Sunday, October 10, 2010

ಬರಹ ಚಿತ್ತಾರದ ಕೌದಿ

                        

ಬರೆಯಬೇಕೆಂದುಕೊಂಡಾಗಲೆಲ್ಲ ಹೀಗೆ
ಬರೆಯ ಹೊರಟಿರುವುದು ಇನ್ನ್ಯಾರೊ
ಬರೆದಾಗಿದೆಯಲ್ಲ ಎಂಬ ಭಾವ ಬಲವಾಗಿ
ಮತ್ತವೇ ಅವೇ ಪದಗಳ ಹೊಸ ರೀತಿಯಲಿ
ಹೊಸೆಯ ಹೊರಟರೆ ಮನಸು ವಿರಾಗಿ                            
ಹಿಂದಿರುಗಿ ನೋಡಿದಷ್ಟೂ ಹಳವಂಡ
ಎಲ್ಲವೂ ಪುರಾತನ ಆದರೂ ನವನವೀನ
ಪದ ಪದ ಹೊಸೆವ ಕಸರತ್ತು
ಕೆಸರಲ್ಲಿ ಎತ್ತು ಕಾಲೆತ್ತಿ ಇಟ್ಟ ಹಾಗೆ
ಹಳೆ ಬಟ್ಟೆಯ ಚೂರುಗಳ ಸೇರಿಸಿ
ಚಿತ್ತಾರದ ಕೌದಿ ಹೊಲೆದು ಸಂಭ್ರಮಿಸುವ ಹಾಗೆ
ಹೇಳಲು ಸಾಕಷ್ಟಿದೆ ವಿಷಯ ಬುತ್ತಿ
ಗೊತ್ತಿದೆ ತೊಗೊ ಎಂದಾರೆಂಬ ಭೀತಿ
ಹತ್ತರಲ್ಲಿ ಹನ್ನೊಂದಾಗುವ ಮನಸ್ಸಿಲ್ಲ
ಸೋಜಿಗ ಒಮ್ಮೊಮ್ಮೆ ಇಲ್ಲಿ ಎಲ್ಲ
ಹಳತಾದರೂ ಜಗದ ವಿವರಗಳೆಲ್ಲ
ನನ್ನ ಜಗತ್ತಲ್ಲಿ ನವನವೀನ, ಮಹತ್ವಪೂರ್ಣ ಅವೆಲ್ಲ
ಸತ್ತು ಹುಟ್ಟುವ ದಿನದ ಹಾಗೆ

25 comments:

Aniket said...

ಹೇಳಲು ಸಾಕಷ್ಟಿದೆ ವಿಷಯ ಬುತ್ತಿ
ಗೊತ್ತಿದೆ ತೊಗೊ ಎಂದಾರೆಂಬ ಭೀತಿ
ಹತ್ತರಲ್ಲಿ ಹನ್ನೊಂದಾಗುವ ಮನಸ್ಸಿಲ್ಲ

Houdu aadra ade vishayavannu hosadagi helidare vishaya yaavagalu navanaveena....

uchaavacha[miscelleneou]s said...

ಕವನ ವೆಂದರೆ ಏನು ಶಬ್ದವೇ ಭಾವವೇ ಅರ್ಥವೇ ವಾಲ್ಮೀಕಿಯ [ಕ್ರುಂಚ ದ್ವಂದ್ವೊತ್ತ ]ಶೋಕವೇ
ಹೇಳಲೀಬೀಕೆಕೆ ಮಂದ ಭಾವವ ಅನುಭವಿಸಲು ಬಿಡಿ ಹೊಸತುಹಸತ ಬೀದ ಹಳಸಲು

Jayalaxmi said...

Ahalya Ballal Said...

‎... ನನಗನಿಸಿದ್ದು ಜೆ ಪಿ ಗೂ ಅನಿಸಿಯಾಗಿದೆಯಲ್ಲಾ
ಎಂಬ ಭಾವ ಬಲವಾಗಿ ..
ಒಂದಿಷ್ಟು ಖುಷಿಯಾಗಿ
ಆಕೆ ಬರೆದಾಯ್ತಲ್ಲ ಎಂದು
ಇಷ್ಟೇ ಹೊಟ್ಟೆಗಿಚ್ಚಾಗಿ
...ಇನ್ನೇನು ಹೇಳಬಹುದು
ಎಂಬ ಕುತೂಹಲ
ಹೆಚ್ಚಾಗಿ ನನ್ನ
ಜಗತ್ತೆಲ್ಲ ಸೋಜಿಗಮಯ. :):)

AntharangadaMaathugalu said...

ಜಯಲಕ್ಷ್ಮಿಯವರೇ...
ಎಲ್ಲವೂ ಪುರಾತನ ಆದರೂ ನವನವೀನ.. ಎಂದು ನೀವೇ ಹೇಳಿಬಿಟ್ಟಿದ್ದೀರಿ... ವಿಷಯವೆಷ್ಟೇ.. ಪುರಾತನವಾದರೂ ಹೇಳುವವರ ಭಾವ ಯಾವಾಗಲೂ ಹೊಚ್ಚ ಹೊಸದಾಗೇ ಇರತ್ತೆ.. ಚಿತ್ತಾರದ ಕೌದಿ ಹೊಲೆದು ಸಂಭ್ರಮಿಸುವ ಹಾಗೆ ಅನ್ನುವ ಸಾಲು ತುಂಬಾ ಇಷ್ಟವಾಯಿತು. ನಮ್ಮ ಭಾವಗಳ ಚಿತ್ತಾರದಿಂದ ನಾವು ಸಿಂಗರಿಸುವ ಕೌದಿಯೇ ಈ ನಮ್ಮ ಬ್ಲಾಗ್ ಅಲ್ವಾ..? ಚೆನ್ನಾಗಿದೆ.

ಶ್ಯಾಮಲ

ಜಲನಯನ said...

ಜಯಕ್ಕ, ಬಹಳ ದಿನಗಳ ನಂತರ ಬರೆದ್ರಿ ಅಲ್ವಾ..? ನಿಜ ಕೆಲವೊಮ್ಮೆ..ನನ್ನಲ್ಲಿ ಪದಗಳ ಅಭಾವವೇ ಅನ್ನಿಸುತ್ತೆ ಕೆಲವೊಮ್ಮೆ ಓಹ್ ಎಷ್ಟೆಲ್ಲಾ ಪದಗಳ ಬಳಕೆ ಸಾಧ್ಯ ಅನಿಸುತ್ತೆ...
ಆದ್ರೂ ಪ್ರಯತ್ನ ಮಾಡಬೇಕು,,,ಬರೀತಾ ಹೋದಾಗ ಕೆಲವೊಮ್ಮೆ ನನ್ನ ನಿರೀಕ್ಷೆಗೂ ಮೀರಿ ಒಳ್ಲೆ ಕವನ ಮೂಡಿದ ಅನುಭ ಆಗಿದೆ...ಹಾಗೆ ನಿಮಗೂ ಆಗಿರಬೇಕಲ್ಲಾ...ನಮ್ಮೆಲ್ಲರ ಭಾವ ತೆರೆದಿಟ್ಟ್ರಿ...

SATISH N GOWDA said...

ಮೇಡಂ ....
ಹೇಳಲು ಹೊರಟರೆ ಮುಗಿಯೋದಿಲ್ಲ
ಬರೆಯಲು ಹೊರಟರೆ ಪುಟಗಳು ಸಾಲೊಲ್ಲ
ಪ್ರಯತ್ನಿಸಿ ಹೊಸತನವನ್ನ
ಲೇಖನಗಳು ಮೂಡುತ್ತವೆ ಸರಳತೆಯಲ್ಲಿ .....


SATISH N GOWDA

http://nannavalaloka.blogspot.com/

SATISH N GOWDA said...

ಮೇಡಂ ....
ಹೇಳಲು ಹೊರಟರೆ ಮುಗಿಯೋದಿಲ್ಲ
ಬರೆಯಲು ಹೊರಟರೆ ಪುಟಗಳು ಸಾಲೊಲ್ಲ
ಪ್ರಯತ್ನಿಸಿ ಹೊಸತನವನ್ನ
ಲೇಖನಗಳು ಮೂಡುತ್ತವೆ ಸರಳತೆಯಲ್ಲಿ .....


SATISH N GOWDA

http://nannavalaloka.blogspot.com/

ಬಿಸಿಲ ಹನಿ said...

ಮೇಡಂ,
ತುಂಬಾ ಚಂದನೆಯ ಕವನ. "ಬರಹ ಚಿತ್ತಾರದ ಕೌದಿ" ಎನ್ನುವ ರೂಪಕವೇ ಇನ್ನೂ ಚೆಂದ. ನಾವು ಕೌದಿಯನ್ನು ಹೊಲಿಯಬೇಕಾದರೆ ಬೇರೆ ಬೇರೆ ಹಳೆಯ ಬಟ್ಟೆಗಳಿಂದ ಒಂದಿಷ್ಟು ತೇಪೆ ಹಾಕಿ ಕೌದಿಯನ್ನು ಸಿದ್ಧಪಡಿಸುವಂತೆ ಬರಹವನ್ನು ಬೇರೆ ಬೇರೆ ಬರಹಗಳಿಂದ ಸಿದ್ಧಪಡಿಸುತ್ತೇವೆ ಎನ್ನುವ ಮಾತು ಎಷ್ಟು ಸತ್ಯ ಅಲ್ಲವೆ?
ಥ್ಯಾಂಕ್ಸ್ ನಿಮ್ಮ ಕವನಕ್ಕೆ.

Jayalaxmi said...

ಹೌದು ಅನಿ, ಆದ್ರ ನನಗ ಮತ್ತ ಅದs ಅದs ಹೊಸಾದೇನಾದ್ರು ಹೇಳಾಕ ಸಾಧ್ಯಾನ ಅನ್ನೊ ಪ್ರಶ್ನೆ, ಉಳದಾವ್ರಿಗೆ ಗೊತ್ತಿಲ್ಲದ ವಿಷಯ...

Jayalaxmi said...

ಅತ್ರೇಯ : :) :)

Jayalaxmi said...

ಅಹಲ್ಯ: ಹೇಳಲು ಇಹುದು ನೂರೆಂಟು ಮಾತು
ಹೇಳ ಹೊರಟರೆ ಮತ್ತದೇ ಅದೇ ಅನಿಸಿ...
ಗಪ್‍ಚುಪ್!:)

Jayalaxmi said...

ಥ್ಯಾಂಕ್ಸ್ ಶ್ಯಾಮಲಾ ಅವರೆ.:)

Jayalaxmi said...

ನೀವು ಹೇಳೋದು ನಿಜ ಭಾಯ್! :)

Jayalaxmi said...

ಪ್ರಯತ್ನಿಸ್ತೀನಿ ಸತೀಶ್ ಅವರೆ. :)

Jayalaxmi said...

ಥ್ಯಾಂಕ್ಸ್ ಉದಯ್ ಸರ್. :)

umesh desai said...

ಮೇಡಂ ಕವಿತಾ ಛಂದದ ನಮ್ಮ ಮನಸ್ಸಿನ್ಯಾಗ ಹೊಳೆದ ಮಾತು ಅದಾಗಲೇ ಅನಾವರಣಗೊಂದು ಹೇಳಿಕೆ ಯಾಗಿಬಿಟ್ಟಾಗ ಉಂಟಾಗುವ ಸ್ಥಿತಿ ಮಜಾ ಇರ್ತದ

shivu.k said...

ಜಯಲಕ್ಷ್ಮಿ ಮೇಡಮ್,
ತುಂಬಾ ದಿನಗಳಾಗಿತ್ತು ನಿಮ್ಮ ಬ್ಲಾಗ್ update ಮಾಡಿ ಅಲ್ವ...ಒಂದು ಉತ್ತಮ ಕವನ ಓದಿದಂತಾಯಿತು...

ಹೊಸತೆಂದು ಬರೆದದ್ದನ್ನು ಗೊತ್ತು ಬಿಡಿ ಇದು ಎಂದು ಹೇಳುವ ದಾಟಿಯಲ್ಲೇ....
"ಪದ ಪದ ಹೊಸೆವ ಕಸರತ್ತು
ಕೆಸರಲ್ಲಿ ಎತ್ತು ಕಾಲೆತ್ತಿ ಇಟ್ಟ ಹಾಗೆ"
ಇಂಥ ಪ್ರಯೋಗಗಳು ನಿಜಕ್ಕೂ ಹೊಸತೇ ಅಲ್ಲವೇ...

ನೀವು ನನ್ನ "ಕ್ಯಾಮೆರಾ ಹಿಂದೆ" ಬ್ಲಾಗನ್ನು ಹಿಂಭಾಲಿಸುತ್ತಾ, ಲಿಂಕಿಸಿಕೊಂಡಿದ್ದೀರಿ. ಆದ್ರೆ ಆ ಬ್ಲಾಗನ್ನು ನಾನು ನಿಲ್ಲಿಸಿ ಒಂದು ವರ್ಷಕ್ಕೂ ಹೆಚ್ಚು ದಿನಗಳಾಯಿತು. ಸಧ್ಯ ನನ್ನ ಚಾಲ್ತಿಯಲ್ಲಿರುವ ಬ್ಲಾಗ್ ಎಂದರೆ ಛಾಯಾಕನ್ನಡಿ.
ಅದು ವಾರಕ್ಕೊಮ್ಮೆ ಹೊಸ ಲೇಖನ, ಕವನ, ಚಿತ್ರಗಳೊಂದಿಗೆ ಬರುತ್ತಿರುತ್ತದೆ..ಬಿಡುವು ಮಾಡಿಕೊಂಡು ನೋಡಿ..

Jayalaxmi said...

ಹೌದ್ರಿ ಉಮೇಶ್ ಸರ್, ನೀವು ಹೇಳೂದು ಖರೆ ಅದ.. :)

Jayalaxmi said...

ಧನ್ಯವಾದ. ಖಂಡಿತ ಶಿವು ಅವರೆ..:) ತಡವಾಗಿ ಪ್ರತಿಕ್ರಿಯಿಸುತ್ತಿರುವೆ ಕ್ಷಮೆ ಇರಲಿ.

ಚುಕ್ಕಿಚಿತ್ತಾರ said...

''ಹಳೆ ಬಟ್ಟೆಯ ಚೂರುಗಳ ಸೇರಿಸಿ
ಚಿತ್ತಾರದ ಕೌದಿ ಹೊಲೆದು ಸಂಭ್ರಮಿಸುವ ಹಾಗೆ''

ಈ ಸಾಲುಗಳು ತು೦ಬಾ ಕಾಡಿತು..
ಹಳೆ ನೆನಪುಗಳಲ್ಲೆಲ್ಲಾ ಸಿಹಿ ಹೆಕ್ಕಿ ತೆಗೆದು ಹೊಸ ಬದುಕು ಕಟ್ಟುವ ಹಾಗೆ...

ವ೦ದನೆಗಳು.

Manasa said...

ಸೊಗಸಾದ ಸಾಲುಗಳು... ಕೌದಿ ಎಂದು ಓದಿದ ಕೂಡಲೇ... ನಮ್ಮ ಅಜ್ಜಿ ಹೊಲಿದ ಕೌದಿ ನೆನಪಾಗಿ, ಓದಲು ಧಾವಿಸಿದೆ... ಬರಹ ಚಿತ್ತಾರದ ಕೌದಿ :)

very nice Madam :)

Jayalaxmi said...

ಧನ್ಯವಾದ ವಿಜಯಶ್ರೀ ಅವರೆ..

Jayalaxmi said...

ಮಾನಸ, ನಮ್ಮನೇಲಿ(ತಾಯಿ ಮನೆ) ಅಪ್ಪನ ಸೋದರತ್ತೆ ಹೊಲೆದ ಕೌದಿಯೊಂದಿದೆ, ಎಷ್ಟು ಚೆಂದದ ಕೌದಿಯೆಂದರೆ ಅದು, ಅದರೊಳಗಿನ ಚಿತ್ತಾರ, ಮಶಿನ್ನಿನಲ್ಲಿ ಹೊಲೆದಿದ್ದಾರೇನೊ ಅನ್ನುವಷ್ಟು ನಾಜೂಕಾದ ಕೈ ಹೊಲಿಗೆ, ತುಂಬಾ ಸುಂದರ ಸುಂದರ. :) :)

ಸೀತಾರಾಮ. ಕೆ. / SITARAM.K said...

ಎಲ್ಲರದು ಕೌದಿಯೇ. ಚಿತ್ತಾರಗಳು ಬೇರೆ ಬೇರೆ ಅಷ್ಟೆ. ತುಂಬಾ ಚೆಂದದ ಕವನ ಜಯಕ್ಕ.

ಕ್ಷಣ... ಚಿಂತನೆ... said...

ಮೇಡಂ, ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ.

ಕವನದ ಕೊನೆಯ ಸಾಲುಗಳು ಅದರಲ್ಲಿಯೂ, 'ನನ್ನ ಜಗತ್ತಲ್ಲಿ ನವನವೀನ, ಮಹತ್ವಪೂರ್ಣ ಅವೆಲ್ಲ' ಇದು ಎಲ್ಲ ಬರಹಗಾರ/ರ್ತಿ ಗೂ ಅನ್ವಯಿಸುತ್ತದೆ. ಕವನ ತುಂಬ ಸೊಗಸಾಗಿದೆ.

ಧನ್ಯವಾದಗಳು.