Wednesday, February 13, 2013

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

‘ಈ ಹೊತ್ತಿಗೆ’ ಕಾರ್ಯಕ್ರಮದ ಕುರಿತು ಅವಧಿಯಲ್ಲಿ ಸಖಿ ಸಂಧ್ಯಾರಾಣಿ ಬರೆದ ಲೇಖನ.




ಈ ಹೊತ್ತಿಗೆ

- ಎನ್ ಸಂಧ್ಯಾರಾಣಿ

ರಂಗಕರ್ಮಿ, ಕವಿಯಿತ್ರಿ ಜಯಲಕ್ಷ್ಮಿ ಪಾಟೀಲ್ ತಲೆಯಲ್ಲಿ ಹಲವಾರು ಯೋಜನೆಗಳು, ವಿಚಾರಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ! ಹಾಗೆ ಬಂದ ಒಂದು ಯೋಜನೆ ಎಂದರೆ ಒಂದು ಬುಕ್ ಕ್ಲಬ್! ಹಾ, ಒಂದು ಪುಸ್ತಕಪ್ರೇಮಿ ಸಮಾನ ಮನಸ್ಕರ ಕೂಟ. ಪ್ರತಿ ಹದಿನೈದು ದಿನಕ್ಕೊಮ್ಮೆ ಪುಸ್ತಕ ಪ್ರೇಮಿಗಳು ಒಂದೆಡೆ ಸೇರುವುದು, ಒಂದು ಪುಸ್ತಕದ ಬಗ್ಗೆ ಚರ್ಚಿಸುವುದು. ಈ ಯೋಜನೆ ಅವರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು, ಸುಮಾರು ಜನರನ್ನು ಇದು ಸೆಳೆದಿತ್ತು. ಈ ಕ್ಲಬ್ಬಿನ ಸದಸ್ಯತ್ವಕ್ಕೆ ಒಂದೇ ಫೀಸ್ ಎಂದರೆ ಆ ಪುಸ್ತಕದ ಒಂದು ಕಾಪಿ ಸದಸ್ಯರ ಕೈಲಿರಬೇಕು, ಒಂದೇ ಕರಾರೆಂದರೆ ಭಾಗವಹಿಸಿದ್ದವರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳಲೇ ಬೇಕು! ನಮ್ಮ ಬುಕ್ ಕ್ಲಬ್ ಹೆಸರು ’ಈ ಹೊತ್ತಿಗೆ’. ಅವರು ಮೊದಲ ಸಭೆಗೆ ಸೂಚಿಸಿದ್ದ ಪುಸ್ತಕ ಕೆ ವಿ ಅಯ್ಯರ್ ಅವರ ರೂಪದರ್ಶಿ, ಸೇರುವ ಸ್ಥಳ, ಸಮಯದ ಬಗ್ಗೆ ಅವರು ಒಮ್ಮೆ ಫೇಸ್ ಬುಕ್ಕಿನಲ್ಲಿ ಹಾಕಿದ್ದೆಷ್ಟೋ ಅಷ್ಟೆ, ಆಮೇಲೆ ಅವರು ಅದನ್ನು ಮತ್ತೆ ನೆನಪಿಸಿದಂತೆಯೂ ಕಾಣೆ, ಆದರೂ ನಾವೆಲ್ಲರೂ ತಾರೀಖು ಗುರುತು ಹಾಕಿಕೊಂಡು ಮರೆಯದೆ ಅಲ್ಲಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯುವ ಮಕ್ಕಳು ಹಾಲ್ ಟಿಕೆಟ್ ಅನ್ನು ಭದ್ರವಾಗಿಟ್ಟುಕೊಂಡು ಬರುವಂತೆ ಪುಸ್ತಕವನ್ನು ಅವಚಿ ಹಿಡಿದು ಕೊಂಡು ಬಂದಿದ್ದೆವು.
ಸೇರಿದ್ದವರೆಲ್ಲಾ ಫೇಸ್ ಬುಕ್ಕಿನಲ್ಲಿ ಪರಿಚಿತರೆ, ಹಾಗಾಗಿ ಹೇಗೋ ಏನೋ ಮಾತಾಡಿದರಾಯಿತು ಎಂದು ಧೈರ್ಯ ತಂದುಕೊಳ್ಳುವಷ್ಟರಲ್ಲಿ ಅಲ್ಲಿಗೆ ಬಂದದ್ದು ಜಯಶ್ರೀ ಮತ್ತು ದಿವಾಕರ್ ದಂಪತಿ, ನಮ್ಮ ಈ ಕೂಟಕ್ಕೆ ಥಟ್ ಅಂತ ಸ್ಟಾರ್ ವ್ಯಾಲ್ಯೂ ಬಂದಂತಾಯ್ತು! ಜೊತೆಗೆ ಎಲ್ಲರಿಗೂ ಇನ್ನಿಲ್ಲದ ಟೆನ್ಶನ್! ಇವರೆದುರಲ್ಲಿ ನಾವು ಮಾತಾಡೋದ?!
ಆದರೆ ಅವರಿಬ್ಬರೂ ಸರಳವಾಗಿ ಎಲ್ಲರ ಜೊತೆ ಬೆರೆಯುತ್ತಾ ಹೋದಂತೆ, ನಾವು ನಮ್ಮ ಹಿಂಜರಿಕೆ ಬಿಟ್ಟು ಮಾತಾಡಲು ಪ್ರಾರಂಭಿಸಿದೆವು. ಕೆ ವಿ ಅಯ್ಯರ್ ಅವರ ಬಗ್ಗೆ ನಾವು ತಿಳಿಯದ ವಿವರಗಳನ್ನು ದಿವಾಕರ್ ಅವರು ತಿಳಿಸುತ್ತಾ ಹೋದರು. ಆಮೇಲೆ ಒಬ್ಬೊಬ್ಬರಾಗಿ ಪುಸ್ತಕದ ಬಗ್ಗೆ ಮಾತಾಡಿದ್ದು, ಚರ್ಚಿಸಿದ್ದು …..
ಪುಸ್ತಕದ ಪ್ರಸ್ತುತತೆ, ಒಂದು ಪುಸ್ತಕವನ್ನು ವರದಿಯಾಗದಂತೆ ಕಥೆಯಾಗಿ ಹೆಣೆಯುವುದಕ್ಕೆ ಬೇಕಾಗುವ ಚಿಕ್ಕ ಚಿಕ್ಕ ವಿವರಗಳು, ಪುಸ್ತಕ ಬರೆದ ಕಾಲ ಮತ್ತು ಆ ಮೂಲಕ ಪುಸ್ತಕದ ಧ್ವನಿ, ಬದಲಾಗುವ ಕಾಲ ಮತ್ತು ಅದರ ಮೇಲೆ ನಿರ್ಧರಿತವಾಗುವ ಪುಸ್ತಕದ ಭಾಷೆ ಮತ್ತು ಭಾವುಕತೆ, ನೈತಿಕತೆ ಮತ್ತು ಅದರ ಮಾನದಂಡಗಳು…. ಏನೆಲ್ಲಾ ಚರ್ಚೆಯಾದವು ಅಲ್ಲಿ… ಅದರ ಬಗ್ಗೆ ಬರೆದರೆ ಅದೇ ಒಂದು ಲೇಖನವಾದೀತು, ಅದನ್ನು ನೀವೆಲ್ಲಾ ಅಲ್ಲಿಗೇ ಬಂದು ಸವಿಯಲಿ ಎನ್ನುವ ಆಸೆಯೊಂದಿಗೆ ಲೇಖನವನ್ನು ನಿಲ್ಲಿಸುತ್ತಿದ್ದೇನೆ.

7 comments:

sunaath said...

ರೂಪದರ್ಶಿಯ ಕತೆಯನ್ನು ಕೇಳಿದ್ದೇನೆ. ತುಂಬ ಹೃದಯಸ್ಪರ್ಶಿಯಾಗಿದೆ. ಪುಸ್ತಕವನ್ನು ಓದಿಲ್ಲ.

Badarinath Palavalli said...

’ಈ ಹೊತ್ತಿಗೆ’ಯ ಆಲೋಚನೆ ತುಂಬಾ ಚೆನ್ನಾಗಿದೆ. ಈ ಮೂಲಕವಾದರೂ ನಾವು ಹೆಚ್ಚು ಹೆಚ್ಚು ಕನ್ನಡ ಹೊತ್ತಿಗೆಗಳನ್ನು ಓದುವಂತಾಗುತ್ತೇವೆ.

Jayalaxmi said...

ಓದ್ರಿ ಕಾಕಾ. ಆಗಿನ ಓದಿಗೂ, ಈಗಿನ ಓದಿಗೂ ಭಾಳ ಬಿಡಸ್ತದ ಅಂತ ಈ ಸಲ ಗೊತ್ತಾತು ನನಗ.

Jayalaxmi said...

ನಿಜ ಬದ್ರಿ ನೀವು ಹೇಳೋದು. ಜೊತೆಗೆ ಇಂಥ ಚರ್ಚೆಗಳಿಂದ ಆ ಕೃತಿಯ ಕುರಿತು ಹೊಸ ಹೊಳಹೂ ಸಿಗುತ್ತದೆ ಅನ್ನುವುದರಲ್ಲಿ ಸಂಶಯವಿಲ್ಲ.

Jayalaxmi said...
This comment has been removed by the author.
ಸಂಧ್ಯಾ ಶ್ರೀಧರ್ ಭಟ್ said...

ರೂಪದರ್ಶಿಯನ್ನು ಎಂಟನೆ ತರಗತಿಯಲ್ಲಿ ಓದಿದ್ದೆ . ಮಾವನ ಒತ್ತಾಯಕ್ಕೆ , ಎಷ್ಟು ಅರ್ಥವಾಗಿತ್ತೋ ಬಿಟ್ತಿತ್ತೋ ನೆನಪಿರಲಿಲ್ಲ. ಕಥೆಯ ಆಳ ತಿಳಿದಿರಲಿಲ್ಲ. ಮತ್ತೆ ಡಿಗ್ರೀಯಲ್ಲಿ ಓದಿದೆ. ಕಥಾ ವಿಸ್ತಾರ ಜಾಸ್ತಿಯಾದಂತೆನಿಸಿತು. ಈಗಲೂ ಬೂಕ್ರ್ಯಾಕ್ ನಲ್ಲಿರುವ ಆ ಪುಸ್ತಕ ಕೈ ಬೀಸಿ ಕರೆಯುತ್ತದೆ. ಆಮೇಲೆ hangover ನಿಂದ ಹೊರಬರಲು ಸಮಯ ಬೇಕಾಗುತ್ತದೆ ಎಂಬ ಕಾರಣಕ್ಕೆ ಕೈ ಬಿಡುತ್ತೇನೆ. ಮತ್ತೆ ರೂಪದರ್ಶಿ ಓದಬೇಕಿದೆ ನನಗೆ ..

Jayalaxmi said...

biDuvaadaaga tappade `roopadarshi' Odi Sandhya.