಗಲಿ.....
                                                                         - ಪ್ರೀತಿಯಿಂದ,
                                                                               ಸುಗುಣ (22nd nov 2012)

ಸಂಭ್ರಮ

24th feb 2013ರಂದು ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ ಕವನ.



Monday, February 25, 2013

ಹೋರಾಟವೆಂದರೆ...


(ಈ ತಿಂಗಳ ‘ಸಿಹಿಗಾಳಿ’ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವಿದು).

ನನ್ನ ಮದುವೆಯಾದ ಹೊಸತು. ಅಂದರೆ ಈಗ ಇಪ್ಪತ್ತು ವರ್ಷದ ಹಿಂದಿನ ಮಾತು. ಪೂನಾದಲ್ಲಿದ್ವಿ. ಮನೆ ಎದುರಿಗೇ ಅಂದರೆ ಕೇವಲ ಅರ್ಧ ಕಿಲೋಮೀಟರಿಗೂ ಕಡಿಮೆ ಅಂತರದಲ್ಲಿ ಇವರು ಸಿವಿಲ್ ಇಂಜಿನೀಯರ್ ಆಗಿ ಕೆಲಸ ಮಾಡುವ ಜಾಗ. ಅವತ್ತೊಂದಿನ ನನ್ನ ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಎಂಟು ಗಂಟೆ. ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಊಟ ಮುಗಿಸಿ ಕೈತೊಳಿಯುತ್ತಿದ್ದರಷ್ಟೇ, ಆಗ ಸಮಯ ೯.೩೦ರ ಆಸುಪಾಸು, ಇವರ ಸೈಟಿನಿಂದ ಒಂದಿಷ್ಟು ಜನ ಓಡುತ್ತಾ ಬಂದು ಮನೆ ಬಾಗಿಲು ತಟ್ಟಿದರು. ಹೊರ ಹೋದ ಇವರು ಒಳಗೆ ಬಂದು ನಿಮಿಷಾರ್ಧದಲ್ಲಿ ಶರ್ಟ್ ಹಾಕ್ಕೊಂಡು ಲುಂಗಿ ಮೇಲೆಯೇ ಹೊರಟು ನಿಂತರು. ಬಾಗ್ಲು ಹಾಕ್ಕೊ, ಈಗ ಬಂದ್ಬಿಡ್ತೀನಿ ಎಂದಷ್ಟೇ ಹೇಳಿ ಹೋದರು. ವಿಷಯ ಏನು ಅಂತ ಗೊತ್ತಾಗದೆ ನನಗೆ ದಿಗಿಲಾಯ್ತು. ರಾತ್ರಿ ಬೇರೆ... ಹನ್ನೊಂದು ಮುಕ್ಕಾಲಿಗೆ ಮನೆಗೆ ಮರಳಿದ ನನ್ನ ಪತಿಯ ಮುಖ ಅಗತ್ಯಕ್ಕಿಂತ ಹೆಚ್ಚು ಗಡುಸಾಗಿತ್ತು. ಏನಾಯ್ತು? ಎಂದು ಕೇಳಿದೆ. ಏನಿಲ್ಲ ಎಂದು ವಿಷಯ ಮರೆ ಮಾಚಲು ನೋಡಿದರು. ನನಗೋ ಇವರ ವಿಷಯಕ್ಕೆ ಸಂಬಂಧಪಟ್ಟಂತೆ ಏನಾದರೂ ನಡೆದಿದೆಯಾ ಸೈಟಲ್ಲಿ ಅನ್ನುವ ಆತಂಕ. ಏನಾಯ್ತು ಎಂದು ಹೇಳಲು ಒತ್ತಾಯ ಮಾಡಿದೆ.  ಆಗ ಹೇಳಿದರು.
   ಸೈಟಿನಲ್ಲಿ ಗಾರೆ ಕೆಲಸ ಮಾಡುವ ಗಂಡಸೊಬ್ಬ ಕುಡಿದು ಬಂದು, ಅವರುಗಳು ಅಲ್ಲೇ ಸೈಟಲ್ಲೇ ವಾಸಿಸಲು ಹಾಕಿಕೊಂಡ ಝೋಪಡಿಗಳೆದುರು ತನ್ನ ಮಗಳ ಜೊತೆ ಆಟವಾಡುತ್ತಿದ್ದ ಪಕ್ಕದ ಝೋಪಡಿಯ ಮಗುವನ್ನು, ತನ್ನ  ಝೋಪಡಿಗೆ ಹೊತ್ತುಕೊಂಡು ಹೋಗಿ ಆ ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದಾನೆ. ನಡೆಯಲಾಗದೆ ತಡವರಿಸುತ್ತಾ, ಅಳುತ್ತಾ ಅವನ ಝೋಪಡಿಯಿಂದ ಹೊರಬಂದ ಮಗುವಿನ ಎರಡೂ ಕಾಲಗುಂಟ ರಕ್ತ ಸೋರುತ್ತಿದೆ!! ಅದನ್ನು ನೋಡಿದ ಅಲ್ಲಿಯ ಉಳಿದೆಲ್ಲ ಕಾರ್ಮಿಕರೂ ಒಟ್ಟಾಗಿ ಅವನನ್ನು ಹಿಡಿದು ನಾಲ್ಕು ಬಿಗಿದು, ಒಂದೆಡೆ ಕೂರಿಸಿ ಇವರನ್ನು ಕರೆಯಲು ಬಂದಿದ್ದರು. ಇದನ್ನು ಕೇಳಿ ತಣ್ಣಗಾದೆ ನಾನು! ಊಹಿಸಲೂ ಆಗದ ವಿಷಯ ನಾನಿರುವ ಜಾಗದಿಂದ ಸ್ವಲ್ಪ ದೂರದಲ್ಲೇ ನಡೆದಿತ್ತು! ಅವಡುಗಚ್ಚಿ ಕೇಳಿದೆ ಇವರನ್ನು, ನೀವು ಹೋಗಿ ಏನು ಮಾಡಿದ್ರಿ? ಪೋಲೀಸ್ ಕಂಪ್ಲೇಂಟ್ ಕೊಟ್ಟ್ರಿ ತಾನೆ?
ಇವ್ರು, ಆ ಮಗು ಅವಸ್ಥೆ ನನ್ನಿಂದ ನೋಡೋಕಾಗ್ಲಿಲ್ಲ, ಪಾಪ ಎಳೇ ಕಂದ... ತಾಯಿ ಮಗು ಇಬ್ರೂ ಒಂದೇ ಸಮ ಅಳ್ತಾ ಇದ್ರು, ಆ ಮಗು ಅಪ್ಪಾನೂ ಸಹ.  ತಲೆಕೆಟ್ಟು, ಆ ರಾಕ್ಷಸನನ್ನ ಕಂಬಕ್ಕೆ ಕಟ್ಟಿಸಿ, ಅಲ್ಲಿದ್ದ ಕಬ್ಬಿಣದ ಸಳಿಯಿಂದ ಸರೀ ಬಾರಿಸಿದೆ. ಬಡ್ಡಿಮಗಾ ಹೇಳ್ತಾನೆ, ಕುಡಿದಿದ್ರಿಂದ ಅವನಿಗೆ ತಾನೇನ್ ಮಾಡ್ತಿದೀನಿ ಅಂತ ಗೊತ್ತಾಗ್ಲಿಲ್ವಂತೆ, ಇನ್ನೊಮ್ಮೆ ಹಾಗೆ ಮಾಡೊಲ್ವಂತೆ, ಬಿಟ್‌ಬಿಡ್ಬೇಕಂತೆ!! ತನ್ನ ಮಗೂನೂ ಆ ಮಗು ಜೊತೆಗೆನೇ ಆಡ್ತಿತ್ತಲ್ಲ, ಅದನ್ನ ಮುಟ್ಟಬಾರ್ದು ಅಂತ ಹೇಗ್ ಗೊತ್ತಾಯ್ತವನಿಗೆ!? ಮನುಷ್ಯರಾ ಇವ್ರೆಲ್ಲ?! ಪ್ರಾಣಿಗಿಂತ ಕಡೆ. ಪೋಲೀಸರಿಗೆ ಫೋನ್ ಮಾಡಿ ಕರೆಸಿ, ಹೇಳಿದೆ, ಇವನನ್ನ ಸುಮ್ನೆ ಬಿಡಬೇಡಿ, ಸರೀ ಒದ್ದು ಬುದ್ದಿ ಕಲಿಸಿ ಅಂತ. ಎಳ್ಕೊಂಡು ಹೋದ್ರು. ನಾನು ಅಲ್ಲಿದ್ದ ಜನರ ಜೊತೆ ಮಗೂನ ಡಾಕ್ಟರ್ ಹತ್ರ ಕಳಿಸಿ ಮನೆಗೆ ಬಂದೆ ಅಂದರು.
  ಇದನ್ನ ಓದಿ ನಿಮ್ಮ ರಕ್ತ ಕುದೀತಿದೆಯಾ? ಇಲ್ಲ ಅಲ್ವಾ? ಇದನ್ನೊಂದು ಜಸ್ಟ್ ಸುದ್ದಿ ಅಥವಾ ವಿಷಯದ ಥರ ಓದಿದಿರಿ ಅಲ್ವಾ? ಯಾಕೆ ನಿಮಗೇನೂ ಅನಿಸ್ಲಿಲ್ಲ ಇದನ್ನ ಓದಿ?! ಏನು? ನಾನನ್ಕೊಂಡಿದ್ದು ಸುಳ್ಳು, ನಿಮ್ಮ ರಕ್ತ ಕುದೀತಿದೆ ಅಂದ್ರಾ? ಹಾಗಾದ್ರೆ ಇಂಥ ಎಷ್ಟೋ ಸುದ್ದಿಗಳನ್ನ ಈಗಾಗ್ಲೇ ಕೇಳಿಯೂ ಯಾಕೆ ಯಾರೂ ಯಾವ ಕ್ರಮಾನೂ ಕೈಗೊಳ್ತಿಲ್ಲ? ನನ್ನನ್ನೂ ಸೇರಿಸಿಯೇ ಈ ಮಾತು ಹೇಳ್ತಿದೀನಿ ನಾನು. ನಮ್ಮನೆ ಮಗೂಗೆ (ಅದು ಹೆಣ್ಣು/ಗಂಡು ಯಾವ ಮಗು ಬೇಕಾದ್ರೂ ಆಗಿರಲಿ), ಹೆಣ್ಣುಮಕ್ಕಳಿಗೆ ಅಥವಾ ನಮಗೆ ಇನ್ನೂ ಹೀಗಾಗಿಲ್ಲ, ಆದಾಗ ನೋಡ್ಕೊಂಡ್ರಾಯ್ತು ಅಂತಾನಾ...? ಹಾಗಲ್ವಾ? ಮತ್ತೆ ಹೇಗೆ..? ದಿನನಿತ್ಯ ಇಂಥ ಸುದ್ದಿಗಳನ್ನ ಪೇಪರಿನಲ್ಲಿ ಓದಿ, ಟೀವಿಲಿ ನೋಡಿ ಮನಸು ಜಿಡ್ಡುಗಟ್ಟಿ ಹೋಗಿದೆಯಾ? ಬೇರೆಯವರ ಸುದ್ದಿ ನಮಗೇಕೆ ಅನ್ನುವ ಮನುಷ್ಯ ಸಹಜ ಸ್ವಭಾವದ ಜೊತೆ ಜೊತೆಗೇ ಇಂಥದ್ದನ್ನ ತಡೆಗಟ್ಟಲು ಏನಾದ್ರೂ ಮಾಡಬೇಕು ಅಂತನಿಸಿದರೂ ಹೇಗೆ ಪರಿಹಾರ ಹುಡ್ಕೋದು ಅಂತ ಗೊತ್ತಗ್ತಿಲ್ಲ ಅಲ್ವಾ?
     ಪ್ರತೀ ಸಲ ಪತ್ರಿಕೆಗಳಲ್ಲಿ, ಟಿವಿಯಲ್ಲಿ ರೇಪಿನಂತಹ ಅಮಾನವೀಯ ಘಟನೆಗಳನ್ನು ಓದಿದಾಗ, ಕೇಳಿದಾಗ ನನ್ನ ರಕ್ತ ಕುದಿಯುತಿತ್ತು. ಆದರೆ ನಡೆದ ಘಟನೆಯ ಕುರಿತು ಏನೂ ಮಾಡಲಾಗದ ನನ್ನ ಅಸಹಾಯಕತೆಯಿಂದ ಅಷ್ಟೇ ಬೇಗ ಕುದಿಯನ್ನು ಕಳೆದುಕೊಳ್ಳುತ್ತಿತ್ತು ಸಹ! ಸುಮ್ಮನಾಗುತ್ತಿದ್ದೆ. ಮತ್ತೆ ಮತ್ತೆ ಸುದ್ದಿ ಓದುತ್ತಿದ್ದೆ, ಕೇಳುತ್ತಿದ್ದೆ ಕುದ್ದು ಕುದ್ದು ಮತ್ತೆ ತಣ್ಣಗಾಗುತ್ತಿದ್ದೆ. ವರ್ಷಾನುವರ್ಷ ಮಾಡಿದ್ದು ಇಷ್ಟೇ! ಈ ಕುದಿಯನ್ನು ಯಾರ ಹತ್ತಿರವಾದರೂ ಹೇಳಿಕೊಂಡಾಗ ಸಿಗುತ್ತಿದ್ದ ಪ್ರತಿಕ್ರಿಯೆ ಹೆಚ್ಚೂಕಡಿಮೆ ಒಂದೇ ಥರ, "ಏss ಸುಮ್ನಿರು, ನಾಟ್ಕ,ಶೂಟಿಂಗು ಅಂತ ಒಬ್ಳೇ ಓಡಾಡ್ತಿರ್ತೀಯ,ಅಂಥವರ್ನೆಲ್ಲ ಎದುರ್ ಹಾಕ್ಕೊಂಡ್ರೆ, ಅವ್ರುಗಳು ಸಮಯ ನೋಡ್ಕೊಂಡ್ ಏನಾದ್ರೂ ಹೆಚ್ಚುಕಡಿಮೆ ಮಾಡಿಬಿಟ್ರೆ ಗತಿ ಏನು!?" ಆ ಹೆಚ್ಚುಕಡಿಮೆ ಅನ್ನೋದು ಸೀದಾ ಸೀದಾ ಹೇಳಬೇಕು ಅಂದ್ರೆ ರೇಪ್ ಮತ್ತು ಮರ್ಡರ್! ಸರಿ, ಹಲ್ಲು ಕಚ್ಚಿಕೊಂಡು, ಬಾಯ್ ಮುಚ್ಕೊಂಡು... ಪತ್ರಿಕೆಯನ್ನು ಓದುವಾಗ ಕ್ರೈಮ್ ಕುರಿತು ಇರುವ ಪುಟ ಬಂದಾಗ ಅದನ್ನೋದುವ ಶಕ್ತಿ ಇಲ್ಲದೇ ಓದಬಾರದ ಪುಟ ಕಣ್ಣೆದುರಿಂದ ಸರಿದುಹೋದರೆ ಸಾಕು ಎಂಬಂತೆ ಮುಗುಚಿ ಮುಂದಿನ ಪುಟಕ್ಕೆ ಧಾವಿಸಿಬಿಡುವುದು! ಹೊರಗೆ ಹೋದಾಗ ಏನಾದರೂ ಹೊಲಸು ಕಣ್ಣೋಟ, ಹೊಲಸು ಮಾತುಗಳು ಎದುರಿಸಬೇಕಾಗಿ ಬಂದಾಗ, ಅದೆಲ್ಲ ನನ್ನ ಕಣ್ಣಿಗೆ ಕಿವಿಗೇ ಬಿದ್ದಿಲ್ಲವೇನೋ ಎಂಬಂತೆ ಇರುಸುಮುರಿಸಿನೊಡನೆಯೇ ಸರಸರ ಹೆಜ್ಜೆ ಹಾಕಿಯೋ ಓಡು ನಡಿಗೆಯಲ್ಲೋ ಅಲ್ಲಿಂದ ಸರಿದು ಹೋಗೋದು. ಥತ್ ನಮ್ಮ ಹೇಡಿತನಕ್ಕಿಷ್ಟು ಬೆಂಕಿ ಹಾಕ!!
 ಅದು ಹೇಡಿತನವಾ...? ಅಸಹಾಯಕತೆಯಾ...?      
ಯಾವ ತಪ್ಪೂ ಮಾಡದೆ, ಕಳ್ಳರಂತೆ ಹೆದರಿ ಹೆದರಿ ಬದುಕುವುದು ಉಸಿರುಗಟ್ಟಿಸುತ್ತದೆ. ಹೆಣ್ಣಿನ ವಿಷಯವಾಗಿ ಅದ್ಯಾಕೆ ಈ ಪರಿಯ ಅಸಹ್ಯ ತುಂಬಿಕೊಂಡಿದೆ ಜಗದಲ್ಲಿ? ಮನುಜರಾಗಿ ಹುಟ್ಟಿದ ಎಲ್ಲ ಗಂಡಸರಿಗೂ ಒಂದು ಕುಟುಂಬವಿರುತ್ತದೆ, ಪ್ರತೀ ಕುಟುಂಬದಲ್ಲೂ ಹೆಣ್ಣುಮಕ್ಕಳಿರುತ್ತಾರೆ. ಆದರೂ ಪರಸ್ತ್ರೀಯನ್ನು ಕಂಡೊಡನೆ ಯಾಕೆ ಪುರುಷನ ಮನಸು ಹಾಗಾಗುತ್ತದೆ? ನಾನಿಲ್ಲಿ ಎಲ್ಲ ಪುರುಷರೂ ಇಂಥ ಮನೋಭಾವದವರೇ ಎಂದು ಹೇಳುತ್ತಿಲ್ಲ. ಸಭ್ಯರು ತುಂಬಾ ಜನರಿದ್ದಾರೆ ಎನ್ನುವುದನ್ನು ಒತ್ತಿ ಹೇಳುತ್ತಾ, ಅವರನ್ನು ಹೊರತುಪಡಿಸಿ ಯಾರೆಲ್ಲ ಹೀಗೆ ಅಸಹ್ಯವಾಗಿ ನಡೆದುಕೊಳ್ಳುತ್ತಾರೋ ಅವರನ್ನು ಮಾತ್ರ ಉದ್ದೇಶಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪುರುಷನ ಈ ಚಂಚಲತನಕ್ಕೆ ಆತ ರೇಪೇ ಮಾಡಬೇಕು ಅಂತೇನಿಲ್ಲ, ಒಂದು ಅಸಹ್ಯ ನೋಟ, ಒಂದು ಅಸಹ್ಯ ಮಾತು, ಒಂದು ಅಸಹ್ಯ ಸ್ಪರ್ಶ ಹೆಣ್ಣಿನೆಡೆಗಿರುವ ಅವನ ಮನಸ್ಥಿತಿಯನ್ನು ತೋರಿಸಿ ಕೊಡುತ್ತದೆ. ಹೇಣ್ಣು ಮಾನಸಿಕವಾಗಿ, ದೈಹಿಕವಾಗಿ ತನ್ನ ತಪ್ಪಿಲ್ಲದೇ ಹಿಂಸೆ ಅನುಭವಿಸುತ್ತಾಳೆ. ಗಂಡು ಜೊತೆ ಇದ್ದಾಗೆಲ್ಲ ತಾನು ಯಾವಾಗಲೂ ಎಚ್ಚರದಿಂದಿರಬೇಕೆನ್ನುವುದನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳುತ್ತಾಳೆ. ಅವನ ಈ ಸ್ವಭಾವಕ್ಕೆ ಹೇಸಿಕೊಳ್ಳುತ್ತಾಳೆ. ನಮ್ಮಂತೆಯೇ ಭೂಮಿಗೆ ಬಂದ ಈ ಗಂಡು ಎಂಬ ಇನ್ನೊಂದು ಮನುಜ ಪ್ರಬೇಧದ ಬಗ್ಗೆ ಹೀಗೆ ಹೆಣ್ಣುಗಳು ಅಸಹ್ಯಿಸಿಕೊಳ್ಳುವ ಅನಿವಾರ್ಯ ಯಾಕಾಗುತ್ತದೆ...? ಯಾಕಾಗಬೇಕು?!!
  ದೆಹಲಿ ಸಾಮೂಹಿಕ ಅತ್ಯಾಚಾರದ ಪ್ರಕರಣದ ನಂತರ, ಸಾಮೂಹಿಕ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿದೆ . ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಾಯಿಗಳು ಗುಂಪುಗೂಡಿ ಅಮಾಯಕ ಮಕ್ಕಳನ್ನು, ನಿಶ್ಯಕ್ತರನ್ನು ಕಚ್ಚಿ ಎಳೆದಾಡಿ ಕೊಂದುವಲ್ಲ ಹಾಗೆ! ದೆಹಲಿಯ ಪ್ರಕರಣದ ಸುದ್ದಿ ಗೊತ್ತಾದಾಗ, ವರ್ಷಾನುವರ್ಷ ನನ್ನಲ್ಲಿ ಹತ್ತಿಕೊಂಡ, ಆಕ್ರೋಶ ಅಸಾಯಕತೆಗೆಲ್ಲ ಮಂಗಳ ಹಾಡಿದೆ. ಫೇಸ್ ಬುಕ್ಕಿನ ಅಂತಃಪುರದ ಸಖಿಯರೊಡನೆ (ಅಂತಃಪುರ, ‘facebook' ಎಂಬ ಜಾಲತಾಣದಲ್ಲಿ ನಾನು ನಿರ್ಮಿಸಿದ ಮಹಿಳೆಯರ ಗುಂಪಿನ ಹೆಸರು) ಚರ್ಚಿಸಿದೆ. ಅವರೆಲ್ಲರ ಸಹಕಾರ, ಸಲಹೆ, ಸಹಯೋಗದೊಂದಿಗೆ ಒಂದಿಷ್ಟು ಯೋಜನೆಗಳು ರೂಪುಗೊಂಡಿವೆ. ಯೋಜನೆಗಳು ಬರೀ ಯೋಜನೆಗಳಾಗಿ ಉಳಿಯದೇ ಅವೆಲ್ಲನ್ನೂ ಕಾರ್ಯಗತಗೊಳಿಸತೊಡಗಿದ್ದೇವೆ. ನಾವು ಮಾತಾಡಿದ ತಕ್ಷಣ, ಹೀಗೆ ಬರೆದ ತಕ್ಷಣ ಅಥವಾ ಇನ್ಯಾವುದ್ಯಾವುದೋ ರೀತಿಯಲ್ಲಿ ಹೋರಾಡಿದ ತಕ್ಷಣ ಜಗತ್ತು ಬದಲಾಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ನಾವ್ಯಾರೂ ಇಲ್ಲ, ಆದರೆ ಹಾಂ ಹೌದು, ಜಗತ್ತು ಬದಲಾಗುತ್ತದೆ ಮತ್ತು ಬದಲಾಗಲೇಬೇಕು. ಆದರೆ ಟೈಮ್ ತೆಗೆದುಕೊಳ್ಳುತ್ತೆ. ಶತಶತಮಾನಗಳಿಂದ ಮಾನವರಲ್ಲಿ ಬೇರುಬಿಟ್ಟ ಕ್ರೌರ್ಯ, ನೀಚತನ, ಹೆದರಿಕೆ, ಅಸಹಾಯಕತೆ ಕಡಿಮೆಯಾಗಲು ಸಾಧ್ಯವಾದರೆ ಇಲ್ಲವಾಗಲು ಒಂದೆರಡು ತಲೆಮಾರುಗಳು ಸರಿದು ಹೋಗಬಹುದು. ಮಹಲು-ಗುಡಿಸಲು ಎನ್ನದೆ ಪ್ರತೀ ಮನೆಯಲ್ಲೂ ಇಂಥ ಹೇಯತನದ ವಿರುದ್ಧ ಹೋರಾಟವಾಗಬೇಕು. ಆದರೆ ಹೇಗೆ? ಇಲ್ಲಿ ಕೆಲವು ಉಪಾಯಗಳಿವೆ, ಅವುಗಳನ್ನು ಅನುಸರಿಸೋಣ. ಪ್ರತಿಯೊಬ್ಬರೂ ನಮ್ಮ ನಮ್ಮ ಮನೆಯ ಜನರನ್ನು ಸುರಕ್ಷಿತವಾಗಿಸಿಕೊಳ್ಳುವ ಮೂಲಕ ಇನ್ನೊಬ್ಬರ ಮನೆಯ ಜನರನ್ನೂ ಸುರಕ್ಷಿತಗೊಳಿಸೋಣ.

೧) ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಬೇರೊಬ್ಬರು ‘ಮುಟ್ಟಬಾರದ ಅಂಗಗಳ’ ಕುರಿತು ಅವರಿಗೆ ಅರ್ಥವಾಗುವ ಹಾಗೆ ಅರಿವು ಮೂಡಿಸುವುದು. ಮತ್ತು ಯಾರಾದರೂ ಹಾಗೆ ಮುಟ್ಟಿದಲ್ಲಿ ತಕ್ಷಣ ಜೋರಾಗಿ ಕೂಗಿಕೊಳ್ಳಲು ಹೇಳಿಕೊಡಬೇಕು, ತಪ್ಪದೇ ಅಪ್ಪ ಅಮ್ಮನ ಹತ್ತಿರ ಹೇಳುವುದು, ಜೊತೆಗೆ  ಅಂಥ ಹೊತ್ತಲ್ಲಿ ಹತ್ತಿರವಿರುವ ಯಾರಾದರೂ ತಮಗಿಂತ ಸ್ವಲ್ಪ ದೊಡ್ಡವರಾದರೂ ಸರಿ, ಅವರಲ್ಲಿ ಹೇಳುವಂತೆ ಮನವರಿಕೆ ಮಾಡಿಕೊಡುವುದು. ಆದರೆ ಎಚ್ಚರ, ನಿಮ್ಮ ವಿವರಣೆಯಿಂದ ಮಕ್ಕಳ ಮನಸು ಅನಾವಶ್ಯಕ ಕುತೂಹಲಕ್ಕೀಡಾಗದಂತೆ ನೋಡಿಕೊಳ್ಳುವುದೂ ಇಷ್ಟೇ ದೊಡ್ಡ ಜವಾಬ್ದಾರಿ. ಅದರ ಕಡೆಯೂ ಗಮನವಿರಲಿ.
೨) ಮಕ್ಕಳಿಗೆ ಹೆಣ್ಣುಗಂಡೆಂಬ ತಾರ್ಯತಮ್ಯವಿಲ್ಲದೇ ವ್ಯಕ್ತಿಯನ್ನು ಗೌರವದಿಂದ ಕಾಣಬೇಕೆನ್ನುವುದು ಮಾತಿನ ಮೂಲಕ, ನಿಮ್ಮ ನಡುವಳಿಕೆಯ ಮೂಲಕ ತೋರಿಸಿಕೊಡುತ್ತಾ, ಅವರು ನಿಮ್ಮನ್ನು ಅನುಸರಿಸುವಂತೆ ಮಾಡಿ.
೩) ಲೈಂಗಿಕತೆಯ ವಿಷಯವಾಗಿ ಹೆಣ್ಣು ಮಗುವಿನ ಬಗ್ಗೆ ಕಾಳಜಿ ತೋರಿಸುವಷ್ಟೇ, ಗಂಡು ಮಗುವಿನ ಬಗ್ಗೆಯೂ ಈ ಕಾಳಜಿ ಇರಬೇಕಾದುದು ಅವಶ್ಯಕ. ಗಂಡು ಬಸಿರಾಗುವುದಿಲ್ಲ, ಹೀಗಾಗಿ ಗಂಡುಮಗು ಸುರಕ್ಷಿತ ಎನ್ನುವ ಕಾರಣಕ್ಕಾಗಿಯೇ ಎಷ್ಟೋ ವಿಷಯಗಳ ಕುರಿತು ಅವರನ್ನು ಸಡಿಲು ಬಿಡುತ್ತೇವೆ. ಇದೇ ಕಾರಣವಾಗಿ ಗಂಡು ಮಗು ತನಗರಿವಿಲ್ಲಂದಂತೆ ಲೈಂಗಿಕ ವಿಷಯಗಳ ಕುರಿತು ಚಿಕ್ಕಂದಿನಿಂದಲೇ ಸಲ್ಲದ ಕುತೂಹಲ ಬೆಳೆಸಿಕೊಂಡಿರುತ್ತೆ. ಒಳ್ಳೆಯ ಪರಿಸರ, ಸ್ನೇಹಿತರು ಸಿಕ್ಕಲ್ಲಿ ಸಭ್ಯ ನಾಗರೀಕರಾಗುತ್ತಾರೆ. ಇಲ್ಲದಿದ್ದಲ್ಲಿ ಇನ್ನೊಬ್ಬರ ಬದುಕು ನಾಶವಾಗಲು ಕಾರಣರಾಗುತ್ತಾರೆ.
೪) ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ಅದನ್ನು ಕೂಡಲೇ ಅಕ್ಕಪಕ್ಕದಲ್ಲಿರುವವರ ಗಮನಕ್ಕೆ ಬರುವಂತೆ ಮಾಡುವುದಕ್ಕೆ ಹಿಂಜರಿಯಬಾರದು ಎಂದು ಹೇಳಿಕೊಡಬೇಕು, ಜೊತೆಗೆ ತನ್ನ ಗಮನಕ್ಕೆ ಇಂಥ ವಿಷಯ ಬಂದಾಗ, ಕಿರಿಕಿರಿಗೊಳಗಾಗುತ್ತಿರುವ ವ್ಯಕ್ತಿಗೆ ಸಹಾಯ ಮಾಡಲು ಮುಂದಾಗಬೇಕು ಮತ್ತು ಅಲ್ಲಿರುವ ಇತರರನ್ನೂ ಅದರಲ್ಲಿ ಭಾಗಿಯಾಗಲು ವಿನಂತಿಸಬೇಕು ಎನ್ನುವುದನ್ನೂ ಸಹ. ಜೊತೆಗೆ ನಾವೂ ಇದನ್ನೆಲ್ಲ ಪಾಲಿಸಬೇಕು.

ಹೋರಾಟವೆಂದರೆ ಬರೀ ಕೂಗಿಕೊಳ್ಳುವುದಲ್ಲ, ಶಕ್ತಿ ಬಳಸಿ ಗುದ್ದಾಡುವುದಷ್ಟೇ ಅಲ್ಲ, ಹೋರಾಟವೆಂದರೆ ನಮ್ಮ ಮನೆಗಳಲ್ಲಿ ಅತ್ಯಾಚಾರಿಯೊಬ್ಬ ಹುಟ್ಟದಂತೆ ನೋಡಿಕೊಳ್ಳುವುದು, ನಮ್ಮ ಮನೆಯ ಮಕ್ಕಳು ಬಲಿಪಶುಗಳಾಗದಂತೆ ನೋಡಿಕೊಳ್ಳುವುದು.

                                                       -ಜಯಲಕ್ಷ್ಮೀ ಪಾಟೀಲ್.
         




Wednesday, February 13, 2013

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

‘ಈ ಹೊತ್ತಿಗೆ’ ಕಾರ್ಯಕ್ರಮದ ಕುರಿತು ಅವಧಿಯಲ್ಲಿ ಸಖಿ ಸಂಧ್ಯಾರಾಣಿ ಬರೆದ ಲೇಖನ.




ಈ ಹೊತ್ತಿಗೆ

- ಎನ್ ಸಂಧ್ಯಾರಾಣಿ

ರಂಗಕರ್ಮಿ, ಕವಿಯಿತ್ರಿ ಜಯಲಕ್ಷ್ಮಿ ಪಾಟೀಲ್ ತಲೆಯಲ್ಲಿ ಹಲವಾರು ಯೋಜನೆಗಳು, ವಿಚಾರಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ! ಹಾಗೆ ಬಂದ ಒಂದು ಯೋಜನೆ ಎಂದರೆ ಒಂದು ಬುಕ್ ಕ್ಲಬ್! ಹಾ, ಒಂದು ಪುಸ್ತಕಪ್ರೇಮಿ ಸಮಾನ ಮನಸ್ಕರ ಕೂಟ. ಪ್ರತಿ ಹದಿನೈದು ದಿನಕ್ಕೊಮ್ಮೆ ಪುಸ್ತಕ ಪ್ರೇಮಿಗಳು ಒಂದೆಡೆ ಸೇರುವುದು, ಒಂದು ಪುಸ್ತಕದ ಬಗ್ಗೆ ಚರ್ಚಿಸುವುದು. ಈ ಯೋಜನೆ ಅವರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು, ಸುಮಾರು ಜನರನ್ನು ಇದು ಸೆಳೆದಿತ್ತು. ಈ ಕ್ಲಬ್ಬಿನ ಸದಸ್ಯತ್ವಕ್ಕೆ ಒಂದೇ ಫೀಸ್ ಎಂದರೆ ಆ ಪುಸ್ತಕದ ಒಂದು ಕಾಪಿ ಸದಸ್ಯರ ಕೈಲಿರಬೇಕು, ಒಂದೇ ಕರಾರೆಂದರೆ ಭಾಗವಹಿಸಿದ್ದವರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳಲೇ ಬೇಕು! ನಮ್ಮ ಬುಕ್ ಕ್ಲಬ್ ಹೆಸರು ’ಈ ಹೊತ್ತಿಗೆ’. ಅವರು ಮೊದಲ ಸಭೆಗೆ ಸೂಚಿಸಿದ್ದ ಪುಸ್ತಕ ಕೆ ವಿ ಅಯ್ಯರ್ ಅವರ ರೂಪದರ್ಶಿ, ಸೇರುವ ಸ್ಥಳ, ಸಮಯದ ಬಗ್ಗೆ ಅವರು ಒಮ್ಮೆ ಫೇಸ್ ಬುಕ್ಕಿನಲ್ಲಿ ಹಾಕಿದ್ದೆಷ್ಟೋ ಅಷ್ಟೆ, ಆಮೇಲೆ ಅವರು ಅದನ್ನು ಮತ್ತೆ ನೆನಪಿಸಿದಂತೆಯೂ ಕಾಣೆ, ಆದರೂ ನಾವೆಲ್ಲರೂ ತಾರೀಖು ಗುರುತು ಹಾಕಿಕೊಂಡು ಮರೆಯದೆ ಅಲ್ಲಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯುವ ಮಕ್ಕಳು ಹಾಲ್ ಟಿಕೆಟ್ ಅನ್ನು ಭದ್ರವಾಗಿಟ್ಟುಕೊಂಡು ಬರುವಂತೆ ಪುಸ್ತಕವನ್ನು ಅವಚಿ ಹಿಡಿದು ಕೊಂಡು ಬಂದಿದ್ದೆವು.
ಸೇರಿದ್ದವರೆಲ್ಲಾ ಫೇಸ್ ಬುಕ್ಕಿನಲ್ಲಿ ಪರಿಚಿತರೆ, ಹಾಗಾಗಿ ಹೇಗೋ ಏನೋ ಮಾತಾಡಿದರಾಯಿತು ಎಂದು ಧೈರ್ಯ ತಂದುಕೊಳ್ಳುವಷ್ಟರಲ್ಲಿ ಅಲ್ಲಿಗೆ ಬಂದದ್ದು ಜಯಶ್ರೀ ಮತ್ತು ದಿವಾಕರ್ ದಂಪತಿ, ನಮ್ಮ ಈ ಕೂಟಕ್ಕೆ ಥಟ್ ಅಂತ ಸ್ಟಾರ್ ವ್ಯಾಲ್ಯೂ ಬಂದಂತಾಯ್ತು! ಜೊತೆಗೆ ಎಲ್ಲರಿಗೂ ಇನ್ನಿಲ್ಲದ ಟೆನ್ಶನ್! ಇವರೆದುರಲ್ಲಿ ನಾವು ಮಾತಾಡೋದ?!
ಆದರೆ ಅವರಿಬ್ಬರೂ ಸರಳವಾಗಿ ಎಲ್ಲರ ಜೊತೆ ಬೆರೆಯುತ್ತಾ ಹೋದಂತೆ, ನಾವು ನಮ್ಮ ಹಿಂಜರಿಕೆ ಬಿಟ್ಟು ಮಾತಾಡಲು ಪ್ರಾರಂಭಿಸಿದೆವು. ಕೆ ವಿ ಅಯ್ಯರ್ ಅವರ ಬಗ್ಗೆ ನಾವು ತಿಳಿಯದ ವಿವರಗಳನ್ನು ದಿವಾಕರ್ ಅವರು ತಿಳಿಸುತ್ತಾ ಹೋದರು. ಆಮೇಲೆ ಒಬ್ಬೊಬ್ಬರಾಗಿ ಪುಸ್ತಕದ ಬಗ್ಗೆ ಮಾತಾಡಿದ್ದು, ಚರ್ಚಿಸಿದ್ದು …..
ಪುಸ್ತಕದ ಪ್ರಸ್ತುತತೆ, ಒಂದು ಪುಸ್ತಕವನ್ನು ವರದಿಯಾಗದಂತೆ ಕಥೆಯಾಗಿ ಹೆಣೆಯುವುದಕ್ಕೆ ಬೇಕಾಗುವ ಚಿಕ್ಕ ಚಿಕ್ಕ ವಿವರಗಳು, ಪುಸ್ತಕ ಬರೆದ ಕಾಲ ಮತ್ತು ಆ ಮೂಲಕ ಪುಸ್ತಕದ ಧ್ವನಿ, ಬದಲಾಗುವ ಕಾಲ ಮತ್ತು ಅದರ ಮೇಲೆ ನಿರ್ಧರಿತವಾಗುವ ಪುಸ್ತಕದ ಭಾಷೆ ಮತ್ತು ಭಾವುಕತೆ, ನೈತಿಕತೆ ಮತ್ತು ಅದರ ಮಾನದಂಡಗಳು…. ಏನೆಲ್ಲಾ ಚರ್ಚೆಯಾದವು ಅಲ್ಲಿ… ಅದರ ಬಗ್ಗೆ ಬರೆದರೆ ಅದೇ ಒಂದು ಲೇಖನವಾದೀತು, ಅದನ್ನು ನೀವೆಲ್ಲಾ ಅಲ್ಲಿಗೇ ಬಂದು ಸವಿಯಲಿ ಎನ್ನುವ ಆಸೆಯೊಂದಿಗೆ ಲೇಖನವನ್ನು ನಿಲ್ಲಿಸುತ್ತಿದ್ದೇನೆ.

’ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ…’ – ಜಯಲಕ್ಷ್ಮಿ ಪಾಟೀಲ್ « ಅವಧಿ / avadhi

’ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ…’ – ಜಯಲಕ್ಷ್ಮಿ ಪಾಟೀಲ್ « ಅವಧಿ / avadhi

ಫೆಬ್ರುವರಿ ೯ರಂದು ಅವಧಿಯಲ್ಲಿ ಪ್ರಕಟಗೊಂಡ ಬರಹ.


ನಮ್ಮೂರಾಗ ಕನ್ನಡ ತಾಯಿ ನಲಿದ್ಯಾಡಕತ್ತ್ಯಾಳ

ಜಯಲಕ್ಷ್ಮಿ ಪಾಟೀಲ್

ಬಿಳಿಜ್ವಾಳ ರೊಟ್ಟಿ, ಕರಿ ಎಳ್ಳ್ ಹಚ್ಚಿದ ಕಟಗ್ ಸಜ್ಜಿ ರೊಟ್ಟಿ, ಸಜ್ಜಿಗಡಬ, ಎಣ್ಣಿಗಾಯಿ ಬದನಿಕಾಯ್ ಪಲ್ಯಾ, ಪುಂಡಿಪಲ್ಯಾ, ಕಾಳ ಪಲ್ಯಾ, ಶೇಂಗಾದ್ ಹಿಂಡಿ(ಚಟ್ನಿ), ಕಾರೆಳ್ಳ ಚೆಟ್ನಿ, ಮಸರಾ, ಹುಳಿಬಾನ, ಎಳೀ ಸೌತಿಕಾಯಿ, ಗಜ್ಜರಿ, ಉಳ್ಳಾಗಡ್ಡಿ… ಹುಗ್ಗಿ, ಹೂರಣದ ಹೋಳ್ಗಿ, ಸಜ್ಜಕದ ಹೋಳ್ಗಿ, ಶೇಂಗಾದ ಹೋಳ್ಗಿ, ಹೆರಿತುಪ್ಪ, ಆಹಾ! ನಮ್ಮೂರ ಊಟಾನ ಊಟ!
ಹೌದ್ರೀ ನನಗೊತ್ತು, ನೀವೇನ್ ಅನ್ಕೊಳ್ಳಾಕತ್ತೀರಿ ಅಂತ! ಈ ಹೆಣ್ಮಕ್ಕಳಿಗೆ ಅಡಗಿ ಅಂಚಡಿ ಬಿಟ್ಟ್ರ ಬ್ಯಾರೆ ಏನೂ ಹೊಳಿಯೂದ ಇಲ್ಲೇನು!? ಅಂತ ಮಾರಿ ಗಂಟ್ ಹಾಕ್ಕೊಂಡ್ರಿಲ್ಲೋ? ಏನ್ ಮಾಡೂದ್ ಹೇಳ್ರೆಪಾ, ನಾವು ಹೆಣ್ಮಕ್ಳು ಎಷ್ಟ ಕಲ್ತ್ರೂ, ಎಂಥಾ ದೊಡ್ಡ ನೌಕ್ರಿ ಮಾಡಿದ್ರೂ, ದೇಶಾ ಆಳಿದ್ರೂ ನಮ್ಮ ದಿನಾ, ನಮ್ಮಾತು ಎಲ್ಲಾ ಚಾಲೂ ಆಗೂದೂ ಅಡಗಿ ಮನಿಯಿಂದಾನ ಮತ್ತ ಮುಗ್ಯೂದೂ ಅಡಗಿ ಮನಿಯಿಂದಾನ. ಇಲ್ದಿದ್ರ ನಮಗ ಸಮಾಧಾನನ ಇರೂದಿಲ್ಲ, ನನಗೊತ್ತೈತಿ ಬಿಡ್ರಿ ಹೆಣ್ಮಕಳ್ದ್ ಬರೀ ಇದ ಆತು ಅಂತ ಅನ್ಕೋತ ದೊಡ್ಡಸ್ತಿಕಿ ತೋರಸೊ ನಿಮ್ಮ್ ಬಾಯಾಗೂ ಆಗಲೇ ನೀರ್ ಕಡ್ಯಾಕತ್ತಾವು ಅಂತ ನನಗೊತ್ತೈತಿ. ಈಗ ನಮ್ಮೂರಿಗೆ ಬಂದ ನಾಡಿನ ಮಂದೆಲ್ಲಾ ಸಾಹಿತ್ಯದ ಜೋಡ್ ಇದನ್ನೆಲ್ಲಾ ಬಾಡಸ್ಕೊಂಡು ತಿನ್ನಾಕ ಚಾಲೂ ಮಾಡಿರ್ತಾರ ನೋಡ್ರಿ ಬೇಕಾರ. ಇಲ್ಲಾ, ರುಚಿ ಹತ್ತಿತು ಅಂದ್ರಂತೂ ಉಲ್ಟಾ ಈ ಊಟದ ಜೋಡಿ ಸಾಹಿತ್ಯಾನ ಬಾಡಸ್ಕೋತಾರ! ಜವಾರಿ ಊಟ, ಜವಾರಿ ಬಿಸಲು, ಜವಾರಿ ಧೂಳು, ಜವಾರಿ ಮಂದಿ, ಜವಾರಿ ಕನ್ನಡಾ ಮತ್ತ ಜವಾರಿ ಪ್ರೀತಿ! ಹಿಂಗ್ಯಾಕ ಅಂದ್ರೇನು ನೀವು? ಯಾಕಂದ್ರ ನಾವ್ರೀ, ನಾವ್ ಅಂದ್ರ ಯಾರಂತ ತಿಳ್ಕೊಂಡೀರಿ, ಗಂಡುಮೆಟ್ಟಿದ ನಾಡಿನವ್ರು, ಬಿಜಾಪುರದ ಮಂದಿ, ನಾವು ಹಿಂಗರೆಪಾ!
ಇವತ್ತಿನಿಂದ ಮೂರ್ ದಿನ ನಮ್ಮೂರು ಮತ್ತ ರನ್ನನ್ನ ನೆನಸ್ಕೋತೈತಿ, ಜನ್ನನ್ನ ನೆನಸ್ಕೋತೈತಿ, ಕುಮಾರ ವಾಲ್ಮಿಕಿನ್ನ, ಬಸವಣ್ಣನ್ನ, ಹಳಕಟ್ಟಿಯವ್ರು, ಸತ್ಯಕಾಮರು, ಮಧುರಚೆನ್ನರನ್ನ ಇನ್ನೂ ಯಾರ್ಯಾರೆಲ್ಲಾ ತನ್ನ ಅಂಗಳದಾಗ ಆಡ್ಕೋತ ಬೆಳದು ನಾಡಿಗೇ ದೊಡ್ಡೋರಾದ್ರೋ, ಸೂರ್ಯಾ ಚಂದ್ರಮರ್ಹಾಂಗ ಹಗಲೂರಾತ್ರಿ ಬೆಳಗಾಕತ್ತ್ಯಾರೋ ಅವ್ರನ್ನೆಲ್ಲಾ ನೆನಸ್ಕೋತೈತಿ.
ಉಪ್ಪಲಿ ಬುರ್ಜದಾಗಿರೋ ಯೋಳ್ ಮಕ್ಕಳ ತಾಯಿ, ಎದ್ಯಾಗ ಅಕ್ಷರಾ ಬಿತ್ತಿಗೊಂಡ ಊರಿಗೆ ಬಂದ ನಾಡಿನ ಮಂದಿನ್ನ ನೋಡಿ ಖುಷೀಲೇ ಕೇಕೆ ಹಾಕಿ ನಕ್ಕ್ರ, ಗೋಳಗುಮ್ಮಟಾ ಅದನ್ನ ಜಗತ್ತಿನ ಯೋಳೂ ಅಚ್ಚರಿಗೋಳು ಬೆರಗಾಗೂವಂಗ ಒದರಿ ಹೇಳ್ತೈತಿ. ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ. ಇಷ್ಟ್ ವರ್ಷ ಘನಾಗಂಭೀರದಿಂದ ಅಲಾಗಾಡಧಂಗ ಅಡ್ಡಾಗಿದ್ದ ಮುಲ್ಕ ಮೈದಾನದಾಗಿನ ತೋಪಗೋಳು ಎದ್ದನಿಂತು ಹಾರಿ ಹಾರಿ ಮಂದಿನ್ನ ಎದರ್ಗೊಳ್ತಾವು. ಜೋಡಗುಮ್ಮಟ ಜೋಡಿದೀಪಾಗಿ ಆರ್ತಿ ಮಾಡ್ತೈತಿ, ಊರ್ ಧೂಳು ಗುಲಾಲ್ ಆಕ್ಕೈತಿ, ಇಬ್ರಾಹಿಂ ರೋಜಾ ಬಂದೋರು ತುಸುಹೊತ್ತು ಕುಂತು ದಣಿವಾರಸ್ಕೊಳ್ಳೊ ಚಾವಡಿ ಆಕೈತಿ. 777 ಲಿಂಗೂ ಗುಡಿ ವಚನಾ ಹಾಡ್ತೈತಿ, ಸಿದ್ದೇಶ್ವರ ಗುಡ್ಯಾಗಿನ ನಂದಿಕೋಲು ತಾಳ ಹಾಕ್ಕೊಂಡು ಕುಣದ್ಯಾಡ್ತಾವು, ಭೂತನಾಳ ಕೆರಿ ಬಂದೋರ ಹೊಟ್ಟಿ, ನೆತ್ತಿ, ಕಣ್ಣ ತಂಪ ಮಾಡ್ತತೈತಿ…
ಸೈನಿಕ್ ಸ್ಕೂಲಂತೂ ನಾಳೆ ಮದಮಗಳ ಗತೆ ಸಿಂಗಾರ ಬಂಗಾರ ಮಾಡ್ಕೊಂಡು, ಢವಾಢವಾ ಅನ್ನೂ ಎದ್ಯಾಗ ಸಂಭ್ರಮಾ ತುಂಬ್ಕೊಂಡು ತುದಿಗಾಲ ಮ್ಯಾಲೆ ನಿಂತಿದ್ದನ್ನ ನೆನಸ್ಕೊಂಡ್ರನ ನನಗ, ನಾ ಯಾಕಾರ ಊರಿಗೆ ಹೋಗ್ಲಿಲ್ಲ ಅಂತ ಹಳಾಳ್ಯಾಗಾಕತೈತಿ. ಏನ್ ಮಾಡ್ಲಿ ಹೇಳ್ರೀ, ಈ ಸಂಸಾರನ್ನೂದು ಕೆಲವೊಮ್ಮೆ ಕಾಲಿಗ್ ಕಟ್ಟಿದ್ ಗುಂಡಾಗಿ ನಡದೇನಂದ್ರ ನಡಿಗೂಡಂಗಿಲ್ಲ… ಇಲ್ಲೇ ಕುಂತು ಊರಿಂದ ಬರೂ ಸುದ್ದಿಗೆ ಕಾಯೂದ್ ಬಿಟ್ರ ಬ್ಯಾರೆ ದಾರಿಲ್ಲ ನನಗ. ಅವ್ವ, ಚಿಕ್ಕಮ್ಮ ಇಬ್ರೂ ಸಾಹಿತ್ಯ ಸಮ್ಮೇಳನಕ್ಕ ಹೋಕ್ಕೀವಿ ಅಂತಂದಾರ. ಅಪ್ಪಾ ಅನ್ಕಾ ಹೋಗದ ಬಿಡಂಗಿಲ್ಲ. ಅವ್ರ ಕಣ್ಣೀಲೇನ ನಾನೂ ಸಡಗರಾ ನೋಡಿ ಸಮಾಧಾನ ಮಾಡ್ಕೊಂತೀನಿ. ಅಲ್ದ `ಅವಧಿ’ ಸುದ್ದಾ ಎಲ್ಲಾ ಬಾತ್ಮಿ ಒಪ್ಪಸ್ತೀನಿ ಅಂತ ಹೇಳಿದ ಮ್ಯಾಲಂತೂ ನನ್ನ ಜೀವಕ್ಕ ಇನ್ನಷ್ಟು ಸಮಾಧಾನ ಆಗೇತಿ. ಇವತ್ತ ನಮ್ಮೂರು ಮತ್ತ ಗತವೈಭವಕ್ಕ ಮರಳಿದ್ದು ನೋಡಿ ನನಗ ಬಸವಣ್ಣನ ಈ ವಚನ ನೆನಪಾತು.
ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ
ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ.

Wednesday, January 30, 2013

ಹೀಗೊಂದು ಮನೆಯ ಸೋದರ ಸೋದರಿಯರು.



ನಮ್ಮೆಲ್ಲರ ಮೆಚ್ಚಿನ ಬರಹಗಾರ್ತಿ, ಪತ್ರಕರ್ತೆ ಚೇತನಾ ತೀರ್ಥಹಳ್ಳಿಯವರ,‘ಅಮ್ಮನ ಜೀವನ ಶ್ರದ್ಧೆ ಮತ್ತು ಶ್ರಾದ್ಧ’ ಎನ್ನುವ ಲೇಖನ ವಿಜಯ ಕರ್ನಾಟಕದಲ್ಲಿ ಬಂದಾಗ, ಅದನ್ನು ಓದಿ ನಮ್ಮನೆಯ ಈ ವಿಷಯವನ್ನು ಅವರೊಂದಿಗೆ ಅಂತಃಪುರದಲ್ಲಿ ಹಂಚಿಕೊಂಡಿದ್ದೆ. ಅದನ್ನು ಈಗ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.


ನಮ್ಮನೇಲೂ ಇದರ ಮೇನಿಯಾ ಜೋರೀಗ! ಈಗ ತಿಂಗಳ ಹಿಂದೆ ನನ್ನ ಮೂರನೇ ಸೋದರ ಮಾವ (ನಾಲ್ಕು ಜನ ಸೋದರ ಮಾವಂದಿರು ನನಗೆ) ನನಗೆ ಫೋನ್ ಮಾಡಿ, ಸತ್ತ ನಂತರ ಹೇಗೆ ಮತ್ತು ಎಲ್ಲಿ ದೇಹ ದಾನ ಮಾಡಬೇಕು ವಿವರ ಹೇಳು ಅಂದ. ನಾನು ಹೇಳಿದ ನಂತರ, ಹೋಗಿ ಫಾರ್ಮ್ ತಂದು ಮತ್ತೆ ಫೋನ್ ಮಾಡಿದ. ಸಹಿಗಾಗಿ ನನ್ನಮ್ಮನ ಹತ್ತಿರ ಹೋಗುವುದಿತ್ತು ಅವನಿಗೆ. ಆದರೆ ಆಕೆ ಹೆದರಿಕೊಂಡಾಳು ಅನ್ನೋ ಆತಂಕ, ಸೊ ತಾನೇ ನಿಧಾನವಾಗಿ ನನ್ನಮ್ಮನಿಗೆ ಅಂದರೆ ತನ್ನಕ್ಕನಿಗೆ ವಿಷಯ ತಿಳಿಸಿ, ಪುಸಲಾಯಿಸಿ ಅವಳಿಂದ ಸಹಿ ತೆಗೆದುಕೊಳ್ಳುವುದು ಅವನ ಇರಾದೆ. ಅವನು ಹೀಗೆ ಹೇಳಿದ್ದಕ್ಕೆ ಹಂಗೇನಾಗೊಲ್ಲ ಎಂದು ನಾನು ನಕ್ಕೆ. ನಮ್ಮಕ್ಕನ ಸ್ವಭಾವ ನನಗೊತ್ತು ಅಂದ, ತನಗೆ ನನಗಿಂತ ಆಕೆ ಚೆನ್ನಾಗಿ ಗೊತ್ತು ಎನ್ನುವ ಗತ್ತಿನಲ್ಲಿ. ನಾನು, "ನಿನಗ ಅಕ್ಕ ಆದ್ರ ನನಗಕಿ ನಮ್ಮವ್ವ" ಅಂದೆ. ಸಿಟ್ಟು ಮಾಡಿಕೊಂಡು ಫೋನ್ ಕುಕ್ಕಿದ. ನಾವಿಬ್ಬರೂ ಅಮ್ಮ ನಮಗೆಷ್ಟು ಆಪ್ತ ಎನ್ನುವುದನ್ನು, ನಮ್ಮ ನಮ್ಮ ಪ್ರೀತಿಯನ್ನು ತೋರಿಸಿಕೊಟ್ಟ ರೀತಿಯಿದು. ನಾನು ಅಮ್ಮನ ಹತ್ತಿರ ಈ ವಿಷಯವನ್ನು ಹೇಳದೆ ಸುಮ್ಮನಾದೆ.


ಅಮ್ಮನ ಹತ್ತಿರ ಹೋದ ನನ್ನ ಮಾವ, ಅಳಕುತ್ತಾ, "ಇದನ್ನ ನೋಡಬೇ" ಎಂದು ಅಮ್ಮನ ಎದುರು ಫಾರ್ಮ್ ಹಿಡಿದಿದ್ದಾನೆ. ಕನ್ನಡಕ ಹಾಕಿಲ್ಲದ ಅಮ್ಮನಿಗೆ ಅದು ಯಾವುದೋ ಫಾರ್ಮ್ ಅನ್ನುವುದು ಮಾತ್ರ ಕಂಡಿದೆ. ಆದರೂ ಅಮ್ಮನ ಬಾಯಿಂದ ಹೊರಟ ಮಾತು, "Body donate ಮಾಡಾಕತ್ತೀ ಏನೋ? ಭಾರಿ ಬೆಸ್ಟ್ ಕೆಲ್ಸಾ ಮಾಡಾಕತ್ತಿ ನೋಡ್"... ಅಮ್ಮನಿಗಾಗುತ್ತೆ ಅಂದುಕೊಂಡ ಶಾಕ್ ಮಾಮಾಗೀಗ! ಹೂಂ ಅನ್ನುತ್ತಾ ತಟ್ಟನೆ ಅಮ್ಮನ ಕಾಲು ನಮಸ್ಕಾರ ಮಾಡಿದನಂತೆ ನನ್ನ ಮಾಮಾ.


ಅಮ್ಮಂಗೆ ಇವತ್ತಿಗೂ ಅಚ್ಚರಿಯೇ, ಯಾವ ಫಾರ್ಮ್ ಅನ್ನೋದೂ ಗೊತ್ತಿಲ್ಲದೆ ತಾನು ಯಾಕೆ ಹಾಗ್ ಮಾತಾಡಿದೆ ಅಂತ! ಸರಿ, ಅಮ್ಮ ಸಹಿ ಮಾಡುವ ಮೊದಲು ಒಮ್ಮೆ ಎಲ್ಲರಿಗೂ ವಿಷಯ ತಿಳಿಸುವುದೊಳಿತು ಎಂದುಕೊಂಡು ನನ್ನ ದೊಡ್ಡ ಮಾವನಿಗೆ ಈ ಮಾವ ಫೋನ್ ಮಾಡಿದ್ರೆ ಅವನು ಹೇಳಿದ್ದು, "ಎಂಥಾ ಬಂಗಾರದಂಥಾ ಕೆಲ್ಸಾ ಮಾಡಕತ್ತೀಯೋ ಈರಣ್ಣ, ನಮಗ ಚೊಲೋ ಹಾದಿ ಹಾಕ್ಕೊಟ್ಟಿ ಬಿಡು. ನಾಳೆ ಸತ್ ಮ್ಯಾಲೆ, ಯಾವ್ದೋ ಸುಡಗಾಡದಾಗ ಹುಗದು, ಮುಂದೊಂದಿನ ಅದ ಜಾಗಾದಾಗ ನಮ್ಮ್ ಎಲುಬೆಲ್ಲಾ ಆರ್ಸಿ ದಾರಿಗ್ ಒಗದು, ಇನ್ನ್ಯಾರ್ನೋ ಅಲ್ಲಿ ಹೂಳಿ, ಇಲ್ಲಾ ಮನಿ ಕಟ್ಟಿ.... ಯಾರಿಗ್ ಬೇಕಪಾ ಸತ್ ಮ್ಯಾಲೂ ದಿಕ್ಕೇಡ್ ಆಗೂದು! ನಾನೂ ಬಾಡಿ ಡೊನೇಟ್ ಮಾಡ್ತೀನಿ. ನಿನ್ನ ಫಾರ್ಮಿಗೆ ಸೈನ್ ಮಾಡ್ತೀನಿ, ನಾನ ಅಲ್ಲಿ ಬರ್ಬೇಕೋ, ಇಲ್ಲಿಂದಾನ ಮಾಡಿ ಕಳಿಸಿದ್ರ ನಡೀತೈತೋ?" ಅಂದನಂತೆ. ಅಮ್ಮ ಮತ್ತು ಈರಣ್ಣ ಮಾಮಾ ಫುಲ್ ಖುಷ್!


ಮುಂದೆ ನನ್ನ ಎರಡನೆಯ ಮಾಮಾಗೆ ಫೋನು. ಅವ್ನು, " ಎಂಥಾ ಐಡಿಯಾ ಕೊಟ್ಟೆಪಾ ನೀ, ನಾ ನಾಳೇ ಹೋಗಿ ಫಾರ್ಮ್ ತರ್ತೀನಿ." ಅಂದನಂತೆ.


ನನ್ನ ದೊಡ್ಡ ಚಿಕ್ಕಮ್ಮ ವಿಷಯ ತಿಳಿದು, "ಇಗಾ, ನಾ ನಿನ್ನ್ಯರೇ ಇದನ್ನs ಅನ್ಕೋಳಾಕತ್ತಿದ್ದೆ ನೋಡು. ಒಬ್ಬರ ಮಣ್ಣಿಗ್ ಹೋಗಿದ್ದೆ, ಝ್ಹಳಾ ಝ್ಹಳಾ ಬಿಸಲೀಗೆ ಸುಸ್ತಾದ ಸೇರಿದ್ ಮಂದಿ, ಯಾವಾಗರೇ ಮಣ್ಣಾಕ್ಕೈತೋ ಅಂತ ಬೈಕೋತ ಹೆಣದ್ ಹಿಂದ್ ಹೊಂಟಿದ್ದ್ರು. ಅದನ್ನ ನೋಡಿ, ನಾಳೆ ನಾ ಸತ್ರೂ ಮಂದಿ ಹಿಂಗs ಅಂದ್ರ... ಅಂತನಿಸಿ, ಹಿಂಗ್ ಅನಸ್ಕೊಳ್ಳೊ ಬದಲು, ಯಾವ್ದರ ದವಾಖಾನಿಗೆ ಕೊಟ್ಟ ಬಿಡ್ರಿ ನನ್ನ ದೇಹಾನ ಅಂತ ಮಕ್ಕಳಿಗೆ ಹೇಳಬೇಕು ಅನ್ಕೊಂಡೆ. ಇವತ್ ನೋಡಿದ್ರ ನೀನೂ ಅದನ್ನ ಅಂತಿ. ಭಾರಿ ಚೊಲೊ ಕೆಲ್ಸಾ ಮಾಡಾಕತ್ತಿ, ಖುಷಿ ಆತ್ ನನಗ" ಅಂದ್ಲಂತೆ.


ಸಣ್ಣ ಚಿಕ್ಕಮ್ಮ, "ಏ ನನಗೂ ಒಂದು ಫಾರ್ಮ್ ತೊಗೊಂಡ್ ಬಾರೋಫಾ" ಅಂದ್ಲಂತೆ.


ಕೊನೆಯ ಅಂದರೆ ನನ್ನ ನಾಲ್ಕನೆಯ ಮಾವ ಮಾತ್ರ, "ಹೋಗೋ ಮಾರಾಯ, ಇನ್ನಾ ಮಕ್ಕಳ ಮದವಿ ಮಾಡಬೇಕೂ, ಮೊಮ್ಮಕ್ಕಳನ್ ನೋಡಬೇಕೂ, ಈಗ ಇದೇನ್ ಹಚ್ಚಿ ಹೋಗ್" ಅಂದ್ನಂತೆ.


ನಮ್ಮಮ್ಮ ಅಂತಿದ್ಳು, "ಅಂವಾ ಇನ್ನಾs ಸಣ್ಣಾಂವ್ ನೋಡು,ಅದಕ ಹಂಗಂತಾನ, ಮುಂದ್ ನೋಡ್ತಿರು ಬೇಕಾರ, ಅವ್ನೂ ಗ್ಯಾರಂಟಿ ಬಾಡಿ ಡೊನೇಟ್ ಮಾಡ್ತಾನ" ಅಂತ.


ಮುಗಲ್ ಮ್ಯಾಲಿ ಕುಂತ್ ಇದನ್ನೆಲ್ಲಾ ಕೇಳಿಸ್ಕೊಂಡ ಬಾದರದಿನ್ನಿ ಗೌರಕ್ಕ- ರುದ್ರಗೌಡ ದಂಪತಿ, ತಮ್ಮ ಮಕ್ಕಳ ಈ ನಿರ್ಧಾರ ಕಂಡು ಭಾಳ್ ದಿನದ ಮ್ಯಾಲೆ ಖುಷೀಲೇ ಕುಣದ್ಯಾಡಿರೂದ್ರಾಗ ಅನಮಾನನs ಇಲ್ಲ!!









ಮಧ್ಯದ ಸಾಲಲ್ಲಿ ಕುಳಿತವರು.

Tuesday, January 8, 2013

ಜೀವನದಿ...



ಹುಚ್ಚು ನದಿಗಳಿವು
ಓಡಿಯೇ ಓಡುತ್ತವೆ
ಸಾಗರದೆಡೆಗೆ!
ಇಳುಕಲಂತೆ ಓಟವಂತೆ
ಮೋಡಿಯಂತೆ 
ಮಿಲನ ಸಾರ್ಥಕತೆಯಂತೆ!!
ಎಂಥಾ ನಿಯತ್ತಂತೀರಿ
ಇವುಗಳ ಗಮ್ಯ ಕೇವಲ
ಸಾಗರ ಮಾತ್ರ
ಜುಳುಜುಳು ಜುಳುಜುಳು
ಜುಳುಜುಳು... 
ಮಾರ್ಗ ಮಧ್ಯ
ಲಕ್ಷ ಲಕ್ಷ
ಜೀವಗಳಿಗೆ ಒಡಲಾಧಾರ
ಹುಚ್ಚು ನದಿಗಳು!
ಒಂಟಿಯಾಗಿದ್ದಾಗ ಇದ್ದ
ಅಮೃತ ಸ್ವಾದ
ಸಾಗರ ಸೇರಿದೊಡನೆ ನಿಃಸ್ವಾದ
ಸ್ವಂತಿಕೆ ಮತ್ತು ಇರುವಿಕೆ
ಎರಡೂ ಶಿವನ ಪಾದ!

(2008ರ ಕೊನೆಯಲ್ಲಿ ಮುಂಬೈನ ‘ಸೃಜನಾ’ಬಳಗದಿಂದ ಡಾ. ತಾಳ್ತಜ್ಜೆಯವರಿಗೆ ಗೌರವಪೂರ್ವಕ ನುಡಿನಮನ.  ಅದಕ್ಕಾಗಿ ಬರೆದ ಕವನವಿದು.)

ಕನಸಿನ ಬಾಲೆಯ ಮನದರ್ಪಣ - ನೀಲ ಕಡಲ ಬಾನು



                  PÀ£À¹£À ¨Á¯ÉAiÀÄ ªÀÄ£ÀzÀ¥Àðt - ¤Ã® PÀqÀ® ¨Á£ÀÄ
                                                    -ಮಮತಾ ರಾವ್. ಮುಂಬೈ
                                                                                                                     (29-11-2008)

ªÀÄÄA§¬Ä PÀ£ÀßrUÀjUÉ dAiÀÄ®Që÷ä ¥Ánïï CªÀgÀÄ vÀªÀÄä §ºÀĪÀÄÄR ¥Àæw¨sÉ, ¸ÀÈd£À²Ã®vÉ ºÁUÀÆ DwäÃAiÀÄ ªÀåQÛvÀé¢AzÁV §ºÀÄ ¥ÀjavÀgÀÄ.. ¸Àé®àPÁ® ªÀÄÄA§¬ÄAiÀÄ°è ªÁ¸ÀªÁVzÁÝUÀ dAiÀÄ®Që÷ä CªÀgÀÄ ªÀÄÄA§¬Ä PÀ£ÀßqÀ ¸ÁA¸ÀÌöÈwPÀ ZÀlĪÀnPÉUÀ¼À°è ¥ÀæªÀÄÄR ¥ÁvÀæ ªÀ»¸ÀÄwÛzÀݪÀgÀÄ. ªÀÄÄA§¬Ä gÀAUÀ¨sÀÆ«ÄAiÀÄ°è ¸ÀQæÃAiÀĪÁV ¥Á®ÄUÉƼÀÄîwÛzÀ FPÉ vÀªÀÄä C©ü£ÀAiÀÄPÁÌV ºÁUÀÆ GvÀÛªÀÄ ¤zÉðñÀ£ÀPÁÌV ºÀ®ªÁgÀÄ §ºÀĪÀiÁ£ÀUÀ¼À£ÀÄß, ¥Àæ±À¹ÛUÀ¼À£ÀÄß ¥Àr¢ದ್ದಾರೆ. eÉÆvÉUÉ EªÀgÀÄ GzÀAiÉÆãÀÄäR ¯ÉÃRQAiÀÄÆ DVzÀÄÝ, ¸ÀÈd£Á - ªÀÄÄA§¬Ä PÀ£ÀßqÀ ¯ÉÃRQAiÀÄgÀ §¼ÀUÀzÀ PÁAiÀÄðzÀ²ðAiÀiÁVದ್ದಾಕೆ. ¸ÀÈd£Á §¼ÀUÀzÀªÀgÀÄ 2006gÀ°è ¨É¼ÀQUÉ vÀAzÀ `PÀxÉ ºÉüÉÃ`- J£ÀÄߪÀ PÀxÁ¸ÀAPÀ®£ÀzÀ°è dAiÀÄ®Që÷äAiÀĪÀgÀÄ §gÉzÀ - `ªÀiÁ¢AiÀÄzÀÄ PÀxÉAiÉÄ£À߯ÉÃ` PÀxÉAiÀÄÄ NzÀÄUÀgÀ UÀªÀÄ£À ¸É¼É¢ದೆ. ªÀÄÄA§¬ÄAiÀÄ°è £ÀqÉAiÀÄÄwÛzÀÝ PÀ«UÉÆö×UÀ¼À°è  EªÀgÀ PÀ«vÉUÀ¼ÀÄ F ªÉÆzÀ¯Éà ªÉÄZÀÄÑUÉ ¥ÀqÉ¢zÀݪÀÅ. ¸ÀzsÀåPÉÌ ¨ÉAUÀ¼ÀÆj£À°è £É¯É¹ QgÀÄvÉgÉ-gÀAUÀ¨sÀÆ«ÄAiÀÄ°è d£À¦æAiÀÄvÉ UÀ½¹gÀĪÀ EªÀgÀÄ §gÉzÀ LªÀvÉÆÛAzÀÄ PÀ«vÉUÀ¼À£ÉÆß¼ÀUÉÆAqÀ `¤Ã® PÀqÀ® ¨Á£ÀÄ ` PÀªÀ£À¸ÀAPÀ®£ÀªÀÅ ¨É¼ÀQUÉ §A¢gÀĪÀÅzÀÄ ¤dPÀÆÌ ¸ÀAvÉÆõÀzÀ ºÁUÀÆ C©ü£ÀAzÀ¤ÃAiÀÄ ¸ÀAUÀw.
   F ¸ÀAPÀ®£ÀzÀ°ègÀĪÀ LªÀvÉÆÛAzÀÄ PÀ«vÉUÀ¼À°è PÉ®ªÀÅ FUÁUÀ¯Éà §ºÀĪÀiÁ£ÀUÀ¼À£ÀÄß, ¥Àæ±À¹ÛUÀ¼À£ÀÄß ¥ÀqÉ¢ªÉ J£ÀÄߪÀÅzÀÄ UÀªÀĤ¸À¨ÉÃPÁzÀ ¸ÀAUÀw. `ºÀQÌ` PÀªÀ£ÀPÉÌ zÀ.gÁ ¨ÉÃAzÉæ ¥Àæ±À¹Û(ªÀÄÄA¨É¼ÀPÀÄ PÀ£ÀßqÀ §¼ÀUÀ-ªÀÄÄA§¬Ä); `¸ÀªÀÄÄzÀæ` PÀªÀ£ÀPÉÌ gÉÆÃmÁæPïÖ PÀè¨ï PÉÆÃl, ¸Á°UáæªÀÄzÀªÀjAzÀ ¥Àæ±À¹Û;  `¤Ã® PÀqÀ® ¨Á£ÀÄ` PÀ«vÉUÉ CxÀtÂAiÀÄ «ªÉÆÃZÀ£À ¥ÀæPÁ±À£ÀzÀªÀjAzÀ zÀÄ.¤A. ¨É¼ÀUÀ° ¸Á»vÀå ¥Àæ±À¹Û; ºÁUÀÆ `£À£ÉÆß¼ÀÄ ¤Ã` PÀªÀ£ÀPÉÌ ¸ÀAPÀæªÀÄt ¥ÀæPÁ±À£À ¨ÉAUÀ¼ÀÆgÀÄ EªÀgÀÄ DAiÉÆÃf¹zÀ ¸ÀAPÀæªÀÄt ¸Á»vÀå ¸ÀàzsÉð-2007gÀ ¸Á°£À §ºÀĪÀiÁ£ÀUÀ¼ÀÄ ¸ÀA¢ªÉ. EµÉÖ®è §ºÀĪÀiÁ£ÀUÀ¼ÀÄ, ¥Àæ±À¹ÛUÀ¼ÀÄ EªÀgÀ PÀªÀ£ÀUÀ¼À UÀÄtªÀÄlÖªÀ£ÀÄß  FUÁUÀ¯Éà ¤zsÀðj¹ªÉ JAzÀgÉ vÀ¥ÁàUÀ¯ÁgÀzÀÄ.
   dAiÀÄ®Që÷ä ¥ÁnîgÀ  PÀªÀ£ÀUÀ¼ÀÄ UÁvÀæzÀ°è aPÀÌzÁV PÀAqÀħAzÀgÀÆ CxÀð¥ÀÇtðªÁVªÉ; CªÀgÀ ¨sÁµÉ ¸ÀgÀ¼ÀªÁVzÀÄÝ F PÀªÀ£ÀUÀ¼À°ègÀĪÀ ¸ÀÆPÀë÷ä ¸ÀAªÉÃzÀ£ÉUÀ¼À£ÀÄß £ÉÃgÀªÁV NzÀÄUÀgÀ ºÀÈzÀAiÀÄPÉÌ ªÀÄÄnÖ¸ÀĪÀ°è ¸À¥sÀ®ªÁVªÉ. DzsÀĤPÀ PÀ£ÀßqÀ ¯ÉÃRQAiÀÄgÀÄ vÀªÀÄä PÀ£À¸ÀÄUÀ¼À£ÀÄß-£ÉÆêÀÅUÀ¼À£ÀÄß-¤gÁ¸ÉUÀ¼À£ÀÄß, vÀªÀÄä C£ÀĨsÀªÀUÀ¼À£ÀÄß, vÀªÀÄä C¤¹PÉUÀ¼À£ÀÄß ¢lÖvÀ£À¢AzÀ C©üªÀåQÛUÉƽ¸ÀĪÀ ªÀiÁzsÀåªÀĪÀ£ÁßV PÀªÀ£ÀUÀ¼À£ÀÄß DAiÉÄÌ ªÀiÁrgÀĪÀÅzÀÄ PÀAqÀÄ §gÀÄvÀÛzÉ. EA¢UÀÆ ¥À槮ªÁVgÀĪÀ ¥ÀÅgÀĵÀ¥ÁæzsÁ£ÀåvÉAiÀÄ ¸ÁªÀiÁfPÀ ªÀåªÀ¸ÉÜUÀ¼À°è vÀªÀÄä C¹ÛvÀéªÀ£ÀÄß PÀAqÀÄPÉƼÀÄîªÀ MzÁÝlzÀ°è vÀªÀÄä ¨sÁªÀ£ÉUÀ¼À£ÀÄß ºÀwÛPÀÌzÉ CªÀÅUÀ¼À£ÀÄß C©üªÀåPÀÛ¥Àr¸ÀĪÀ ªÀiÁUÀðªÀ£ÀÄß PÀAqÀÄPÉƼÀÄîªÀ°è ªÀÄ»¼ÉAiÀÄgÀÄ ¸À¥sÀ®vÉAiÀÄ£ÀÄß ¥ÀqÉ¢gÀĪÀÅzÀÄ ¤dPÀÆÌ ºÉªÉÄäAiÀÄ «µÀAiÀÄ. EAvÀºÀ ¯ÉÃRQAiÀÄgÀ£ÀÄß £Ár£ÁzÀåAvÀ ºÀÄqÀÄQ CªÀgÀ PÀÈwUÀ¼À£ÀÄß ¥ÀæPÀn¸À®Ä ¨ÉAUÀ¼ÀÆj£À ¥ÀæPÁ±ÀPÀgÉƧâgÀÄ ªÀÄÄAzÁVzÀÄÝ C©ü£ÀAzÀ¤ÃAiÀÄ. ¸ÀĪÀtð PÀ£ÁðlPÀ ªÀµÁðZÀgÀuÉAiÀÄ ¸ÀAzÀ¨sÀðzÀ°è ¹«f ¥ÀæPÁ±À£À, ¨ÉAUÀ¼ÀÆgÀÄ EªÀgÀÄ ºÉÆgÀvÀAzÀ LªÀvÀÄÛ ¯ÉÃRQAiÀÄgÀ PÀÈwUÀ¼À°è GzÀAiÉÆãÀÄäR PÀªÀAiÀÄwæ dAiÀÄ®Që÷ä ¥ÁnîgÀ `¤Ã® PÀqÀ® ¨Á£ÀÄ` PÀªÀ£À ¸ÀAUÀæºÀªÀÇ ¸ÀºÀ MAzÀÄ.
   ¤Ã® PÀqÀ® ¨Á£ÀÄ- ¸ÀAPÀ®zÀ°ègÀĪÀ PÀªÀ£ÀUÀ¼À£ÀÄß ¸ÀªÀÄUÀæªÁV N¢zÁUÀ CªÀÅUÀ¼À »A¢gÀĪÀ ¹ÛçÃ-¸ÀAªÉÃzÀ£ÉAiÀÄ wêÀævÉAiÀÄ CjªÁUÀÄvÀÛzÉ. ¥ÀÅlÖ ¥ÀÅlÖ DzÀgÉ D¥À۪ɤ¸ÀĪÀ ¸Á®ÄUÀ¼ÀÄ £ÀÆgÁgÀÄ CxÀðUÀ¼À£ÀÄß ¤ÃqÀÄvÀÛªÉ. ¯ÉÃRQAiÀÄ ¨sÁªÀ£Á¯ÉÆÃPÀzÀ M¼À£ÉÆÃlªÀ£ÀÄß ¤ÃqÀÄvÀÛªÉ. E°è UÀAqÀÄ-ºÉtÂÚ£À ¸ÀA§AzsÀUÀ¼ÀÄ, ºÉtÂÚ£À C¸ÀºÁAiÀÄPÀvÉ-C¤ªÁAiÀÄðvÉ, ¥ÉæêÀÄPÁÌV ºÁvÉÆgÉAiÀÄÄ«PÉ ºÁUÀÆ MAnvÀ£ÀzÀ «µÁzÀvÉ §ºÀÄvÉÃPÀ PÀªÀ£ÀUÀ¼À°è ¸ÁܬĨsÁªÀªÁV «ÄAaªÉ.``AiÀiÁPÉ »ÃUÉ PÀAqÀÄAqÀzÉݯÁè PÀ£À¸ÀÄ C£ÉÆßà ºÁUÉ! J£ÀÄßvÁÛ ªÁ¸ÀÛªÀQÌAvÀ®Æ PÀ£À¸ÀÄUÀ¼À¯Éèà EgÀ§AiÀĸÀĪÀ ªÀÄ£À¸Àì£ÀÄß `§tÚ PÀgÀVzÀ gÀAUÉÆð` ºÁUÀÆ `vÀ¼ÀîAPÀ`zÀ°è PÁt§ºÀÄzÀÄ.§vÀÛ¯ÁUÀĪÀÅzÉAzÀgÉ, «¯Á¹, PÀ¼ÀPÉÆAqÀªÀ¼ÀÄ, UÁAiÀÄ, GgÀļÀÄ, ºÁUÀÄ ²Ã¶ðPɬĮèzÉ PÀªÀ£ÀUÀ¼À°è(28 ªÀÄvÀÄÛ 46) «µÁzÀzÀ bÁAiÉÄ vÀĸÀÄ UÁqsÀªÁV ºÉÆgÀºÉÆ«ÄäªÉ. «µÁzÀzÀ bÁAiÉĬÄzÀÝgÀÆ ¤gÁ±Á¨sÁªÀ«®è J£ÀÄߪÀÅzÀ£ÀÄß UÀªÀĤ¸À¨ÉÃPÀÄ.
   EvÀgÀ PÀªÀAiÀÄwæAiÀÄgÀAvÉ gÀÆrüªÀÄÆ® ¹ÛçêÀiË®åUÀ¼À£ÀÄß, ¥ÀÅgÁtzÀ ¥ÁvÀæUÀ¼À£ÀÄß ¥Àæ²ß¸ÀĪÀ ¥ÀæAiÀÄvÀߪÀ£ÀÄß vÀªÀÄä PÀªÀ£ÀUÀ¼À°è dAiÀÄ®Që÷äAiÀĪÀgÀÄ PÀÆqÀ ªÀiÁrzÁÝgÉ. vÁ¬Ä ªÀÄvÀÄÛ ªÀÄUÀ½UÉ - PÀªÀ£ÀzÀ°è ¹ÃvÉ ªÀÄvÀÄÛ ¨sÀÆzÉëUÉ ºÁPÀĪÀ ¥Àæ±ÉßUÀ¼ÀÄ ¨sÁªÀ£ÉUÀ¼À£ÀÄß PÀ¯ÁèV¹, PÀ£À¸ÀÄUÀ¼À PÀvÀÄÛ »¸ÀÄQ §zÀÄPÀÄwÛgÀĪÀ ºÉtÄÚ ªÀÄ£À¸ÀÄìUÀ¼À£ÀÄß aAw¸ÀĪÀAvÉ ªÀiÁqÀÄvÀÛzÉ. ªÀÄÄAzÀPÉÌ GvÀÛªÀÄ-CzsÀªÀÄ PÀªÀ£ÀzÀ°è,  "gÁªÀÄ gÁªÀtgÀ°è/ AiÀiÁgÀÄ GvÀÛªÀÄ/ ºÉÃ¼É ¹ÃvÉ/ HºÀÄA, ¥Àæ±ÉßAiÀÄ£ÀÄß »ÃUÉ §zÀ°¸ÀÄ/ gÁªÀÄ gÁªÀtgÀ°è,AiÀiÁgÀÄ CzsÀªÀÄ!/ ¸ÀºÀ£ÉUÉlÄÖ ºÉýzÀ¼ÀÄ ¹ÃvÉ."  £ÀÆgÀÄ CxÀðUÀ¼À£ÀÄß ¤ÃqÀĪÀ ¥ÀÅlÖ¥ÀÅlÖ ªÁPÀåUÀ¼À F PÀªÀ£ÀzÀ°è ¹ÃvÉAiÀÄ ªÀiÁw£À°ègÀĪÀ C¸ÀºÀ£É ºÉƸÀ¢QÌ£ÀvÀÛ ºÉÆgÀ½gÀĪÀ ªÀÄ»¼ÉAiÀÄ C©üªÀåQÛAiÀÄ°ègÀĪÀ  ¢lÖvÀ£ÀªÀ£ÀÄß ªÀåPÀÛUÉƽ¸ÀÄvÀÛzÉ.
 DzÀgÉ EzÉà zÀ¤, `aUÀÄgÀÄ`- PÀªÀ£ÀzÀ°è vÀ£Éß®è PÀ£À¸ÀÄUÀ¼À£ÀÄß, ¨sÁªÀ£ÉUÀ¼À£ÀÄß CAvÀªÀÄÄðTAiÀiÁV¹ CºÀ¯ÉåAiÀÄAvÉ ²¯ÉAiÀiÁUÀ §AiÀĸÀÄvÀÛzÉ. MAzÀÄjÃwAiÀÄ°è ¸ÀA§AzsÀUÀ¼À ZËPÀlÄÖUÀ¼À£ÀÄß zÁl¯ÁgÀzÀ C¸ÀºÁPÀvÉAiÀÄ zÀ¤ ªÀÄÄAzÀPÉÌ ªÁ¸ÀÛ«PÀvÉAiÀÄ Cj«£ÀvÀÛ ¸ÁV, ªÀĺÁzÉë CPÀÌ£À°è vÀ£Àß ¸ÁªÀÄåvÉAiÀÄ£ÀÄß PÁt§AiÀĸÀÄvÀÛzÉ. ¦æÃw JA§ ªÀÄjÃaPÉAiÀÄ£ÀÄß CgÀ¸ÀÄvÀÛzÉ. `. . .£À£ÉÆß¼ÀÄ ¤Ã` PÀªÀ£ÀzÀ°è CPÀ̪ÀĺÁzÉëAiÀÄ£ÀÄß PÀÄjvÀÄ ¯ÉÃRQAiÀÄ ¸ÀéUÀvÀ-``–PÉýzÀ dUÀ ªÀiÁvÁrÃvÀÄ «ÄwAiÀÄ PÀÄjvÀÄ, ªÀiÁvÁqÀ° ©qÀÄ`` J£ÀÄßvÁÛ ªÀÄÄAzÀĪÀgÉzÀÄ CPÀÌ£ÀAvÉ vÀ£ÀUÀÆ ¦æÃw zÉÆ. .gÀ. .Q. .vÉ. . JAzÀÄ ¥Àæ±ÉßAiÉÆA¢UÉ C¤²ÑvÀvÉAiÀÄ°èAiÉÄà ªÀÄÄPÁÛAiÀĪÁUÀÄvÀÛzÉ. PÀ£À¸ÀÄUÁjPÉAiÀÄ°èAiÉÄà KPÁAVAiÀiÁV ªÀÄļÀÄVgÀĪÀ PÀªÀ£ÀUÀ¼À°è ¨sÀgÀªÀ¸ÉAiÀÄ DvÀ䫱Áé¸ÀzÀ C¨sÁªÀ JzÀÄÝPÁt¸ÀĪÀAvÀºÀzÀÄÝ. DzÀgÉ ªÁ¸ÀÛ«PÀvÉAiÀÄ £É®ªÀ£ÀÄß ¨sÀzÀæªÁV »r¢lÄÖPÉƼÀÄîvÁÛ, PÀ£À¸ÀÄPÁtĪÀ ¥ÀæQæAiÉÄUÉ  vÀ£ÀߣÀÄß vÁ£ÀÄ MrØPÉƼÀÄîªÀ°è ¸ÁévÀAvÀæ÷åªÀ£ÀÄß C£ÀĨsÀ«¸ÀĪÀ ºÉƸÀvÀ£À ªÉÄZÀÄѪÀAvÀºÀzÀÄÝ.    ºÀQÌ ºÁUÀÄ D¸É PÀªÀ£ÀUÀ¼À°è £É®PÀÌAnPÉÆArgÀ¨ÉÃPÉ£ÀÄߪÀ C¤ªÁAiÀiðvÉ ¤ZÀѼÀªÁVzÉ. ºÀQÌAiÀÄAvÉ DPÁ±ÀzÀ°è ºÁgÁr CxÀªÁ J¯ÉUÀ¼ÁV vÀAUÁ½UÉ ¹QÌ J¯Éè¯ÉÆèà C¯ÉzÁr vÀ£ÀߣÀÄß ºÉƸÀºÉƸÀ C£ÀĨsÀªÀUÀ½UÉ vÉgÉAiÀÄĪÀ §zÀ°UÉ ¯ÉÃRQ vÀ£Àß PÁ®ÄUÀ¼À£ÀÄß ¨sÀzÀæªÁV £É®zÀ°è HgÀ §AiÀĸÀĪÀÅzÀÄ DPÉAiÀÄ ªÀÄ£À¹ì£À zÀéAzÀéªÀ£ÀÄß ªÀåPÀÛ¥Àr¸ÀÄvÀÛzÉ. vÁ£ÀÄ §AiÀĸÀĪÀ ¥ÉæêÀĪÀ£ÀÄß ¦æÃwAiÀÄ£ÀÄß vÀ£Àß §zÀÄQ£À ¸ÀA§AzsÀUÀ¼À ªÀÄÆ®PÀªÉà PÀAqÀÄPÉƼÀî¨ÉÃPÉ£ÀÄߪÀ aAvÀ£É JzÀÄÝ PÁt¸ÀÄvÀÛzÉ. ¥ÉÇgÉ, CjPÉ PÀªÀ£ÀUÀ¼À°è ªÀiÁ£ÀªÀ ¸ÀA§AzsÀUÀ½UÉ ºÀuÉ¥ÀnÖPÀnÖPÉƼÀÄîªÀÅzÀ£ÀÄß ¥Àæ²ß¸ÀÄvÁÛgÉ.
   ¥ÀæPÀÈwAiÀÄ°ègÀĪÀ ªÉÆÃqÀ, £ÀPÀëvÀæ, ¨É¼À¢AUÀ¼ÀÄ, ¸ÀªÀÄÄzÀæ, £À¢, ºÀQÌ, ªÀÄgÀ EvÁå¢UÀ¼À£ÀÄß gÀÆ¥ÀPÀUÀ¼À£ÀÄß §¼À¸ÀĪÀ°è EªÀjUÉ §ºÀ¼À ¦æÃw. CªÀgÀ GvÀÛªÀÄ PÀªÀ£ÀUÀ¼ÀÄ EAvÀºÀ gÀÆ¥ÀPÀUÀ¼À£ÀÄß G¥ÀAiÉÆÃV¹AiÉÄ ºÉÆgÀºÉÆ«ÄäªÉ. ¸ÀªÀÄÄzÀæ ªÀÄvÀÄÛ ¤Ã® PÀqÀ® ¨Á£ÀÄ PÀªÀ£ÀUÀ¼À°è §ºÀıÀB ªÉÆvÀÛªÉÆzÀ®¨ÁjUÉ PÀ«AiÀÄ PÀ®à£É ¸ÀªÀÄÄzÀæªÀ£ÀÄß ¹ÛçÃUÉ ºÉÆð¹zÀÝ£ÀÄß PÁt§ºÀÄzÀÄ. ¸ÀªÀÄÄzÀæ JAzÀgÉ, ºÉtÄÚUÀ¼À ¸ÀªÀiÁªÉñÀ, CzÀPÉÌà CµÉÆÖAzÀÄ ªÉÆgÉvÀ, £ÀÄ°vÀ, G°vÀ J£ÀÄߪÀ CzÀÄãvÀ PÀ®à£ÉAiÀÄ£ÀÄß EªÀgÀÄ PÀnÖPÉÆqÀĪÀ ¯ÉÃRQ,  £Á£ÀÄ v/s ¤Ã£ÀÄ- PÀªÀ£ÀzÀ°è £À¢AiÀÄ£ÀÄß «gÀ» ºÉuÁÚV awæ¸ÀÄvÁÛgÉ. D±ÀAiÀÄ PÀªÀ£ÀzÀ°è ¸ÁPÁgÀªÁzÀ PÀ£À¸ÉA§ PÀƸÀÄ ºÉƹ®Ä zÁl¨ÉÃPÀÄ, ¨Á£À fVAiÀĨÉÃPÀÄ J£ÀÄߪÀ D±ÀAiÀĪÀ£ÀÄß ªÀåPÀÛ ¥Àr¹zÁÝgÉ.MnÖ£À°è dAiÀÄ®Që÷äAiÀĪÀgÀÄ vÀªÀÄä ¥ÀæxÀªÀÄ ¸ÀAPÀ®£ÀzÀ°èAiÉÄà GvÀÛªÀĪÁzÀ PÀªÀ£ÀUÀ¼À£ÀÄß PÀ£ÀßqÀ ¸ÁgÀ¸ÀévÀ¯ÉÆÃPÀPÉÌ ¤ÃrzÁÝgÉ. vÀ£Àß ¸ÀÈd£À²Ã®vÉAiÀÄ£ÀÄß, PÀ®à£Á±ÀQÛAiÀÄ£ÀÄß PÉêÀ® vÀªÀÄä PÀ£À¹UÀµÉÖ- vÀªÀÄä ¨sÁªÀ£ÉUÀ¼À ZËPÀnÖUÀµÉÖ ¹Ã«ÄvÀªÁVj¸ÀzÉ ºÉƸÀ £É¯É¬ÄAzÀ ºÉƸÀ zÀȶÖPÉÆãÀ¢AzÀ §zÀÄQ£À ªÀiË®åUÀ¼À£ÀÄß PÀAqÀÄPÉƼÀÄîªÀ ¥ÀæAiÀÄvÀߪÀ£ÀÄß vÀªÀÄä PÀªÀ£ÀUÀ¼À ªÀÄÆ®PÀ ªÀiÁqÀ¨ÉÃPÀÄ. vÀªÀÄUÉ ªÀiÁvÀæªÀ®è NzÀÄUÀjUÉ PÀÆqÀ ªÁ¸ÀÛ«PÀ fêÀ£ÀªÀ£ÀÄß JzÀÄj¸ÀĪÀ ¨sÀgÀªÀ¸ÉAiÀÄ£ÀÄß EªÀgÀ ªÀÄÄA¢£À PÀªÀ£ÀUÀ¼ÀÄ ¤ÃqÀ¨ÉÃPÀÄ. ºÉtÂÚ£À PÀÄjvÁzÀ ¸ÀªÀiÁdzÀ zÀȶÖPÉÆãÀUÀ¼À£ÀÄß §zÀ°¸ÀĪÀ ªÉÆzÀ®Ä ºÉtÄÚ vÀ£ÀߣÀÄß vÁ£ÀÄ £ÉÆÃqÀĪÀ ¥ÀjAiÀÄ£ÀÄß §zÀ°¸ÀĪÀAvÁUÀ¨ÉÃPÀÄ. ¤Ã®¨Á£À° DvÀ䫱Áé¸ÀzÀ ºÀQÌ ºÁAiÀiÁV gÉPÉÌ ©aÑ ºÁgÀ°; ¤Ã® PÀqÀ®° ¦æÃwAiÀÄ zÉÆÃt ªÀÄļÀÄUÀĪÀ ¨sÀAiÀÄ«®èzÉ vÉïÁqÀ°; CAvÀºÀ DvÀ䫱Áé¸ÀzÀ ¸É¯É EªÀgÀ PÀªÀ£ÀUÀ½AzÀ ºÉÆgÀºÉƪÀÄä°  JAzÀÄ D²¸ÀÄvÁÛ ¥ÀÅ£ÀB MªÉÄä `¤Ã® PÀqÀ® ¨Á£ÀÄ` PÀªÀ£À ¸ÀAPÀ®£ÀPÉÌ C©ü£ÀAzÀ£ÉUÀ¼ÀÄ.
                         ******************************** 

(ಮುಂಬೈನ ‘ಮಾಟುಂಗಾ ಕರ್ನಾಟಕ ಸಂಘ’ದ ಮುಖವಾಣಿ, ‘ಸ್ನೇಹ ಸಂಬಂಧ’ ಮಾಸಿಕದಲ್ಲಿ, 2008ರ ಡಿಸೆಂಬರ್‍ನಲ್ಲಿ ಪ್ರಕಟಗೊಂಡ ವಿಮರ್ಶೆ.)